ಟಿಪ್ಪು ವಿರೋಧಿಗಳಿಗೆ ಧನ್ಯವಾದ

0
3140

ನಾಲ್ಕು ಪ್ರಶ್ನೆಗಳಿವೆ

1. ಟಿಪ್ಪುವನ್ನು ಮೆಚ್ಚಿಕೊಳ್ಳುವ, ಹೊಗಳುವ, ಸಂತನಾಗಿಸುವ – ಒಂದು ರೀತಿಯಲ್ಲಿ, ಟಿಪ್ಪು ಪರ ಎಂದು ಹೇಳಬಹುದಾದ ಹೇಳಿಕೆ, ದಾಖಲೆ, ವಾದಗಳು ಒಂದು ಕಡೆಯಾದರೆ, ಟಿಪ್ಪುವನ್ನು ಮತಾಂಧ, ಮತಾಂತರಿ, ಕ್ರೂರಿ, ದೇಗುಲ ಭಂಜಕ.. ಹೀಗೆ ಟಿಪ್ಪು ವಿರೋಧಿ ಎಂದು ಮುದ್ರೆಯೊತ್ತಬಹುದಾದ ಹೇಳಿಕೆ, ವಾದ, ದಾಖಲೆಗಳು ಇನ್ನೊಂದು ಕಡೆ. ಈ ಎರಡರಲ್ಲಿ ನಿಜ ಟಿಪ್ಪು ಯಾರು? ಆತನನ್ನು ಪತ್ತೆ ಹಚ್ಚುವುದು ಹೇಗೆ? ಈ ವರ್ತಮಾನದಲ್ಲಿ ಬದುಕುತ್ತಿರುವ ನಮಗೆ ಭೂತಕಾಲದ ಟಿಪ್ಪುವನ್ನು ನಿಜ ನೆಲೆಯಲ್ಲಿ ಅರಿತುಕೊಳ್ಳುವುದಕ್ಕೆ ಯಾವ ದುರ್ಬೀನು ಸೂಕ್ತವಾಗಬಹುದು?

2. ಟಿಪ್ಪುವನ್ನು ನಾವು ನೋಡಬೇಕಾದ ರೀತಿ ಯಾವುದು? (ಅ) ಆಡಳಿತಗಾರ, (ಆ) ಪುರೋಹಿತ, (ಇ) ಧರ್ಮ ಪ್ರಚಾರಕ? ಇದನ್ನೇ ಇನ್ನಷ್ಟು ಸ್ಪಷ್ಟವಾಗಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ಅಥವಾ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ನೋಡಿದ ರೀತಿಯಲ್ಲಿ ಟಿಪ್ಪುವನ್ನು ನೋಡಬೇಕೇ ಅಥವಾ ಪೇಜಾವರ ಶ್ರೀಯವರನ್ನು ನೋಡುವ ರೀತಿಯಲ್ಲೇ ಅಥವಾ ವಿವೇಕಾನಂದರನ್ನು ನೋಡುವ ರೀತಿಯಲ್ಲೇ ಅಥವಾ ಈ ಮೂರಕ್ಕೂ ಹೊಂದದ ಬೇರೆಯದೇ ಆದ ರೀತಿಯಲ್ಲೇ? ಟಿಪ್ಪು ಬದುಕಿದ್ದು 17ನೇ ಶತಮಾನದ ದ್ವಿತೀಯ ಭಾಗದಲ್ಲಿ. ಟಿಪ್ಪುವಿನ ಪರ ಅಥವಾ ವಿರುದ್ಧ ಅಥವಾ ತಟಸ್ಥ ವಾದವನ್ನು ಮಂಡಿಸುತ್ತಿರುವ ನಾವು ಇರುವುದೋ 21ನೇ ಶತಮಾನದಲ್ಲಿ. ಈ ಶತಮಾನಕ್ಕೂ ಟಿಪ್ಪು ಬದುಕಿದ ಶತಮಾನಕ್ಕೂ ನಡುವೆ ಬಲುದೊಡ್ಡ ವ್ಯತ್ಯಾಸವೊಂದಿದೆ. ಅದುವೇ ಪ್ರಜಾತಂತ್ರ. 19ನೇ ಶತಮಾನದ ದ್ವಿತೀಯ ಭಾಗದಲ್ಲಿ ಚಾಲ್ತಿಗೆ ಬಂದ ಜಾತ್ಯತೀತ ಎಂಬ ಪರಿಕಲ್ಪನೆಯ  ಕನ್ನಡಿಯೊಳಗಿಟ್ಟು 