ಕ್ಯಾಮರಾ ಪ್ಲೀಸ್…

0
1348

ರಾಜಕೀಯ ಪಕ್ಷಗಳು ಓಲೈಸದ ಮತ್ತು ರಾಜಕೀಯ ಚರ್ಚೆಗಳಲ್ಲಿ ಬಹುತೇಕ ಆಸಕ್ತಿ ವಹಿಸಿಲ್ಲದ ಒಂದು ದೊಡ್ಡ ಗುಂಪು ಇವತ್ತು ಕಣ್ಣಿಗೆ ಎಣ್ಣೆ ಬಿಟ್ಟು ಓದಿನಲ್ಲಿ ತಲ್ಲೀನವಾಗಿದೆ. ಈ ಗುಂಪಿನ ಎದುರು ನಿರ್ಣಾಯಕವೆನ್ನಬಹುದಾದ ಒಂದು ಸವಾಲು ಇದೆ. ಎರಡು ವಾರಗಳೊಳಗೆ ಆ ಸವಾಲಿಗೆ ಈ ಗುಂಪು ಮುಖಾಮುಖಿಯಾಗಬೇಕು. ಅದಕ್ಕಿಂತ ಮೊದಲು ಈ ಸವಾಲಿಗೆ ತಮ್ಮನ್ನು ಸಿದ್ಧಗೊಳಿಸ ಬೇಕು. ಸದ್ಯ ಆಹೋರಾತ್ರಿ ಈ ಗುಂಪು ಸಿದ್ಧತೆಯಲ್ಲಿ ತೊಡಗಿದೆ. ಆದರೆ ಸುದ್ದಿ ಮಾಧ್ಯಮಗಳ ಗಮನ ಬಹುತೇಕ ಈ ವರೆಗೂ ಈ ಗುಂಪಿನ ಮೇಲೆ ಹರಿದಿಲ್ಲ. ಒಂದೋ ಎರಡೋ ಪ್ರಮುಖ ಪತ್ರಿಕೆಗಳಲ್ಲಿ ಬಿಟ್ಟರೆ ಉಳಿದಂತೆ ಯಾವುದೂ ಈ ಗುಂಪಿನ ತಯಾರಿಯ ಕುರಿತಂತೆ ವರದಿಯನ್ನು ಮಾಡಿಲ್ಲ. ಅಷ್ಟಕ್ಕೂ 15-16ರ ಹರೆಯವೆಂಬುದು ಅತ್ತ ವಯಸ್ಕರೊಂದಿಗೂ ಸೇರದ ಇತ್ತ ಮಕ್ಕಳೊಂದಿಗೂ ಸೇರದ ಅತಂತ್ರ ವಯಸ್ಸು. ರಾಜಕಾರಣಿಗೆ ಈ ವಯಸ್ಸಿನ ಮೇಲೆ ಭಾರೀ ಆಕರ್ಷಣೆಯೇನೂ ಇಲ್ಲ. ಯಾಕೆಂದರೆ ಅವರು ಓಟು ಅಲ್ಲ. ರಾಜಕೀಯ ಭಾಷಣಗಳಲ್ಲಿ ಈ ಗುಂಪಿಗೆ ಆಸಕ್ತಿ ಕಡಿಮೆ. ಇನ್ನು, ಮಾಧ್ಯಮ ಕ್ಷೇತ್ರವಂತೂ ಈ ಗುಂಪನ್ನು ಗಂಭೀರವಾಗಿ ಪರಿಗಣಿಸುವುದು ತೀರಾ ತೀರಾ ಕಡಿಮೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮುನ್ನಾದಿನ ಅಥವಾ ಪರೀಕ್ಷಾ ದಿನ ಕೆಲವೊಂದು ಸಲಹೆ-ಸೂಚನೆಗಳನ್ನು ಕೊಡುವುದು ಬಿಟ್ಟರೆ ಮಿಕ್ಕಂತೆ ಆ ಮಕ್ಕಳ ಮಾನಸಿಕ ಬೇಗುದಿ, ಕಲಿಕಾ ವಿಧಾನ, ಒತ್ತಡ, ಶಾಲೆಗಳು ಈ ಮಕ್ಕಳನ್ನು ಉತ್ತಮ ಫಲಿತಾಂಶಕ್ಕಾಗಿ ನಡೆಸಿಕೊಳ್ಳುತ್ತಿರುವ ರೀತಿ ಮತ್ತು ಪೋಷಕರು ಹೊರಿಸುತ್ತಿರುವ ಭಾರ…

