ಶ್ರೇಯಸಾಗರ್ ಬಿಟ್ಟು ಹೋದ ಪ್ರಶ್ನೆ…

0
1522

ಸುಖ ಮರಣಕ್ಕೆ (Euthanasia) ನಿಷೇಧ ಇರುವ ಮತ್ತು ಆತ್ಮಹತ್ಯೆಯು ಅಪರಾಧವಾಗಿರುವ ದೇಶವೊಂದರಲ್ಲಿ ಜೈನ ಧರ್ಮೀಯರ ಸಲ್ಲೇಖನಾ ವ್ರತದ ಸ್ಥಾನಮಾನವೇನು? ಅದು ಎಷ್ಟು ಸಂವಿಧಾನ ಬದ್ಧ? ಸಾವನ್ನು ಆಗ್ರಹಿಸಿ ವ್ಯಕ್ತಿಯೋರ್ವ ಅನ್ನಾಹಾರ ಮತ್ತು ನೀರು ತ್ಯಜಿಸುವುದನ್ನು ಹಾಗೂ ಸಾವಿಗೆ ತುತ್ತಾಗುವುದನ್ನು ಧಾರ್ಮಿಕ ಕ್ರಿಯೆ ಎಂಬ ಕಾರಣಕ್ಕಾಗಿ ಅನುಮತಿಸಬಹುದೇ? ಸಂವಿಧಾನ ಕೊಡ ಮಾಡಿರುವ ಧಾರ್ಮಿಕ ಹಕ್ಕು ಮತ್ತು ಸ್ವಾತಂತ್ರ್ಯಗಳಡಿಯಲ್ಲಿ ಈ ಕ್ರಿಯೆ ಒಳಪಡುತ್ತದೆಯೇ ಅಥವಾ ಭಾರತೀಯ ದಂಡಸಂಹಿತೆ 306ರ ಪ್ರಕಾರ ಆತ್ಮಹತ್ಯೆಗೆ ಪ್ರಚೋದನೆ ಎಂಬ ಪರಿಧಿಯೊಳಗೆ ಸೇರಿಕೊಳ್ಳುತ್ತದೆಯೇ? ಆತ್ಮಹತ್ಯೆ ಮತ್ತು ಸಲ್ಲೇಖನಾ ಎರಡೂ ಸಮಾನವೇ? ಪಕ್ಕಾ ಧಾರ್ಮಿಕ ಕ್ರಿಯೆಯೊಂದನ್ನು ಆತ್ಮಹತ್ಯೆಯೊಂದಿಗೆ ಜೋಡಿಸಿ ನೋಡುವುದು ಎಷ್ಟು ಸರಿ?..

ಈ ಬಗೆಯ ಜಿಜ್ಞಾಸೆಯೊಂದು 2006 ಸೆಪ್ಟೆಂಬರ್‍ನಲ್ಲಿ ಈ ದೇಶದಲ್ಲಿ ಕೆಲವರಲ್ಲಿ ಕಾಣಿಸಿಕೊಂಡಿತು. ಇದಕ್ಕೆ ಕಾರಣ 61 ವರ್ಷದ ವಿಮಲಾ ದೇವಿ ಭನ್ಸಾಲಿ ಎಂಬ ಮಹಿಳೆ. ಜೈನ ಧರ್ಮೀಯರು ಅಧಿಕ ಸಂಖ್ಯೆಯಲ್ಲಿರುವ ರಾಜ್ಯ ರಾಜಸ್ತಾನ. ಈ ದೇಶದ ಜನಸಂಖ್ಯೆಯಲ್ಲಿ ಜೈನ ಧರ್ಮೀಯರು ಕೇವಲ 0.4%ರಷ್ಟಿರುವರಾದರೂ ಆರ್ಥಿಕವಾಗಿ ಅವರು ತುಂಬಾ ಬಲಾಢ್ಯರು. ರಾಜಸ್ತಾನದ ಉನ್ನತ ಸರಕಾರಿ ಅಧಿಕಾರಿಗಳಲ್ಲಿ ಜೈನರೇ ಹೆಚ್ಚಿದ್ದಾರೆ. ವಿಮಲಾದೇವಿ ರಾಜಸ್ತಾನದವರು. ಜೈನ ಧರ್ಮಾನು ಯಾಯಿ. ಲಿವರ್ ಮತ್ತು ಬ್ರೈನ್ ಕ್ಯಾನ್ಸರ್‍ ಗೆ ತುತ್ತಾಗಿರುವುದು ಖಚಿತವಾದ ಬಳಿಕ ಆಕೆ 2006 ಸೆಪ್ಟೆಂಬರ್‍ನಲ್ಲಿ ಸಲ್ಲೇಖನಾ ವ್ರತ ಕೈಗೊಂಡರು. ಸಾವನ್ನು ಆಗ್ರಹಿಸಿಕೊಂಡು ಮಾಡುವ ಉಪವಾಸ ಇದು. ಆರಂಭದಲ್ಲಿ ಅನ್ನಾಹಾರವನ್ನು ತ್ಯಜಿಸುವುದು ಮತ್ತು ಕೊನೆಗೆ ನೀರನ್ನೂ ತ್ಯಜಿಸುತ್ತಾ ಸಾವಿಗೀಡಾಗುವುದು. ಜೈನ ಧರ್ಮೀಯರಲ್ಲಿ ಸಲ್ಲೇಖನಾ ವ್ರತ ಸಹಜವಾಗಿದ್ದರೂ ವಿಮಲಾ ದೇವಿ ಭನ್ಸಾಲಿಯ ನಿರ್ಧಾರವು ಅಸಹಜವಾದ ಜಿಜ್ಞಾಸೆಯೊಂದಕ್ಕೆ ಚಾಲನೆಯನ್ನು ನೀಡಿತು. ನಿಖಿಲ್ ಸೋನಿ ಎಂಬ ನ್ಯಾಯವಾದಿಯೋರ್ವರು ಈ ಸಲ್ಲೇಖನಾ ವ್ರತದ ವಿರುದ್ಧ ರಾಜಸ್ತಾನದ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿಯಡಿ ಮೊಕದ್ದಮೆ ದಾಖಲಿಸಿದರು. ವಿಮಲಾದೇವಿಯ ಸಲ್ಲೇಖನಾ ವ್ರತಕ್ಕೆ ತಡೆ ನೀಡಬೇಕೆಂದು ಅವರು ಆಗ್ರಹಿಸಿದರು. ಸಲ್ಲೇಖನಾ ವ್ರತವನ್ನು ಆತ್ಮಹತ್ಯೆಗೆ ಸಮಾನ ಎಂದು ಕರೆದರು. ಈ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಸ್ವೀಕರಿಸಿತು. ಇದು ಜೈನ ಸಮುದಾಯವನ್ನು ಕೆರಳಿಸಿತು. ಸಲ್ಲೇಖನಾ ವ್ರತವು ಪುನರ್‍ಜನ್ಮದ ಸರಣಿಯಿಂದ ಮುಕ್ತಗೊಳ್ಳುವ ಒಂದು ಧಾರ್ಮಿಕ ವಿಧಿ ಎಂದು ಅದು ವ್ಯಾಖ್ಯಾನಿಸಿತು. ಧಾರ್ಮಿಕ ಹಕ್ಕುಗಳನ್ನು ಸಂರಕ್ಷಿಸುವ ಸಂವಿಧಾನದ 21ನೇ ವಿಧಿಯ ಪ್ರಕಾರ ಈ ಆಚರಣೆಯನ್ನು ಜೈನ ಸಮುದಾಯ ಸಮರ್ಥಿಸಿಕೊಂಡಿತಲ್ಲದೇ ಕೋರ್ಟ್‍ನ ಮಧ್ಯ ಪ್ರವೇಶವನ್ನು ಪ್ರಶ್ನಿಸಿತು. ಜೈನರಲ್ಲಿ ಶ್ವೇತಾಂಬರ ಎಂಬೊಂದು ಪಂಥ ಇದೆ. ಆ ಪಂಥದವರು ಸಲ್ಲೇಖನಾ ವ್ರತದಲ್ಲಿ ನಂಬಿಕೆ ಇಟ್ಟಿದ್ದಾರೆ. ಕೆಟ್ಟ ಕರ್ಮಗಳಿಂದ ಆತ್ಮವನ್ನು