ಖರ್ಗೆಗಿಂತ ಮೊದಲು ಅಡ್ವಾಣಿ, ಜೋಶಿ, ಸಿನ್ಹ, ಬಂಗಾರು ಲಕ್ಷ್ಮಣ್ ರತ್ತ ಒಮ್ಮೆ ನೋಡಿ ಮೋದಿಯವರೇ.. 

0
1845

: ಸಲೀಮ್ ಬೋಳಂಗಡಿ
ದೇವೇಗೌಡರನ್ನು ಸ್ವತಃ ಅವರೇ ಮುಜುಗರಪಡುವಷ್ಟು ಹೊಗಳಿದ ಮೋದಿ ಮರುದಿನವೇ ತನ್ನವರಸೆ ಬದಲಿಸಿ ಕಾಂಗ್ರೆಸ್ ನ ಮಾತಿನ ದಾಟಿಯಲ್ಲಿ ಜೆಡಿಎಸ್ ಗೆ ಹಾಕುವ ಮತ ವ್ಯರ್ಥವೆಂದು ಸಾರಿದ್ದಾರೆ. ಈ ಮೂಲಕ ಜೆಡಿಎಸ್ ಗೆ ಬೀಳುವ ಒಕ್ಕಲಿಗ ಮತವನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಮೋದಿಯವರ ಈ ಮಾತುಗಳು ಜೆಡಿಎಸ್ ನ ಸಾಂಪ್ರದಾಯಿಕ ಮತಗಳನ್ನು ಬುಟ್ಟಿಗೆ ಸೆಳೆಯುವ ಕುಟಿಲ ತಂತ್ರವಷ್ಟೇ? ದೇವೇಗೌಡರಿಗೆ ಕಾಂಗ್ರೇಸ್ ಅನ್ಯಾಯ ಮಾಡಿದೆ ಎಂದವರು ಈಗ ಮಲ್ಲಿಕಾರ್ಜುನ ಖರ್ಗೆಯವರ ಪರ ಮಾತಾಡತೊಡಗಿದ್ದಾರೆ. ದಲಿತರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆಯೆಂಬ ಪಾಟ ಮಾಡತೊಡಗಿದ್ದಾರೆ. ಪಾಪ ದಲಿತ ನಾಯಕ ಬಂಗಾರು ಲಕ್ಷ್ಮಣರವರನ್ನು ಬಿಜೆಪಿ ಯಾವ ರೀತಿ ಮೂಲೆಗುಂಪು ಮಾಡಿತು ಎಂಬುದು ಗತ ಇತಿಹಾಸ ಬಲ್ಲವರಿಗೆ ತಿಳಿದಿದೆ. ಮಾನ್ಯ ಮೋದಿಯವರು ಆ ಪುಟವನ್ನು ಒಮ್ಮೆ ತೆರೆದು ನೋಡಲಿ.  ದೇವೇಗೌಡರ ಹಿರಿತನದ ಬಗ್ಗೆ ಅನುಕಂಪ ತೋರುವ ಮೋದಿಯವರು ತನ್ನ ಪಕ್ಷದ ಹಿರಿಯರನ್ನು ಯಾವ ರೀತಿ ನಡೆಸಿಕೊಂಡಿದ್ದೇನೆಂಬುದನ್ನು ಮೆಲುಕು ಹಾಕ ಬೇಕಾಗಿದೆ.
ಗುಜರಾತ್ ನರಮೇಧದ ಸಂದರ್ಭದಲ್ಲಿ ಅಂದಿನ ಪ್ರದಾನಿ ವಾಜಪೇಯಿಯವರು ಗುಜರಾತ್ ನಿಂದ ಮೋದಿಯನ್ನು ಕಿತ್ತು ಹಾಕುವಲ್ಲಿದ್ದರು. ಆಗ ಅಡ್ವಾಣಿಯವರು ಅದನ್ನು ತಡೆದರು. ಆ ಬಳಿಕ ನಿಧಾನವಾಗಿ ಯಶ ಕಾಣುತ್ತಾ ಹೋದ ಮೋದಿಯವರು ಗುರು ಅಡ್ವಾಣಿಗೇ ತಿರುಮಂತ್ರ ಹಾಕಲು ಯತ್ನಿಸಿದರು. ಪ್ರದಾನಿಯಾಗಬೇಕೆಂಬ ಮಹದಾಸೆ ಹೊಂದಿದ್ದ ಅಡ್ವಾಣಿಯವರ ಕನಸನ್ನು ಭಗ್ನಗೊಳಿಸಿ ಅವರನ್ನು ಅಪ್ರಸ್ತುತಗೊಳಿಸಿದರು. ಇನ್ನು ಬಿಜೆಪಿಯ ಇನ್ನೋರ್ವ ಪ್ರಮುಖ ಸಾರಥಿ ಜಸ್ವಂತ್ ಸಿಂಗ್ ಪಕ್ಷದಿಂದ 2014ರಲ್ಲಿ ಹೊರಹಾಕಲಾಯಿತು. ಪಕ್ಷದ ಆಂತರಿಕ ಬೆಳವಣಿಗೆಯ ಬಗ್ಗೆ ಅಸಮಾದಾನ ತೋರಿಸುತ್ತಿದ್ದ ಎಂಬತ್ತರ ಹರೆಯದ ಜಸ್ವಂತ್ ಸಿಂಗ್ ರಿಗೆ 2014ರ ಲೋಕಸಭಾ ಚುನಾವಣೆಯಲ್ಲಿ ಟಿಕೇಟು ಸಿಗದಂತೆ ನೋಡಿಕೊಂಡು ಅವರು ಪಕ್ಷೇತರರಾಗಿ ಸ್ಪರ್ಧಿಸುವಂತೆ ಮಾಡಿ ಬಳಕ ಪಕ್ಷದಿಂದಲೇ ಹೊರ ಹಾಕಲಾಯಿತು.