17ನೇ ಶತಮಾನದ ಟಿಪ್ಪುವನ್ನು ಪರಿಶೀಲಿಸುವುದು ಎಷ್ಟು ನೈತಿಕ ಮತ್ತು ನ್ಯಾಯಪೂರ್ಣ? ಒಂದು ಉದಾಹರಣೆ: ತಲೆ ಮರೆಸಿಕೊಂಡಿದ್ದ ಕೊಡಗಿನ ನಾಯಕರಲ್ಲೊಬ್ಬನಾದ ರಂಗ ನಾಯಕ ಎಂಬಾತನು ಟಿಪ್ಪುವಿನ ಆಹ್ವಾನದ ಮೇರೆಗೆ ಹಿಂತಿರುಗಿ ಇಸ್ಲಾಮ್ ಧರ್ಮವನ್ನು ಸ್ವೀಕರಿಸುತ್ತಾನೆ (ಸಲ್ದಾನ, ದಿ ಕ್ಯಾಪ್ಟಿವಿಟಿ ಆಫ್ ಕೆನರಾ ಕ್ರಿಶ್ಚಿಯನ್ ಅಂಡರ್ ಟಿಪ್ಪೂ ಇನ್ 1784, ಮಂಗಳೂರು, 933 ಪುಟ 18ರ ಅಡಿ ಟಿಪ್ಪಣಿ ಬಿ ಯಲ್ಲಿ ಹೇಳಲಾಗಿದೆ). ಇನ್ನೊಂದು ಉದಾಹರಣೆ: ಮಲಬಾರ್ ಮತ್ತು ಕೊಡಗು ಪ್ರದೇಶದ ಖಾಝಿಗೆ ಪತ್ರ ಬರೆದ ಟಿಪ್ಪು ತನ್ನ ಪ್ರಭುತ್ವದ ವಿರುದ್ಧ ದಂಗೆ ಏಳುವವರಿಗೆ ಶಿಕ್ಷೆಯಾಗಿ ಮತಾಂತರವನ್ನು ಆದೇಶಿಸುತ್ತಾನೆ. (ಸುಲ್ತಾನುಲ್ ತವಾರಿಖ್, ಪುಟ: 47-51) ಇವೆರಡನ್ನೂ ವಿಶ್ಲೇಷಿಸುವಾಗ ನಾವು 17ನೇ ಶತಮಾನದ ದ್ವಿತೀಯ ಭಾಗದಲ್ಲಿದ್ದುಕೊಂಡೇ ಓದಬೇಕು. ಟಿಪ್ಪುವಿನ ಪ್ರಭುತ್ವದ ವಿರುದ್ಧ ಆಗಾಗ ದಂಗೆಗಳಾಗುತ್ತಿದ್ದ ಪ್ರದೇಶಗಳೆಂದರೆ ಮಲಬಾರ್ ಮತ್ತು ಕೊಡಗು. ಆ ದಂಗೆಯನ್ನು ಅಡಗಿಸುವ ದಾರಿಯಾಗಿ ಆತ ಆಯ್ದುಕೊಂಡ ಮಾರ್ಗ ಮತಾಂತರವೇ ಹೊರತು ಅದು ಆತನ ಮತಾಂಧತೆಗೆ ಪುರಾವೆ ಆಗುವುದಿಲ್ಲ. ಒಂದು ವೇಳೆ ಇದನ್ನೇ ನಾವು ಪುರಾವೆಯಾಗಿ ಎತ್ತಿಕೊಳ್ಳುವುದಾದರೆ ಆತನ ಸಾಮ್ರಾಜ್ಯದ ಇನ್ನಿತರ ಕಡೆ ವ್ಯಾಪಕ ಮಟ್ಟದಲ್ಲಿ ಇದು ಕಾಣಿಸಿಕೊಳ್ಳಬೇಕಿತ್ತು. ದೇವಸ್ಥಾನಗಳ ನೆಲಸಮ ಆಗಬೇಕಿತ್ತು. ಇದರ ಬದಲು ಓರ್ವ ಮತಾಂಧ ಮುಸ್ಲಿಮನಿಂದ ಎಂದೂ ನಿರೀಕ್ಷಿಸಲಾಗದ ಹತ್ತು-ಹಲವು ಉದಾರ ನೀತಿಗಳು ಆತನಲ್ಲಿ ವ್ಯಕ್ತವಾಗಿದೆ. ಅದರಲ್ಲಿ ಒಂದು: ಮರಾಠ ಜನರಲ್ ಪರಶುರಾಂಭು ಎಂಬವ ಶೃಂಗೇರಿಯ ಶ್ರೀ ಶಾರದಾ ಮಂದಿರದ ಮೇಲೆ ದಾಳಿ ಮಾಡಿ, ಶಾರದಾ ದೇವಿ ಮೂರ್ತಿಯನ್ನು ಪಾದ ಪೀಠದಿಂದ ಸ್ಥಳಾಂತರಿಸಿ 60 ಲಕ್ಷ ರೂಪಾಯಿ ದೋಚಿದ ಮತ್ತು ಪೀಠದ ಸ್ವಾಮೀಜಿಯು ಕಾರ್ಕಳಕ್ಕೆ ಪಲಾಯನಗೈದ ಘಟನೆಯ ತರುವಾಯ ಸ್ವಾಮೀಜಿಗೆ ಟಿಪ್ಪು ಒಂದಕ್ಕಿಂತ ಹೆಚ್ಚು ಪತ್ರ ಬರೆಯುತ್ತಾನೆ. ಶಾರದಾ ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸುವುದಲ್ಲದೇ ಮಂದಿರದ ಕಾವಲಿಗೆ ಸೇನಾ ತುಕಡಿಯನ್ನು ಇರಿಸುತ್ತಾನೆ. ಮಾತ್ರವಲ್ಲ, ವೈರಿಗಳ ದಮನದ ಉದ್ದೇಶವನ್ನಿಟ್ಟುಕೊಂಡು ಮಠದಲ್ಲಿ ಧಾರ್ಮಿಕ ಕ್ರಿಯೆಗಳಾದ ಶತಚಂಡಿ ಜಪ ಮತ್ತು ಸಹಸ್ರ ಚಂಡಿ ಜಪಗಳನ್ನು ನೆರವೇರಿಸುವಂತೆ ನಿವೇದಿಸಿಕೊಳ್ಳುತ್ತಾನೆ. ಶೃಂಗೇರಿ ಮಠದಲ್ಲಿ 1000 ಬ್ರಾಹ್ಮಣರಿಗೆ ಪ್ರತಿದಿನ ಭೋಜನ ವ್ಯವಸ್ಥೆಯನ್ನು ಏರ್ಪಡಿಸುವಂತೆ ಪತ್ರದಲ್ಲಿ ವಿನಂತಿಸುತ್ತಾನೆ. 1791 ರಲ್ಲಿ ಬರೆದ ಇನ್ನೊಂದು ಪತ್ರದಲ್ಲಿ, ವಿರೋಧಿಗಳು ವಿಫಲಗೊಳ್ಳುವಂತೆ ಪ್ರಾರ್ಥಿಸಿ 48 ದಿನಗಳ ಕಾಲ ಸತತ ಪೂಜೆ ಮತ್ತು ಸಹಸ್ರ ಚಂಡಿಯಾಗ ನಡೆಸುವಂತೆ ಕೋರಿಕೊಳ್ಳುತ್ತಾನೆ. (ಮೈಸೂರು ಆರ್ಡಿಯಾಲಾಜಿಕಲ್ ರಿಪೋರ್ಟ್ 42-75). ಇನ್ನೊಂದು ಉದಾಹರಣೆ: ದೇವಸ್ಥಾನಗಳಿಗೆ ಆತ ಬಿಟ್ಟುಕೊಟ್ಟ ಉಂಬಳಿ, ದಾನ ಮತ್ತು ದತ್ತಿ ನೀಡುವಿಕೆ. 1780ರಲ್ಲಿ ಹೈದರಾಲಿಯು ಕರ್ನಾಟಕವನ್ನು ಮುತ್ತಿದಾಗ ಕಾಂಚೀಪುರದ ದೇವಸ್ಥಾನವೊಂದಕ್ಕೆ ಆಸ್ಥಿಭಾರವನ್ನು ಹಾಕಿದ್ದನಾದರೂ ಅದನ್ನು ಆತ ಮುಗಿಸಿರಲಿಲ್ಲ. ಮೂರನೇ ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ ಅಲ್ಲಿಗೆ ಹೋಗಿದ್ದ ಟಿಪ್ಪು ಆ ದೇವಸ್ಥಾನದ ಕಟ್ಟಡಕ್ಕಾಗಿ 10,000 ಹೊನ್ನುಗಳನ್ನು ಕೊಟ್ಟ. ಅಲ್ಲದೇ ಅವನು ಅಲ್ಲಿನ ರಥೋತ್ಸವದಲ್ಲಿ ಭಾಗವಹಿಸಿ ಆ ಸಂದರ್ಭದ ಬಾಣ ಬಿರುಸುಗಳ ವೆಚ್ಚವನ್ನು ಆತನೇ ವಹಿಸಿದ (ಎಂ.ಎ.ಆರ್. 