ಜೈಟ್ಲಿಯವರ ಟ್ವೀಟನ್ನು ಬಿಜೆಪಿ ರಾಜ್ಯಪಾಲರಿಗೆ ನೆನಪಿಸಿಕೊಡಲಿ 

0
1793

 

: ಸಲೀಮ್ ಬೋಳಂಗಡಿ
ಕರ್ನಾಟಕದಲ್ಲಿ ಅತಂತ್ರ ವಿಧಾನ ಸಭೆಯ ಫಲಿತಾಂಶ ಬಂದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಅದೇ ರೀತಿ ಬಿಜೆಪಿ ಕೂಡಾ ಸರಕಾರ ರಚಿಸಲು  ತೀವ್ರ ಕಸರತ್ತು ನಡೆಸತೊಡಗಿದೆ. ಜೆಡಿಎಸ್ ಮತ್ತು ಕಾಂಗ್ರೇಸ್ ಮೈತ್ರಿ ಕೂಟವು  ಬಹುಮತ ಸಾಬೀತು ಪಡಿಸುವಷ್ಟು ಶಾಸಕ ಬಲವನ್ನು ಹೊಂದಿದೆ. ಆದರೆ ಬಿಜೆಪಿ ಅತಿದೊಡ್ಟ ಪಕ್ಷವಾಗಿ ಮೂಡಿ ಬಂದಿದ್ದರೂ ಬಹುಮತ ಸಾಬೀತು ಪಡಿಸುವಷ್ಟು ಶಾಸಕ ಬಲವನ್ನು ಅದು ಹೊಂದಿಲ್ಲ. ಆದ್ದರಿಂದ ಅದು ಆಪರೇಶನ್ ಕಮಲದ ಮೊರೆ ಹೋಗುವ ಸಾಧ್ಯತೆ ಇವೆ. ರಾಜ್ಯಪಾಲರು ಅದಕ್ಕೆ ಅವಕಾಶ ನೀಡುವರೋ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ಹಿಂದೆ ಅರುಣ್ ಜೇಟ್ಲಿ ಮಾಡಿದ ಟ್ವೀಟ್ ಒಂದನ್ನು ಈಗ ನೆನಪಿಸಬೇಕಾಗಿದೆ. ಅತಂತ್ರ ವಿದಾನ ಸಭೆ ಅಸ್ಥಿತ್ವಕ್ಕೆ ಬಂದಿರುವ ಸಂದರ್ಭದಲ್ಲಿ ಆಯ್ಕೆಗೊಂಡ ಶಾಸಕರು ಒಟ್ಟು ಸೇರಿ ಮೈತ್ರಿ ಕೂಟ ರಚಿಸಿದರೆ ಅವರಿಗೆ ಸರಕಾರ ರಚಿಸಲು ಆಹ್ವಾನಿಸಲು ರಾಜ್ಯಪಾಲರಿಗೆ ಸಂವಿಧಾನ ಬದ್ಧವಾದ ಹಕ್ಕು ಇದೆಯೆಂದು ಟ್ವೀಟ್ ಮಾಡಿದ್ದನ್ನು ಇಲ್ಲಿ ನೆನಪಿಸಬಹುದು. ಬಿಜೆಪಿ ನೇಮಕ ಮಾಡಿದ ರಾಜ್ಯಪಾಲರಿರುವ ರಾಜ್ಯದಲ್ಲಿ ಅತೀ ದೊಡ್ಡ ಪಕ್ಷವಿದ್ದಾಗಲೂ ಅದನ್ನು ಸರಕಾರ ರಚಿಸಲು ಆಹ್ವಾನಿಸಿಲ್ಲ. ಗೋವಾ ಮತ್ತು ಮಣಿಪುರದಲ್ಲಿ ತಳೆದ ಅದೇ ನಿಲುವನ್ನು ಇಲ್ಲಿ ತಾಳಬೇಕೆಂದು ಕಾಂಗ್ರೆಸ್ ವಕ್ತಾರ ಪ್ರಿಯಾಂಕ ಚತುರ್ವೇದಿ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆದ್ದರಿಂದ ಬಹುಮತ ಇರುವ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕೂಟವನ್ನು ಸರಕಾರ ರಚಿಸಲು ಆಹ್ವಾನ ನೀಡಿ ರಾಜ್ಯಪಾಲರು ತನ್ನ ಹುದ್ದೆಯ ಘನತೆಯನ್ನು ಎತ್ತಿ ಹಿಡಿಯಬೇಕು. ಶಾಸಕರ ಖರೀದಿಯ ಅನೈತಿಕ ಕುದುರೆ ವ್ಯಾಪಾರದ ಸಾಧ್ಯತೆ ನಿಚ್ಚಳವಾಗಿರುವಾಗ ಅದಕ್ಕೆ ಅವಕಾಶ ಕಲ್ಪಿಸಬಾರದು. ಸಂವಿಧಾನದ ಗೌರವವನ್ನು ಕಾಪಾಡಬೇಕು. ಮೌಲ್ಯಯುತವಾದ ರಾಜಕೀಯಕ್ಕೆ ಅವಕಾಶ ನೀಡಬೇಕು. ಅಂತಹ ಸಂದೇಶ ನೀಡಬೆಕಾದ ಆಗತ್ಯ ಉದ್ಭವವಾಗಿದೆ. ಯಾಕೆಂದರೆ ಯಾವ ಪಕ್ಷಕ್ಕೂ ತಮ್ಮ ಶಾಸಕರನ್ನು ತಮ್ಮಲ್ಲಿ ಉಳಿಸಿ ಕೋಳ್ಳುವ ಬಗ್ಗೆ ಖಾತ್ರಿ ಇಲ್ಲದಷ್ಟು ರಾಜಕೀಯ ಹಳಸಿ ಹೋಗಿರುವಾಗ ರಾಜ್ಯಪಾಲರು ದಿಟ್ಟತನ ತೋರಬೇಕಾದ ಅಗತ್ಯವಿದೆ. ಅದಕ್ಕೆ ಕೇಂದ್ರ  ಸರಕಾರ ಅವಕಾಶ ನೀಡುವುದೇ? ಅಥವಾ ಬಿಜೆಪಿ ಋಣವನ್ನು ತೀರಿಸುವ ಅವಕಾಶವನ್ನು ರಾಜ್ಯಪಾಲರು ಬಳಸುವರೋ ಕಾದು ನೋಡೋಣ