ಇತ್ಯಾದಿಗಳ ಕುರಿತಂತೆ ಗಂಭೀರ ಅವಲೋಕನ ನಡೆಸುವುದು ಅಪರೂಪ. ಯಾಕೆಂದರೆ, ಈ ವಯಸ್ಸಿನ ಮಕ್ಕಳು ಪತ್ರಿಕೆಗಳ ಗಂಭೀರ ಓದುಗರಲ್ಲ. ಪತ್ರಿಕೆಯೊಂದು ತನ್ನ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಲೆಕ್ಕ ಹಾಕುವಾಗ ಈ ಹರೆಯವನ್ನು ಗುರಿ ಮಾಡುವುದೂ ಇಲ್ಲ. ಒಂದು ರೀತಿಯಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಈ ಮಕ್ಕಳು ಇವತ್ತು ಎಸ್ಸೆಸ್ಸೆಲ್ಸಿ ಪರೀಕ್ಷಾ ತಯಾರಿಯಲ್ಲಿದ್ದಾರೆ. ಆದರೆ ಒತ್ತಡದಲ್ಲಿರುವುದು ಈ ಮಕ್ಕಳಷ್ಟೇ ಅಲ್ಲ. ಮಕ್ಕಳ ಪೋಷಕರು ಒತ್ತಡದ ಒಂದು ತುದಿಯಲ್ಲಿದ್ದರೆ, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಒತ್ತಡದ ಇನ್ನೊಂದು ತುದಿಯಲ್ಲಿವೆ. ಖಾಸಗಿ, ಸರಕಾರಿ ಮತ್ತು ಅನುದಾನಿತ ಶಾಲೆಗಳೆಲ್ಲವೂ ಉತ್ತಮ ಫಲಿತಾಂಶವೆಂಬ ಗುರಿಯೆಡೆಗೆ ತಲೆ ಯಿಟ್ಟು ಈ ಮಕ್ಕಳತ್ತ ನೋಡುತ್ತಿವೆ. ಈ ಗುರಿಯನ್ನು ತಲುಪುವುದಕ್ಕಾಗಿ ಬೇರೆ ಬೇರೆ ಶಾಲೆಗಳು ಬೇರೆ ಬೇರೆ ಯೋಜನೆಯನ್ನು ರೂಪಿಸಿವೆ ಮತ್ತು ವಿದ್ಯಾರ್ಥಿಗಳ ಮೇಲೆ ಅದನ್ನು ಪ್ರಯೋಗಿಸುತ್ತಿವೆ. ದುರಂತ ಏನೆಂದರೆ, ಈ ಪ್ರಯೋಗದ ಬಗ್ಗೆ ಆಸಕ್ತಿ ವಹಿಸಿ ವರದಿ ಮಾಡುವ ಪತ್ರಕರ್ತರು ಮತ್ತು ಕ್ಯಾಮರಾ ಮ್ಯಾನ್‍ಗಳ ದೊಡ್ಡ ಕೊರತೆಯಿದೆ. ಪರೀಕ್ಷೆಗಾಗಿ ತಯಾರಿ ನಡೆಸುವ ಪ್ರತಿ ಮಗುವೂ ಎದುರಿಸುವ ¸ ಸವಾಲುಗಳು ಒಂದೇ ರೀತಿಯದ್ದಲ್ಲ. ಅನುಭವಿಸುವ ಒತ್ತಡಗಳಲ್ಲೂ ಏಕರೂಪತೆಯಿಲ್ಲ. ಶ್ರೀಮಂತ ಮಗು, ಬಡವ ಮಗು, ಮಧ್ಯಮ ವರ್ಗದ ಮಗು, ಬಡತನರೇಖೆಗಿಂತ ಕೆಳಗೆ ಬದುಕುವ ಮಗು…. ಎಲ್ಲವೂ ಏಕರೂಪದ ಪ್ರಶ್ನೆ ಪತ್ರಿಕೆಯನ್ನು ಪಡಕೊಳ್ಳುತ್ತವಾದರೂ ಅವು ನಡೆಸಿರುವ ತಯಾರಿಯಲ್ಲಿ ಏಕರೂಪತೆಯಿರುವುದಿಲ್ಲ. ಆರ್ಥಿಕ ಸಾಮಥ್ರ್ಯವನ್ನು ಅನುಸರಿಸಿ ಮಕ್ಕಳ ತಯಾರಿಯಲ್ಲಿ ಭಾರೀ ವ್ಯತ್ಯಾಸಗಳಿರುತ್ತವೆ. ಶಾಲೆಗಳ ಗುಣಮಟ್ಟವೂ ಈ ತಯಾರಿಯ ಮೇಲೆ ಪರಿಣಾಮ ಬೀರಿರುತ್ತದೆ. ಹೆತ್ತವರ ಶೈಕ್ಷಣಿಕ ಮಟ್ಟವೂ ಪರೀಕ್ಷಾ ತಯಾರಿಯಲ್ಲಿ ಪಾತ್ರ ವಹಿ¸ಸುತ್ತವೆ. ಕಲಿಕಾ ಸೌಲಭ್ಯಗಳಿಗೆ ಸಂಬಂಧಿಸಿ ಶ್ರೀಮಂತ ಮನೆಯ ಮಗುವಿಗೆ ಸಮಸ್ಯೆಗಳಿರುವುದಿಲ್ಲ. ಪರೀಕ್ಷೆಗಿಂತ ಮೊದಲೇ ಮತ್ತು ಕಲಿಕಾ ಅವಧಿಯಲ್ಲೇ ಅದು ಹೆಚ್ಚುವರಿ ಪಾಠ ಹೇಳಿಸಿಕೊಳ್ಳುತ್ತದೆ.

