ಪಾಕಿಸ್ತಾನ್ ಝಿಂದಾಬಾದ್’ ಯಾರ ಅಗತ್ಯ?

0
559

ಏ ಕೆ ಕುಕ್ಕಿಲ 

ಸನ್ಮಾರ್ಗ ವಾರ್ತೆ 

ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗುವುದು ಕಾನೂನು ವಿರೋಧಿಯೇ ಎಂಬ ಪ್ರಶ್ನೆಯು ಇನ್ನೆರಡು ಉಪ ಪ್ರಶ್ನೆಗಳಿಗೂ ಜನ್ಮ ನೀಡುತ್ತದೆ.

1. ಅಂಥದ್ದೊಂದು ಘೋಷಣೆಯ ಅಗತ್ಯ ಏನಿದೆ?

2. ಬರೇ ಕಾನೂನಿನ ದೃಷ್ಟಿಯಿಂದ ಮಾತ್ರ ಇದನ್ನು ನೋಡುವುದು ಸರಿಯೇ?

ಇಲ್ಲಿ ಮುಖ್ಯ ಪ್ರಶ್ನೆಗಿಂತ ಉಪ ಪ್ರಶ್ನೆಗಳೇ ಹೆಚ್ಚಿನ ವ್ಯಾಖ್ಯಾನವನ್ನೂ ಬಯಸುತ್ತವೆ.

ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗುವುದರ ಅಗತ್ಯ ಏನಿದೆ ಎಂಬ ಪ್ರಶ್ನೆಯ ಜೊತೆಜೊತೆಗೇ, ನಿಜಕ್ಕೂ ಇಂಥದ್ದೊಂದು ಘೋಷಣೆಯನ್ನು ಈ ದೇಶದಲ್ಲಿ ಕೂಗಲಾಗುತ್ತಿದೆಯೇ ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯವಾಗುತ್ತದೆ. ಇದಕ್ಕೆ ಕಾರಣವೂ ಇದೆ.

ಕನ್ಹಯ್ಯ ಕುಮಾರ್ ರಾಷ್ಟ್ರೀಯ ವ್ಯಕ್ತಿತ್ವವಾದದ್ದೇ ಇಂಥ ಪ್ರಕರಣದಲ್ಲಿ. ಪಾರ್ಲಿಮೆಂಟ್ ದಾಳಿಯ ಅಪರಾಧದಲ್ಲಿ ನೇಣು ಶಿಕ್ಷೆಗೀಡಾದ ಅಫ್ಝಲ್ ಗುರುವಿಗೆ ಸಂಬಂಧಿಸಿ ಜೆನ್‌ಯುವಿನಲ್ಲಿ ಫೆ. 9, 2016ರಂದು ಸಭೆ ನಡೆಸಲಾಗಿತ್ತು. ಅದರಲ್ಲಿ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ಸೇರಿದಂತೆ ಹಲವು ವಿದ್ಯಾರ್ಥಿ ನಾಯಕರು ಭಾಗವಹಿಸಿದ್ದರು. ಆ ಸಭೆಯಲ್ಲಿ ದೇಶದ್ರೋಹಿ ಘೋಷಣೆಯನ್ನು ಕೂಗಿದ್ದಾರೆ ಎಂದು ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅನಿರ್ಬನ್ ಸಹಿತ ಹಲವು ವಿದ್ಯಾರ್ಥಿಗಳ ಮೇಲೆ ಆರೋಪವನ್ನು ಹೊರಿಸಲಾಯಿತು. ಆಗ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿತ್ತಷ್ಟೇ. ಅದೇ ಆರೋಪದಲ್ಲಿ ಫೆ. 12, 2016ರಂದು ಕನ್ಹಯ್ಯರ ಬಂಧನವೂ ನಡೆಯಿತು. ಫೆ. 24ರಂದು ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯರ ಬಂಧನವೂ ನಡೆಯಿತು. ಆ ಬಂಧನದ ಸಮಯದಲ್ಲಿ ಓರ್ವ ನ್ಯಾಯವಾದಿ ಕನ್ಹಯ್ಯರ ಮೇಲೆ ಹಲ್ಲೆ ನಡೆಸಿದ್ದರು. ಕನ್ಹಯ್ಯ ಪದೇ ಪದೇ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದರು. ತನ್ನ ಘೋಷಣೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ ಎಂದು ಹೇಳಿದರು. ಉಮರ್ ಖಾಲಿದ್‌ರನ್ನೂ ದೃಶ್ಯ ಮಾಧ್ಯಮಗಳು ಬೆನ್ನಟ್ಟಿದುವು. ಅವರು ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿರುವುದಾಗಿಯೂ ಹೇಳಿದುವು. ಅಸಲಿಗೆ,

