ಜನವರಿ 01ರ ಪ್ರತಿಭಟನಾ ಚಿತ್ರ..

0
1510

1996 ಡಿ. 29ರ ರಾತ್ರಿ ಮೂವರು ದಲಿತ ಯುವಕರೂ ಸೇರಿದಂತೆ ಐವರ ಮೇಲೆ ಹಲ್ಲೆ ನಡೆಯುತ್ತದೆ. ಇಬ್ಬರು ದಲಿತ ಯುವಕರ ಕೇಶ ಮುಂಡನ ಮಾಡಲಾಗುತ್ತದೆ. ಮೇಲ್ವರ್ಗವು ನಡೆಸಿದ ಈ ಹಲ್ಲೆಯನ್ನು ಆ ಯುವಕರು ಸವಾಲಾಗಿ ಸ್ವೀಕರಿಸುತ್ತಾರೆ. ಒಂದೆಡೆ ಹಣ ಮತ್ತು ತೋಲ್ಬಳ. ಇನ್ನೊಂದೆಡೆ ಛಲ. ಹಿಂದುಳಿದ ಮತ್ತು ದಲಿತ ಕಾಯ್ದೆಯ ಅಡಿಯಲ್ಲೂ ಕೇಸು ದಾಖಲಾಗುತ್ತದೆ. ವ್ಯವಸ್ಥೆ ಮತ್ತು ಸಾರ್ವಜನಿಕರ ಗಮನವನ್ನು ಸೆಳೆಯುವುದಕ್ಕಾಗಿ ಈ ಯುವಕರು ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಾರೆ. 2017 ಡಿ. 31ರಂದು ಕೆಲವು ಸಮಾನ ಮನಸ್ಕರನ್ನು ಸೇರಿಸಿಕೊಂಡು ಈ ಸಂತ್ರಸ್ತರು ಮತ್ತೆ ಪ್ರತಿಭಟನೆ ನಡೆಸಿದ್ದಾರೆ. ದುರಂತ ಏನೆಂದರೆ ಘಟನೆ ನಡೆದು 21 ವರ್ಷಗಳು ಸಂದಿವೆ. ಹಾಗಿದ್ದೂ ಈ ಸಂತ್ರಸ್ತರಿಗೆ ಇನ್ನೂ ನ್ಯಾಯ ದಕ್ಕಿಲ್ಲ. ನ್ಯಾಯಾಲಯವು 2017 ಡಿ. 2ನೇ ವಾರದಲ್ಲಿ ತೀರ್ಪು ನೀಡುವುದಕ್ಕೆ ಬಹುತೇಕ ಸಿದ್ಧವಾಗಿತ್ತು. ಆದರೆ, ‘ಸಂತ್ರಸ್ತರು ತಮ್ಮ ಜಾತಿಯನ್ನು ಸಾಬೀತುಪಡಿಸುವ ಸರ್ಟಿಫಿಕೇಟನ್ನು ಒಪ್ಪಿಸುವಂತೆ’ ನ್ಯಾಯಾಲಯ ಕೊನೇ ಹಂತದಲ್ಲಿ ಆದೇಶಿಸಿತು. ವಿಚಾರಣೆಯನ್ನು ಮತ್ತೆ ಮುಂದೂಡಲಾಯಿತು.