ಒಂದು ರೀತಿಯಲ್ಲಿ, ಅಂತಿಮ ಪರೀಕ್ಷೆಗೆ ವರ್ಷದ ಮೊದಲೇ ತಯಾರಿ ನಡೆಸಲಾರಂಭಿಸಿರುತ್ತದೆ. ಆದರೆ ಇದಕ್ಕೆ ತೀರಾ ವಿರುದ್ಧ ಧ್ರುವದಲ್ಲಿರುವ ಬಡ ಮಗುವಿಗೆ ಈ ಅವಕಾಶಗಳು ಲಭ್ಯವಾಗುವುದು ಶೂನ್ಯ ಅನ್ನುವಷ್ಟು ಕಡಿಮೆ. ಅದು ಸರಕಾರಿಯೋ ಅರೆ ಸರಕಾರಿಯೋ ಆಗಿರುವ ಶಾಲೆಗೆ ಸೇರುತ್ತದೆ. ತರಗತಿಯಲ್ಲಿ ನಡೆಯುವ ಪಾಠಗಳೇ ಅದರ ಬಾಳಬುತ್ತಿ. ಮನೆಯಲ್ಲಿ ಹೆತ್ತವರಿಗೆ ಚಿಂತಿಸಬೇಕಾದ ಸಂಗತಿಗಳು ಹಲವು ಇರುತ್ತವೆ. ಅದರಲ್ಲಿ ಈ ಮಗುವಿನ ಕಲಿಕೆಯು ಒಳಗೊಳ್ಳುವುದು ತೀರಾ ಕಡಿಮೆ. ಮಗುವಿನ ಓದು ಎಂಬುದು ತರಗತಿಯಿಂದ ತರಗತಿಗೆ ಮಾತ್ರ ಸೀಮಿತವಾಗಿರುತ್ತದೆ. ಹೀಗೆ ಎರಡು ಧ್ರುವಗಳಲ್ಲಿ ಬದುಕುವ ಇಬ್ಬರು ಮಕ್ಕಳು ವರ್ಷದ ಕೊನೆಯಲ್ಲಿ ಪಡೆದುಕೊಳ್ಳುವ ಪ್ರಶ್ನೆಪತ್ರಿಕೆ ಸಮಾನವಾದದ್ದು ಮತ್ತು ಉತ್ತರದಲ್ಲೂ ಸಮಾನತೆಯಿರಬೇಕಾಗುತ್ತದೆ.

ಇದೊಂದು ವಾಸ್ತವ ಮತ್ತು ಈ ವಾಸ್ತವವನ್ನು ಸುಲಭದಲ್ಲಿ ಬದಲಾಯಿಸುವುದಕ್ಕೆ ಸಾಧ್ಯವೂ ಇಲ್ಲ. ಇದರ ಹೊರತಾಗಿಯೂ ದೊಡ್ಡವರೆನಿ ಸಿಕೊಂಡ ನಮ್ಮ ಮುಂದೆ ಕೆಲವು ಅವಕಾಶಗಳಿವೆ. ಮಕ್ಕಳ ಪರೀಕ್ಷಾ ತಯಾರಿಯನ್ನು ಗಂಭೀರ ಸಾಮಾಜಿಕ ಸಂಗತಿಯಾಗಿ ಪರಿಗಣಿ¸ಸುವುದು. ಸಮಾಜಕ್ಕೂ ಈ ಮಕ್ಕಳಿಗೂ ಕೊಂಡಿಯೊಂದನ್ನು ನಿರ್ಮಿಸುವುದು. ಬಡತನ, ಹೆತ್ತವರ ಬೆಂಬಲದ ಕೊರತೆ ಮತ್ತು ಕಲಿಕೆಗೆ ಪೂರಕ ಸೌಲಭ್ಯಗಳಿಲ್ಲದಿರುವುದು ಇತ್ಯಾದಿಗಳನ್ನು ಎದುರಿಸುತ್ತಿರುವ ಮಕ್ಕಳನ್ನು ಸಮಾಜದ ಗಮನಕ್ಕೆ ತರುವುದು. ಈ ಮಕ್ಕಳಲ್ಲಿ ಆತ್ಮವಿಶ್ವಾ¸ ಸವನ್ನು ತುಂಬುವಂತೆ ನೋಡಿಕೊಳ್ಳುವುದು.
