ವಿರೋಧಗಳ ನಡುವೆಯೂ ಕೇಂದ್ರ ಕೃಷಿ ಕಾನೂನುಗಳ ಪರ ನಿಂತ ರಾಜ್ಯ ಸರ್ಕಾರ: ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ರಾಜ್ಯಪಾಲರಿಂದ ಅಂಗೀಕಾರ

0
478

ಸನ್ಮಾರ್ಗ ವಾರ್ತೆ

ಬೆಂಗಳೂರು: ರಾಜ್ಯದಲ್ಲಿ ರೈತರು ಹಾಗೂ ಪ್ರತಿಪಕ್ಷಗಳ ವಿರೋಧದ ಮಧ್ಯೆಯೂ ಅಂಗೀಕಾರಗೊಂಡಿದ್ದ ‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಅಧಿನಿಯಮ-2020’ಕ್ಕೆ ರಾಜ್ಯಪಾಲ ವಜುಭಾಯಿ ರುದಭಾಯಿ ವಾಲರವರು ಸಹಿ ಹಾಕುವ ಮೂಲಕ ಅಂಗೀಕಾರ ನೀಡಿದ್ದಾರೆ.

1966ರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಾಡಿದ್ದು, ಎಪಿಎಂಸಿ ಪ್ರಾಂಗಣ ಮತ್ತು ಉಪ ಮಾರುಕಟ್ಟೆ ಪ್ರಾಂಗಣಗಳಲ್ಲಿ ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣಕ್ಕೆ ಕಾಯ್ದೆ ರೂಪಿಸಲಾಗಿದೆ.

ವರ್ತಕರು ನೇರವಾಗಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಕಲ್ಪಿಸಲು ಮತ್ತು ಎಪಿಎಂಸಿ ಪ್ರಾಂಗಣಗಳ ಹೊರಗೆ ನಡೆಯುವ ಕೃಷಿ ಉತ್ಪನ್ನಗಳ ಮಾರಾಟದ ಮೇಲೆ ಸೆಸ್ ವಿಧಿಸುವುದನ್ನು ರದ್ದುಗೊಳಿಸುವ ತಿದ್ದುಪಡಿಯನ್ನು ಈ ಕಾಯ್ದೆಯಲ್ಲಿ ಸೇರಿಸಲಾಗಿದೆ.

ಎಪಿಎಂಸಿ ಕಾಯ್ದೆ ತಿದ್ದುಪಡಿಗೊಳಪಡಿಸುವುದರಿಂದ ರೈತರು ಕೃಷಿ ಉತ್ಪನ್ನಗಳ ಮಾರಾಟಕ್ಕೆ ತೊಂದರೆಯನ್ನು ಅನುಭವಿಸಲಿದ್ದಾರೆ. ಮಾರುಕಟ್ಟೆಗೆ ಖಾಸಗಿ ಕಂಪೆನಿಗಳು ಲಗ್ಗೆಯಿಡುವುದರಿಂದ ರೈತರಿಗೆ ಅಪಾರ ನಷ್ಟವಾಗಲಿದೆ ಎಂದು ಆರೋಪಿಸಲಾಗಿತ್ತಲ್ಲದೇ, ಕೇಂದ್ರ ಸರಕಾರ ರೂಪಿಸಿದ ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ರೈತಾಪಿಗಳ ಹೋರಾಟವು ದೇಶದಾದ್ಯಂತ ತೀವ್ರಗೊಂಡಿದೆ.