ಬುರ್ಖಾ, ಸೀರೆ, ಸಲ್ವಾರ್ ಏನೇ ತೊಟ್ಟಿದ್ದರೂ ಆಕೆ ಬರೇ ಹೆಣ್ಣು

0
1127

ಏ ಕೆ ಕುಕ್ಕಿಲ

ದಕ್ಷಿಣ ಕನ್ನಡ ಜಿಯ ಪುತ್ತೂರಿನಲ್ಲಿ ನಡೆದಿರುವ ವಿದ್ಯಾರ್ಥಿನಿಯೋರ್ವಳ ಸಾಮೂಹಿಕ ಅತ್ಯಾಚಾರವು ಕೆಲವು ಮೂಲಭೂತ ಪ್ರಶ್ನೆಗಳನ್ನು ಹುಟ್ಟು ಹಾಕಿದೆ:

1. ಈ ಕ್ರೌರ್ಯವು ಒಂದು ದಿನದ ಸೆನ್ಸೇಶನಲ್ ಸುದ್ದಿಯಾಗಿ ಆ ಬಳಿಕ ಠುಸ್ಸಾದುದು ಏಕೆ? ಇದರ ಹಿಂದಿರುವ ಲೆಕ್ಕಾಚಾರವೇನು?

2. ಅತ್ಯಾಚಾರಕ್ಕೊಳಗಾದ ಯುವತಿ ದಲಿತ ಸಮುದಾಯದವ ಳಾಗಿದ್ದೂ ದಲಿತ ಸಂಘಟನೆಗಳಿಂದ ಈ ಬಗ್ಗೆ ದೊಡ್ಡ ದನಿಯಲ್ಲಿ ಪ್ರತಿಭಟನೆ ವ್ಯಕ್ತವಾಗದಿರುವುದಕ್ಕೆ ಕಾರಣಗಳೇನು? ಕನಿಷ್ಠ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದಲಿತ ಸಂಘಟನೆಗಳು ಬೀದಿಯಲ್ಲಿರಬೇಕಾದ ಈ ಹೊತ್ತು, ಯಾಕೆ ಅವು ಮನೆಯಲ್ಲಿವೆ?

3. ಪುತ್ತೂರಿನ ಶಾಸಕರು ಬಿಜೆಪಿಯವರು. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರೇ ಇದ್ದಾರೆ. ಇಲ್ಲಿನ ಸಂಸದರೂ ಬಿಜೆಪಿಯವರೇ. ಪಕ್ಕದ ಉಡುಪಿಯ ಸಂಸದರಾಗಿರುವವರೂ ಬಿಜೆಪಿಯವರೇ- ಶೋಭಾ ಕರಂದ್ಲಾಜೆ. ಹೀಗೆಲ್ಲಾ ಇದ್ದೂ ಬಿಜೆಪಿ ಈ ಅತ್ಯಾಚಾರದ ವಿರುದ್ಧ ಪ್ರತಿಭಟನೆ, ರಾಲಿ, ಧರಣಿ ಇತ್ಯಾದಿಗಳನ್ನು ಹಮ್ಮಿಕೊಳ್ಳದಿರುವುದೇಕೆ?

ಹೀಗೆಲ್ಲಾ ಪ್ರಶ್ನಿಸುವುದಕ್ಕೆ ಕಾರಣಗಳಿವೆ.

