ಹಾಜಿರಾರ ಜಾಗದಲ್ಲಿ ನಾವಿರುತ್ತಿದ್ದರೆ..

0
1038

ಸಂಪಾದಕೀಯ

ಒಂದು ತುದಿಯಲ್ಲಿ ಹಾಜಿರಾ. ಇನ್ನೊಂದು ತುದಿಯಲ್ಲಿ ಉಳಿದ ಜಗತ್ತು. ಇದು ಹಜ್ಜ್. ಒಂದು ವೇಳೆ, ಮಕ್ಕಾದ ಮರುಭೂಮಿಯಲ್ಲಿ ತಂಗಲು ಹಾಜಿರಾ ಒಪ್ಪಿಕೊಳ್ಳದೇ ಇರುತ್ತಿದ್ದರೆ ಏನಾಗುತ್ತಿತ್ತು? ಮುಸ್ಲಿಮ್ ಜಗತ್ತು ಮತ್ತೆ ಮತ್ತೆ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು. ಮಕ್ಕಾಕ್ಕೆ ಹಾಜಿರಾ ಬರುವಾಗ ಅವರ ಜೊತೆಗಿದ್ದುದು ಪತಿ ಇಬ್ರಾಹೀಮ್(ಅ) ಮತ್ತು ಹಾಲುಗಲ್ಲದ ಶಿಶು ಇಸ್ಮಾಈಲ್(ಅ). ಮಕ್ಕಾ ಎಂಬುದು ನಿರ್ಜನ ಮರುಭೂಮಿ. ಜಲವೂ ಇಲ್ಲ. ಆಹಾರ ವಸ್ತುಗಳ ಲಭ್ಯತೆಯ ಕುರುಹೂ ಇಲ್ಲ. ಇಂಥದ್ದೊಂದು ಸ್ಥಿತಿಯಲ್ಲಿ ಓರ್ವ ಹೆಣ್ಣುಮಗಳು ಗಂಡಿನ ಉಪಸ್ಥಿತಿಯನ್ನು ಬಯಸುವುದು ಸಹಜ. ಆದರೆ ಇಬ್ರಾಹೀಮ್(ಅ) ಹೊರಟು ನಿಲ್ಲುತ್ತಾರೆ. ಅದೊಂದು ಸವಾಲಿನ ಸನ್ನಿವೇಶ. ಧೈರ್ಯಶಾಲಿ ಪುರುಷನೇ ಎದೆಗುಂದುವಂಥ ವಾತಾವರಣ. ಹೀಗಿರುವಾಗ ಹಾಜಿರಾ ತನ್ನ ಪತಿ ಇಬ್ರಾಹೀಮ್‍ರ ಜೊತೆ ಹೊರಟು ನಿ ಲ್ಲುತ್ತಿದ್ದರೆ ಅದು ಅಪರಾಧವೋ ವಿಶ್ವಾಸದ ಕೊರತೆಯೋ ಆಗುತ್ತಿರಲಿಲ್ಲ. ಮಾನವ ಸಹಜ ಪ್ರತಿಕ್ರಿಯೆ ಅದು. ಆದರೆ ಹಾಜಿರಾ ವ್ಯತಿರಿಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಆದ್ದರಿಂದಲೇ, ಆ ವರೆಗೆ ಪ್ರವಾದಿ ಇಬ್ರಾಹೀಮ್‍ರ ಪತ್ನಿ ಮತ್ತು ಶಿಶು ಇಸ್ಮಾಈಲ್‍ರ ತಾಯಿಯಷ್ಟೇ ಆಗಿದ್ದ ಹಾಜಿರಾ, ತನ್ನ ಆ ಧೈರ್ಯದ ನಿರ್ಧಾರದಿಂದಾಗಿ ಜಗತ್ತಿನ ಸರ್ವ ಸ್ತ್ರೀ-ಪುರುಷರ ಸ್ಮರಣಾರ್ಹ ವ್ಯಕ್ತಿತ್ವವಾಗುತ್ತಾರೆ.

