ನ್ಯಾಯಾಲಯದಲ್ಲಿ ಕೋಲಾಹಲ, ಸಂಶಯಗಳು ಹಲವು

0
1015

@ ಸಲೀಮ್ ಬೋಳಂಗಡಿ
ಸರ್ವೋಚ್ಛ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಾಧೀಶರು ಪ್ರಜಾಪ್ರಭುತ್ವ ಅಪಾಯ ದಲ್ಲಿದೆಯೆಂದು ಸುದ್ದಿಗೋಷ್ಠಿಯನ್ನು ಕರೆದು ಬಹಿರಂಗಪಡಿಸಿರುವುದು. ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾರ ನಡೆಯನ್ನು ಸಂಶಯಾಸ್ಪದವಾಗಿ ನೋಡುವಂತಾಗಿದೆ. ಐತಿಹಾಸಿಕವಾದ ಈ ಪತ್ರಿಕಾ ಗೋಷ್ಠಿಯಲ್ಲಿ ಈ ನ್ಯಾಯಾಧೀಶರು ನ್ಯಾಯಾಂಗದ ಹಲವು ಆಗು ಹೋಗುಗಳನ್ನು ಬಹಿರಂಗಪಡಿಸಿ ದರು. ಇದು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಹಸ್ತಕ್ಷೇಪ ವಾಗುತ್ತಿದೆಯೇ ಅನ್ನುವ ಅನುಮಾನ ಗರಿಕೆದರಿದೆ. ಸೊಹ್ರಾಬುದ್ದೀನ್ ಶೇಖ್, ತುಳಸಿ ರಾಮ್ ಪ್ರಜಾಪತಿ ನಕಲಿ ಎನ್‍ಕೌಂಟರ್‍ನ ಕುರಿತು ತನಿಖಾ ವರದಿಯನ್ನು ಆಲಿಸಿದ ಸಿಬಿಐಯ ನ್ಯಾಯಾಧೀಶ ಬ್ರಿಜ್ ಗೋಪಾಲ್‍ರ ಸಂಶಯಾಸ್ಪದ ವಾದ ಸಾವಿನಲ್ಲಿ ಅಮಿತ್ ಶಾರ ಹೆಸರೂ ಕೇಳಿಬಂದಿತ್ತು. ಅಂದರೆ 2005ರಲ್ಲಿ ಸೊಹ್ರಾಬು ದ್ದೀನ್ ಶೇಖ್ ಮತ್ತು ಆತನ ಪತ್ನಿ ಕೌಸರ್‍ಬಿ ಯನ್ನು ಗುಜರಾತ್ ಪೋಲೀಸರು ಹೈದರಾಬಾದ್ ನಿಂದ ಅಪಹರಿಸಿ ನಕಲಿ ಎನ್‍ಕೌಂಟರ್‍ನಲ್ಲಿ ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಆ ಬಳಿಕ ಆತನ ಸಹಾಯಕ ತುಳಸಿರಾಮ್ ಪ್ರಜಾ ಪತಿಯನ್ನು ಗುಜರಾತ್ ಪೋಲೀಸರು ನಕಲಿ ಎನ್‍ಕೌಂಟರ್‍ನಲ್ಲಿ ಕೊಲೆಗೈದರೆಂಬ ಆರೋಪವಿದೆ. ಈ ಎರಡೂ ಪ್ರಕರಣಗಳ ವಿಚಾರಣೆಯನ್ನು ಮಹಾರಾಷ್ಟ್ರ ಉಚ್ಛ ನ್ಯಾಯಾಲಯವು ಸುಪ್ರೀಮ್ ಕೋರ್ಟ್‍ಗೆ ವರ್ಗಾಯಿಸಿತ್ತು. 2013ರಲ್ಲಿ ನ್ಯಾಯಾ ಧೀಶ ಜೆ.ಟಿ. ಉತ್ವತ್ ವಾದವನ್ನು ಮೊದಲು ಆಲಿಸಿದ್ದರು. ಪ್ರಕರಣದ ಆರೋಪಿ ಅಮಿತ್ ಶಾ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದುದನ್ನು ತೀವ್ರವಾಗಿ ತರಾಟೆಗೆ ತೆಗೆದದ್ದಕ್ಕಾಗಿ ನ್ಯಾಯಾಧೀಶ ರನ್ನು ತಕ್ಷಣ ವರ್ಗಾಯಿಸಲಾಯಿತು. 2014ರ ಜೂನ್‍ನಲ್ಲಿ ಜಸ್ಟಿಸ್ ಲೋಯಾ ಅಧಿಕಾರ ವಹಿಸಿದರು. 2014ರ ನವೆಂಬರ್‍ನಲ್ಲಿ ಅವರು ನಿಧನರಾದರು. ಇದೊಂದು ವ್ಯವಸ್ಥಿತ ಕೊಲೆ ಯೆಂಬ ಆರೋಪ ದಟ್ಟವಾಗಿ ಕೇಳಿಬಂದಿತ್ತು. ಈ ಸಾವಿನ ವಿರುದ್ಧ ಅನೇಕ ವಕೀಲರು ರಂಗಕ್ಕಿಳಿದಿದ್ದರು. ಪಂಜಾಬ್ ಮತ್ತು ಹರ್ಯಾಣದ ಹೈಕೋರ್ಟ್‍ನ ವಕೀಲರು ತನಿಖೆಗೆ ಒತ್ತಾಯಿಸು ತ್ತಿದ್ದಾರೆ. ಮುಂಬೈಯ ಲಾಯರ್ಸ್ ಅಸೋಸಿ
ಯೇಶನ್ (ಬಿ.ಎಲ್.ಎ.) ತನಿಖೆಗೆ ಆಗ್ರಹಿಸಿ ಸಲ್ಲಿಸಿದ ಅರ್ಜಿಯನ್ನು ನಿರ್ಲಕ್ಷಿಸಲಾಗಿದೆಯೆಂದು ಬಿ.ಎಲ್.ಎ. ಆರೋಪಿಸಿದೆ. ಹೀಗೆ ಈ ಪ್ರಕರಣ ಸಹಿತ ಜಸ್ಟಿಸ್ ಕರ್ಣನ್‍ರನ್ನು ವಜಾ ಮಾಡಿದ ಪ್ರಕರಣ ಕೂಡಾ ವ್ಯವಸ್ಥಿತ ಹಿತಾಸಕ್ತಿಗಳ ಒತ್ತಡ ಕೆಲಸ ಮಾಡುತ್ತಿದೆ ಎಂಬ ಸಂದೇಶವನ್ನು ಈ ನಾಲ್ವರು ನ್ಯಾಯಾಧೀಶರ ಹೇಳಿಕೆ ಪ್ರಸ್ತುತಪಡಿಸುತ್ತಿದೆ.
ಸರ್ವೋಚ್ಛ ನ್ಯಾಯಾಲಯದ ಘನತೆ ಕಾಪಾಡಲು ಸುಪ್ರೀಮ್ ಕೋರ್ಟು ತಂದ ಕೆಲ ಕಾನೂನುಗಳನ್ನು ಪಾಲಿಸುವಲ್ಲಿ ಹೆಚ್ಚಿನ ನ್ಯಾಯಾ ಧೀಶರ ಸಹಿತ ಮುಖ್ಯ ನ್ಯಾಯಮೂರ್ತಿಗಳು ವಿಫಲರಾಗಿದ್ದಾರೆಂದು ಬಾರ್ ಕೌನ್ಸಿಲ್ ಪ್ರಸ್ತುತ ಪಡಿಸಿದ್ದು ಕೂಡಾ ಸಾಮಾನ್ಯ ವಿಚಾರವಲ್ಲ. ಆದ್ದರಿಂದಲೇ ಉನ್ನತ ನ್ಯಾಯಾಲಯದ ಗೌರವಕ್ಕೆ ಚ್ಯುತಿ ತರುವಂತಹ ಆತಂಕಕಾರಿ ವಿಚಾರಗಳನ್ನು ಬಹಿರಂಗಪಡಿಸಿದ ಸುದ್ದಿಗೋಷ್ಠಿಯು ನ್ಯಾಯಾಲಯದ ಇತಿಹಾಸದಲ್ಲಿ ಬೆಳ್ಳಿ ರೇಖೆಯಾಗಿ ಗುರುತಿಸಲ್ಪಡುತ್ತಿದೆ. ಪ್ರಜಾಪ್ರಭುತ್ವದ ಸಂರಕ್ಷಣೆಗೆ ಕಟಿಬದ್ಧರಾಗಿ ನಿಂತ ಈ ನಾಲ್ವರು ನ್ಯಾಯಾಧೀಶರು ನ್ಯಾಯೋಚಿತ ತೀರ್ಪು ನೀಡುವಲ್ಲಿ ಹೆಸರುವಾಸಿಯಾದವರು. ಆದ್ದರಿಂದ ಅವರು ಮಾಡಿದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಗಮನಾರ್ಹವಾದ ಬದಲಾವಣೆ ತರಬೇಕಾದ ಅಗತ್ಯವಿದೆ. ಈ ಬದಲಾವಣೆಗಳು ನ್ಯಾಯಾಧೀಶರು ಮತ್ತು ನ್ಯಾಯಾಲಯದ ತೀರ್ಮಾನಗಳು ವಿಮರ್ಶನಾತೀತವೆಂಬುದನ್ನು ತೆಗೆದು ಹಾಕಬೇಕು. ರಾಷ್ಟ್ರಗೀತೆಗೆ ಸಂಬಂಧಿಸಿದ ಇತ್ತೀಚಿನ ನ್ಯಾಯಾಲಯದ ತೀರ್ಪು ಕೂಡಾ ರಾಜಕೀಯದ ಕರಿನೆರಳು ಇದರಲ್ಲಿ ಚಾಚಿದೆ ಎಂಬ ಸಂಶಯ ಮೂಡಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ರಾಜಕೀಯದ ಹಸ್ತಕ್ಷೇಪವು ಅಪಾಯಕಾರಿ ಪ್ರವೃತ್ತಿ ಎಂಬುದು ನಿಸ್ಸಂಶಯ. ನ್ಯಾಯಾಲಯದ ಗೌರವ ಕಾಪಾಡಬೇಕಾದ ಅಗತ್ಯವನ್ನು ಈ ನ್ಯಾಯಾಧೀಶರು ಸೂಚಿಸಿದ್ದಾರೆ. ತಾವು ಈಗ ತೆಪ್ಪಗಿದ್ದರೆ ಮುಂದೆ ನಮ್ಮನ್ನು ದೂಷಿಸಬಾರದು ಎಂಬ ನೆಲೆಯಲ್ಲಿ ನಾವು ಎಚ್ಚರಿಸುತ್ತಿದ್ದೇ ವೆ ಎಂಬ ನ್ಯಾಯಾ ಧೀಶರ ಹೇಳಿಕೆಗಳನ್ನು ಕೂಡಾ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ತರು ವಂತಹ ರೀತಿಯಲ್ಲಿ ಮುಖ್ಯ ನ್ಯಾಯಾಧಿಪತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಆತಂಕ ಕಾರಿ ಬೆಳವಣಿಗೆಯಾದ ಕಾರಣ ಪ್ರಜಾಪ್ರಭುತ್ವದ ಉಳಿವಿಗಾಗಿ ಸಂಸತ್ತು ಸಮಗ್ರವಾದ ಕಾನೂನನ್ನು ತರಬೇಕಾದ ಅಗತ್ಯವಿದೆ ಎಂಬುದು ಪ್ರಸ್ತುತ ಘಟನೆಗಳಿಂದ ನಮಗೆ ವ್ಯಕ್ತವಾಗುತ್ತಿದೆ. ಆದರೆ ದುರದೃಷ್ಟಕರವೆಂದರೆ ಸುಪ್ರೀಮ್ ಕೋರ್ಟಿನ ನಾಲ್ವರು ಮುಖ್ಯ ನ್ಯಾಯಾಧೀಶರು ಉಲ್ಲೇಖಿಸಿದ ಆರೋಪದ ಪ್ರಮುಖ ಆರೋಪಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಆಡಳಿತ ಪಕ್ಷದ ನಾಯಕ ಎಂಬುದೂ ಇಲ್ಲಿ ಗಮನಾರ್ಹ. ಅವರಿಗೆ ಸಂಪೂರ್ಣ ಪ್ರಾಬಲ್ಯವಿರುವ ಸಂಸತ್ತಿನಲ್ಲಿ ಇಂತಹ ಒಂದು ಹೊಸ ಕಾನೂನು ಬರುತ್ತದೆ ಎಂದು ನಿರೀಕ್ಷಿಸುವುದಾದರೂ ಹೇಗೆ? ಅದು ಸಾಧ್ಯವೇ?