ಅತ್ಯಾಚಾರ ಈ ದೇಶಕ್ಕೆ ಹೊಸತಲ್ಲ. ಈ ರಾಜ್ಯಕ್ಕೂ ಹೊಸತಲ್ಲ. ಆದರೆ, ಹೆಣ್ಣು ಮಗಳೊಬ್ಬಳನ್ನು ನಾಲ್ವರು ಸಾಮೂಹಿಕವಾಗಿ ಅತ್ಯಾಚಾರಗೈಯುವುದು, ಅದನ್ನು ಚಿತ್ರೀಕರಿಸುವುದು ಮತ್ತು ಆ ವೀಡಿಯೋವನ್ನು ಸಾರ್ವಜನಿಕವಾಗಿ ಹಂಚುವುದು ಹೊಸತು. ಅತ್ಯಾಚಾರವನ್ನು ಚಿತ್ರೀಕರಿಸಿ ತಮ್ಮ ಮೊಬೈಲ್‍ನಲ್ಲಿ ಕಾಪಿಟ್ಟುಕೊಳ್ಳುವ ಮನಸ್ಥಿತಿ ಸಹಜವಾದುದಲ್ಲ. ಅದು, ಆ ಅತ್ಯಾಚಾರದ ಬಳಿಕವೂ ಆ ಅತ್ಯಾಚಾರವನ್ನು ಮತ್ತೆ ಮತ್ತೆ ಅನು ಭವಿಸುವ ದುಷ್ಟತನವನ್ನು ಸೂಚಿಸುತ್ತದೆ. ಅಲ್ಲದೇ, ಅತ್ಯಾಚಾರಕ್ಕೊಳಗಾದ ಯುವತಿಯನ್ನು ಬೆದರಿಸಿ ಮತ್ತೆ ಮತ್ತೆ ಅತ್ಯಾಚಾರಕ್ಕೆ ಒಗ್ಗುವಂತೆ ಮಾಡುವ ಕಟುಕತನವೂ ಅದರಲ್ಲಿದೆ. ಈ ಮನಸ್ಥಿತಿ ಅತ್ಯಾಚಾರಕ್ಕಿಂತ ಹೇಯವಾದುದು ಮತ್ತು ಆ ಅತ್ಯಾಚಾರಿಗಳು ಕ್ರಿಮಿನಲ್ ಮನಸ್ಥಿತಿಯವರು ಎಂಬುದನ್ನು ಸಾಬೀತುಪಡಿಸು ವಂಥದ್ದು. ದೆಹಲಿಯ ನಿರ್ಭಯ ಪ್ರಕರಣವು ರಾಷ್ಟ್ರೀಯ ಸಂಚಲನ ಸೃಷ್ಟಿಸಿದುದಕ್ಕೆ ಇದ್ದ ಹಲವು ಕಾರಣಗಳಲ್ಲಿ ಒಂದು ಏನೆಂದರೆ, ಅದು ಒಳಗೊಂಡಿದ್ದ ಪೈಶಾಚಿಕತೆ. ಅದು ಅತ್ಯಾಚಾರ ವಷ್ಟೇ ಆಗಿರಲಿಲ್ಲ. ಅತ್ಯಾಚಾರಿಗಳು ಯಾವ ಮನಸ್ಥಿತಿಯವರು ಮತ್ತು ಆ ಮನಸ್ಥಿತಿ ಈ ಜಗತ್ತಿನ ಪಾಲಿಗೆ ಎಷ್ಟು ಅಪಾಯಕಾರಿ ಅನ್ನುವುದನ್ನು ಸ್ಪಷ್ಟಪಡಿಸುವ ಸನ್ನಿವೇಶವೂ ಆಗಿತ್ತು. ಅವರು ನಿರ್ಭಯಳ ದೇಹವನ್ನು ಇಂಚಿಂಚೂ ತಿವಿದರು. ಚಿತ್ರಹಿಂಸೆ ಕೊಟ್ಟರು. ರಕ್ತದಿಂದ ತೋಯುತ್ತಿದ್ದ ಜೀವವನ್ನು ರಸ್ತೆಗೆಸೆದರು. ಇದರಲ್ಲಿ ಎರಡು ಮನಸ್ಥಿತಿಯ ಪರಿಚಯವಾಗುತ್ತದೆ.

1. ಹೆಣ್ಣನ್ನು ಭೋಗ ವಸ್ತು ಮತ್ತು ತಮ್ಮ ಇಚ್ಛೆಗೆ ತಕ್ಕಂತೆ ಬಳಸಿಕೊಳ್ಳಬಹುದಾದ ವಸ್ತು ಎಂಬಂತೆ ಪರಿಗಣಿಸುವುದು.

2. ತಮ್ಮ ಇಚ್ಛೆಯನ್ನು ತಿರಸ್ಕರಿಸುವ ಹೆಣ್ಣನ್ನು ಮೃಗಗಳಂತೆ ಹಂಚಿ ತಿನ್ನುವುದು.

