ಸನ್ಮಾರ್ಗ ವಾರ್ತೆ
ಪಾಟ್ನ,ಮೇ.26: ಬಿಹಾರದ ಸಿಪಿಐಎಂಎಲ್ ನಾಯಕ ಜೆಪಿ ಯಾದವ್ರ ಮನೆಗೆ ಬಂದ ದುಷ್ಕರ್ಮಿಗಳ ತಂಡ ಅವರ ಸಹೋದರ ಮತ್ತು ತಂದೆ-ತಾಯಿಯನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಗಾಯಾಳು ಸಿಪಿ ಯಾದವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹೇಶ್ ಚೌಧರಿ(65), ಸಕೇಶ್ಯತ ದೇವಿ (60), ಶಾಂತನು(35) ಕೊಲೆಯಾದ ನತದೃಷ್ಟರು.
ಗೋಪಾಲಗಂಜ್ನಲ್ಲಿ ರವಿವಾರ ಸಂಜೆ ದುರ್ಘಟನೆ ನಡೆದಿದೆ.ಘಟನೆಯಲ್ಲಿ ಜೆಡಿಯು ಶಾಸಕ ಅಮರೇಂದ್ರ ಪಾಂಡೆ, ಸಹೋದರ ಸತೀಶ್ ಪಾಂಡೆ, ಸತೀಶ್ರ ಪುತ್ರ ಮುಕೇಶ್ ಪಾಂಡ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಸತೀಶ್ ಮತ್ತು ಮುಕೇಶ್ನ್ನು ಬಂಧಿಸಲಾಗಿದೆ.
ಕಸ್ಟಡಿಯಲ್ಲಿರುವ ಶಾಸಕ ಅಮರೇಂದ್ರ ಪಾಂಡೆಯನ್ನು ಬಂಧಿಸಲು ಸ್ಪೀಕರ್ರ ಅನುಮತಿಗಾಗಿ ಪೊಲೀಸರು ಕಾಯುತ್ತಿದ್ದು ರಾಜಕೀಯ ದ್ವೇಷ ಕೊಲೆಗೆ ಕಾರಣವೆಂದು ಜೆಪಿ ಯಾದವ್ ಆಸ್ಪತ್ರೆಯಲ್ಲಿ ತಿಳಿಸಿದರೆಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಘಟನೆಯಲ್ಲಿ ಅಮರೇಂದ್ರ ಪಾಂಡೆಯ ಪಾತ್ರ ಏನೆಂದು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದರು. ಜೆಪಿ ಯಾದವ್ ಪಾಟ್ನಾ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅಮರೇಂದ್ರ ಪಾಂಡೆಯ ಸಹೋದರ ಪುತ್ರ ಮುಕೇಶ್ ವಿರುದ್ಧ ಸ್ಪರ್ಧಿಸಲು ಯಾದವ್ ಸಿದ್ಧತೆ ನಡೆಸುತ್ತಿದ್ದರು. ಮುಕೇಶ್ ಈಗ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದಾರೆ. ವಿದ್ಯಾರ್ಥಿ ರಾಜಕೀಯ ಮೂಲಕ ರಾಜಕೀಯನಾಯಕನಾಗಿ ಮೇಲೆ ಬಂದ ಜೆಪಿ ಯಾದವ್ ಅವರು ಅಮರೇಂದ್ರ ಪಾಂಡೆಯವರ ದೊಡ್ಡ ಟೀಕಾಕಾರರಾಗಿದ್ದರು.
ತಂದೆ-ತಾಯಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟರೇ, ಸಹೊದರ ಆಸ್ಪತ್ರೆಯಲ್ಲಿ ಅಸುನೀಗಿದರು. ಘಟನೆಯನ್ನು ವಿರೋಧಿಸಿ ಗ್ರಾಮದಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ಘಟನೆಯ ಹಿಂದಿರುವ ಸಂಚನ್ನು ಬಹಿರಂಗಪಡಿಸುವುದಾಗಿ ಎಸ್ಪಿ ಮನೋಜ್ ಕುಮಾರ್ ಹೇಳಿದರು. ಶಾಸಕರ ವಿರುದ್ಧ ಕ್ರಮಜರಗಿಸಬೇಕೆಂದು ಆಗ್ರಹಿಸಿ ಆರ್ಜೆಡಿ ಶಾಸಕ ತೇಜಸ್ವಿ ಪ್ರಸಾದ್ ಯಾದವ್ರ ನೇತೃತ್ವದಲ್ಲಿರುವ ಪ್ರತಿಪಕ್ಷ ರಂಪ್ರವೇಶಿಸಿದೆ.