ಆಂಧ್ರಪ್ರದೇಶದ ಕಾಕಿನಾಡದ ವೆಂಕಟಾಯಪಾಲಯಂ ಎಂಬ ಊರಿನ ಘಟನೆ ಇದು. ಆರೋಪಿ ಗಳಲ್ಲಿ ಓರ್ವ ಇವತ್ತು ಆಳುವ ತೆಲುಗು ದೇಶಂ ಪಕ್ಷದ ಶಾಸಕ. ಓರ್ವ ಆರೋಪಿ ಈಗಾಗಲೇ ಸಾವಿಗೀಡಾಗಿದ್ದಾನೆ. ಅಲ್ಲದೇ 24 ಸಾಕ್ಷಿಗಳಲ್ಲಿ 13 ಮಂದಿಯೂ ಮೃತಪಟ್ಟಿದ್ದಾರೆ. ಈ ಯುವಕರು ಪ್ರತಿಭಟಿಸುತ್ತಿರುವ ದೃಶ್ಯವನ್ನು 2018 ಜನವರಿ 01ರಂದು ಪ್ರಮುಖ ಇಂಗ್ಲಿಷ್ ಪತ್ರಿಕೆಗಳು ಪ್ರಕಟಿಸಿ ದುವು. ನಿಜವಾಗಿ, ಅದನ್ನು ಆರೋಪಿಗಳ ವಿರುದ್ಧದ ಪ್ರತಿಭಟನೆ ಅನ್ನುವುದಕ್ಕಿಂತ ನಮ್ಮ ನ್ಯಾಯ ವ್ಯವಸ್ಥೆಯ ವಿರುದ್ಧದ ಆಕ್ರೋಶ ಎಂದು ಹೇಳುವುದೇ ಹೆಚ್ಚು ಸರಿ. ಘಟನೆ ನಡೆದು 21 ವರ್ಷಗಳು ಕಳೆದಿವೆ. ಘಟನೆ ನಡೆಯುವಾಗ ಯುವಕರಾಗಿದ್ದ ಸಂತ್ರಸ್ತರು ಇವತ್ತು ನಡುವಯಸ್ಸನ್ನು ದಾಟಿ ಹಿರಿಯರೆ ನಿಸಿಕೊಂಡಿದ್ದಾರೆ. ಆರೋಪಿಗಳ ಸ್ಥಿತಿಯೂ ಇದುವೇ. ಹಲ್ಲೆ ನಡೆಸುವಾಗ ಆರೋಪಿಗಳ ವಿಚಾರಧಾರೆ ಮತ್ತು ನಿಲುವು ಏನಾಗಿತ್ತೋ ಅದುವೇ ಈ 21 ವರ್ಷಗಳ ಬಳಿಕವೂ ಅವರದಾಗಿರುವ ಸಾಧ್ಯತೆ ಬಹಳ ಬಹಳ ಕಡಿಮೆ. 1996ಕ್ಕೂ ಈ 2017ಕ್ಕೂ ನಡುವೆ ದಿನಗಳು ಉರುಳಿದ ವ್ಯತ್ಯಾಸ ಮಾತ್ರ ಇರುವುದಲ್ಲ. ಉರುಳಿದ ಪ್ರತಿದಿನವೂ ವ್ಯಕ್ತಿಯ ವಿಚಾರಧಾರೆಯೊಂದಿಗೆ ಸಂಘರ್ಷ ನಡೆಸಿ ಕೊಂಡೇ ಉರುಳಿ ರುತ್ತದೆ. 20 ವರ್ಷಗಳ ಹಿಂದೆ ಜಾತಿ ಶ್ರೇಷ್ಠತೆಯ ವ್ಯಸನದಿಂದ ಬಳಲುತ್ತಿದ್ದವ ಈಗಲೂ ಅದೇ ವ್ಯಸನವನ್ನು ಅಷ್ಟೇ ತೀವ್ರವಾಗಿ ಅಂಟಿಸಿಕೊಂಡಿರುತ್ತಾನೆ ಎಂದು ಹೇಳುವ ಹಾಗಿಲ್ಲ. ಮೇಲಿನ ಯುವಕರ ಮೇಲೆ 20 ವರ್ಷಗಳ ಹಿಂದೆ ಮೇಲು ವರ್ಗದಿಂದ ಹಲ್ಲೆ ನಡೆಯುವಾಗ ಈ ದೇಶದಲ್ಲಿ ಜಾತಿ ವ್ಯಸನ ದೊಡ್ಡಮಟ್ಟದಲ್ಲಿ ಪ್ರಾಬಲ್ಯ ಸ್ಥಾಪಿಸಿತ್ತು. ಮೇಲು ವರ್ಗದ ಮಂದಿ ಕೆಳ ವರ್ಗದವರನ್ನು ತಮಗೆ ಸಮಾನರಾಗಿ ಕಾಣುವುದಕ್ಕೆ ಇನ್ನೂ ಸಿದ್ಧಗೊಂಡಿಲ್ಲದ ಸಮಯ ಅದು. ಅಂಥ ಸಮಯದಲ್ಲಿ ದಲಿತ ಯುವಕರ ಮೇಲೆ ಮೇಲುವರ್ಗದಿಂದ ಹಲ್ಲೆ ನಡೆಯುವುದು ಅಶ್ಚರ್ಯ ಕರ ಬೆಳವಣಿಗೆಯೇನೂ ಅಲ್ಲ. ಆಶ್ಚರ್ಯಕರ ಏನೆಂದರೆ, ಆ ಯುವಕರು ಹಲ್ಲೆಯನ್ನು ಪ್ರತಿಭಟಿಸು ವುದು ಮತ್ತು ಮೇಲುವರ್ಗದ ವಿರುದ್ಧ ದಾವೆ ಹೂಡುವುದು. ಇದಕ್ಕೆ ಅಪಾರ ಧೈರ್ಯ ಮತ್ತು ಛಲದ ಅಗತ್ಯ ಇದೆ. ಆದ್ದರಿಂದಲೇ ಆ ಯುವಕರು ಪ್ರಶಂಸೆಗೆ ಅರ್ಹರಾಗಿದ್ದಾರೆ. ಒಂದು ವೇಳೆ, ನ್ಯಾಯಾಲಯವು ಅತಿ ಶೀಘ್ರವಾಗಿ ಈ ಪ್ರಕರಣವನ್ನು ಮುಗಿಸಿರುತ್ತಿದ್ದರೆ ಏನಾಗುತ್ತಿತ್ತು? ಅದು ಸಮಾಜದ ಮೇಲೆ ಬೀರಬಹುದಾಗಿದ್ದ ಪರಿಣಾಮಗಳು ಏನೇನಾಗಿರುತ್ತಿತ್ತು? ನಿಜವಾಗಿ, ಈ ಪ್ರಕರಣದ ಬಗ್ಗೆ ಈ 2018ರಲ್ಲಿ ಹೊರಬೀಳುವ ತೀರ್ಪಿಗೂ 1997ರಲ್ಲಿ ಹೊರಬೀಳುವ ತೀರ್ಪಿಗೂ ಪರಿಣಾಮದ ದೃಷ್ಟಿಯಿಂದ ಸಾಕಷ್ಟು ವ್ಯತ್ಯಾಸಗಳಿವೆ. ಒಂದು ವೇಳೆ 20 ವರ್ಷಗಳ ಹಿಂದೆ ಈ ಪ್ರಕರಣದ ಬಗ್ಗೆ ತೀರ್ಪು ಬರುತ್ತಿದ್ದರೆ ಅದು ಆ ಬಳಿಕದ ವರ್ಗ ತಾರತಮ್ಯ ವಿಚಾರಧಾರೆಯಲ್ಲಿ ಬದಲಾವಣೆಗಳನ್ನು ತರುವ ಸಾಧ್ಯತೆ ಇರುತ್ತಿತ್ತು. ಹಿಂದುಳಿದ ವರ್ಗದ ಮೇಲೆ ಏರಿ ಹೋಗುವ ಮೊದಲು ಮೇಲ್ವರ್ಗದ ಮಂದಿ ಎರಡು ಬಾರಿ ಆಲೋಚಿಸುವಂತೆ ಮಾಡುತ್ತಿತ್ತು. ದಲಿತರನ್ನು ಸಮಾನರೆಂದು ಪರಿಗಣಿಸದಿದ್ದರೂ ಕಾನೂನಿಗೆ ಹೆದರಿ ಸಂಯಮ ಪಾಲಿಸಬೇಕಾದ ಒತ್ತಡವೊಂದು ಅವರ ಮೇಲೆ ಬೀಳುತ್ತಿತ್ತು. ನಿಜವಾಗಿ, ನ್ಯಾಯ ವಿಳಂಬ ಅನ್ನುವುದನ್ನು ಕೇವಲ ಒಂದು ಪ್ರಕರಣದ ಆರೋಪಿಗಳು ಮತ್ತು ಸಂತ್ರಸ್ತರ ನಡುವಿನ ವ್ಯವಹಾರವಾಗಿ ಮಾತ್ರ ನಾವು ಕಾಣಬೇಕಿಲ್ಲ. ಬಾಹ್ಯನೋಟಕ್ಕೆ ವೆಂಕಟಾಯಪಾಲಯಂ ಎಂಬುದು 10-15 ಮಂದಿಯ ನಡುವಿನ ಪ್ರಕರಣ. ಆದರೆ, ಆಳವಾಗಿ ನೋಡಿದರೆ, ಈ ಪ್ರಕರಣದ ವ್ಯಾಪ್ತಿ ಈ ದೇಶದಷ್ಟೇ ವಿಸ್ತಾರವಿದೆ. ಆ ಐವರು ಯುವಕರು ಕೋಟ್ಯಂತರ ಮಂದಿಯನ್ನು ಪ್ರತಿನಿಧಿಸುತ್ತಾರೆ. ಆರೋಪಿಗಳೂ ಅಸಂಖ್ಯ ಮಂದಿಯ ವಿಚಾರಧಾರೆಯನ್ನು ಪ್ರತಿನಿಧಿಸುತ್ತಾರೆ. ಆದ್ದರಿಂದಲೇ ಆ ಒಂದು ಪ್ರಕರಣದ ತೀರ್ಪು ಆ 15 ಮಂದಿಗೆ ಸಂಬಂಧಿಸಿದ್ದು ಮಾತ್ರವಾಗಿರದೇ ಈ ಅಸಂಖ್ಯ ಮಂದಿಯೂ ಅದರಲ್ಲಿ ಪಾಲುದಾರರಾಗಿರುತ್ತಾರೆ.