ಪುತ್ತೂರಿನ ಪ್ರಕರಣಕ್ಕೂ ನಿರ್ಭಯ ಪ್ರಕರಣಕ್ಕೂ ನಡುವೆ ಇರುವ ಸಾಮ್ಯತೆ ಏನೆಂದರೆ, ಎರಡೂ ಕಡೆಯೂ ಸಾಮೂಹಿಕ ಅತ್ಯಾಚಾರ ನಡೆದಿದೆ. ಆದರೆ ನಿರ್ಭಯ ಪ್ರಕರಣದಲ್ಲಿ ಚಿತ್ರೀಕರಣ ನಡೆದಿರಲಿಲ್ಲ. ಪುತ್ತೂರಿನ ಪ್ರಕರಣದಲ್ಲಿ ಅತ್ಯಾಚಾರದ ಜೊತೆ ಚಿತ್ರೀಕರಣವೂ ನಡೆದಿದೆ. ನಿರ್ಭಯಳ ಮೇಲೆ ಅತ್ಯಾಚಾರದ ಜೊತೆ ದೈಹಿಕ ಹಿಂಸೆಯನ್ನೂ ಎಸಗಲಾಗಿತ್ತು. ಪುತ್ತೂರಿನ ಅತ್ಯಾಚಾರವು ಈ ದೈಹಿಕ ಹಿಂಸೆಯಿಂದ ಹೊರತಾಗಿದೆ. ನಿಜವಾಗಿ, ಇಲ್ಲಿರುವ ವ್ಯತ್ಯಾಸ ತೆಳುವಾದುದು. ದೈಹಿಕ ಹಿಂಸೆಯು ಒಂದು ಬಾರಿ ನೋವನ್ನು ಕೊಟ್ಟರೆ, ಅತ್ಯಾಚಾರದ ವೀಡಿಯೋವು ಅಸಂಖ್ಯ ಬಾರಿ ನೋವನ್ನು ಕೊಡುತ್ತಲೇ ಇರುತ್ತದೆ. ಪರಿಣಾಮದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಸಂಗತಿಯಿದು. ನಿರ್ಭಯಳ ವಿಷಯದಲ್ಲಿ ಆಯುಧಗಳು ಬಳಕೆಯಾಗಿದ್ದರೆ, ಇಲ್ಲಿ ಕ್ಯಾಮರಾ ಬಳಕೆಯಾಗಿದೆ. ಇದರಾಚೆಗೆ ನೋಡುವುದಾದರೆ ಎರಡೂ ಹಿಂಸೆಯೇ. ಆದರೂ ರಾಷ್ಟ್ರಮಟ್ಟದಲ್ಲಿ ಬಿಡಿ, ರಾಜ್ಯಮಟ್ಟದಲ್ಲಾದರೂ ತೀವ್ರ ಪ್ರತಿಭಟನೆ, ಕ್ಯಾಂಡಲ್ ಲೈಟ್ ನಡಿಗೆ, ಧರಣಿ, ಮನವಿ ಸಲ್ಲಿಕೆ ಇತ್ಯಾದಿ ಇತ್ಯಾದಿಗಳು ಭಾರೀ ಮಟ್ಟದಲ್ಲಿ ಕಾಣಿಸಿಕೊಳ್ಳದಿರಲು ಕಾರಣವೇನು? ಜಾತಿಯೇ? ನಿರ್ಭಯ ಮೇಲ್ಜಾತಿಯ ಹೆಣ್ಣು ಮಗಳು ಮತ್ತು ಪುತ್ತೂರಿನ ಸಂತ್ರಸ್ತೆ ದಲಿತ ಹೆಣ್ಣು ಮಗಳು ಎಂಬುದು ಇದಕ್ಕಿರುವ ಕಾರಣವೇ? ಅತ್ಯಾಚಾರದ ಆರೋಪ ಹೊತ್ತ ಯುವಕರು ಬಿಜೆಪಿಯ ಬೆಂಬಲಿಗರು ಎಂಬುದೂ ಇನ್ನೊಂದು ಕಾರಣವೇ? ಹಾಗಿದ್ದರೆ, ದಲಿತ ಸಂಘಟನೆಗಳನ್ನು ಮೌನವಾಗಿಸಿದ್ದು ಯಾವುದು? ಇದಕ್ಕೂ ರಾಜಕೀಯ ಆಯಾಮವಿದೆಯೇ?