ಅವರಲ್ಲಿ ಪಾಸ್‌ಪೋರ್ಟೇ ಇರಲಿಲ್ಲ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಪರ ಸುದ್ದಿಯನ್ನು ನೀಡುವುದಕ್ಕೆ ಮತ್ತು ಎಡಪಂಥೀಯ ವಿಚಾರಧಾರೆಯನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಹಣಿಯುವುದಕ್ಕೆ ಆಂಗ್ಲ ಮತ್ತು ಹಿಂದಿ ದೃಶ್ಯ ಮಾಧ್ಯಮಗಳು ಜಿದ್ದಿಗೆ ಬಿದ್ದಂತೆ ವರ್ತಿಸುತ್ತಿದ್ದ ಕಾಲ ಅದು. ಮಾರ್ಚ್ 3, 2016ರಂದು ಕನ್ಹಯ್ಯ ಜಾಮೀನಿನ ಮೇಲೆ ಹೊರಬಂದರೆ, ಫೆ. 17ರಂದು ಉಮರ್ ಮತ್ತು ಅನಿರ್ಬನ್ ಕೂಡ ಜೈಲಿನಿಂದ ಹೊರಬಂದರು. 2019ರಲ್ಲಿ ದೆಹಲಿ ಪೊಲೀಸರು 1200ರಷ್ಟು ಪುಟಗಳ ಚಾರ್ಜ್ ಶೀಟನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದರು. 2020 ಫೆಬ್ರವರಿಯಲ್ಲಿ ದೆಹಲಿ ಸರಕಾರವು ಈ ದೇಶದ್ರೋಹಿ ಪ್ರಕರಣದ ವಿಚಾರಣೆಯನ್ನು ಮುಂದುವರಿಸುವುದಕ್ಕೆ ಅನುಮತಿಯನ್ನೂ ನೀಡಿತು. ಫೆ. 9, 2016ರ ಬಳಿಕದ ಈ ಸುಮಾರು 5 ವರ್ಷಗಳಲ್ಲಿ ನಡೆದಿರುವ ಬೆಳವಣಿಗೆ ಇಷ್ಟೇ. ಆದರೆ,

ಈ ಇಡೀ ಗದ್ದಲದಿಂದ ಅತ್ಯಂತ ಹೆಚ್ಚು ಲಾಭ ಮಾಡಿಕೊಂಡಿರುವುದು ಬಿಜೆಪಿ. ದೇಶದ್ರೋಹಿ ಘೋಷಣೆಯನ್ನು ಇವರೆಲ್ಲ ಕೂಗಿದ್ದಾರೋ ಇಲ್ಲವೋ ಎಂಬುದು ಇನ್ನೂ ನಿರ್ಣಯವಾಗಿಲ್ಲ. ಕನ್ಹಯ್ಯ ಆಗಲಿ, ಉಮರ್, ಅನಿರ್ಬನ್ ಆಗಲಿ ಈ ಆರೋಪವನ್ನು ಒಪ್ಪುತ್ತಲೂ ಇಲ್ಲ. ಆ ಸಭೆಯ ವೀಡಿಯೊವನ್ನು ಪೂರ್ಣವಾಗಿ ತಿರುಚಲಾಗಿದೆ ಎಂಬ ಆರೋಪ ಆವತ್ತಿನಿಂದ ಇವತ್ತಿನವರೆಗೂ ಹಾಗೆಯೇ ಉಳಿದುಕೊಂಡಿದೆ. ಆದರೆ,

