ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.1: ದಿಲ್ಲಿ ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಪೊಲೀಸರು ಬಂಧಿಸಿದ್ದ ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಹಿತ ಇಬ್ಬರಿಗೆ ಕೋರ್ಟು ಜಾಮೀನು ನೀಡಿದೆ. ತಿಂಗಳುಗಳ ಕಾಲ ಜೈಲಿನಲ್ಲಿಡಲಾದ ಗುಲ್ಫಾಮ್, ಜಾವೇದ್ ಎಂಬವರಿಗೆ ಕೋರ್ಟು ಜಾಮೀನು ನೀಡಿತು. ಇವರ ವಿರುದ್ಧ ಎಫ್ಐಆರ್ ಇಲ್ಲ. ಇವರು ಮಾಡಿದ ಅಪರಾಧ ಏನೆಂದು ಕೂಡ ತಿಳಿದಿಲ್ಲ ಎಂದು ಅಡಿಶನಲ್ ಸೆಷನ್ಸ್ ಕೋರ್ಟು ಜಡ್ಜ್ ವಿನೋದ್ ಯಾದವ್ ಜಾಮೀನು ಮಂಜೂರು ಮಾಡಿದ್ದಾರೆ.
ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾದ ಗುಲ್ಫಾಮ್ರನ್ನು ಮೇ ತಿಂಗಳಲ್ಲಿ ಮತ್ತು ಜಾವೇದ್ರನ್ನು ಜುಲೈಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಗಲಭೆಯಲ್ಲಿ ಗುಲ್ಫಾಮ್ ಶಾಮೀಲಾಗಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಲಭಿಸಿಲ್ಲ. ಎಫ್ಐಆರ್ ದಾಖಲಿಸಲಾಗಿಲ್ಲ ಎಂದು ವಕೀಲರು ಬೆಟ್ಟು ಮಾಡಿದರು. ದಿಲ್ಲಿಯ ಕೋಮು ಗಲಭೆಗೆ ಸಂಬಂಧಿಸಿ ಪೊಲೀಸರು ಏಕಪಕ್ಷೀಯವಾಗಿ ವರ್ತಿಸಿದ್ದರು ಎಂಬ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದ್ದ ವೇಳೆಯೇ ಎಫ್ಐಆರ್ ಕೂಡ ದಾಖಲಿಸದೆ ವಿದ್ಯಾರ್ಥಿಯನ್ನು ತಿಂಗಳುಗಟ್ಟಲೆ ಕಾಲ ಜೈಲಿನಲ್ಲಿರಿಸಲಾಗಿದೆ ಎಂದು ವರದಿಯಾಗಿತ್ತು.
ಇದೇ ವೇಳೆ ಕೊರೋನ ಮಹಾಮಾರಿಯ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲು ತಡವಾಗಿದೆ ಎಂದು ಜಾಮೀನನ್ನು ವಿರೋಧಿಸಿದ ಪ್ರಾಸಿಕ್ಯೂಟರ್ ಕೋರ್ಟಿನಲ್ಲಿ ಹೇಳಿದರು.