2012ರಲ್ಲಿ ಪ್ರಧಾನಿಯಾಗಿದ್ದುದು ಮನ್‍ಮೋಹನ್ ಸಿಂಗ್. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಆಗ ಅಧಿಕಾರದಲ್ಲಿತ್ತು. ಹಾಗಿದ್ದೂ, ನಿರ್ಭಯಳಿಗಾಗಿ ದೇಶವನ್ನೇ ಒಂದಾಗಿಸಲು ಮತ್ತು ಬೀದಿಗಿಳಿಯುವಂತೆ ಮಾಡಲು ಬಿಜೆಪಿ ಯಶಸ್ವಿಯಾಗಿತ್ತು. ಅಂದಮೇಲೆ, ಪುತ್ತೂರಿನ ಘಟನೆಯನ್ನು ನಾಗರಿಕ ಆಕ್ರೋಶವಾಗಿ ಪರಿವರ್ತಿಸುವುದು ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಗೆ ಕಷ್ಟವೇ ಅಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಹಿಂದೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಚಳವಳಿಯ ಪಾಲು ಇರುವಂತೆಯೇ ನಿರ್ಭಯ ಪ್ರಕರಣದಲ್ಲಿ ಬಿಜೆಪಿ ಹುಟ್ಟು ಹಾಕಿದ ಸಾರ್ವಜನಿಕ ಆಕ್ರೋಶಕ್ಕೂ ಪಾಲು ಇದೆ. ಒಂದು ಭೀಕರ ಅತ್ಯಾಚಾರವನ್ನು ಹೇಗೆ ರಾಷ್ಟ್ರೀಯ ಇಶ್ಶೂ ಆಗಿ ಬದಲಾಯಿಸಬಹುದು ಎಂಬುದನ್ನು ಅತ್ಯಂತ ಪರಿಣಾಮಕಾರಿ ಯಾಗಿ ಬಿಜೆಪಿ ಅಂದು ತೋರಿಸಿಕೊಟ್ಟಿತ್ತು. ಶಾಲಾ ಮಕ್ಕಳನ್ನು ಅದು ಬೀದಿಗಿಳಿಸಿತ್ತು. ಸರಕಾರಿ ನೌಕರರು, ಮಹಿಳಾ ಸಂಘಟನೆಗಳು, ಸರಕಾರೇತರ ಸಂಸ್ಥೆಗಳು ಇತ್ಯಾದಿ ಎಲ್ಲರೂ ಎಲ್ಲವೂ ಒಂದು ಯುದ್ಧದಲ್ಲಿ ಪಾಲ್ಗೊಳ್ಳುವ ರೀತಿಯಲ್ಲಿ ಅಂದು ಪ್ರತಿಭಟಿಸಿದ್ದರೆ, ಅದನ್ನು ಪ್ರಚೋದಿಸಿದ್ದು ಬಿಜೆಪಿಯೇ. ಹೀಗಿರುವಾಗ, ಬಿಜೆಪಿಯ ಈಗಿನ ಮೌನವನ್ನು ಅನುಮಾನಿಸುವುದು ಯಾವ ರೀತಿಯಲ್ಲೂ ಅಪರಾಧವಾಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಇದೆ. ಈ ಸರಕಾರವನ್ನು ಉರುಳಿಸಿ ಯಡಿಯೂರಪ್ಪರ ನೇತೃತ್ವದಲ್ಲಿ ಸರಕಾರವನ್ನು ರಚಿಸಬೇಕೆಂಬುದು ಬಿಜೆಪಿಯ ಬಯಕೆ. ಬಹುಮತ ಇಲ್ಲದೆಯೂ ಈ ಮೊದಲು ಸರಕಾರ ರಚಿಸಿದ್ದು ಈ ಬಯಕೆಗೆ ಪುರಾವೆಯಾದರೆ, ಆ ಬಳಿಕದ ಹಲವು ಆಪರೇಶನ್ ಕಮಲ ಪ್ರಯತ್ನಗಳು ಇದಕ್ಕೆ ಇನ್ನಷ್ಟು ಪುರಾವೆಗಳಾಗಿವೆ. ಇಷ್ಟಿದ್ದೂ ಬಿಜೆಪಿಯೇಕೆ ಮೌನ ವ್ರತದಲ್ಲಿದೆ? ಮನ್‍ಮೋಹನ್ ಸಿಂಗ್ ಸರಕಾರವನ್ನು ಅಲುಗಾಡಿಸಲು ಮತ್ತು ಯುಪಿಎ ಸರಕಾರದ ವಿರುದ್ಧ ಜನಾಕ್ರೋಶವನ್ನು ಪ್ರಚೋದಿಸಲು ನಿರ್ಭಯ ಪ್ರಕರಣವನ್ನು ಬಳಸಿಕೊಂಡಿದ್ದ ಬಿಜೆಪಿಯು ಕನಿಷ್ಠ ಕುಮಾರಸ್ವಾಮಿ ಸರಕಾರದ ಪತನಕ್ಕೆ ವೇದಿಕೆಯಾಗಿ ಪುತ್ತೂರು ಘಟನೆಯನ್ನು ಉಪಯೋಗಿಸದಿರಲು ಕಾರಣವೇನು? ಯಾವ ಲೆಕ್ಕಾಚಾರ ಹೀಗೆ ಮಾಡದಿರಲು ಬಿಜೆಪಿಗೆ ತಡೆಯಾಗಿದೆ? ಜಾತಿ ಲೆಕ್ಕಾಚಾರವೇ? ಆರೋಪಿಗಳು ತಮ್ಮ ಬೆಂಬಲಿಗರು ಎಂಬ ಲೆಕ್ಕಾಚಾರವೇ? ಅಥವಾ ನಿರ್ಭಯ ಪ್ರಕರಣವನ್ನು ರಾಷ್ಟ್ರಮಟ್ಟದ ಚಳವಳಿಯಾಗಿ ಮಾರ್ಪಡಿಸುವುದಕ್ಕೆ ಆಕೆಯ ಮೇಲ್ಜಾತಿ ಕಾರಣವಾಗಿತ್ತೇ? ಪುತ್ತೂರಿನ ಸಂತ್ರಸ್ತ ವಿದ್ಯಾರ್ಥಿನಿ ಕೆಳಜಾತಿಯವಳಾಗಿರುವುದು ಬಿಜೆಪಿಯ ನಿರಾಸಕ್ತಿಗೆ ಕಾರಣವೇ?