ಈ ಜಗತ್ತಿಗೆ ಒಂದು ಲಕ್ಷಕ್ಕಿಂತ ಅಧಿಕ ಪ್ರವಾದಿಗಳು ಆಗಮಿಸಿರುವುದಾಗಿ ಇತಿಹಾಸ ಹೇಳುತ್ತದೆ. ಬಹುತೇಕ ಅವರೆಲ್ಲರೂ ಸಂಸಾರಸ್ಥರೇ. ಆದರೆ ಯಾವ ಪ್ರವಾದಿಯ ಪತ್ನಿಯೂ ಹಾಜಿರಾ ಆಗಲಿಲ್ಲ. ಪ್ರವಾದಿ ಮುಹಮ್ಮದ್‍ರ(ಸ) ಸಂಗಾತಿಗಳಾದ ಖದೀಜಾ ಮತ್ತು ಆಯಿಶಾರಿಗೆ ಸಂಬಂಧಿಸಿಯೂ ಇದೇ ಮಾತನ್ನು ಹೇಳಬಹುದು. ಹಾಜಿರಾ ಇವರೆಲ್ಲರಿಗಿಂತ ಭಿನ್ನ.

ಸುಲಭ ಮತ್ತು ಕಷ್ಟ- ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭ ಎದುರಾದಾಗ ಸಾಮಾನ್ಯವಾಗಿ ಸುಲಭವನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ. ಇದು ಮಾನವ ಸಹಜ ಪ್ರಕೃತಿ. ನೀವು ಹಾಜಿರಾ ಆಗಬೇಕಾದರೆ ಈ ಸಹಜ ಪ್ರಕೃತಿಯಿಂದ ಹೊರಬರಬೇಕು. ಯಾವುದು ಸವಾಲಿನದ್ದೋ ಅದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಜಗತ್ತಿನ ಯಾವುದೇ ಧರ್ಮದ ಇತಿಹಾಸದಲ್ಲಿ ಮಹಿಳೆಯೋರ್ವರು ತುತ್ತತುದಿಯಲ್ಲಿ ನಿಲ್ಲುವುದು ಮತ್ತು ಆಕೆಯ ಚಟುವಟಿಕೆಯನ್ನು ಆರಾಧನೆಯಾಗಿ ಸ್ತ್ರೀಯರು ಮತ್ತು ಪುರುಷರು ಅನುಸರಿಸುವುದನ್ನು ಬ ಹುಶಃ ಇಸ್ಲಾಮಿನಲ್ಲಿ ಮಾತ್ರ ವೀಕ್ಷಿಸಲು ಸಾಧ್ಯ. ಮಹಿಳೆ ಸವಾಲನ್ನು ಮೆಟ್ಟಿ ನಿಲ್ಲಬಲ್ಲ ಗಟ್ಟಿಗಿತ್ತಿ. ಆಕೆ ಛಲವಂತೆ. ಧೈರ್ಯವಂತೆ. ದೇವನ ಮೇಲೆ ಆಕೆ ಎಂತಹ ವಿಶ್ವಾಸ ತಾಳಬಲ್ಲಳೆಂದರೆ, ನಿರ್ಜನ, ನಿರ್ಜಲ, ನಿರ್ವಾತ, ನಿರಾಹಾರದಂಥ ವಾತಾವರಣವಿದ್ದಾಗ್ಯೂ ಆಕೆ ಎದೆಗುಂದಲಾರಳು… ಹಾಜಿರಾ ಎತ್ತಿ ಹಿಡಿದ ಸಂದೇಶ ಇದು. ಇಸ್ಲಾಮಿನಲ್ಲಿ ಮಹಿಳೆ ಏನು ಎಂದು ಯಾರಾದರೂ ಪ್ರಶ್ನಿಸಿದರೆ, ಉತ್ತರವಾಗಿ ಹಾಜಿರಾ ಒಬ್ಬರೇ ಸಾಕು. ಕೇವಲ ಒಬ್ಬರೇ.

