ಮುಂಬಯಿ: ಸುಲೇಮಾನ್ ಉಸ್ಮಾನ್ ಬೇಕರಿಯಲ್ಲಿ ಗುಂಡು ಹಾರಿಸಿ ಎಂಟು ಜೀವಗಳು ಬಲಿಯಾದ ಇಪ್ಪತ್ತಾರು ವರ್ಷಗಳ ನಂತರ, ಕಳೆದ ಬುಧವಾರ ಆರಂಭವಾದ ಪ್ರಕರಣದ ವಿಚಾರಣೆಯಲ್ಲಿ ಮೊದಲ ಇಬ್ಬರು ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ ನುಡಿದಿದ್ದಾರೆ.
ಪ್ರಸ್ತುತ, ಆರೋಪಿಗಳಾದ ಏಳು ಪೊಲೀಸರು ವಿಚಾರಣೆ ಎದುರಿಸುತ್ತಿದ್ದಾರೆ. ಇಬ್ಬರು ಆರೋಪಿಗಳು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. 1992-93ರ ಕೋಮು ಗಲಭೆಗಳ ಸಮಯದಲ್ಲಿ ಡೊಂಗ್ರಿ ಬೇಕರಿಯಲ್ಲಿ ಜನವರಿ 9, 1993 ರಂದು ನಡೆದ ಗುಂಡಿನ ದಾಳಿಯಲ್ಲಿ ಎಂಟು ಜನರು ಮೃತಪಟ್ಟಿದ್ದರು. 2011 ರಲ್ಲಿ, ಮಾಜಿ ಹಿರಿಯ ಪೋಲಿಸ್ ಅಧಿಕಾರಿ ಆರ್.ಡಿ.ತ್ಯಾಗಿ ಮತ್ತು ಎಂಟು ಮಂದಿ ಇತರರನ್ನು ವಜಾಗೊಳಿಸುವ ಬಾಂಬೆ ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಘಟನೆಯ ಸಮಯದಲ್ಲಿ, ತ್ಯಾಗಿ ಜೆಸಿಪಿ (ಅಪರಾಧ ವಿಭಾಗ ) ಆಗಿದ್ದರು. ನಂತರ ಅವರು ಪೋಲಿಸ್ ಆಯುಕ್ತರಾದರು.
ಬುಧವಾರ, ಮೊದಲ ಸಾಕ್ಷಿಯನ್ನು ಕಟಕಟೆಯಲ್ಲಿ ನಿಲ್ಲಿಸಲಾಯಿತು. ಮೊಹದ್ ಅಲಿ ರಸ್ತೆಯಲ್ಲಿ ಪಾದರಕ್ಷೆ ಮಾರಾಟಗಾರರಾಗಿರುವ 55 ವರ್ಷದ ಈ ವ್ಯಕ್ತಿ, ತನ್ನ ಅಂಗಡಿಯು ಆ ಬೇಕರಿ ಬಳಿ ಇತ್ತು ಎಂದು ನ್ಯಾಯಾಲಯಕ್ಕೆ ಒಪ್ಪಿಕೊಂಡರು. ಆದರೆ ಅಲ್ಲಿ ಏನಾಯಿತು ಎಂದು ತನಗೆ ತಿಳಿದಿಲ್ಲ ಎಂದರು. ಅವರು ಹೇಳುತ್ತಾರೆ: ಜೂನ್ 2001 ರಲ್ಲಿ ಪೊಲೀಸರು ನನ್ನ ಬಳಿಗೆ ಬಂದರು. ಅವರು ನನ್ನಲ್ಲಿ ಏನನ್ನು ಕೇಳಲಿಲ್ಲ. ಆದರೆ ಕಾಗದ ಪತ್ರಗಳಲ್ಲಿ ನನ್ನ ಸಹಿಯನ್ನು ಪಡೆದರು. ಪಂಚನಾಮ ವಿಷಯವೇನೆಂದು ನನಗೆ ತಿಳಿದಿಲ್ಲ ಎಂದು ಸಾಕ್ಷಿ ಹೇಳಿದರು. ವಿಚಾರಣೆ ನಂತರ ಅವರನ್ನು ಪ್ರತಿಕೂಲ ಎಂದು ಘೋಷಿಸಿತು. ಅವರು ಪೊಲೀಸರೊಂದಿಗೆ ಬೇಕರಿ ಪ್ರವೇಶಿಸಿದ ಕುರಿತು ನಿರಾಕರಿಸಿದರಲ್ಲದೇ ಮತ್ತು ಅದರ ಆಯಾಮಗಳ ಕುರಿತು ಮಾಹಿತಿಯೂ ಇರಲಿಲ್ಲ ಎಂದರು ಹಾಗೂ ಅದರ ಚಿತ್ರವನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇತರ ಸಾಕ್ಷಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು. ನ್ಯಾಯವಾದಿಯು ಈ ಸಾಕ್ಷಿಗಳನ್ನೂ ವಿಚಾರಣೆಗೊಳಪಡಿಸಿದರು. ಆದರೆ ಅವರಲ್ಲಿ ಯಾರೂ ಈ ಪ್ರಕರಣವನ್ನು ಬೆಂಬಲಿಸಲಿಲ್ಲ. ನ್ಯಾಯಾಲಯ ಸಾಕ್ಷಿಗಳನ್ನು ಬಿಡುಗಡೆಗೊಳಿಸಿತು.
ಕನ್ನಡಕ್ಕೆ: ಆಯಿಷತುಲ್ ಅಫೀಫ
ಕೃಪೆ: ಟೈಮ್ಸ್ ಆಫ್ ಇಂಡಿಯಾ