ಒಂದು ರೀತಿಯಲ್ಲಿ, ಮೇಲ್ವರ್ಗದ ಮಂದಿ ತಮ್ಮ ಶ್ರೇಷ್ಠತೆಯ ವ್ಯಸನದಿಂದ ದಲಿತ ,ಮತ್ತು ದುರ್ಬಲ ವರ್ಗದ ಮಂದಿಯ ಮೇಲೆ ಹಲ್ಲೆ ನಡೆಸುವುದಕ್ಕೂ ಮೇಲ್ವರ್ಗದ ಮಂದಿಯ ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ನಡೆಸುವುದಕ್ಕೂ ಗುರುತರ ವ್ಯತ್ಯಾಸಗಳಿವೆ. ಇವೆರಡೂ ಸಮಾಜದ ಮೇಲೆ ಬೀರುವ ಪರಿಣಾಮಗಳಲ್ಲೂ ಭಿನ್ನತೆಗಳಿವೆ. ಎರಡು ದಶಕಗಳ ಹಿಂದೆ ಕಂಬಾಲ ಪಲ್ಲಿಯಲ್ಲಿ ದಲಿತರ ಮೇಲೆ ತೀವ್ರ ಹಿಂಸಾಚಾರ ನಡೆಯಿತು. ದಲಿತರು ವಲಸೆ ಹೋಗಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಯಿತು. ಅಂತಿಮವಾಗಿ ಆ ಪ್ರಕರಣದ ತೀರ್ಪು ಹೇಗೆ ಬಂತು ಎಂಬುದೂ ನಮಗೆ ಗೊತ್ತು. ಆರೋಪಿಗಳು ಖುಲಾಸೆಗೊಂಡರು. ಒಂದು ವೇಳೆ, ಮೇಲ್ವರ್ಗದ ಮೇಲೆ ದಲಿತ ವರ್ಗದ ಮಂದಿ ಇಂಥದೊಂದು ಹಿಂಸಾಚಾರ ನಡೆಸಿರುತ್ತಿದ್ದರೆ ಪ್ರಕರಣದ ಕೊನೆ ಹೀಗಾಗುತ್ತಿತ್ತೇ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ದಲಿತ ವರ್ಗದಲ್ಲಿಲ್ಲದ ಕೆಲವು ಅನುಕೂಲತೆಗಳು ಮೇಲ್ವರ್ಗದಲ್ಲಿವೆ. ಕಾನೂನಿನ ಜ್ಞಾನ ,ಶಿಕ್ಷಣ ರಾಜಕೀಯ ಪ್ರಭಾವ, ವ್ಯವಸ್ಥೆಯ
ಮೇಲೆ ಹಿಡಿತ.. ಎಲ್ಲವೂ ಆ ವರ್ಗದ ಕೈಯಲ್ಲಿದೆ. ಹೀಗಿರುವಾಗ ದಲಿತ ವ್ಯಕ್ತಿ ಮೇಲ್ವರ್ಗದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಸುಲಭವಾಗಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲಾರ. ಆದರೆ ದಲಿತರ ಮೇಲೆ ಹಲ್ಲೆ ನಡೆಸಿದ ಮೇಲ್ವರ್ಗದ ವ್ಯಕ್ತಿ ಸುಲಭವಾಗಿ ತಪ್ಪಿಸಿಕೊಳ್ಳಬಲ್ಲ. ಆದ್ದರಿಂದಲೇ ವೆಂಕಟಾಯಪಾಲಯಂನ ಪ್ರತಿಭಟನಾ ದೃಶ್ಯ ಮಹತ್ವಪೂರ್ಣವಾಗುವುದು. ಮುಂದೊಂದು ದಿನ ವಿಜಯಪುರದ ಬಾಲಕಿಯ ಪೋಷಕರೋ ಹಿತೈಷಿಗಳೋ ಹೀಗೆ ಪ್ರತಿಭಟಿಸುವ ದೃಶ್ಯವನ್ನು ನಾವು ನೋಡಬೇಕಾದೀತೇನೋ?