ಜೆಎನ್‌ಯುವನ್ನು ದೇಶದ್ರೋಹಿಗಳ ಅಡ್ಡೆ ಎಂದು ಹೇಳುವುದಕ್ಕೆ, ಅದನ್ನು ಗುರಿಯಾಗಿಸಿಕೊಂಡು ದೇಶಪ್ರೇಮದ ಡಯಲಾಗ್‌ಗಳನ್ನು ದೇಶದಾದ್ಯಂತ ಬಿತ್ತುವುದಕ್ಕೆ ಬಿಜೆಪಿಗೆ ಸಾಧ್ಯವಾಗಿದೆ. ನಿಧಾನವಾಗಿ ಜೆಎನ್‌ಯುವಿನ ಮೇಲೆ ಎಂಥ ಕಪ್ಪು ಮಸಿ ಅಂಟಿಕೊಂಡಿತೆಂದರೆ, ಅಲ್ಲಿನ ವಿದ್ಯಾರ್ಥಿಗಳ ಮೇಲೆ ಜನವರಿ 5, 2020ರಂದು ಆಯುಧಧಾರಿಗಳಿಂದ ಮಾರಣಾಂತಿಕ ಹಲ್ಲೆಯೂ ನಡೆಯಿತು. ಮೈಯಿಡೀ ಗಾಯ ಮಾಡಿಕೊಂಡ ವಿದ್ಯಾರ್ಥಿ ನಾಯಕಿ ಐಶೆ ಘೋಷ್ ಮತ್ತಿತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜಾಗತಿಕ ಗಮನ ಸೆಳೆದರು. ದಾಳಿಕೋರರು ಬಲಪಂಥೀಯ ವಿದ್ಯಾರ್ಥಿ ಸಂಘಟನೆಯ ಸದಸ್ಯರಾಗಿದ್ದರು ಎಂಬುದನ್ನು ಸಾಬೀತುಪಡಿಸುವ ಹಲವು ಸಾಕ್ಷ್ಯಗಳು ಸಿಕ್ಕವು. ಅದು ಸಿಎಎ, ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳಾಗುತ್ತಿದ್ದ ಸಮಯವೂ ಹೌದು. ನಿಜವಾಗಿ,

ದೇಶದ್ರೋಹದ ಆರೋಪವನ್ನು ಹೊರಿಸುವುದರಿಂದ ಇತರೆಲ್ಲ ಆರೋಪಗಳಿಗಿಂತ ಹೆಚ್ಚಿನ ರಾಜಕೀಯ ಮತ್ತು ಸಾಂಸ್ಕೃತಿಕ ಲಾಭವನ್ನು ಪಡೆದುಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿದ ಪ್ರಕರಣ ಇದು. ಈ ಆರೋಪ ಸಾಬೀತುಗೊಳ್ಳುತ್ತದೋ ಬಿಡುತ್ತದೋ ಎಂಬುದು ಅಮುಖ್ಯ. ಆರೋಪವೇ ಮುಖ್ಯ. ಆರೋಪ ಹೊರಿಸಲಾದ ಸಮಯದಲ್ಲಿ ಉಂಟಾಗುವ ಗದ್ದಲವು ಬರೇ ಕಾನೂನಾತ್ಮಕವಾದುವಾಗಿರುವುದಿಲ್ಲ. ಅದಕ್ಕೆ ರಾಜಕೀಯ ಆಯಾಮ ಇರುತ್ತದೆ. ಸಾಂಸ್ಕೃತಿಕ ಮತ್ತು ಧ್ರುವೀಕರಣ ರಾಜಕಾರಣದಲ್ಲಿ ನಂಬಿಕೆಯನ್ನಿಟ್ಟ ಪಕ್ಷಕ್ಕೆ ಹುಲಸಾದ ಬೆಳೆಯನ್ನು ಕೊಯ್ಯಲು ಆ ಆರೋಪವೊಂದೇ ಸಾಕಾಗುತ್ತದೆ. ಅಂದಹಾಗೆ,

ಇಂಥ ರಾಜಕಾರಣದಲ್ಲಿ ನಂಬಿಕೆಯಿಟ್ಟವರಿಗೆ ಎದುರು ಭಾಗದಲ್ಲಿ ದೇಶದ್ರೋಹಿಗಳ ಒಂದು ಗುಂಪು ಬೇಕೇ ಬೇಕಾಗುತ್ತದೆ. ತಾವು ದೇಶಪ್ರೇಮಿಗಳಾಗುವುದೇ ಆ ಎದುರು ಭಾಗದಲ್ಲಿರುವ ದೇಶದ್ರೋಹಿಗಳನ್ನು ತೋರಿಸಿ. ಭ್ರಷ್ಟಾಚಾರ, ಅತ್ಯಾಚಾರ, ವಂಚನೆ ಇತ್ಯಾದಿ ಆರೋಪಗಳನ್ನು ಹೊರಿಸಿ ಸಮಾಜದ ಗಮನ ಸೆಳೆಯುವುದು ಎಷ್ಟು ಕಷ್ಟವೋ ದೇಶದ್ರೋಹದ ಆರೋಪ ಹೊರಿಸಿ ಸಮಾಜವನ್ನು ಸೆಳೆಯುವುದು ಅಷ್ಟೇ ಸುಲಭ. ಇವನ್ನು ಸಾಬೀತು ಪಡಿಸುವುದಕ್ಕೆ ಇನ್ನೆರಡು ಪ್ರಕರಣಗಳನ್ನು ಉದಾಹರಿಸಬಹುದು-