ಮುಕ್ತಗೊಳಿಸುವ ಉದ್ದೇಶ ಅದರ ಹಿಂದಿದೆ. ಆಚಾರ್ಯ ವಿನೋಬಾ ಭಾವೆಯವರು ಸಲ್ಲೇಖನಾ ವ್ರತದ ಮೂಲಕ ಬದುಕು ಕೊನೆಗೊಳಿಸಿದ್ದಾರೆ ಎಂದು ಜೈನ ಧರ್ಮೀಯರು ವಾದಿಸುತ್ತಾರೆ. ಸಲ್ಲೇಖನಾ ವ್ರತದ ಮೂಲಕವೇ ಬಾಹುಬಲಿಯು ಈ ಜಗತ್ತಿನಿಂದ ನಿರ್ಗಮಿಸಿದ್ದಾರೆ ಎಂಬುದೂ ಅವರ ನಂಬಿಕೆ. ಆದರೆ ನಿಖಿಲ್ ಸೋನಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಈ ನಂಬಿಕೆಯ ಬುನಾದಿಯನ್ನೇ ಪ್ರಶ್ನಿಸುವಂತೆ ಮಾಡಿತು. ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂವಿಧಾನದ ನಡುವಿನ ಸಂಘರ್ಷವಾಗಿಯೂ ಅದು ಪರಿಗಣಿತವಾಯಿತು. ಸಲ್ಲೇಖನಾ ವ್ರತವನ್ನು ಅನೇಕರು ಆತ್ಮಹತ್ಯೆ ಎಂದು ಕರೆದರು. ಮಾತ್ರವಲ್ಲ, ನಿಖಿಲ ಸೋನಿಯ ಮೊಕದ್ದಮೆಯು ವಿಮಲಾ ದೇವಿ ಭನ್ಸಾಲಿಯಂತೆ ಸಲ್ಲೇಖನಾ ವ್ರತದಲ್ಲಿರುವ ಇನ್ನಷ್ಟು ಪ್ರಕರಣಗಳ ಬಹಿರಂಗಕ್ಕೂ ಕಾರಣವಾಯಿತು. 93 ವರ್ಷದ ಕೈಲಾ ದೇವಿ ಹಿರಾವತ್ ಎಂಬ ವಯೋವೃದ್ಧ ಮಹಿಳೆ ಆ ಸಮಯದಲ್ಲಿ ಹೆಚ್ಚು ಸುದ್ದಿಗೆ ಗ್ರಾಸವಾದರು. ಆರೋಗ್ಯಪೂರ್ಣವಾಗಿದ್ದ ಅವರು ಸಲ್ಲೇಖನಾ ವ್ರತ ಕೈಗೊಂಡಿದ್ದರು. ಅವರ ಸುತ್ತಮುತ್ತ ಮಂತ್ರ ಪಠಣಗಳು ನಡೆಯುತ್ತಿದ್ದುವು. ಜನರ ಭೇಟಿ, ಭಕ್ತಿ ಪ್ರದರ್ಶನಗಳೂ ನಡೆಯುತ್ತಿದ್ದುವು. ಪ್ರಕರಣ ನ್ಯಾಯಾಲಯ ದಲ್ಲಿದ್ದುದರಿಂದ ಇಂಥ ಸಲ್ಲೇಖನದ ಒಂದೊಂದೇ ಘಟನೆಗಳು ಅಲ್ಲಿ-ಇಲ್ಲಿ ಸುದ್ದಿಗೆ ಬರತೊಡಗಿದುವು. ಕ್ಯಾನ್ಸರ್ ಪೀಡಿತ 46 ವರ್ಷದ ಮಹಿಳೆ, ಗ್ಯಾಂಗ್ರೀನ್‍ನಿಂದ ಬಳಲುತ್ತಿದ್ದ 75 ವರ್ಷದ ಮಹಿಳೆ, ಕ್ಯಾನ್ಸರ್ ಪೀಡಿತ 46 ವರ್ಷದ ಕಮಲಾದೇವಿ ಮೆಹ್ತಾ, 94 ವರ್ಷದ ಮಹಿಳೆ.. ಹೀಗೆ ಸಲ್ಲೇಖನಾ ವ್ರತ ಕೈಗೊಂಡಿರುವ ಸರಣಿ ಸುದ್ದಿಗಳು ಬಹಿರಂಗಕ್ಕೆ ಬರತೊಡಗಿದುವು. ಸಲ್ಲೇಖನಾ ವ್ರತ ಕೈಗೊಳ್ಳುವ ವ್ಯಕ್ತಿ ಕುಟುಂಬದ ಮತ್ತು ಧಾರ್ಮಿಕ ಗುರುವಿನ ಸಮ್ಮತಿಯನ್ನು ಪಡೆದಿರಬೇಕು. ಸಾಮಾನ್ಯವಾಗಿ, ಕಾಯಿಲೆ ಪೀಡಿತರೇ ಇಂಥದ್ದೊಂದು ಸಾಹಸಕ್ಕೆ ಕೈ ಹಾಕುತ್ತಾರೆ. ಅಲ್ಲದೇ, ಸಲ್ಲೇಖನಾ ವ್ರತ ಕೈಗೊಂಡು ಯಾರು ಸಾವಿಗೀಡಾಗುತ್ತಾರೋ ಅವರನ್ನು ಕೊಂಡಾಡಲಾಗುತ್ತದೆ. ಸಾವಿನ ಮನೆ ದುಃಖದ ಬದಲು ಸಂಭ್ರಮದಲ್ಲಿರುತ್ತದೆ. ಸಾವಿಗೆ ಸಂತೋಷ ವ್ಯಕ್ತಪಡಿಸಿ ಜಾಹೀರಾತು ನೀಡುವ ಕ್ರಮವೂ ಇದೆ. ಪ್ರತಿವರ್ಷ ಸುಮಾರು 200ರಷ್ಟು ಮಂದಿ ಹೀಗೆ ಸಲ್ಲೇಖನಾ ವ್ರತ ಕೈಗೊಂಡು ಬದುಕು ಕೊನೆಗೊಳಿಸುತ್ತಾರೆ ಎಂದು ಹೇಳಲಾಗುತ್ತದೆ. ಹೀಗಿರುತ್ತಾ,
ಸಲ್ಲೇಖನಾ ವ್ರತ ಕಾನೂನು ಬಾಹಿರ ಎಂದು 2015 ಆಗಸ್ಟ್ 10ರಂದು ರಾಜಸ್ತಾನ ಹೈಕೋರ್ಟು ಸಾರಿತಲ್ಲದೇ ಅದಕ್ಕೆ ನಿಷೇಧ ವಿಧಿಸಿ ಆದೇಶ ಹೊರಡಿಸಿತು.

ಜೈನ ಸಮುದಾಯದ ಮಟ್ಟಿಗೆ ಇದು ಅತ್ಯಂತ ಆಘಾತಕಾರಿ ತೀರ್ಪು. ಈ ತೀರ್ಪಿನ ವಿರುದ್ಧ ‘ಅಖಿಲ ಭಾರತ ವಕಶಿಯಾ ದಿಗಂಬರ್ ಜೈನ್ ಪರಿಷತ್’ ಎಂಬ ಸಂಘಟನೆ ಸುಪ್ರೀಮ್ ಕೋರ್ಟ್‍ನಲ್ಲಿ ದೂರು ದಾಖಲಿಸಿತು. ಈ ದೂರನ್ನು ವಿಚಾರಣೆಗೆ ಪರಿಗಣಿಸಿದ ಮುಖ್ಯ ನ್ಯಾಯಾಧೀಶ ಎಚ್.ಎಲ್. ದತ್ತ್ ಅವರಿದ್ದ ನ್ಯಾಯಪೀಠವು ರಾಜಸ್ತಾನ ಹೈಕೋರ್ಟಿನ ತೀರ್ಪಿಗೆ ತಡೆ ವಿಧಿಸಿ 2015 ಆಗಸ್ಟ್ 31ರಂದು ಆದೇಶ ಹೊರಡಿಸಿತು. ಹಾಗಂತ,

ಈ ಎಲ್ಲವನ್ನೂ ಇಲ್ಲಿ ಉಲ್ಲೇಖಿಸುವುದಕ್ಕೆ ಒಂದು ಕಾರಣ ಇದೆ.
ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ಮುಕ್ತಾಯ ಕಂಡ ಮಹಾ ಮಸ್ತಕಾಭಿಷೇಕಕ್ಕಿಂತ ಎರಡು ದಿನಗಳ ಮೊದಲು ಮಹಾರಾಜ್ ಶ್ರೇಯಸಾಗರ್ ಎಂಬ ಸಾಧುವೊಬ್ಬರು ಸಾವಿಗೀಡಾದರು. ಮಧ್ಯ ಪ್ರದೇಶದ ಪನ್ನಾ ಜಿ¯್ಲÉಯವರಾದ ಇವರು ಮಸ್ತಕಾಭಿಷೇಕಕ್ಕಿಂತ ವಾರಗಳ ಮೊದಲು ಸಲ್ಲೇಖನಾ ವ್ರತ ಕೈಗೊಂಡಿದ್ದರು. ಅವರ ಸುತ್ತ ನೂರಾರು ಜೈನ ಸಾಧು ಮತ್ತು ಸಾಧ್ವಿಗಳು ಮಂತ್ರ ಪಠಣಗೈದುದು ಮತ್ತು ಅದೇ ಸ್ಥಿತಿಯಲ್ಲಿ ಅವರು ಸಾವಿಗೀಡಾದ ಸುದ್ದಿಗಳೂ ಪ್ರಕಟವಾದುವು. 2016 ಅಕ್ಟೋಬರ್ ನಲ್ಲಿ ಆಂಧ್ರಪ್ರದೇಶ ದಲ್ಲಿ ಆರಾಧನಾ ಎಂಬ 13 ವರ್ಷದ ಬಾಲೆ ಸಾವಿಗೀಡಾಗಿದ್ದಳು. ಪವಿತ್ರ ಚೌಮಾಸದಲ್ಲಿ 68 ದಿನಗಳ ಕಾಲ ಉಪವಾಸವಿದ್ದ ಆಕೆ ಅಂತಿಮವಾಗಿ ಸಾವಿಗೀಡಾದಳು. ಆಕೆಯನ್ನು ಬಾಲ ತಪಸ್ವಿ ಎಂದು ಕರೆಯಲಾಯಿತು. ಶವ ಮೆರವಣಿಗೆಯನ್ನು ಶೋಭಾ ಯಾತ್ರೆಯಾಗಿ ಗೌರವಿಸಲಾಯಿತು. ಈ ಉಪವಾಸದ ಅವಧಿಯಲ್ಲಿ ಅನೇಕರು ಈ ಬಾಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಸ್ಥಳೀಯ ಪತ್ರಿಕೆಗಳಲ್ಲಿ ಆಕೆಯನ್ನು ಕೊಂಡಾಡಿ ಜಾಹೀರಾತುಗಳೂ ಪ್ರಕಟವಾಗಿದ್ದುವು. ಅಷ್ಟಕ್ಕೂ,

ಜೈನ ಧರ್ಮದ ಅವಿಭಾಜ್ಯ ಅಂಗವೆಂಬ ನೆಲೆಯಲ್ಲಿ ಸಲ್ಲೇಖನಾ ವ್ರತವನ್ನು ಗೌರವಿಸಲೇಬೇಕು. ಹಾಗಂತ, ಅದರರ್ಥ ಅದು ವಿಮರ್ಶಾತೀತ ಎಂದಲ್ಲ. ಈ ದೇಶದಲ್ಲಿರುವ ವಿವಿಧ ಧರ್ಮಗಳಲ್ಲಿ ಮೋಕ್ಷದ ವಿವಿಧ ಕಲ್ಪನೆಗಳಿವೆ. ಆದರೆ ಸಲ್ಲೇಖನಾ ವ್ರತ ಅವೆಲ್ಲವುಗಳಿಗಿಂತ ತೀರಾ ಭಿನ್ನವಾಗಿದೆ. ಹೀಗಿದ್ದೂ, ದೇಹವನ್ನು ದಂಡಿಸಿಕೊಂಡು ಮೋಕ್ಷ ಹೊಂದುವ ಈ ಪರಿಕಲ್ಪನೆಯು ಈ ದೇಶದಲ್ಲಿ ದೊಡ್ಡಮಟ್ಟದ ಬೌದ್ಧಿಕ ಜಿಜ್ಞಾಸೆಗೆ ಒಳಗಾಗದಿರಲು ಕಾರಣವೇನು? ತ್ರಿವಳಿ ತಲಾಕ್‍ನ ಹೆಸರಲ್ಲಿ ಈ ದೇಶದಲ್ಲಿ ನಡೆದ ಚರ್ಚೆ-ಕುಚರ್ಚೆ-ವ್ಯಂಗ್ಯ, ಅವಹೇಳನಗಳನ್ನು ಎದುರಿಟ್ಟುಕೊಂಡು ನೋಡಿದರೆ, ಸಲ್ಲೇಖನಾ ವ್ರತದ ಬಗ್ಗೆ ಗಾಢ ಮೌನವೊಂದು ಎದ್ದು ಕಾಣುತ್ತದೆ. 