ಕನ್ನಡ ಪತ್ರಿಕೆಗಳು ಮತ್ತು ಯಮುನನ್ ತನಿಖಾ ಬರಹ

0
1927

ಸ್ಕ್ರಾಲ್ ಡಾಟ್ ಇನ್ ಎಂಬ ವೆಬ್ ಪತ್ರಿಕೆಯು ಅತ್ಯಂತ ಕುತೂಹಲಕಾರಿ ತನಿಖಾ ಬರಹವೊಂದನ್ನು ಪ್ರಕಟಿಸಿದೆ. ಪತ್ರಿಕೆಯ ವರದಿ ಗಾರರಾದ ಶ್ರುತಿಸಾಗರ್ ಯಮುನನ್ ಅವರು ಇದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ನಡೆಸಿದರು. ರಾಜ್ಯದಲ್ಲಿ 23 ಹಿಂದುತ್ವ ಕಾರ್ಯಕರ್ತರನ್ನು  ನಿರ್ದಿಷ್ಟ ಸಂಘಟನೆಯ `ಜಿಹಾದಿ’ಗಳು ಹತ್ಯೆ ನಡೆಸಿದ್ದಾರೆ ಎಂಬ ಬಿಜೆಪಿಯ ಆರೋಪವನ್ನು ಸ್ಪಷ್ಟಪಡಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಅಚ್ಚರಿ ಏನೆಂದರೆ, ಕನ್ನಡದ ನಂಬರ್ ಒನ್, ಟು, ತ್ರೀ ಸ್ಥಾನದಲ್ಲಿರುವ ಪತ್ರಿಕೆಗಳು ಮತ್ತು ಟಿವಿ ಚಾನೆಲ್‍ಗಳು ಈವರೆಗೂ  ಇಂಥದ್ದೊಂದು ತನಿಖಾ ಬರಹಕ್ಕೆ ಮನಸ್ಸು ಮಾಡಿಲ್ಲ ಅನ್ನುವುದು. ಆರೋಪ ಸಾಮಾನ್ಯವಲ್ಲ. 23 ಹಿಂದೂ ಕಾರ್ಯಕರ್ತರ ಹತ್ಯೆಯ  ಕುರಿತಂತೆ ಸಂಸದೆ ಶೋಭಾ ಕರಂದ್ಲಾಜೆಯವರೇ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದರೆ ಬಿಜೆಪಿಯಂತೂ ಅನೇಕಾರು ವೇದಿಕೆಗಳಲ್ಲಿ  ಅಸಂಖ್ಯ ಬಾರಿ ಈ ಹತ್ಯೆಗಳನ್ನು ಪ್ರಸ್ತಾಪಿಸಿ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಿದೆ. ರಾಜಕೀಯವಾಗಿ ಸಾಕಷ್ಟು ಮಹತ್ವ ಪಡೆದಿರುವ ಮತ್ತು ಭಾವನಾತ್ಮಕವಾಗಿಯೂ ಮುಖ್ಯವಾಗಿರುವ ಈ ಹತ್ಯೆಗಳ ಬಗ್ಗೆ ಕನ್ನಡ ಮಾಧ್ಯಮ ಕ್ಷೇತ್ರ ಈ ವರೆಗೂ ಕುತೂಹಲ ತಾಳದೇ  ಇರುವುದು ಯಾಕಾಗಿ?  Ground Report: Have Jihadis killed 23 hindutwa activists