1938, ಪುಟ: 123-125). ತುಂಗಭದ್ರಾ ದಂಡೆಯ ಮೇಲಿನ ದೇವಾಯಲಗಳಿಗೆ ಮತ್ತು ಅಲ್ಲಿನ ಬ್ರಾಹ್ಮಣರಿಗೆ ಟಿಪ್ಪು ಭೂಮಿಯನ್ನು ದಾನವಾಗಿ ನೀಡಿರುವುದನ್ನು ಕನ್ನಡದಲ್ಲಿರುವ ಸಂಸ್ಕೃತ ಶ್ಲೋಕವು ಹೇಳುತ್ತದೆ. (ಬರ ಮಹಲಿನ ದಾಖಲೆಗಳು, ಭಾಗ:5, ಪುಟ: 39-116). ಊರತೂರು ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ಮೂರ್ತಿ ಸ್ಥಾಪನೆ ಮಾಡಿ, ಅಲ್ಲಿನ ದೈನಂದಿನ ಪೂಜೆಗೆ, ಅರ್ಚಕರಿಗೆ ಮತ್ತು ಇತರ ಸೇವಕರಿಗೆ ಇನಾಮ್ ಭೂಮಿಯನ್ನು ದಾನವಾಗಿ ನೀಡಿದನು (ಎಂ.ಎ.ಆರ್. 1935, ಪುಟ 61). ಅರ್ನಾಡು ತಾಲೂಕಿನ ಚೇಲಾಂಬರ ಅಮಸೋವಿನ ಪುಣ್ಣೂರು ದೇವಾಲಯಕ್ಕೆ 70.42 ಎಕರೆಗಳ ಗದ್ದೆ ಮತ್ತು 3.29 ಎಕರೆ ತೋಟದ ಭೂಮಿ, ಪೊನ್ನವಿ ತಾಲೂಕಿನ ಪೈಲತ್ತೂರು ಅಮತೋಮಿನ ತಿರುವಂಚಿಕುಳದ ಶಿವದೇವಾಲಯಕ್ಕೆ 208.82 ಎಕರೆ ಜಮೀನು ಮತ್ತು 3.20 ಎಕರೆ ತೋಟದ ಭೂಮಿಯನ್ನು ನೀಡಿದನು. ಇಂಥ ಡಜನ್‍ಗಟ್ಟಲೆ ಉಲ್ಲೇಖಗಳು ಐತಿಹಾಸಿಕವಾಗಿ ನಿರೂಪಿತವಾಗಿವೆ. ಒಂದು ವೇಳೆ, ಆತ ಮತಾಂಧನೇ ಆಗಿರುತ್ತಿದ್ದರೆ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದು, ಜಪ-ತಪಗಳನ್ನು ಏರ್ಪಡಿಸುವುದು ಮತ್ತು ದೇವಾಲಯಕ್ಕೆ ಭೂಮಿ ಕೊಡುವುದೆಲ್ಲ ಸಾಧ್ಯವಿತ್ತೇ? ಅಷ್ಟಕ್ಕೂ, ಟಿಪ್ಪುವಿನ ಪ್ರಭುತ್ವವಿದ್ದುದು ಬಹುಸಂಖ್ಯಾತ ಹಿಂದೂಗಳ ನಡುವೆ. ಆಗ ಸಂಖ್ಯೆಯಲ್ಲಿ ಮುಸ್ಲಿಮರು ತೀರಾ ತೀರಾ ನಗಣ್ಯ. ಹೀಗಿರುವಾಗ, ದೇವಸ್ಥಾನಗಳನ್ನು ನೆಲಸಮಗೊಳಿಸುವುದೆಂದರೆ, ತನ್ನ ಪ್ರಭುತ್ವದ ವಿರುದ್ಧ ದಂಗೆಗೆ ಪ್ರಚೋದನೆ ಕೊಡುವುದೆಂದೇ ಅರ್ಥ. ಒಂದು ಕಡೆ, ದೇವಸ್ಥಾನಗಳಿಗೆ ಭೂಮಿ ಕೊಡುತ್ತಾ ಮತ್ತು ಜಪ-ತಪಗಳನ್ನು ಮಾಡಿಸುತ್ತಾ ಇನ್ನೊಂದು ಕಡೆ ಅವುಗಳನ್ನು ಉರುಳಿಸುವುದು ಸಾಧ್ಯವೇ? ಆತನ ಮಂತ್ರಿಮಂಡಲದಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಪೂರ್ಣಯ್ಯ, ಕೃಷ್ಣರಾಯ, ಚಾಮಯ್ಯ ಅಯ್ಯಂಗಾರ, ನರಸಿಂಹರಾಯ, ಶ್ರೀನಿವಾಸ ರಾಯ, ಮೂಲಚಂದ್, ಸುಬ್ಬರಾಯ, ಶ್ರೀಪತಿರಾಯ, ರಾಮರಾಯ.. ಇವರೆಲ್ಲ ಈ ಮಂದಿರ ಭಂಜನೆಯನ್ನು ನೋಡುತ್ತಾ ಸುಮ್ಮನಿರುತ್ತಿದ್ದರೆ? ಹಾಗಂತ, ಮಂದಿರ ಧ್ವಂಸ ಕಾರ್ಯ ನಡೆದಿಲ್ಲ ಎಂದಲ್ಲ. ಗಡಿಭಾಗದ ಮಂದಿರಗಳ ಮೇಲೆ ಆತ ದಾಳಿ ಮಾಡಿದ್ದಾನೆ. ಆತನ ಅರಮನೆಯ ಗಜಗಳಷ್ಟು ದೂರದಲ್ಲಿರುವ ರಂಗನಾಥ ದೇವಾಲಯವಾಗಲಿ, ಮೇಲುಕೋಟೆಯ ನರಸಿಂಹ ದೇವಸ್ಥಾನ ಮತ್ತು ಶ್ರೀರಂಗಪಟ್ಟಣದ ನಾರಾಯಣ ಸ್ವಾಮಿ ದೇವಸ್ಥಾನವಾಗಲಿ ಅಥವಾ ಇಂಥ ಹತ್ತಾರು ದೇವಸ್ಥಾನಗಳಿಗೆ ಯಾವ ಹಾನಿಯನ್ನೂ ಮಾಡದ ಮತ್ತು ಯಥೇಚ್ಛ ಉಡುಗೊರೆಗಳನ್ನು ನೀಡಿದ ಟಿಪ್ಪು ಗಡಿಭಾಗದ ಮಂದಿರಗಳ ಮೇಲೆ ದಾಳಿ ಮಾಡಿರುವುದೇಕೆ ಅನ್ನುವ ಪ್ರಶ್ನೆ ಸಹಜ. ಇದಕ್ಕಿರುವ ಉತ್ತರ ರಾಜಕೀಯವೇ ಹೊರತು ಬೇರೆ ಯಾವುದೂ ಕಾಣಿಸುತ್ತಿಲ್ಲ. ಟಿಪ್ಪುವಿನ ಪ್ರಭುತ್ವದ ವಿರುದ್ಧ ಸಂಚು ನಡೆಸಲು ಬಳಕೆಯಾಗುತ್ತಿದ್ದ ಮಂದಿರಗಳನ್ನು ಆತ ಧ್ವಂಸ ಮಾಡಿದ್ದಾನೆ. ಪ್ರಜಾತಂತ್ರ ಭಾಷೆಯಲ್ಲಿ ಹೇಳುವುದಾದರೆ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳನ್ನು ದಮನಿಸುವುದಕ್ಕಾಗಿ ಇಂದಿರಾಗಾಂಧಿಯವರು ಸ್ವರ್ಣ ಮಂದಿರದ ಮೇಲೆ ಹೇಗೆ ಬ್ಲ್ಯೂ ಸ್ಟಾರ್ ಕಾರ್ಯಾಚರಣೆ ನಡೆಸಿದರೋ ಹಾಗೆ. ಬ್ಲ್ಯೂ ಸ್ಟಾರ್ ಕಾರ್ಯಾಚರಣೆ ಸಂಚುಕೋರರ ವಿರುದ್ಧ ಆಗಿತ್ತೇ ಹೊರತು ಸ್ವರ್ಣ ಮಂದಿರದ ವಿರುದ್ಧ ಆಗಿರಲಿಲ್ಲ, ಅಷ್ಟಕ್ಕೂ, ಬರೇ ಲೂಟಿಯನ್ನೇ ಉದ್ದೇಶವಾಗಿಟ್ಟುಕೊಂಡು ಹಿಂದೂ ರಾಜರುಗಳು ದೇವಸ್ಥಾನಗಳ ಮೇಲೆ ಮಾಡಿದ ಹತ್ತು-ಹಲವು ದಾಳಿಗಳ ಬಗ್ಗೆ ಯಾಕೆ ಟಿಪ್ಪು ವಿರೋಧಿಗಳು ಮೌನ ಪಾಲಿಸುತ್ತಾರೆ? ಭಾರತಕ್ಕೆ ಮುಸ್ಲಿಮ್ ದೊರೆಗಳು ಆಗಮಿಸುವುದಕ್ಕಿಂತ ಮೊದಲೇ (1193-1210) ಪರ್ಮರ ರಾಜನಾದ ಸುಭಟ ವರ್ಮನು ಗುಜರಾತ್‍ನ ಮೇಲೆ ದಾಳಿ ಮಾಡಿ ಅನೇಕ ಜೈನ ದೇವಾಲಯಗಳನ್ನು ಲೂಟಿ ಮಾಡಿದನಲ್ಲ, ಯಾಕೆ ಟಿಪ್ಪು ವಿರೋಧಿಗಳಿಗೆ ಸುಭಟ ವರ್ಮನು ದೇಗುಲ ಭಂಜಕನಾಗಿ ಕಾಣಿಸುವುದಿಲ್ಲ? ಕಾಶ್ಮೀರದ ರಾಜನಾದ ಹರ್ಷನು ತನ್ನ ಸಾಮ್ರಾಜ್ಯದೊಳಗೆ ಇದ್ದ 4 ದೇವಾಲಯಗಳನ್ನು ಬಿಟ್ಟು ಉಳಿದೆಲ್ಲ ದೇವಾಲಯಗಳನ್ನು ಸೂರೆ ಮಾಡಿದನಲ್ಲ ಮತ್ತು ದೇವಾಲಯಗಳ ಮೇಲೆ ದಾಳಿ, ಲೂಟಿ ಮತ್ತು ಧ್ವಂಸದ ಪ್ರಕ್ರಿಯೆಯನ್ನು ಸುಗಮವಾಗಿ ನೋಡಿಕೊಳ್ಳಲು ‘ದೇವೋತ್ಪಾಟಕ ನಾಯಕ’ ಎಂಬ ಹೆಸರಿನ ಅಧಿಕಾರಿ  ಯನ್ನೇ ನೇಮಿಸಿದ್ದನಲ್ಲ, ಯಾಕೆ ಟಿಪ್ಪುವನ್ನು ಮಂದಿರ ಭಂಜಕ ಅನ್ನುವವರು ಈ ಬಗ್ಗೆ ಚಕಾರವೆತ್ತುವುದಿಲ್ಲ? ಕೊನೆಗೆ ಜನರು ಈತನ ಕಾಟ ತಾಳಲಾರದೇ ಶ್ರೀನಗರದ ಬೀದಿಯಲ್ಲಿ ಅಟ್ಟಿಸಿಕೊಂಡು ಹೋಗಿ ಕಲ್ಲು ಹೊಡೆದು ಕೊಂದುದು ಏನನ್ನು ಸೂಚಿಸುತ್ತದೆ – ಮಂದಿರ ಧ್ವಂಸದಂಥ ಕೃತ್ಯಗಳನ್ನು ಜನರು ಸಹಿಸುವುದಿಲ್ಲ ಎಂಬುದನ್ನೇ ಅಲ್ಲವೇ? ಹೀಗಿದ್ದೂ ಮುಸಲ್ಮಾನನಾದ ಟಿಪ್ಪು ಧಾರ್ಮಿಕ ಕಾರಣಕ್ಕಾಗಿ ದೇಗುಲ ಭಂಜನೆ ಮಾಡಿದ್ದಿದ್ದರೆ ಅದನ್ನು ಹಿಂದೂಗಳು ಸಹಿಸಿಕೊಳ್ಳುತ್ತಿದ್ದರೇ? ಇಲ್ಲಿ ಇನ್ನೂ ಒಂದು ಪ್ರಶ್ನೆಯನ್ನು ಎತ್ತಬೇಕಿದೆ. ರಾಜ ಅಶೋಕನು ಬೌದ್ಧ ಮತ ಪ್ರಚಾರಕ್ಕಾಗಿ ತನ್ನ ಇಡೀ ಆಡಳಿತ ಯಂತ್ರವನ್ನೇ ಬಳಸಿದನಲ್ಲ, ಹಿಂದೂ ಧರ್ಮೀಯರ ಮೇಲೆ ಬೌದ್ಧ ಮತವನ್ನು ಹೇರಿದನಲ್ಲ, ಇದು ಸಹ್ಯವೇ? ಇದು ಬಲವಂತದ ಮತಾಂತರ ಅನ್ನಿಸಿಕೊಳ್ಳುವುದಿಲ್ಲವೇ? ಪ್ರಭುತ್ವವೇ ಮುಂದೆ ನಿಂತು ಬೌದ್ಧ ಧರ್ಮವನ್ನು ಪ್ರಚಾರ ಮಾಡುವುದು ರಾಜನೀತಿಗೆ ಸೂಕ್ತವೇ? ಮರಾಠರು ಶೃಂಗೇರಿಯ ಶಾರದಾ ದೇವಿ ಮಂದಿರದ ಮೇಲೆ ಮಾಡಿದ ದಾಳಿ ಮತ್ತು ಅನೇಕ ಹಿಂದೂ ರಾಜವಂಶಗಳು ಮಾಡಿದ ಮಂದಿರ ದಾಳಿಗಳೆಲ್ಲ ಯಾಕೆ ಟಿಪ್ಪು ವಿರೋಧಿಗಳು ಉಲ್ಲೇಖಿಸುವ ‘ಮಂದಿರ ಧ್ವಂಸಗಳ ಪಟ್ಟಿಯಲ್ಲಿ’ ಕಾಣಿಸಿಕೊಳ್ಳುವುದಿಲ್ಲ?