13ರ ಬಾಲೆ ಉಪವಾಸವಿದ್ದು ಸಾವಿ ಗೀಡಾದಾಗಲಾದರೂ ಈ ಕುರಿತಾದ ಮೌನವು ಮುರಿಯು ತ್ತದೆ ಎಂದು ಭಾವಿಸಲಾಗಿತ್ತು. ಆದರೆ ತ್ರಿವಳಿ ತಲಾಕ್‍ನ ಸುತ್ತ ನಡೆದ ಚರ್ಚೆಯ 0.0001%ವೂ ಈ ಬಾಲೆಯ ಉಪವಾಸದ ಸುತ್ತ ಚರ್ಚೆಯಾಗಲಿಲ್ಲ. ಹಾಗಂತ, ಸಲ್ಲೇಖನಾ ತಪ್ಪು ಎಂಬುದು ಇಲ್ಲಿನ ವಾದ ಅಲ್ಲ. ಅದೊಂದು ಧಾರ್ಮಿಕ ಕ್ರಿಯೆ. ಆ ಕ್ರಿಯೆಯನ್ನು ನಡೆಸುವವರಿಗೆ ಅವರದ್ದೇ ಆದ ಸಮರ್ಥನೆಗಳಿವೆ. 2 ಸಾವಿರ ವರ್ಷಗಳಿಗಿಂತ ಹಳೆಯದಾದ ಇತಿಹಾಸವೊಂದು ಸಲ್ಲೇಖನಾ ವ್ರತಕ್ಕಿದೆ ಎಂದು ಹೇಳಲಾಗುತ್ತದೆ. ಹಾಗಂತ, ಸಲ್ಲೇಖನದ ಕುರಿತಂತೆ ಮೌನವಾಗಿರಬೇಕೆಂಬುದು ಇದರ ಅರ್ಥವಲ್ಲವಲ್ಲ. ಷರತ್ತಿಗೊಳಪಟ್ಟ ಬಹುಪತ್ನಿತ್ವಕ್ಕೆ ಇಸ್ಲಾಮ್ ಅನುಮತಿಸಿರುವುದನ್ನು ಪ್ರಶ್ನಿಸಿ ನಡೆಸಲಾದ ಚರ್ಚೆಗಳು ಈ ದೇಶದಲ್ಲಿ ಎಷ್ಟು ನಡೆದಿಲ್ಲ? ಆ ಬಗ್ಗೆ ಎಷ್ಟು ವಿಮರ್ಶಾತ್ಮಕ ಲೇಖನಗಳು ಪ್ರಕಟವಾಗಿಲ್ಲ? ತ್ರಿವಳಿ ತಲಾಕನ್ನು ಪ್ರಶ್ನಿಸುವ ಭರದಲ್ಲಿ ಒಟ್ಟು ತಲಾಕ್ ಪದ್ಧತಿಯನ್ನೇ ಮತ್ತು ಅದರ ನೆಪದಲ್ಲಿ ಇಡೀ ಪವಿತ್ರ ಕುರ್‍ಆನನ್ನೇ ಕಟಕಟೆಯಲ್ಲಿ ನಿಲ್ಲಿಸಲಾದ ಸನ್ನಿವೇಶಗಳು ಎಷ್ಟು ಬಾರಿ ನಡೆದಿಲ್ಲ? ಅದಾನ್‍ನ ಬಗ್ಗೆ ವಾರಗಟ್ಟಲೆ ಚರ್ಚೆ ನಡೆದಿರುವುದು ಇದೇ ದೇಶದಲ್ಲಿ. ಬುರ್ಖಾದ ಬಗ್ಗೆ ಚರ್ಚೆ ಇನ್ನೂ ಮುಕ್ತಾಯವನ್ನು ಕಂಡಿಲ್ಲ. ಮುಸ್ಲಿಮರ ಆಹಾರ, ಆರಾಧನೆ, ಉಡುಪು, ಧರ್ಮಗ್ರಂಥ.. ಎಲ್ಲವೂ ಚರ್ಚಾರ್ಹ ಎನಿಸುವುದು ಮತ್ತು ಸಲ್ಲೇಖನಾ ವ್ರತ, ವೃಂದಾವನದ ವಿಧವೆಯರು ಇತ್ಯಾದಿಗಳು ಗಾಢ ನಿರ್ಲಕ್ಷಕ್ಕೆ ಒಳಗಾಗುವುದೆಲ್ಲ ಯಾಕೆ? ಹುಟ್ಟು ಮತ್ತು ಹುಟ್ಟಿನ ಉದ್ದೇಶ; ಸಾವು ಮತ್ತು ಸಾವಿನ ಬಳಿಕದ ಬದುಕಿನ ಬಗ್ಗೆ ವಿವಿಧ ಧರ್ಮಗಳಲ್ಲಿ ಇರುವ ವೈವಿಧ್ಯಮಯ ಪರಿಕಲ್ಪನೆಗಳ ಕುರಿತಂತೆ ಬೆಳಕು ಚೆಲ್ಲುವುದಕ್ಕೆ ಯಾರೂ ಸಲ್ಲೇಖನಾ ವ್ರತವನ್ನು ನೆಪವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಈವರೆಗೂ ನಡೆಸಿಲ್ಲ. ದೇಹವನ್ನು ದಂಡಿಸುವ ಕ್ರಮ ಬಹುತೇಕ ಎಲ್ಲ ಧರ್ಮಗಳಲ್ಲೂ ಇದೆ. ಆದರೆ ದೇಹವನ್ನು ದಂಡಿಸುತ್ತಾ, ಸಾಯಿಸುವ ವಿಧಾನವಿರುವುದು ಜೈನ ಧರ್ಮದಲ್ಲಿ ಮಾತ್ರ. ಅದರಲ್ಲೂ ಕಾಯಿಲೆಪೀಡಿತರು ಮತ್ತು ವಯೋವೃದ್ಧರೇ ಈ ಕ್ರಮಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಆದರೆ ಆಂಧ್ರಪ್ರದೇಶದ ಆರಾಧನಾ ಇದಕ್ಕೆ ಅಪವಾದವಾಗಿ ನಿಲ್ಲುತ್ತಾಳೆ. ವಿವಿಧ ಧರ್ಮಗಳಲ್ಲಿರುವ ಮೋಕ್ಷದ ಪರಿಕಲ್ಪನೆಯ ಸುತ್ತ ಗಂಭೀರ ಚರ್ಚೆಯೊಂದಕ್ಕೆ ಅಡಿಪಾಯ ಹಾಕಬೇಕಾದ ಸಲ್ಲೇಖನಾ ವ್ರತವು ಯಾವ ಸಂಚಲನವನ್ನೂ ಸೃಷ್ಟಿಸದೇ ತಣ್ಣಗಿರುವುದು ಆಶ್ಚರ್ಯವನ್ನು ಹುಟ್ಟಿಸುತ್ತದೆ. ನಿಜಕ್ಕೂ ಮೋಕ್ಷ ಅಂದರೆ ಏನು, ಅದನ್ನು ಗಳಿಸಿಕೊಳ್ಳುವ ವಿಧಾನ ಹೇಗೆ, ದೇಹವನ್ನು ದಂಡಿಸುವುದು ಮೋಕ್ಷ ಹೊಂದುವ ಸರಿಯಾದ ವಿಧಾನವೇ? ಕೆಟ್ಟ ಕರ್ಮಗಳಿಂದ ಆತ್ಮವನ್ನು ಶುದ್ಧಗೊಳಿಸುವುದಕ್ಕೆ ಸಲ್ಲೇಖನಾ ವ್ರತವೊಂದೇ ಪರಿಹಾರವೇ? ಪುನರ್‍ಜನ್ಮದ ಸರಣಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಹೀಗೆ ಮಾಡಬೇಕೇ?
ಮಹಾರಾಜ ಶ್ರೇಯಸಾಗರ್ ಅವರ ಸಲ್ಲೇಖನಾ ವ್ರತವು ನನ್ನನ್ನು ಇಂಥದ್ದೊಂದು ಜಿಜ್ಞಾಸೆಗೆ ಪ್ರೇರೇಪಿಸಿತು.