ಸನ್ಮಾರ್ಗ ವಾರ್ತೆ
ನವದೆಹಲಿ: ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆಯಲ್ಲಿ ಹಿಂಸಾಚಾರದಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು, ಗುಪ್ತಚರ ಇಲಾಖೆ ಹಾಗೂ ದೆಹಲಿ ಪೊಲೀಸರೊಂದಿಗೆ ಸಭೆ ನಡೆಸಿದ ಅಮಿತ್ ಶಾ, ಹಿಂಸಾಚಾರ ಸಂಭವಿಸಿದ ಬಳಿಕ ರಾಜಧಾನಿಯಲ್ಲಿನ ಭದ್ರತಾ ಪರಿಸ್ಥಿತಿಯನ್ನು ಪರಾಮರ್ಶಿಸಿದರು.
ಅಲ್ಲದೇ ದೆಹಲಿಯಲ್ಲಿ ಹೆಚ್ಚುವರಿ ಅರೆಸೇನಾಪಡೆಯನ್ನು ನಿಯೋಜಿಸುವಂತೆ ಅಮಿತ್ ಶಾ ಆದೇಶಿಸಿದರು. ಸೋಮವಾರದಿಂದಲೇ ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿದ್ದು, ಇಂಟರ್ನೆಟ್ ಸೇವೆಯನ್ನು ಹಲವೆಡೆ ಸ್ಥಗಿತಗೊಳಿಸಲಾಗಿದೆ.
ರೈತ ಮುಖಂಡರು ನೀಡಿದ ಹೇಳಿಕೆಗಳ ಆಧಾರದಲ್ಲಿ ದೆಹಲಿ ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಹಿಂಸಾಚಾರವನ್ನು ಪ್ರಚೋದಿಸಿದವರನ್ನು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.