ಸುಮಾರು 68 ವರ್ಷ ಮೊದಲು ಆರಂಭಗೊಂಡ ಫೈಝಾಬಾದ್ ಬಾಬರಿ ಮಸೀದಿ ಜಮೀನು ಒಡೆತನದ ವಿವಾದದಲ್ಲಿ ಅಂತಿಮ ತೀರ್ಪನ್ನು ಕಾಯುತ್ತಿರುವ ಸಂಘಪರಿವಾರಕ್ಕೆ ಹಿನ್ನಡೆಯಾಗುವಂತೆ ಸುಪ್ರೀಂಕೋರ್ಟು ಪ್ರಕರಣದಲ್ಲಿನ ವಿಚಾರಣೆಯನ್ನು 2019 ಜನವರಿ ಮೊದಲ ವಾರಕ್ಕೆ ಮುಂದೂಡಿದೆ.
ಚೀಫ್ ಜಸ್ಟಿಸ್ ರಂಜಿತ್ ಗೊಗೊಯ್, ಜಸ್ಟಿಸ್ ಕಿಶನ್ ಕೌಲ್, ಜಸ್ಟಿಸ್ ಕೆಎಂ ಜೋಸೆಫ್ರನ್ನೊಳಗೊಂಡ ಸುಪ್ರೀಂ ಕೋರ್ಟಿನ
ವಿಭಾಗೀಯ ಪೀಠವು ಈಗ ಪ್ರಕರಣದ ವಾದ ಆಲಿಸುವ ದಿನಾಂಕವನ್ನು ಮಾತ್ರ ನಿಗದಿಗೊಳಿಸಿದೆ ಎಂಬ ವಿಚಾರ ಗಮನಾರ್ಹವಾದುದು. 2019ರಲ್ಲಿ ಮಧ್ಯದಲ್ಲಿ ಲೋಕಸಭೆಗೆ
ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಬಾಬರಿ ಮಸೀದಿ -ರಾಮ ಜನ್ಮಭೂಮಿ ಪ್ರಕರಣವನ್ನು ಪ್ರಚಾರ ವಿಷಯವನ್ನಾಗಿಸುವ ಸಂಘಪರಿವಾರದ ಯತ್ನಕ್ಕೆ ಸುಪ್ರೀಂಕೋರ್ಟಿನ ತೀರ್ಪಿನಿಂದ ಹಿನ್ನಡೆಯಾಗಿದೆ. ಇನ್ನು ಮೇಲೆ ಮುಂದಿನ ವರ್ಷ ಮೊದಲಲ್ಲಿ ಚೀಫ್ ಜಸ್ಟಿಸ್ ತೀರ್ಮಾನಿಸುವ ಸುಪ್ರೀಂಕೋರ್ಟಿನ ಹೊಸ ವಿಚಾರಣಾ ಪೀಠ ಪ್ರಕರಣದ ವಾದವನ್ನು ಆಲಿಸುತ್ತದೆ. ಬೇಗನೆ ಮತ್ತು ಸುಲಭದಲ್ಲಿ ವಾದಪ್ರತಿವಾದ ಮುಗಿಯುವ ಯಾವ
ಸಾಧ್ಯತೆಯೂ ಇಲ್ಲ.
2010ರಲ್ಲಿ ಅಲಹಾಬಾದ್ ಹೈಕೋರ್ಟು ನೀಡಿದ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯು ಸುಪ್ರೀಂಕೋರ್ಟಿನ ಮುಂದಿದೆ. ವಿಶ್ವಾಸಕ್ಕೆ ಸಂಬಂಧಿಸಿದ ಮತ್ತು ಧರ್ಮಕ್ಕೆ ಸಂಬಂಧಿಸಿದ ಹಕ್ಕುವಾದಗಳನ್ನಾಗಲಿ, ವಿವಾದಗಳನ್ನಾಗಲಿ ಕೋರ್ಟು ವಿಚಾರಣೆಗೆ ಪರಿಗಣಿಸುವುದಿಲ್ಲ. ಬಾಬರಿ ಮಸೀದಿ ಇದ್ದ ಮತ್ತು ಸರಕಾರ ವಶಪಡಿಸಿ ಕೊಂಡಿರುವ 2.27 ಎಕರೆ ಜಮೀನಿನ ಒಡೆತನದ ಹಕ್ಕುಗಳನ್ನು ಮಾತ್ರವೇ ಪರಿಗಣಿಸಲಾಗುತ್ತದೆ ಎಂದು ಸುಪ್ರೀಂಕೋರ್ಟು ಈಗಾಗಲೇ ಸ್ಪಷ್ಟಪಡಿಸಿದೆ.