ಅತ್ಯಾಚಾರಕ್ಕೆ ಜಾತಿ-ಧರ್ಮಗಳ ಹಂಗಿಲ್ಲ. ಮೇಲ್ಜಾತಿ ಯುವ ತಿಯ ಮೇಲೆ ನಡೆಯುವ ಅತ್ಯಾಚಾರ ಅಕ್ಷಮ್ಯವೂ ಕೆಳಜಾತಿ ಯುವತಿಯ ಮೇಲೆ ನಡೆಯುವ ಅತ್ಯಾಚಾರ ಕ್ಷಮ್ಯವೂ ಆಗುವುದಕ್ಕೆ ಸಾಧ್ಯವೂ ಇಲ್ಲ. ಅತ್ಯಾಚಾರದ ನೋವು, ಸಂಕಟ, ಅವಮಾನ, ಭಯಾನಕತೆ ಎಲ್ಲವೂ ಎಲ್ಲ ಜಾತಿಯ ಹೆಣ್ಣು ಮಕ್ಕಳ ಪಾಲಿಗೂ ಸಮಾನ. ಪುತ್ತೂರಿನ ಸಂತ್ರಸ್ತೆ ಮತ್ತು ದೆಹಲಿಯ ನಿರ್ಭಯ ನಮ್ಮ ಪಾಲಿಗೆ ಮುಖ್ಯವಾಗಬೇಕಾದುದು ಈ ಹಿನ್ನೆಲೆಯಲ್ಲಿ. ಅವರಿಬ್ಬರೂ ಹೆಣ್ಣು ಮಕ್ಕಳು. ಬರೇ ಹೆಣ್ಣು ಮಕ್ಕಳು. ಮೇಲ್ಜಾತಿ ಮತ್ತು ಕೆಳಜಾತಿ ಎಂಬುದು ಅತ್ಯಾ ಚಾರಕ್ಕೆ ಸಂಬಂಧಿಸಿ ನಗಣ್ಯ. ದುರಂತ ಏನೆಂದರೆ, ನಿರ್ಭಯ ಪ್ರಕರಣದಲ್ಲಿ ಜಾತಿಯನ್ನೂ ಮೀರಿದ ಮತ್ತು ಪಕ್ಷವನ್ನೂ ಲೆಕ್ಕಿಸದ ಏಕೀಕೃತ ದನಿಯೊಂದು ರಾಷ್ಟ್ರದಾದ್ಯಂತ ಮೊಳಗಿದ್ದರೆ, ಪುತ್ತೂರು ಪ್ರಕರಣಕ್ಕೆ ಅದರ ಒಂದಂಶ ಮಹತ್ವವೂ ಲಭ್ಯವಾಗಿಲ್ಲ. ಟಿ.ವಿ. ಮಾಧ್ಯಮವು ಅದನ್ನು ಒಂದು ದಿನದ ಬ್ರೇಕಿಂಗ್ ನ್ಯೂಸ್ ಆಗಿಸಿ ಚಪ್ಪರಿಸಿ ಕೈ ತೊಳೆದುಕೊಂಡಿತೇ ಹೊರತು ಈ ಪ್ರಕರಣಕ್ಕೆ ಚಳವಳಿಯ ಸ್ವರೂಪವನ್ನು ಕೊಡುವ ಪ್ರಮುಖ ಜವಾಬ್ದಾರಿ ಯಿಂದ ಹಿಂಜರಿಯಿತು. ವಿರೋಧ ಪಕ್ಷವಾದ ಬಿಜೆಪಿಯ ಮೌನವನ್ನು ಪರಿಣಾಮಕಾರಿಯಾಗಿ ಪ್ರಶ್ನಿಸುವಲ್ಲೂ ಅವು ಜಾಣತನ ತೋರಿತು. ಬಿಜೆಪಿಯಂತೂ ಮಾತನ್ನೇ ಮರೆತು ಮೌನವಾಯಿತು. ನಿಜವಾಗಿ, ಯಾವುದೇ ಕ್ರೌರ್ಯದ ಇತಿ ಮತ್ತು ಮಿತಿ ಇದು. ಬಿಜೆಪಿಯ ಯಾವುದೇ ಪ್ರತಿಭಟನೆಯಲ್ಲಿ ಹೊರಗೆ ಕಾಣುವುದಕ್ಕಿಂತ ಬೇರೆಯದೇ ಆದ ಲೆಕ್ಕಾಚಾರ ಇರುತ್ತದೆ ಅನ್ನುವ ಆರೋಪಕ್ಕೆ ಬಲ ನೀಡಿದ ಘಟನೆ ಇದು. ಅತ್ಯಾಚಾರವು ಬಿಜೆಪಿಯ ಪಾಲಿಗೆ ಕ್ರೌರ್ಯ ಮತ್ತು ಪ್ರತಿಭಟ ನಾರ್ಹ ಕೃತ್ಯವಾಗಬೇಕಿದ್ದರೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಜಾತಿ ಮತ್ತು ಅತ್ಯಾಚಾರಿಗಳ ಧರ್ಮ ಮುಖ್ಯ ವಾಗುತ್ತದೆಯೇ ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಮುನ್ನೆಲೆಗೆ ತಂದ ಕೃತ್ಯವೂ ಇದುವೇ. ಒಂದುವೇಳೆ, ಅಲ್ಲಿನ ಆರೋಪಿಗಳ ಧರ್ಮ ಬೇರೆಯಾಗಿರುತ್ತಿದ್ದರೆ ಬಿಜೆಪಿಯ ನಿಲುವು ಏನಿರುತ್ತಿತ್ತು ಅನ್ನುವ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ. ನಿಜವಾಗಿ, ಈ ಪ್ರಶ್ನೆ ಅಪ್ರಸ್ತುತ ಅಲ್ಲ, ಅಕಾರಣವೂ ಅಲ್ಲ. ಇಂಥ ಪ್ರಶ್ನೆಯ ಹುಟ್ಟಿಗೆ ಬಿಜೆಪಿಯ ಈ ಹಿಂದಿನ ನಿಲುವುಗಳೇ ಮುಖ್ಯ ಆಧಾರ. ಪುತ್ತೂರಿನ ಸಂತ್ರಸ್ತೆಯು ಈ ಪ್ರಶ್ನೆಯನ್ನು ಮತ್ತೊಮ್ಮೆ ಪ್ರಸ್ತುತಗೊಳಿಸಿದ್ದಾಳೆ ಅಷ್ಟೇ. ಅಂದಹಾಗೆ,