ಕನ್ನಡಿಯಿಲ್ಲದ ಕಾಲದಿಂದ ಹಿಡಿದು ಸೆಲ್ಫಿಯ ಈ ಕಾಲದವರೆಗೆ ಹಾಜಿರಾ ಅಂದು ತಂಗಿದ ಮಕ್ಕಾಕ್ಕೆ ಅಸಂಖ್ಯಾತ ಮಂದಿ ಹೋಗಿದ್ದಾರೆ. ಹೋಗುತ್ತಿದ್ದಾರೆ. ಮುಂದೆಯೂ ಹೋಗಲಿದ್ದಾರೆ. ಇದೊಂದು ನಿರಂತರ ಕ್ರಿಯೆ. ಸದ್ಯದ ಅಗತ್ಯ ಏನೆಂದರೆ, ಈ ಕ್ರಿಯೆಯನ್ನು ¸ ಸಂಪ್ರದಾಯದ ಚೌಕಟ್ಟಿನಿಂದ ಹೊರತಂದು ಪರಿಶೀಲಿಸುವುದು. ಹಾಜಿರಾ ಎದುರಿಸಿದಂತಹ ಪರಿಸ್ಥಿತಿ ತನ್ನೆದುರು ಬರುತ್ತಿದ್ದರೆ ತಾನೇನು ಮಾಡುತ್ತಿದ್ದೆ ಎಂದು ಪ್ರತಿಯೊಬ್ಬರೂ ಸ್ವತಃ ಪ್ರಶ್ನಿಸಿಕೊಳ್ಳುವುದು. ಉತ್ತರ ಅಷ್ಟು ಸರಳ ಅಲ್ಲ ಅನ್ನುವುದು ಎಲ್ಲರಿಗೂ ಗೊತ್ತು. ಆದ್ದರಿಂದಲೇ, ಮಕ್ಕಾದಲ್ಲಿ ತಂಗಲು ಹಾಜಿರಾ ಒಪ್ಪಿಕೊಳ್ಳದಿರುತ್ತಿದ್ದರೆ ಏನಾಗುತ್ತಿತ್ತು ಅನ್ನುವ ಪ್ರಶ್ನೆ ಮುಖ್ಯವಾಗುವುದು.
ಈ ಪ್ರಶ್ನೆಯನ್ನು ಹಾಜಿಗಳು ಮತ್ತು ಹಾಜಿಗಳಲ್ಲದ ಎಲ್ಲರೂ ತಮ್ಮ ತಮ್ಮೊಳಗೆ ಕೇಳಿಕೊಳ್ಳಬೇಕು. ಅದಕ್ಕೆ ಸಿಗುವ ಉತ್ತರವೇ ನಾವು. ಇವತ್ತಿನ ಸೆಲ್ಫಿ ಜಗತ್ತಿಗೆ ಹೋಲಿಸಿದರೆ ಸಂಪರ್ಕ ಕ್ಷೇತ್ರ ಶೂನ್ಯವಾಗಿದ್ದ ಕಾಲದ ಹಾಜಿರಾ, ನಮ್ಮೊಳಗೆ ಬರೇ ಒಂದು ಬೆರಗು ಆಗಿ ಮಾತ್ರ ಉಳಿಯಬೇಕಾದವರಲ್ಲ. ಅವರೊಂದು ವಾಸ್ತವ. ಆ ವಾಸ್ತವಕ್ಕೆ ಮುಖಾಮುಖಿಯಾಗುವ ಸಂದರ್ಭವೇ ಹಜ್ಜ್. ವಿಷಾದ ಏನೆಂದರೆ,

ಅವರು ನಮ್ಮ ನಡುವೆ ಬರೇ ಬೆರಗಾಗಿಯಷ್ಟೇ ಉಳಿದುಕೊಂಡಿದ್ದಾರೆ. ಈ ಸ್ಥಿತಿ ಬದಲಾಗಬೇಕು.