3. ಟಿಪ್ಪುವನ್ನು ಇದಮಿತ್ಥಂ ಎಂದು ತೀರ್ಮಾನಿಸುವುದಕ್ಕೆ ನಮ್ಮಲ್ಲಿರುವ ಆಧಾರ ಗ್ರಂಥಗಳು ಯಾವುವು? ಅವನ್ನು ಬರೆದವರು ಯಾರು? ಅವರು ಎಲ್ಲಿಯವರು? ಅವರೆಷ್ಟು ನಿಷ್ಪಕ್ಷಪಾತಿಗಳು? ನಿಜ ಏನೆಂದರೆ, ಟಿಪ್ಪು ಮತ್ತು ಹೈದರಾಲಿಯನ್ನು ಮತಾಂಧ, ದೇಗುಲ ಭಂಜಕ, ಜನಪೀಡಕ, ಮತಾಂತರಿ.. ಇತ್ಯಾದಿ ಇತ್ಯಾದಿಯಾಗಿ ಚಿತ್ರೀಕರಿಸಿದವರು ಒಂದೋ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಹುದ್ದೆಯಲ್ಲಿದ್ದವರು ಅಥವಾ ಕಕಂಪೆನಿಗೆ ಬೆಂಗಾವಲಾಗಿ ನಿಂತ ಇತಿಹಾಸಕಾರರಾದ ಅಲೆಕ್ಸಾಂಡರ್ ಡೌವ್, ಜೇಮ್ಸ್ ಮಿಲ್, ಮೌಂಟಿ ಸ್ಟುವರ್ಟ್ ಎಲ್‍ಫಿನ್‍ಸ್ಟನ್, ಹೆನ್ರಿ ಎಲಿಯಟ್, ಜಾನ್ ಡೌಸನ್ ಮತ್ತು ಇನ್ನಿತರರೇ ಹೊರತು ಬ್ರಿಟಿಷ್ ವಸಾಹತುಶಾಹಿಯನ್ನು ಪ್ರಶ್ನಿಸಿದವರಲ್ಲ ಎಂಬುದು ಬಹಳ ಮುಖ್ಯ. ಬ್ರಿಟಿಷ್ ಇತಿಹಾಸಕಾರರು ಅತ್ಯಂತ ಹೆಚ್ಚು ನಕಾರಾತ್ಮಕವಾಗಿ ಬರೆದಿರುವುದು ಇವರಿಬ್ಬರ ಬಗ್ಗೆ. ಅದಕ್ಕಿರುವ ಕಾರಣ ಇವರು ಈಸ್ಟ್ ಇಂಡಿಯಾ ಕಂಪೆನಿಗೆ ಕೊಟ್ಟಷ್ಟು ಎದಿರೇಟು ಇನ್ನಾರೂ ಕೊಟ್ಟಿರಲಿಲ್ಲ ಎಂಬುದಾಗಿದೆ. ಮೈಸೂರಿನ ಒಡೆಯರ್ ವಂಶದವರು ಬ್ರಿಟಿಷರಿಗೆ ಕಪ್ಪ ಕೊಟ್ಟು ಸಾಮಂತ ರಾಜರಾಗಿ ಬದುಕುತ್ತಿದ್ದ ವೇಳೆ, ಮೈಸೂರು ಸೇನೆಯಲ್ಲಿದ್ದ ಹೈದರ್ ಅದಕ್ಕೆ ತಡೆ ಒಡ್ಡಿದನಲ್ಲದೇ ಬ್ರಿಟಿಷರಿಗೆ ಎದುರಾಡಿದ. ಟಿಪ್ಪೂ ಅದನ್ನೇ ಮಾಡಿದ. ಇವರಿಬ್ಬರ ಪತನದ ಬಳಿಕ ಬ್ರಿಟಿಷ್ ನಿಯೋಜಿತ ಒಡೆಯರ್ ರಾಜವಂಶವು ಕಪ್ಪ ಕೊಡುತ್ತಾ ಸಾಮಂತರಾಗಿ ಮುಂದುವರಿಯಿತು. ಸದ್ಯ ಟಿಪ್ಪುವನ್ನು ಮತಾಂಧ ಅನ್ನುವ ವರ್ಗ ತಮ್ಮ ವಾದಕ್ಕಾಗಿ ಎತ್ತಿಕೊಳ್ಳುತ್ತಿರುವುದು ಇದೇ ಬ್ರಿಟಿಷ್ ಇತಿಹಾಸಕಾರರ ಗ್ರಂಥಗಳನ್ನು. ನಿಜವಾಗಿ, ಇವರ ಉದ್ದೇಶಶುದ್ಧಿಯನ್ನು ಅಳೆಯುವುದಕ್ಕೆ ಇದುವೇ ದಾರಾಳ ಸಾಕು.