ಅತ್ಯಾಚಾರದಂಥ ಅತಿಹೀನ ಮತ್ತು ಅತಿ ಅಪಾಯಕಾರಿ ಕ್ರೌರ್ಯವೂ ಜಾತಿ-ಧರ್ಮಗಳ ಕನ್ನಡಕದಲ್ಲಿ ಪರಿಶೀಲನೆಗೆ ಒಳಗಾಗುವುದು ಮತ್ತು ಅವುಗಳ ಆಧಾರದಲ್ಲೇ ಅದು ಪ್ರಶ್ನಾರ್ಹವೋ ಕ್ಷಮ್ಯವೋ ಎಂದು ನಿರ್ಧರಿಸಲ್ಪಡುವುದು ಅತ್ಯಂತ ಆಘಾತಕಾರಿ ಬೆಳವಣಿಗೆ. ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣು ಬರೇ ಹೆಣ್ಣು ಮಾತ್ರ ಆಗಿರುತ್ತಾಳೆ. ಬರೇ ಹೆಣ್ಣು. ಆ ಸಂದರ್ಭದಲ್ಲಿ ಆಕೆ ಬುರ್ಖಾ, ಸಲ್ವಾರ್, ಸೀರೆ, ಲಂಗ-ಧಾವಣಿ ಏನನ್ನೂ ಧರಿಸಿರಬಹುದು. ಅದು ಅತ್ಯಾಚಾರಕ್ಕೆ ಕಾರಣ ಅಲ್ಲ. ಆಕೆ ಹೆಣ್ಣಾಗಿರುವುದೇ ಅತ್ಯಾಚಾರಕ್ಕೆ ಕಾರಣ. ಬಟ್ಟೆ ಸೆಕೆಂಡರಿ. ಆದರೆ ಅತ್ಯಾಚಾರಿ ಗಂಡು ಬರೇ ಗಂಡಷ್ಟೇ ಆಗಿರಬೇಕಿಲ್ಲ. ಆತ ಮತಾಂಧ ಗಂಡೂ ಆಗಿರಬಲ್ಲ. ಮೃಗೀಯ ಗಂಡೂ ಆಗಿರಬಲ್ಲ. ಪರಮತ ದ್ವೇಷ ವನ್ನು ಮನತುಂಬಾ ತುಂಬಿಕೊಂಡ ಗಂಡೂ ಆಗಿರಬಲ್ಲ. ಮತ್ಸರಿ, ಪ್ರೇಮ ವಂಚಿತ, ವಿಕೃತ ಕಾಮಿ ಏನೇನೋ ಆಗಿರಬಲ್ಲ. ಅತ್ಯಾಚಾರಿ ಗಂಡಿನ ಮನಸ್ಥಿತಿಯನ್ನು ಹೊಂದಿಕೊಂಡು ಅತ್ಯಾಚಾರ ಕ್ಕೊಳಗಾಗುವ ಹೆಣ್ಣಿನ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಆಕೆ ಒಂದೋ ನಿರ್ಭಯಳಂತೆ ಮೃಗೀಯ ಹಿಂಸೆಗೆ ತುತ್ತಾಗುವಳು ಅಥವಾ ಪುತ್ತೂರಿನ ಸಂತ್ರಸ್ತೆಯಂತಾಗುವಳು. ಇಲ್ಲವೇ ಇವೆರಡೂ ಆಗದೇ ಒಳಗೊಳಗೇ ಕುದಿಯುತ್ತಾ, ಸಾಯುತ್ತಾ ಬದುಕುತ್ತಿರುವ ಅಸಂಖ್ಯ ಯುವತಿಯರಂತಾಗುವಳು. ಈ ಸ್ಥಿತಿಗಳೆಲ್ಲವೂ ಅತ್ಯಾಚಾರಿ ಯನ್ನು ಹೊಂದಿಕೊಂಡಿದೆ. ಆದ್ದರಿಂದಲೇ, ಅತ್ಯಾಚಾರ ಪ್ರಕರಣವನ್ನು ಜಾತಿ-ಧರ್ಮದ ಲೆಕ್ಕಾಚಾರಕ್ಕಿಂತ ಹೊರಗಿಟ್ಟು ನೋಡಬೇಕಾಗಿದೆ. ಇಲ್ಲಿ ಹೆಣ್ಣೇ ಸಂತ್ರಸ್ತೆ. ಬರೇ ಹೆಣ್ಣು. ಆಕೆ ತೊಟ್ಟಿರುವ ಉಡುಪು ಮತ್ತು ಪ್ರತಿನಿಧಿಸುವ ಧರ್ಮ ಮುಖ್ಯವೇ ಅಲ್ಲ.

ಪುತ್ತೂರಿನ ಪ್ರಕರಣ ಮುಖ್ಯವಾಗುವುದು ಈ ಕಾರಣದಿಂದ. ಆಕೆ ಹೆಣ್ಣು. ಬರೇ ಹೆಣ್ಣು. ಅಷ್ಟೇ.