in Karnataka Since 2014 as BJP claims’  ಎಂಬ ಶೀರ್ಷಿಕೆಯಲ್ಲಿ ಸ್ಕ್ರಾಲ್ ಡಾಟ್ ಇನ್ (scroll.in)ನಲ್ಲಿ  ಪ್ರಕಟವಾದ ತನಿಖಾ ಬರಹವು ಈ ಪ್ರಶ್ನೆಯನ್ನು ಮತ್ತೆ ಮತ್ತೆ ನಮ್ಮ ಮುಂದಿಡುತ್ತದೆ. ಆ ವರದಿಯನ್ನು ಓದುತ್ತಾ ಹೋದಂತೆ ಬಿಜೆಪಿಯ  ವಾದವು ಎಷ್ಟು ಸುಳ್ಳಿನಿಂದ ಕೂಡಿದೆ ಮತ್ತು ಆಘಾತಕಾರಿಯಾಗಿದೆ ಅನ್ನುವುದನ್ನು ಇಂಚಿಂಚಾಗಿ ವಿವರಿಸುತ್ತದೆ. ಈ ವರದಿ ಪ್ರಕಟವಾದ  ಒಂದು ವಾರದ ಬಳಿಕ ದಿಲ್ಲಿ ಮೂಲದ ಅಧ್ಯಯನ ಸಂಸ್ಥೆಯೊಂದು (ಸಿಆರ್‍ಡಿಡಿಪಿ) ಇನ್ನೊಂದು ಬಹುಮುಖ್ಯ ವಿಷಯವನ್ನು ಸಾರ್ವಜ ನಿಕರ ಮುಂದಿಟ್ಟಿದೆ. ಕರ್ನಾಟಕದ ಸುಮಾರು 15 ಲಕ್ಷ ಅಧಿಕ ಮುಸ್ಲಿಮ್ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿಲ್ಲ ಮತ್ತು  ಅವರಲ್ಲಿ ಮತದಾನದ ಗುರುತಿನ ಚೀಟಿಯೂ ಇಲ್ಲ ಅನ್ನುವುದನ್ನು ಅಧ್ಯಯನದ ಮೂಲಕ ಅದು ಕಂಡುಕೊಂಡಿದೆ. ವಿಶೇಷ ಏನೆಂದರೆ,  ಶೀಘ್ರ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಗಂಭೀರವಾಗಿ ಪರಿಗಣಿತವಾಗಬೇಕಿದ್ದ ಈ ಸುದ್ದಿಯನ್ನು ಕನ್ನಡ  ಮಾಧ್ಯಮ ಕ್ಷೇತ್ರವು ತೀವ್ರವಾಗಿ ನಿರ್ಲಕ್ಷಿಸಿದೆ. 23 ಹಿಂದುತ್ವ ಕಾರ್ಯಕರ್ತರ ಹತ್ಯೆಯ ಹೆಸರಲ್ಲಿ ಬಿಜೆಪಿ ಮಾಡಿರುವ ರ್ಯಾಲಿ, ಭಾಷಣ ಮತ್ತು  ಪ್ರತಿಭಟನೆಗಳಿಗೆ ಕನ್ನಡ ಮಾಧ್ಯಮ ಕ್ಷೇತ್ರ ನೀಡಿರುವ ಸ್ಪೇಸ್ ಅನ್ನು ಪರಿಗಣಿಸಿದರೆ 15 ಲಕ್ಷ ಅರ್ಹ ಮತದಾರರ ಗೈರು ಸಣ್ಣ ¸ ಸಂಗತಿಯಾಗಬೇಕಾದ ವಿಷಯವಲ್ಲ. ಪ್ರಜಾತಂತ್ರದ ಯಶಸ್ಸು ಪೂರ್ಣ ಪ್ರಮಾಣದ ಮತದಾನದಲ್ಲಿದೆ. ಮತದಾರರು ಮತ ಚಲಾವಣೆಯಿಂದ  ದೂರ ನಿಲ್ಲುವುದೆಂದರೆ, ಈ ವ್ಯವಸ್ಥೆಯನ್ನು