2020 ನವೆಂಬರ್ 7ರಂದು ಅಸ್ಸಾಮ್ ಬಿಜೆಪಿ ಶಾಸಕ ಮತ್ತು ಪ್ರಮುಖ ನಾಯಕ ಹಿಮಾಂಶು ಬಿಸ್ವ ಶರ್ಮ ಒಂದು ಟ್ವೀಟ್ ಮಾಡುತ್ತಾರೆ. ಅಸ್ಸಾಮ್‌ನ ಪ್ರಮುಖ ವಿರೋಧ ಪಕ್ಷವಾದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (AIUDF)ನ ಅಧ್ಯಕ್ಷ ಮೌಲಾನಾ ಬದ್ರುದ್ದೀನ್ ಅಜ್ಮಲ್‌ಗೆ ಸಂಬಂಧಿಸಿದ ಟ್ವೀಟ್ ಅದು. 2020 ನವೆಂಬರ್ 7 ರಂದು ಅಸ್ಸಾಮ್‌ನ ಸಿಲ್‌ಚಾರ್ ವಿಮಾನ ನಿಲ್ದಾಣಕ್ಕೆ ಅವರು ಆಗಮಿಸುತ್ತಾರೆ ಮತ್ತು ಜೊತೆಗೆ ಶಾಸಕ ಅಝೀಝï ಖಾನ್ ಕೂಡ ಇರುತ್ತಾರೆ. ಇವರನ್ನು ಸ್ವಾಗತಿಸುವುದಕ್ಕಾಗಿ ಹೊರಗಡೆ ಸೇರಿದ್ದ ಪಕ್ಷದ ಬೆಂಬಲಿಗರು ಪಾಕಿಸ್ತಾನ್ ಝಿಂದಾಬಾದ್ ಕೂಗಿದ್ದಾರೆ ಎಂದು ಹಿಮಾಂಶು ಬಿಸ್ವ ಶರ್ಮ ಟ್ವೀಟ್ ಮಾಡುತ್ತಾರೆ. ಆ ಬಳಿಕ ಅಂಥದ್ದೇ ಟ್ವೀಟನ್ನು ಬಿಜೆಪಿಯ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯ, ಅಸ್ಸಾಮ್‌ನ ಶಾಸಕರಾದ ರಾಜ್‌ದೀಪ್ ರಾಯ್ ಮತ್ತು ಅಶೋಕ್ ಸಿಂಘಾಲ್ ಕೂಡ ಮಾಡುತ್ತಾರೆ. ರಾಷ್ಟ್ರೀಯ ಆಂಗ್ಲ ಮತ್ತು ಹಿಂದಿ ದೃಶ್ಯಮಾಧ್ಯಮಗಳು ಭಾರೀ ಮಹತ್ವ ಕೊಟ್ಟು ಆ ವೀಡಿಯೋವನ್ನು ಮತ್ತು ಸುದ್ದಿಯನ್ನು ಹಂಚಿಕೊಳ್ಳುತ್ತವೆ. ಈ ಗದ್ದಲದ ನಡುವೆ AIUDF ಪತ್ರಿಕಾಗೋಷ್ಠಿಯನ್ನು ಕರೆದು ನಿಜ ಏನೆಂದು ಹೇಳುತ್ತದೆ. ಫ್ಯಾಕ್ಟ್ ಚೆಕ್ ವಿವರಗಳೂ ಹೊರಬೀಳುತ್ತವೆ. ಅಸಲಿ ಸಂಗತಿ ಏನೆಂದರೆ,

ಮೌಲಾನಾ ಅಜ್ಮಲ್‌ರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಸೇರಿದ್ದ ಜನರು ಅಜ್ಮಲ್‌ರಿಗೆ ಝಿಂದಾಬಾದ್ ಎಂದು ಕೂಗಿದಂತೆಯೇ ಅಝೀಝï ಖಾನ್ ಝಿಂದಾಬಾದ್ ಎಂದೂ ಕೂಗಿದ್ದರು. ಈ ಅಝೀಝï ಖಾನ್ ಝಿಂದಾಬಾದ್ ಎಂಬ ಕೂಗನ್ನೇ ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ಹೇಳಲಾಗಿದೆ. ಈ ಕಾರಣದಿಂದಲೇ ಆ ಬಳಿಕ ಹಿಮಾಂಶು ಬಿಸ್ವ ಶರ್ಮ ಅವರ ಮೇಲೆ ವಿವಿಧ ಸಮುದಾಯದ ಮೇಲೆ ಸಂಘರ್ಷ ಹುಟ್ಟು ಹಾಕಲು ಪ್ರಚೋದಿ ಸಿದ ಕೇಸು ದಾಖಲಿಸಿರುವುದಾಗಿ ನವೆಂಬರ್ 11ರಂದು ಪಿಟಿಐ ಮಾಡಿರುವ ವರದಿಯನ್ನು ದಿ ವೈರ್ ಸುದ್ದಿ ಜಾಲತಾಣ ಉಲ್ಲೇಖಿಸಿತ್ತು. ವಿಶೇಷ ಏನೆಂದರೆ, ಹಿಮಾಂಶು ಬಿಸ್ವ ಅವರು ನವೆಂಬರ್ 7ರಂದು ಮಾಡಿದ ಟ್ವೀಟ್‌ನಲ್ಲಿಯ ವಿಷಯಗಳು-

This throughly exposes @ INC India which is encouraging such forces by forging an alliance. We shall fight them tooth and nail. Jai Hind.

ಈ ಟ್ವೀಟ್‌ನಲ್ಲಿ ಕಾಂಗ್ರೆಸನ್ನು ಎಳೆದು ತಂದಿರುವುದೇಕೆ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಯಾಕೆಂದರೆ, 2021ರಲ್ಲಿ ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಎಐಯುಡಿಎಫ್ ಮತ್ತು ಕಮ್ಯುನಿಸ್ಟ್ ಪಕ್ಷಗಳೊಂದಿಗೆ ಕಾಂಗ್ರೆಸ್ ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಎಲ್ಲಿ ಸವಾಲಾಗುತ್ತೋ ಎಂಬ ಭೀತಿ ಹಿಮಾಂಶುರದ್ದು.

ಇದೀಗ, ಈ ಹಿನ್ನೆಲೆಯಲ್ಲಿ ಆ ಇಡೀ ಪ್ರಕರಣವನ್ನೊಮ್ಮೆ ಪುನಃ ಅವಲೋಕಿಸಿ ನೋಡಿ. ಆ ಆರೋಪದ ಹಿನ್ನೆಲೆ ನಿಮಗೆ ಸುಲಭದಲ್ಲಿ ಮನವರಿಕೆಯಾಗಬಹುದು.

