ದುಬೈ ಏರ್‌ಪೋರ್ಟ್‌: ಅನಿವಾಸಿ ಪ್ರಯಾಣಿಕರ ಆಪತ್ಬಾಂಧವ ಆಸಿಫ್ ಸುರಲ್ಪಾಡಿ

0
523

ಸನ್ಮಾರ್ಗ ವಾರ್ತೆ

ದುಬೈ,ಆ.2: ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಒಳಗಾದಾಗ ಭಾರತೀಯರ ಅದರಲ್ಲಿಯೂ ಕನ್ನಡಿಗರಿಗೆ ತಕ್ಷಣ ರಕ್ಷಿಸಲು ಮುಂದಡಿ ಇಡಲು ಕರಾವಳಿಯ ಕನ್ನಡಿಗರು ಸದಾ ಮುಂಚೂಣಿಯಲ್ಲಿರುತ್ತಾರೆ.

ಆಸೀಫ್ ಸುರಲ್ಪಾಡಿ (ಮಂಗಳೂರು) ಕೂಡ ಇದೇ ಕರಾವಳಿ ಸಮಾಜ ಸೇವಕರ ಸಾಲಿನಲ್ಲಿದ್ದು, ಸದ್ದಿಲ್ಲದೇ ಹಲವು ವರ್ಷಗಳಿಂದ ಜನರ ನೋವಿಗೆ ಸ್ಪಂದಿಸುತ್ತಲೇ ಬಂದಿದ್ದಾರೆ. ಇವರು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಕಾರ್ಯಾಚರಣಾ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದು, ಇವರು ಮಾಡಿದ ಅದೆಷ್ಟೋ ಕೆಲಸಗಳು ನೂರಾರು ಅನಿವಾಸಿ ಕನ್ನಡಿಗರಿಗೆ ತಾಯ್ನಾಡನ್ನು ತಲುಪಲು ನೆರವಾಗಿದೆ.

ಇತ್ತೀಚೆಗೆ ಕೋವಿಡ್-19 ತುರ್ತು ಪರಿಸ್ಥಿತಿಯಲ್ಲಿ ಅತ್ತ ಕೆಲಸವಿಲ್ಲದೇ ಇತ್ತ ಉಳಿದುಕೊಳ್ಳಲು ಕೈಯಲ್ಲಿ ಹಣವಿಲ್ಲದೇ ಕಣ್ಣೀರು ಹಾಕುತ್ತಿದ್ದವರಿಗೆ ಆಸೀಫ್ ‌ರ ನೆರವು ನಿಜಕ್ಕೂ ಸಂಕಷ್ಟಕ್ಕೊಳಗಾದವರಿಗೆ ವರದಾನವಾಗಿತ್ತು.

ಕೋವಿಡ್-19 ಸಂಕಷ್ಟದ ಹೊರತಾಗಿಯೂ ಇತರ ಸಂದರ್ಭದಲ್ಲಿ ಊರಿಗೆ ಬರಲು ಏರ್‌ಪೋರ್ಟ್‌ಗೆ ತಲುಪುವ ಕನ್ನಡಿಗರಿಗೆ ಮಾಹಿತಿ ಮತ್ತು ಕೊನೆಯ ಕ್ಷಣದಲ್ಲಿ ಪ್ರಯಾಣಿಸಲು ಅಡಚಣೆ ಆಗುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ನಿಖರ ಮಾಹಿತಿ ನೀಡುವ ಜೊತೆಗೆ ಅಂತಹ ಪ್ರಯಾಣಿಕರಿಗೆ ತನ್ನ ಕೈಯಿಂದಾಗುವ ಎಲ್ಲಾ ರೀತಿಯ ಸಹಾಯವನ್ನು ನೀಡುವ ಮೂಲಕ ಆಸಿಫ್ ಚಿರಪರಿಚಿತರಾಗಿದ್ದಾರೆ.

ವಿಸಿಟ್‌ ವಿಸಾ ಓವರ್ ಸ್ಟೇ -ದಂಡ ಕಟ್ಟಲು ಹಣವಿಲ್ಲದೆ ಪರದಾಡುವವರಿಗೆ ಹಲಾವಾರು ಸಂಘ ಸಂಸ್ಥೆಗಳಿಂದ ಕೆಲವೊಮ್ಮೆ ಸಿಬ್ಬಂದಿಗಳೊಂದಿಗೆ ಸೇರಿ ಹಣವನ್ನು ಸಂಗ್ರಹಿಸಿ ತನ್ನಿಂದಾಗುವ ಸಹಾಯವನ್ನು ಕೂಡ ಆಸೀಫ್ ಮಾಡುತ್ತಾ ಬಂದಿದ್ದಾರೆ.

ಇನ್ನೂ ಗರ್ಭಿಣಿ ಮಹಿಳೆಯರು, ರೋಗಿಗಳಿಗೆ ಪ್ರಯಾಣದ ಕಾರ್ಯವಿಧಾನ ಸುಲಭಗೊಳಿಸುವುದು ಮತ್ತು ಮೃತದೇಹವನ್ನು ತಾಯ್ನಾಡಿಗೆ ತಲುಪಿಸಲು ಕೊಂಡೊಯ್ಯವ ವಿಮಾನಯಾನ ಪ್ರಕ್ರಿಯ ಕೆಲಸವನ್ನೂ ಕೂಡ ಆಸಿಫ್ ಮಾಡುತ್ತಾ ಬಂದಿದ್ದಾರೆ.

ದುಬೈಯಲ್ಲಿರುವ ಎಲ್ಲಾ ಕನ್ನಡ -ಸಂಘಟನೆಯವರೊಂದಿಗೆ ಚಿರಪರಿಚಿತ ಮತ್ತು ಯಾವುದೇ ಸಮಯದಲ್ಲಿಯೂ ಲಭ್ಯವಿರುವ ಆಸಿಫ್; ಯಾವುದೇ ಫಲಾಪೇಕ್ಷೆಯಿಲ್ಲದೇ ಸಮಾಜ ಸೇವೆಯಲ್ಲಿ ನಿರತತಾಗಿದ್ದು, “ತನ್ನ ಕೆಲಸದಿಂದಾಚೆಗೆ ಕಾನೂನಾತ್ಮಕವಾಗಿ ಸಂಕಷ್ಟದಲ್ಲಿರುವ ಭಾರತೀಯ ಪ್ರಯಾಣಿಕರಿಗೆ ತನ್ನಿದಾಗುವಷ್ಟು ಸಹಕಾರ ಮಾಡುತ್ತಾ ಬಂದಿದ್ದೇನೆ” ಎನ್ನುತ್ತಾರೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.