ದುರ್ಬಲಗೊಳಿಸುವುದಕ್ಕೆ ಅವರು ಕೊಡುಗೆ ನೀಡುವುದು ಎಂದೇ ಅರ್ಥ. ಆದ್ದರಿಂದಲೇ,  ಮತದಾನ ನಡೆದ ಯಾವುದೇ ಕ್ಷೇತ್ರದ ಬಗ್ಗೆ ಮರುದಿನ ಪತ್ರಿಕೆಗಳು ಸುದ್ದಿ ಮಾಡುವಾಗ ಎಷ್ಟು ಶೇಕಡಾ ಮತದಾನವಾಗಿದೆ ಎಂಬುದಕ್ಕೇ  ಪ್ರಾಶಸ್ತ್ಯ ನೀಡುತ್ತವೆ. ಅತೀ ಹೆಚ್ಚು ಮತ ಚಲಾವಣೆಯಾದ ಕ್ಷೇತ್ರದ ಬಗ್ಗೆ ವಿಶೇಷ ಉಲ್ಲೇಖ ಮಾಡಿ ಸುದ್ದಿ ಮಾಡುತ್ತವೆ. ನಗರ ಪ್ರದೇಶ  ಮತ್ತು ಗ್ರಾಮೀಣ ಪ್ರದೇಶದಲ್ಲಿ ಚಲಾವಣೆಯಾದ ಮತಗಳ ಶೇಕಡಾವಾರು ವಿಶ್ಲೇಷಣೆ ನಡೆಸುತ್ತವೆ. ನೂರು ವರ್ಷದ ಹಿರಿಯರನ್ನೋ,  ಅನಾರೋಗ್ಯ ಪೀಡಿತ ವೃದ್ಧರನ್ನೋ ಎತ್ತಿಕೊಂಡು ಮತಗಟ್ಟೆಗೆ ತಂದು ಮತ ಫಚಲಾಯಿಸಲಾದ ಘಟನೆಯನ್ನು ಫೋಟೋ ಸಹಿತ ಪ್ರಕಟಿಸುವ  ಉಮೇದು ಮಾಧ್ಯಮ ಕ್ಷೇತ್ರದಲ್ಲಿದೆ. ಈ ಕಾರಣದಿಂದಲೇ, ದೆಹಲಿ ಮೂಲದ ಸಿಆರ್‍ಡಿಡಿಪಿ ಎಂಬ ಸಂಸ್ಥೆಯ ಅಧ್ಯಯನಾಧಾರಿತ ವರದಿ ಯನ್ನು ಕನ್ನಡ ಮಾಧ್ಯಮಗಳೇಕೆ ನಗಣ್ಯವಾಗಿ ಕಂಡವು ಅನ್ನುವ ಪ್ರಶ್ನೆ ಮುಖ್ಯವಾಗುವುದು. 15 ಲಕ್ಷ ಅಧಿಕ ಮಂದಿ ಮತ ಚುನಾವಣೆಯ ಅವಕಾಶದಿಂದ ವಂಚಿತವಾಗುವ ಸನ್ನಿವೇಶವೊಂದು ನಿರ್ಮಾಣಗೊಂಡಿರುವುದು ಯಾಕಾಗಿ? ಇದು ವ್ಯವಸ್ಥಿತ ಷಡ್ಯಂತ್ರವೊಂದರ  ಭಾಗವೇ? ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದರೆಯೇ? ವಿವಿಧ ನೆಪಗಳನ್ನೊಡ್ಡಿ ಇವರನ್ನು ಮತದಾರರ ಪಟ್ಟಿಯಿಂದ ಹೊರಗಿರಿಸಲಾಗಿದೆಯೇ? ಹೀಗೆ ಅನರ್ಹರಾದವರ ಸಂಖ್ಯೆ ನಿಜಕ್ಕೂ ಎಷ್ಟು? 15 ಲಕ್ಷ ಅಧಿಕ ಅಂದರೆ ಎಷ್ಟು? ಇಷ್ಟೊಂದು ಬೃಹತ್ ಸಂಖ್ಯೆಯ  ಮತದಾರರು ಚುನಾವಣಾ ರಾಜಕೀಯದಲ್ಲಿ ಭಾಗವಹಿಸದೇ ಇರುವುದು ಪರಿಣಾಮಕಾರಿ ಪ್ರಜಾತಂತ್ರಕ್ಕೆ ಹಿನ್ನಡೆಯಲ್ಲವೇ?