ಇನ್ನೊಂದು ಪ್ರಕರಣವನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಉತ್ತರ ಪ್ರದೇಶದ ಲಕ್ನೋದಲ್ಲಿ 2019 ಡಿಸೆಂಬರ್ 13ರಂದು ಎನ್‌ಆರ್‌ಸಿ, ಸಿಎಎ ವಿರೋಧಿ ಪ್ರತಿಭಟನೆ ನಡೆಯಿತು. ಇದಕ್ಕೆ ನೇತೃತ್ವ ನೀಡಿದವರು ಓವೈಸಿ ಪಕ್ಷದ ಮುಖಂಡ ಕಾಶಿಫ್ ಅಹ್ಮದ್ ಎಂಬವರು. ಈ ಸಭೆಯಲ್ಲಿ ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಲಾಗಿದೆ ಎಂಬುದಾಗಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವೀಯ ಡಿಸೆಂಬರ್ 28ರಂದು ಟ್ವೀಟ್ ಮಾಡಿದ್ದರು. ಅಲ್ಬ್ ನ್ಯೂಸ್ ಆ ಕಾರ್ಯಕ್ರಮದ ವೀಡಿಯೋವನ್ನು ನಿಕಷಕ್ಕೆ ಒಡ್ಡಿತು ಮತ್ತು ಅದರ ಫಲಿತಾಂಶವನ್ನು ದ ವೈರ್ ಸುದ್ದಿ ಜಾಲತಾಣ ಕೂಡ ಪ್ರಕಟಿಸಿತು. ಆ ಸಭೆಯಲ್ಲಿ ಕಾಶಿಫ್ ಸಾಬ್ ಝಿಂದಾಬಾದ್, ಹಿಂದೂಸ್ತಾನ್ ಝಿಂದಾಬಾದ್, ಅಕ್ಬರ್ ಓವೈಸಿ ಝಿಂದಾಬಾದ್ ಎಂದು ಕೂಗಲಾಗಿದೆಯೇ ಹೊರತು ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಲಾಗಿಲ್ಲ ಎಂದು ಅದು ಹೇಳಿತು. ಮಾತ್ರವಲ್ಲ, ಉತ್ತರ ಪ್ರದೇಶದ ಪೊಲೀಸರು ಕೂಡ ದೇಶದ್ರೋಹದ ಕೇಸನ್ನು ಕೈಬಿಟ್ಟು ಶಾಂತಿ ಕದಡಿದ ಪ್ರಕರಣವನ್ನಷ್ಟೇ ದಾಖಲಿಸಿದರು. ಆದರೆ, ಅಮಿತ್ ಮಾಲವೀಯ ಅವರ ಟ್ವೀಟ್ ನಿಂದ ಏನನ್ನು ಪಡೆದುಕೊಳ್ಳಬೇಕೋ ಅವೆಲ್ಲವನ್ನೂ ಪಡೆದುಕೊಳ್ಳ ಬೇಕಾದವರು ಪಡೆದುಕೊಂಡರು. ನಿಜ ಏನೆಂದರೆ,

ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆಂದು ಯಾರ ಮೇಲಾದರೂ ಆರೋಪ ಹೊರಿಸುವುದರಲ್ಲಿ ಒಂದು ಥ್ರಿಲ್ ಇದೆ. ಇದು ಓರ್ವರನ್ನು ಭ್ರಷ್ಟಾಚಾರಿ ಎಂದು ಆರೋಪಿಸಿ ದಂತಲ್ಲ. ಆದ್ದರಿಂದಲೇ, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಮೇಲೂ ಇದೇ ಆರೋಪವನ್ನು ಬಿಜೆಪಿ ಹೊರಿಸಿದ್ದು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಶಂತ್ ಕುಮಾರ್ ಗೌತಂ ಅವರು ನವೆಂಬರ್ 29, 2020ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತುಗಳನ್ನು ದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು. ರೈತ ಪ್ರತಿಭಟನೆಯಲ್ಲಿ ಪಾಕಿಸ್ತಾನ್ ಝಿಂದಾಬಾದ್, ಖಾಲಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗಲಾಗಿದೆ ಎಂದವರು ಆರೋಪಿಸಿದ್ದರು. ಹಾಗಂತ, ನಿಜಕ್ಕೂ ಹಾಗೆ ರೈತರು ಘೋಷಿಸಿದ್ದಾರೆಯೇ, ಅದಕ್ಕೆ ಏನು ಪುರಾವೆಗಳಿವೆ ಮತ್ತು ಅವು ಎಷ್ಟು ದೋಷರಹಿತ ಎಂಬ ಪ್ರಶ್ನೆಗಳಿಗೆಲ್ಲ ಉತ್ತರ ತಕ್ಷಣಕ್ಕೆ ಲಭ್ಯವಾಗುವುದಕ್ಕೆ ಸಾಧ್ಯವಿಲ್ಲ. ಈ ಸತ್ಯ ಆರೋಪ ಹೊರಿಸುವವರಿಗೆ ಚೆನ್ನಾಗಿ ಗೊತ್ತು. ಆರೋಪಿತರು ಆ ಕ್ಷಣ ದಂಗಾಗುತ್ತಾರೆ. ನಾಲ್ಕೂ ಕಡೆಯಿಂದ ತೂರಿ ಬರುವ ಪ್ರಶ್ನೆಗಳಿಗೆ ನಿರಾಕರಣೆಯ ಉತ್ತರ ನೀಡಿ ನೀಡಿ ಸುಸ್ತಾಗುತ್ತಾರೆ ಮತ್ತು ಇಂಥ ನಿರಾಕರಣೆಯ ಉತ್ತರವನ್ನು ಅವರು ನೀಡುತ್ತಿರಬೇಕು ಎಂಬುದು ಆರೋಪ ಹೊರಿಸುವವರ ಉದ್ದೇಶವೂ ಆಗಿರುತ್ತದೆ. ಮುಂದೊಂದು ದಿನ ಆ ಆರೋಪ ತಪ್ಪೆಂದು ಸಾಬೀತಾದರೂ ಅದು ಸಾಸಿವೆಯಷ್ಟು ಸದ್ದು ಮಾಡುವುದಕ್ಕೂ ಸಮರ್ಥವಿರುವುದಿಲ್ಲ. ಅಷ್ಟಕ್ಕೂ,