ಈ ಹಿಂದಿನ ಹೈಕೋರ್ಟಿನ ತೀರ್ಪಿನಲ್ಲಿ ಭೂಮಿಯನ್ನು ನಿರ್ಮೋಹಿ ಅಖಾಡ, ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಹಂಚಿ ವಿವಾದ ಬಗೆಹರಿಸಲು ಅಲಹಾಬಾದ್ ಹೈಕೋರ್ಟು ಶ್ರಮಿಸಿತು. ಆದರೆ ಹೈಕೋರ್ಟಿನ ತೀರ್ಪನ್ನು ಪ್ರಕರಣದಲ್ಲಿನ ಯಾವ ಕಕ್ಷಿಯೂ ಒಪ್ಪಿಕೊಂಡಿಲ್ಲ. ಆದ್ದರಿಂದ ಮೂರೂ ಕಕ್ಷಿಗಳು ಸುಪ್ರೀಂ ಕೋರ್ಟನ್ನು ಸಮೀಪಿಸಿದ್ದವು. ಇದರ ನಡುವೆ ವಿವಾದವನ್ನು ರಾಜಿ ಮಾತುಕತೆಯಲ್ಲಿ ಪರಿಹರಿಸಲು ಹಲವು ಪ್ರಯತ್ನಗಳು ನಡೆದವು. ಅವೆಲ್ಲವೂ ವಿಫಲವಾಯಿತು. 1526ರಲ್ಲಿ ಬಾಬರಿ ಮಸೀದಿಯನ್ನು ಬಾಬರ್ ಚಕ್ರವರ್ತಿಯ ಗವರ್ನರ್ ಆಗಿದ್ದ ಮೀರ್ ಬಾಕಿ ನಿರ್ಮಿಸಿದ್ದನು.
ಆದರೆ ಇದನ್ನು ಐತಿಹಾಸಿಕ ಪುರುಷನಾದ ಶ್ರೀರಾಮನು ಜನಿಸಿದ ಅದೇ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಶ್ರೀರಾಮ ಭಕ್ತರ ಒಂದು ವಿಭಾಗ ನಂಬಿದೆ. ಈ ವಿಶ್ವಾಸದಿಂದ ಲಾಭವೆತ್ತಲು ಸಂಘಪರಿವಾರ ಗರಿಷ್ಠವಾಗಿ ಪ್ರಯತ್ನಿಸುತ್ತಿದೆ. ವಿಶ್ವಾಸ ಬೇರೆ, ಒಡೆತನದ ಹಕ್ಕು ಬೇರೆ ಎಂದು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ನಾಲ್ಕು ಶತಮಾನಗಳಿಂದ ನಾವು ಏಕದೇವನನ್ನು ಪ್ರಾರ್ಥಿಸಲು ಉಪಯೋಗಿಸಿದ ಮಸೀದಿ ಇರುವಲ್ಲಿನ ಒಡೆತನದ ಹಕ್ಕನ್ನು
ಮಸೀದಿಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರುವ ಉತ್ತರಪ್ರದೇಶದ ಸುನ್ನಿ ವಕ್ಫ್ ಬೋರ್ಡು ಕೈಬಿಡಲು ಸಿದ್ಧವೂ ಇಲ್ಲ.
ಆದ್ದರಿಂದ ಈ ವಿಷಯದಲ್ಲಿ ಸುಪ್ರೀಂ ಕೋರ್ಟಿನ ತೀರ್ಪು ಮಾತ್ರ ವಿವಾದ ಪರಿಹಾರಕ್ಕೆ ಇರುವ ಅಂತಿಮ ದಾರಿಯಾಗಿದೆ ಎನ್ನಬಹುದು. ವಿಶ್ವ ಹಿಂದೂ ಪರಿಷತ್, ಶಿವಸೇನೆ ಮತ್ತು ಇತರ ಹಿಂದೂವಾದಿ ಸಂಘಟನೆಗಳಿಗೆ ಅಷ್ಟು ಸಮಯ ಕಾಯುವ ಸಹನೆಯೂ ಈಗಿಲ್ಲ. ಲೊಕಸಭಾ ಚುನಾವಣೆ ಮುಂದಿರುವುದು ಅದಕ್ಕೆ ಕಾರಣವಾಗಿದೆ ಎನ್ನಬಹುದು.
ಆದ್ದರಿಂದ ಸಮಸ್ಯೆ ವಿಶ್ವಾಸಕ್ಕೆ ಅಥವಾ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಸಂಪೂರ್ಣ
ರಾಜಕೀಯವಾದದ್ದು ಎಂದರ್ಥ. ಆದ್ದರಿಂದ ಕೋರ್ಟು ತೀರ್ಪಿಗೆ ಕಾಯದೆ ಪಾರ್ಲಿಮೆಂಟಿನ ಚಳಿಗಾಲದ ಅಧಿವೇಶನದಲ್ಲಿ ಮಂದಿರ ನಿರ್ಮಾಣಕ್ಕೆ ಕಾನೂನು ರಚಿಸಬೇಕೆಂದು ವಿಶ್ವಹಿಂದೂ ಪರಿಷತ್ ಆಗ್ರಹಿಸುತ್ತಿದೆ. ಪ್ರತೀ ಐದು ವರ್ಷಗಳಲ್ಲಿ ಬರುವ ಚುನಾವಣೆಯ ಸಮಯದಲ್ಲಿ ಇದು ಪದೇ ಪದೇ ಕೇಳಿಬರುತ್ತಿರುವ ಬೇಡಿಕೆಗಳಾಗಿವೆ.
ಏಳೂವರೆ ಲಕ್ಷ ರಾಮಶಿಲೆಗಳನ್ನು ಪೂಜಿಸಿ ದೇಶದ ನಾನಾಭಾಗಗಳಿಂದ ಅಯೋಧ್ಯೆಗೆ ತಂದಿಟ್ಟು ಬಹಳ
ವರ್ಷವಾಯಿತು. ರಾಮಮಂದಿರ ಕಂಭಗಳ ಕೆಲಸ ಆರಂಭಗೊಂಡು ಎಷ್ಟೋ ವರ್ಷವಾಯಿತು. ಆದರೆ ಈ ವರೆಗೂ ಮಂದಿರ ಕಟ್ಟಲು ಸಾಧ್ಯವಾಗಿಲ್ಲ. ಹೀಗಾದುದು ಮುಸ್ಲಿಮ್ ಅಲ್ಪಸಂಖ್ಯಾತರಾಗಲಿ, ಬೇರೆ ಯಾರೇ ಆಗಲಿ ತಡೆದ್ದರಿಂದ ಅಲ್ಲ. ಭೂ ಒಡೆತನದ ವಿವಾದ ಬಾಬರಿ ಮಸೀದಿ ಇರುವ ಕೆಲವು ಸೆಂಟ್ಸ್ ಪ್ರದೇಶಕ್ಕೆ ಸಂಬಂಧಿಸಿದ್ದು. ಅಲ್ಲಿಯೇ ಮಂದಿರ ಕಟ್ಟಬೇಕೆಂಬ ಹಟ ಇಷ್ಟೆಲ್ಲ ವಿವಾದಗಳಿಗೆ ಹಿನ್ನೆಲೆಯೆಂಬುದು ಗಮನಾರ್ಹ ವಿಚಾರವಾಗಿದೆ.
ಇಷ್ಟಕ್ಕಾಗಿ ಕಾನೂನು ರಚಿಸಲು ಸಾಧ್ಯವೇ ಮತ್ತು ಅವಕಾಶಗಳಿವೆಯೇ ಎಂಬುದನ್ನು ಸಂಬಂಧಿಸಿದವರೇ ಹೇಳಬೇಕಷ್ಟೇ. ಅಲ್ಲವಾದರೆ ಶಬರಿಮಲೆಯ ಕುರಿತು ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ನೀಡಿದ ತೀರ್ಪಿಗೆ ಇಂದು ಬಹಿರಂಗವಾಗಿ ಸವಾಲೊಡ್ಡುತ್ತಿರುವ
ರೀತಿಯಲ್ಲಿ ಬಾಬರಿ ಮಸೀದಿ ಕುರಿತ ಕೋರ್ಟು ತೀರ್ಪಿನ ವಿರುದ್ಧವೂ ಬಹಿರಂಗವಾಗಿ ಸವಾಲೊಡ್ಡಬೇಕಾದೀತು.
ಪ್ರಜಾಪ್ರಭುತ್ವಾಧಾರಿತ ರೀತಿಯಲ್ಲಿ ನಡೆಯಲಿರುವ ಸಾರ್ವತ್ರಿಕ
ಚುನಾವಣೆಯ ವೇಳೆ ಇದರ ಪರಿಣಾಮ ಏನಾಗಬಹುದು ಎಂದು ಅಮಿತ್ ಶಾ, ನರೇಂದ್ರ ಮೋದಿ, ಮೋಹನ್ ಭಾಗವತ್ರ ಹಿಂದುತ್ವ ಕೂಟ ಚಿಂತಿಸಬೇಕು ಅಷ್ಟೇ.