ವಾಜಪೇಯಿ ಸರಕಾರದಲ್ಲಿ ಗೃಹ ಸಚಿವರಾಗಿದ್ದ ಮುರಳಿ ಮನೋಹರ್ ಜೋಶಿಗೂ ಇದೇ ಗತಿ ತೋರಿಸಿದರು. 84ರ ಹರೆಯದ ಅವರಿಗೂ ಟಿಕೇಟ್ ನಿರಾಕರಿಸಿ ಅವರನ್ನೂ ಬದಿಗೆ ಸರಿಸಿದರು. ಇನ್ನೋರ್ವ ಬಿಜೆಪಿ ನಾಯಕ ಹಾಗೂ ವಾಜಪೇಯಿ ಸರಕಾರದ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ(80) ಮೋಧಿ ಧೋರಣೆಯನ್ನು ಬಲವಾಗಿ ಖಂಡಿಸುತ್ತಿದ್ದವರು. ಅವರನ್ನೂ ಬದಿಗೆ ಸಿಸಲಾಯಿತು. ಅವರು ಪಾಪ ಇತ್ತೀಚೆಗೆ  ರಾಜಕೀಯ ಸನ್ಯಾಸ ಪಡೆದರು. ಈ ಸಾಲಿಗೆ ಕೇಶುಬಾಯಿ ಪಟೇಲ್(89) ಮತ್ತು ಅರುಣ್ ಶೌರಿ ಕೂಡಾ ಸೇರಿದ್ದಾರೆ. ಹೀಗೆ ತಮ್ಮ ಪಕ್ಷ ಕಟ್ಟಿ ಬೆಳೆಸಿದ ಮುಖಂಡರನ್ನು ಒಬ್ಬೊಬ್ಬರನ್ನಾಗಿ ಮುಗಿಸುತ್ತಾ ಬಂದ ಮೋದಿಯವರು ಈಗ ಕಾಂಗ್ರೇಸ್ ಖರ್ಗೆಯವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದು ಬೆರಳು ತೋರಿಸುವಾಗ ಉಳಿದ ನಾಲ್ಕು ಬೆರಳುಗಳು ತನ್ನೆಡೆಗೆ ತೋರಿಸುತ್ತಿರುವ ವಾಸ್ತವವನ್ನು ಮೋದಿ ಮರತಂತಿದೆ. ದೇವೇಗೌಡರಿಗೆ ಮಾತಿನಲ್ಲಿ ತೋರಿದ ಗೌರವದ ಒಂದರ್ದದಷ್ಟಾದರೂ ಅಡ್ವಾಣಿಯವರಿಗೆ ಮೋದಿ ತೋರಿದ್ದರೆ ಅದು ಗುರುಭಕ್ತಿಯಾಗುತ್ತಿತ್ತು. ಈಗ ಎಸ್ಸೆಂ ಕೃಷ್ಣರ ಹೆಗಲಿಗೆ ಕೈಹಾಕಿ ರೋಡ್ ಶೊನಲ್ಲಿ ಬಳಸಿಕೊಂಡು ಒಕ್ಕಲಿಗರ ಮತದತ್ತ ಕಣ್ಣು ಹಾಯಿಸುವ ಮೋದಿ ಚುನಾವಣೆ ಮುಗಿದ ಕೂಡಲೇ ದೂರ ತಳ್ಳಿದರೂ ಆಶ್ಚರ್ಯವಿಲ್ಲ. ಹಿರಿತನ, ಗೌರವದ ಪಾಟ ಹೇಳಿಕೊಳ್ಳುವಾಗ ತಮ್ಮ ಇತಿಹಾಸದ ಕಡೆಗೆ ಕಣ್ತೆರೆದು ನೋಡಲಿ. ಚುನಾವಣೆ ಬಂದ ತಕ್ಷಣ ಬಳಸಿ ಬಳಿಕ ಎಸೆಯುವ ಪ್ರವೃತ್ತಿಗೆ ಯಡಿಯೂರಪ್ಪರು ಕೂಡಾ ಬಲಿಯಾಗದಿರಲಾರರು.