ಬಿಜೆಪಿ ತೇಲಿಸಿಬಿಟ್ಟ ಗಂಭೀರ ಆರೋಪಕ್ಕೆ ದೊಡ್ಡಮಟ್ಟದಲ್ಲಿ ಪ್ರಚಾರ ಕೊಟ್ಟ ಕನ್ನಡ ಪತ್ರಿಕೆಗಳು ಅದೇ ಆರೋಪದ ಜಾಡು ಹಿಡಿದು  ಹೊರಟ ಶ್ರುತಿಸಾಗರ್ ಯಮುನನ್ ಅವರ ತನಿಖಾ ಬರಹಕ್ಕೆ ವಾರ್ತಾಭಾರತಿಯನ್ನು ಬಿಟ್ಟರೆ ಕನ್ನಡದ ಉಳಿದ ಯಾವ ಪತ್ರಿಕೆಗಳೂ  ಪರಿಗಣನೆ ನೀಡಲಿಲ್ಲ. ಟಿ.ವಿ. ಚಾನೆಲ್‍ಗಳ ಸ್ಥಿತಿಯೂ ಇದುವೇ. ಒಂದೋ ಸ್ವತಃ ತನಿಖಾ ವರದಿಯನ್ನು ರಚಿಸುವುದು ಅಥವಾ ಇತರ ¸ ಸಂಸ್ಥೆಗಳ ತನಿಖಾ ವರದಿಗಳಿಗೆ ಗೌರವ ಕೊಡುವುದು- ಇವೆರಡರಲ್ಲಿ ಯಾವುದನ್ನೂ ಮಾಡು ವುದಿಲ್ಲವೆಂದರೆ, ಅದು ಕೊಡುವ ಸಂದೇಶವೇನು? ಬಿಜೆಪಿ ಹೊರಿಸಿರುವ ಆರೋಪ ಸಾಮಾನ್ಯವಾದುದಲ್ಲ. ಅದು ಒಂದು ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸುವಷ್ಟು  ಪ್ರಾಮುಖ್ಯವಾದುದು. ‘ಹಿಂದುತ್ವದ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ಹತ್ಯೆಗೈಯುವುದಕ್ಕೆ ಮುಸ್ಲಿಮರಲ್ಲಿ ಸಂಘಟನೆಯಿದೆ, ಹಾಗೆ  ಹತ್ಯೆಗೈಯುವುದನ್ನು ಅದು ಜಿಹಾದ್ ಎಂದು ಪರಿಗಣಿಸುತ್ತದೆ, 23 ಕಾರ್ಯಕರ್ತರ ಹತ್ಯೆಯ ಹಿಂದೆಯೂ ಈ ಜಿಹಾದಿ ಮನಸ್ಥಿತಿಯೇ  ಕೆಲಸ ಮಾಡಿದೆ ಮತ್ತು ಹಿಂದುತ್ವದ ಕಾರ್ಯಕರ್ತರಿಗೆ ಜಿಹಾದಿಗಳಿಂದ ಅಪಾಯ ಇದೆ..’ ಇತ್ಯಾದಿ ಸಂದೇಶವನ್ನು ರವಾನಿಸುವುದು  ಬಿಜೆಪಿಯ ಉದ್ದೇಶ ಆಗಿತ್ತು. ಮಾಧ್ಯಮಗಳು ಬಿಜೆಪಿಯ ಹೇಳಿಕೆಗಳಿಗೆ ನೀಡಿದ ಪ್ರಚಾರವು ಅದರ ಉದ್ದೇಶವನ್ನು ಈಡೇರಿಸುವಲ್ಲಿ ಬ ಹುಮುಖ್ಯ ಪಾತ್ರ ವಹಿಸಿತ್ತು. ಅಸಂಖ್ಯ ಮಂದಿ ಅದರಿಂದ ಪ್ರಭಾವಿತರಾಗಿರಲೂ ಬಹುದು. ಆದರೆ ಆ ಆರೋಪಗಳನ್ನು ಒರೆಗೆ ಹಚ್ಚಲು  ನಡೆದ ಪ್ರಯತ್ನವನ್ನೇಕೆ ಮಾಧ್ಯಮಗಳು ತೀರಾ ನಗಣ್ಯವಾಗಿ ಕಂಡವು? ಕನಿಷ್ಠ ಸ್ವಯಂ ಅಂಥದೊಂದು ಪ್ರಯತ್ನವನ್ನಾದರೂ ಮಾಡದೆಯೇ  ಮತ್ತು ಮಾಡಿದವರನ್ನು ಗುರುತಿಸದೆಯೇ ಸುಮ್ಮನಾಗಲು ಏನು ಕಾರಣ? ಇದು ಸಹಜವೋ ಅಸಹಜವೋ? ತನಿಖಾ ಪತ್ರಿಕೋದ್ಯಮ ವಿರಳವಾಗುತ್ತಿರುವ ಈ ದಿನಗಳಲ್ಲಿ ಈ ಪ್ರಶ್ನೆಗೆ ಇನ್ನಷ್ಟು ಮಹತ್ವ ಬರುತ್ತದೆ. ತನಿಖಾ ಪತ್ರಿಕೋದ್ಯಮದ ಬಗ್ಗೆ ಮಾಧ್ಯಮಗಳು ಆಸಕ್ತಿ ಕಳೆದುಕೊಳ್ಳುತ್ತಿರುವುದು ಯಾಕಾಗಿ? ಜನಪ್ರಿಯ ಸುದ್ದಿಗಳ ಅಮಲಿನಲ್ಲಿಯೇ ಯಾಕಾಗಿ ಅವು ತೇಲಿ ಹೋಗುತ್ತಿವೆ?
ಪ್ರಜಾತಂತ್ರವನ್ನು ಆಧರಿಸಿ ನಿಂತಿರುವ ನಾಲ್ಕನೇ ಕಂಭವಾಗಿ ಮಾಧ್ಯಮ ಕ್ಷೇತ್ರಕ್ಕೆ ಗುರುತರ ಜವಾಬ್ದಾರಿಯಿದೆ. 15 ಲಕ್ಷ ಅಧಿಕ  ಮತದಾರರು ಮತದಾನದಿಂದ ವಂಚಿತರಾಗಲಿದ್ದಾರೆ ಎಂಬ ವರದಿಯು ಈ ಕ್ಷೇತ್ರವನ್ನು ಖಂಡಿತ ಅಲುಗಾಡಿಸಬೇಕು. ವರದಿಯ ಸತ್ಯಾ¸ ಸತ್ಯತೆಯನ್ನು ತಿಳಿಯುವ ಕುತೂಹಲವನ್ನಾದರೂ ಅದು ವ್ಯಕ್ತಪಡಿಸಬೇಕು. ಹಾಗೆಯೇ, ಧರ್ಮಾಧಾರಿತ ವಿಭಜನೆ ಮಾಡಬಲ್ಲಂಥ ಗಂಭೀರ  ಆರೋಪಗಳ ಹಿಂದೆ ಅವು ತನಿಖಾ ವರದಿ ತಯಾರಿಸಬೇಕು. ಏಕೆಂದರೆ, ಅಂತಿಮವಾಗಿ ಅಂಥ ಆರೋಪಗಳು ಪ್ರಜಾತಂತ್ರದ ಮೂಲ ಆಯವನ್ನೇ ಸಾಯಿಸಿಬಿಡುತ್ತವೆ. ಆ ಕಾರಣದಿಂದಲೇ, ಸ್ಕ್ರಾಲ್ ಡಾಟ್ ಇನ್ ಮತ್ತು ಸಿಆರ್‍ಡಿಡಿಪಿಯ ವರದಿಗಳು ಮುಖ್ಯವಾಗುತ್ತವೆ.  ಹಾಗೆಯೇ ಈ ಬಗ್ಗೆ ಕನ್ನಡ ಮಾಧ್ಯಮ ರಂಗದಿಂದ ವ್ಯಕ್ತವಾದ ನಿರ್ಲಕ್ಷ್ಯ ಧೋರಣೆಯು ತೀವ್ರ ವಿಷಾದವನ್ನು ಉಂಟು ಮಾಡುತ್ತದೆ. ಇದು  ಕಾವಲುನಾಯಿಯ ಸ್ವಭಾವವಲ್ಲ.