ಪಾಕಿಸ್ತಾನ್ ಝಿಂದಾಬಾದ್ ಎಂಬುದು ಶ್ರೀಲಂಕಾ ಝಿಂದಾ ಬಾದ್ ಎಂದು ಕೂಗಿದಷ್ಟೇ ಸಹಜವಾದುದು ಮತ್ತು ಸಮಾನ ಸ್ಥಾನಮಾನವುಳ್ಳದ್ದು ಎಂದು ವಾದಿಸುವುದನ್ನು ಒಪ್ಪಲಾಗದು. ಪಾಕ್ ಮತ್ತು ಭಾರತದ ನಡುವಿನ ಸಂಬಂಧ ಸಹಜವಾಗಿಲ್ಲದೇ ಇರುವಾಗ ಮತ್ತು ಈ ಎರಡು ರಾಷ್ಟ್ರಗಳ ನಡುವೆ ನಾಲ್ಕನೇ ಯುದ್ಧ ಯಾವ ಸಂದರ್ಭದಲ್ಲೂ ಘಟಿಸಬಹುದು ಎಂಬ ವಾತಾವರಣ ಸಣ್ಣ ಪ್ರಮಾಣದಲ್ಲಾದರೂ ಇರುವಾಗ ಪಾಕ್ ಝಿಂದಾಬಾದ್ ಮತ್ತು ಲಂಕಾ ಝಿಂದಾಬಾದ್ ಘೋಷಣೆಗಳನ್ನು ಏಕಪ್ರಕಾರವಾಗಿ ಪರಿಗಣಿಸಲು ಅಸಾಧ್ಯ. ಕಾನೂನಿನ ಪ್ರಕಾರ ಪಾಕಿಸ್ತಾನ್ ಝಿಂದಾಬಾದ್ ಎಂದು ಹೇಳುವುದು ನೇರವಾಗಿ ತಪ್ಪಲ್ಲದೇ ಇರಬಹುದು. ಆದರೆ, ಎರಡೂ ದೇಶಗಳ ನಡುವಿನ ಸಂಬಂಧ ಮತ್ತು ಅದು ಹುಟ್ಟು ಹಾಕಿರುವ ಪರಿಣಾಮಗಳು ಕಾನೂನಿನ ಹೊರತಾದ ಜಿಜ್ಞಾಸೆಗೂ ಕಾರಣವಾಗುತ್ತದೆ. ಅಂದಹಾಗೆ,

ಪಾಕಿಸ್ತಾನ್ ಝಿಂದಾಬಾದ್ ಎಂದು ಹೇಳುವುದರಿಂದ ಭಾರತೀಯರಿಗೆ ದಕ್ಕುವುದು ಏನೂ ಇಲ್ಲ. ಈ ಸತ್ಯ ಭಾರತೀಯರಿಗೆ ಗೊತ್ತಿರುತ್ತದೆ, ಗೊತ್ತಿರಬೇಕು. ಆದರೆ, ಪಾಕಿಸ್ತಾನ್ ಝಿಂದಾಬಾದ್ ಕೂಗಿದ್ದಾರೆಂದು ಆರೋಪ ಹೊರಿಸುವುದರಿಂದ ಏನೆಲ್ಲ ದಕ್ಕುತ್ತದೆ ಎಂಬುದಂತೂ ಹೊರಿಸುವವರಿಗೆ ಚೆನ್ನಾಗಿಯೇ ಗೊತ್ತಿದೆ. ಅಷ್ಟಕ್ಕೂ,

ದ.ಕ. ಜಿಲ್ಲೆಯಲ್ಲಿ ಎಸ್‌ಡಿಪಿಐ ಬೆಂಬಲಿಗರು ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿದ್ದಾರೆಂಬ ಆರೋಪ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಇವೆಲ್ಲ ನೆನಪಾಯಿತು.