4. ಈ ದೇಶದಲ್ಲಿ ಮುಸ್ಲಿಮ್ ದೊರೆಗಳು ಸುಮಾರು 700 ವರ್ಷಗಳ ವರೆಗೆ ಆಧಿಪತ್ಯ ಸ್ಥಾಪಿಸಿದ್ದರು. ಬ್ರಿಟಿಷರು 250 ವರ್ಷಗಳ ವರೆಗೆ ಆಳಿದ್ದರು. ಆದರೆ, ಟಿಪ್ಪುವೂ ಸೇರಿ ಮುಸ್ಲಿಮ್ ದೊರೆಗಳನ್ನೆಲ್ಲ ಸಾರಾಸಗಟು ಮತಾಂಧ ಎಂದೋ ಮತಾಂತರಿ ಎಂದೋ ಹಿಂದೂ ವಿರೋಧಿ ಎಂದೋ ಮುದ್ರೆ ಒತ್ತುವವರು ಬ್ರಿಟಿಷರ ವಿರುದ್ಧ ಒಂದೇ ಒಂದು ಹೇಳಿಕೆಯನ್ನೂ ಕೊಡುತ್ತಿಲ್ಲವಲ್ಲ, ಯಾಕೆ? ಇತ್ತೀಚೆಗೆ ಷಹಜಹಾನ್ ಕೂಡ ಕಪ್ಪುಪಟ್ಟಿಗೆ ಸೇರಿಕೊಂಡ. ಮುಸ್ಲಿಮ್ ದೊರೆಗಳೇ ಯಾಕೆ ಪ್ರತಿಕ್ಷಣವೂ ಅಪಖ್ಯಾತಿಗೆ ಒಳಗಾಗುತ್ತಾರೆ? ಐತಿಹಾಸಿಕ ತಪ್ಪುಗಳು, ಪ್ರಮಾದಗಳು, ಎಡವಟ್ಟುಗಳು ಅವರಿಂದ ಮಾತ್ರ ಸಂಭವಿಸಿವೆಯೇ? ಹಿಂದೂ ದೊರೆಗಳು ಮತ್ತು ಬ್ರಿಟಿಷ್ ವೈಸರಾಯ್‍ಗಳು ಪುಟಕ್ಕಿಟ್ಟ ಚಿನ್ನವೇ? ಈ ಪ್ರಶ್ನೆಯನ್ನು ಇನ್ನಷ್ಟು ವಿಸ್ತರಿಸಿ ನೋಡುವುದಾದರೆ, ಇತ್ತೀಚಿನ ಪಟಾಕಿ ಮತ್ತು ಮೀನು ಪ್ರಕರಣಗಳನ್ನು ಎತ್ತಿಕೊಳ್ಳಬಹುದು. ದೆಹಲಿಯಲ್ಲಿ ದೀಪಾವಳಿಯ ಸಮಯದಲ್ಲಿ ಪಟಾಕಿ ಸಿಡಿಸಬಾರದೆಂದು ಸುಪ್ರೀಮ್ ಕೋರ್ಟ್ ಆದೇಶಿಸಿದಾಗ, ತಕ್ಷಣ ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಏನೆಂದರೆ, ಮುಸ್ಲಿಮರ ಪ್ರಾಣಿ ಬಲಿಯ ವಿರುದ್ಧ ಯಾಕೆ ಇಂಥ ನಿಷೇಧವಿಲ್ಲ ಎಂದಾಗಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೀನೂಟ ಮಾಡಿ ಧರ್ಮಸ್ಥಳದ ಶ್ರೀ ಮಂಜುನಾಥನನ್ನು ಸಂದರ್ಶಿಸಲು ಹೋದುದಕ್ಕೆ ಬಿಜೆಪಿ ಮತ್ತು ಪರಿವಾರ ಎತ್ತಿದ ಆಕ್ಷೇಪ ಏನೆಂದರೆ, ಹಂದಿ ಮಾಂಸವನ್ನು ತಿಂದು ಮಸೀದಿ ಪ್ರವೇಶಿಸಬಹುದೇ ಎಂದು. ಯಾಕೆ ಪ್ರತಿ ಘಟನೆಯನ್ನೂ ಮುಸ್ಲಿಮೀಕರಿಸಲಾಗುತ್ತಿದೆ? ಪಟಾಕಿ ನಿಷೇಧಿಸಿದ್ದು ಮುಸ್ಲಿಮರಲ್ಲ. ಮೀನು ತಿಂದದ್ದೂ ಮುಸ್ಲಿಮರಲ್ಲ. ಆದರೂ ಇವೆರಡನ್ನೂ ಮುಸ್ಲಿಮರಿಗೆ ತಳಕು ಹಾಕುವ ಮತ್ತು ಹಿಂದೂ ವರ್ಸಸ್ ಮುಸ್ಲಿಮ್ ಎಂಬಂತಾಗಿಸುವ ತಂತ್ರ ಇದೆಯಲ್ಲ, ಇದು ಕೊಡುವ ಸೂಚನೆ ಏನು? ಪ್ರತಿ ಘಟನೆಗೂ ಇಂಥದ್ದೊಂದು ತಿರುವು ಕೊಡುವುದರ ಹಿಂದಿನ ಉದ್ದೇಶ ಏನು? ಅವರು ಏನನ್ನು ಬಯಸುತ್ತಿದ್ದಾರೆ? ಏನೇ ಆದರೂ,

ಟಿಪ್ಪುವಿನ ಬಗ್ಗೆ ಆಳ ಅಧ್ಯಯನ ನಡೆಸಲು ಮತ್ತು ಅದನ್ನು ಜನರಿಗೆ ತಿಳಿಸಲು ಸಂದರ್ಭ ಸೃಷ್ಟಿಸಿದ ‘ಟಿಪ್ಪು ವಿರೋಧಿ’ ಗುಂಪಿಗೆ ಹೃದಯಪೂರ್ವಕ ಧನ್ಯವಾದಗಳು.

ಎ.ಕೆ ಕುಕ್ಕಿಲ