ನಿಜವಾಗಿ, ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿರುವವರೆಂದರೆ ರಾಜಕಾರಣಿಗಳು. ಚುನಾವಣೆಯು ಸಮೀಪಿಸಿರುವ ಈ ಸಂದರ್ಭದಲ್ಲಂತೂ ಎಲ್ಲ ಪುಟಗಳನ್ನೂ ರಾಜಕೀಯಕ್ಕೆ ಮೀಸಲಿಡಲು ಪತ್ರಿಕೆ ಗಳು ತೀರ್ಮಾನಿಸಿರುವಂತೆ ಕಾಣುತ್ತಿದೆ. ಏನೇ ಆಗಲಿ, ಪ್ರತಿಭಟನೆ ಮಾಡಲು ಗೊತ್ತಿಲ್ಲದ, ಲಾಭಿ ನಡೆಸಲಾರದ, ರಾಜಕಾರಣಿಗಳ ಮೇಲೆ ಪ್ರಭಾವ ಬೀರುವ ಸಾಮಥ್ರ್ಯ ಇಲ್ಲದ ಮತ್ತು ಭಾಷಣ-ಬರಹಗಳ ಮೂಲಕ ಸಮಾಜದ ಗಮನ ಸೆಳೆಯಲಾಗದ ಮಕ್ಕಳನ್ನು ಗಮನವಿಟ್ಟು ಪೋಷಿಸಬೇಕಾದುದು ಸಮಾಜದ ಕರ್ತವ್ಯ. ದೊಡ್ಡವರಾದರೋ ತಮ್ಮ ¨ ಬೇಡಿಕೆಗಳನ್ನು ಪ್ರತಿಭಟನೆಗಳ ಮೂಲಕ ವ್ಯವಸ್ಥೆಯ ಮುಂದಿಡುತ್ತಾರೆ. ಅವರಿಗೆ ಹೇಗೆ, ಯಾವ ರೀತಿಯಲ್ಲಿ ಪ್ರತಿಭಟಿಸಿದರೆ ವ್ಯವಸ್ಥೆ ಕಣ್ಣು ತೆರೆಯುತ್ತದೆ ಎಂಬುದು ಗೊತ್ತಿರುತ್ತದೆ. ಮಕ್ಕಳು ಹಾಗಲ್ಲವಲ್ಲ. ಅವರಿಗೆ ಇವೆಲ್ಲ ಗೊತ್ತಿಲ್ಲ. ಗೊತ್ತಿರುವ ದೊಡ್ಡವರು ಉದಾಸೀನ ತೋರಿದರೆ ಅದು ಆ ಮಕ್ಕಳ ಮೇಲೆ ಮಾಡುವ ಅನ್ಯಾಯವಾಗುತ್ತದೆ. ಮುಖ್ಯವಾಗಿ, ಪರೀಕ್ಷಾ ತಯಾರಿಯಲ್ಲಿರುವ ಈ ಮಕ್ಕಳ ಕುರಿತು ಮಾಧ್ಯಮಗಳು ಸರಣಿ ವರದಿಗಳನ್ನು ಪ್ರಕಟಿಸುತ್ತಿರಬೇಕು. ಅವರು ಎದುರಿಸುತ್ತಿರುವ ಒತ್ತಡ, ಸವಾಲು, ಸವಲತ್ತುರಹಿತ ಸ್ಥಿತಿಗಳ ಬಗ್ಗೆ ಸಮಾಜದ ಗಮನ ¸ಸೆಳೆಯಬೇಕು. ಮಕ್ಕಳಿಗೆ ಉತ್ತಮ ಮತ್ತು ನೆಮ್ಮದಿಯ ವಾತಾವರಣ ಉಂಟು ಮಾಡಬೇಕಾದುದು ಎಲ್ಲರ ಹೊಣೆಗಾರಿಕೆ. ಮಾಧ್ಯಮ ಕ್ಷೇತ್ರ ಈ ಬಗ್ಗೆ ಗಮನ ಕೊಡಲಿ.