ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಬಹಳಷ್ಟು ಭಾರತೀಯ ಮುಸ್ಲಿಮ್ ಧಾರ್ಮಿಕ ವಿದ್ವಾಂಸರು, ರಾಜಕೀಯ ನೇತಾರರು, ರಾಜರು, ಮಹಿಳಾ ಹೋರಾಟಗಾರ್ತಿಯರು ಭಾಗಿಯಾಗಿದ್ದಾರೆ. ಆದರೆ ಅವರಲ್ಲಿ ಬಹು ಮಂದಿಯ ಹೆಸರುಗಳು ನಮಗೆ ಶಾಲಾ ಕಾಲೇಜಿನ ಇತಿಹಾಸದಲ್ಲಿ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಅವರ ಹೆಸರು ಮರೆಯಾಗಿರುವುದಕ್ಕೆ ಚರಿತ್ರೆ ಬರೆದ ಇತಿಹಾಸಕಾರರು ಕಾರಣವೋ ಅಥವಾ ಅವರು ಗುರುತಿಸಲ್ಪಡದಿರು ವುದು ಕಾರಣವೋ ಗೊತ್ತಿಲ್ಲ. ಆದರೆ ಗುರುತಿಸಲ್ಪಡದ ನಾಯಕರು ಮತ್ತು ಮಹಿಳಾ ರತ್ನಗಳು ಆಸಿಫ್ ಅಲಿ ಇಂಜಿನಿಯರ್ ಮುಂತಾದವರ ಮೂಲಕ ಭಾರತದ ಪ್ರಜೆಗಳಿಗೆ ತಿಳಿಯುವಂತಾಗಿದೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗ ವಹಿಸಿದ ಹೋರಾಟ ಗಾರ, ಹೋರಾಟಗಾರ್ತಿಯರ ಚರಿತ್ರೆಯನ್ನೊಮ್ಮೆ ತಿಳಿಯೋಣ.
ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್
ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಆಳ್ವಿಕೆ ಇಂಗ್ಲಿಷರ ವಿರುದ್ಧ ಯುದ್ಧಗಳ ಮೂಲಕವೇ ಆರಂಭಗೊಂಡಿತು ಮತ್ತು ಅವರ ವಿರುದ್ಧ ಯುದ್ಧಗಳನ್ನು ನಡೆಸುತ್ತಲೇ ಕೊನೆಗೊಂಡಿತು. ಹೈದರ್ ಅಲಿ ಇಂಗ್ಲಿಷರ ವಿರುದ್ಧ ಮರಾಠ ಸಾಮಂತರು, ಹೈದರಾಬಾದಿನ ನಿಜಾಮ ಮತ್ತಿತರ ರಾಜರೊಂದಿಗೆ ಒಕ್ಕೂಟವನ್ನು ರಚಿಸಿದ್ದರು. ಹೈದರ್ ಅಲಿಯ ಶೂರತನದ ಬಗ್ಗೆ ಅಲೆಗ್ಸಾಂಡರ್ ಕೂಡ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ನಾಲ್ಕು ಮೈಸೂರು ಯುದ್ಧಗಳು ನಡೆದಿವೆ. ಎರಡನೇ ಮೈಸೂರು ಯುದ್ಧದ ನಂತರ ಹೈದರ್ ಅಲಿಯ ಮಗನಾದ ಟಿಪ್ಪು ಸುಲ್ತಾನರಿಗೆ ಒಂದು ರಾಜಕೀಯ ಪ್ರಣಾಳಿಕೆ ನೀಡುತ್ತಾರೆ. `ಮಗನೇ, ಈ ಸಾಮ್ರಾಜ್ಯವನ್ನು ನಿನಗೊಪ್ಪಿಸುತ್ತಿದ್ದೇನೆ, ನಾನು ಇದನ್ನು ನನ್ನ ಪೂರ್ವಜರಿಂದ ಪಡೆದದ್ದಲ್ಲ. ಯಾದವೀ ಕಲಹದಿಂದ ಪಡೆದುಕೊಂಡ ಸಾಮ್ರಾ ಜ್ಯದ ಅಡಿಪಾಯ ಯಾವಾಗಲೂ ದುರ್ಬಲ ವಾಗಿರುತ್ತದೆ. ಈ ನಮ್ಮ ಪ್ರೀತಿಯ ಭೂಮಿ ಹಲವು ಪ್ರಾಂತ್ಯಗಳಲ್ಲಿ ವಿಭಜನೆ ಹೊಂದಿವೆ. ವಿವಿಧ ಪ್ರಾಂತ್ಯಗಳು ಸದಾ ಪರಸ್ಪರ ಕಚ್ಚಾಡುತ್ತಿರುತ್ತವೆ. ನಮ್ಮ ನೆಲದ ಮೊದಲ ಶತ್ರುಗಳು ಐರೋಪ್ಯರು. ನೀನು ಇವರೊಂದಿಗಿನ ಹೋರಾಟದಲ್ಲಿ ವಿದೇಶಿ ಶಕ್ತಿಗಳ ಸಹಾಯವನ್ನು ಪಡೆಯಬೇಕು. ಐರೋಪ್ಯರು ಬಹಳ ಕುತರ್ಕಿಗಳು, ಅವರ ತಂತ್ರವನ್ನು ಅವರ ಮೇಲೆಯೇ ಪ್ರಯೋಗಿಸು.
ಸ್ವಾತಂತ್ರ್ಯ ಸೇನಾನಿ: ಸಯ್ಯದ್ ಅಹ್ಮದ್ ಶಹೀದ್
ಸಯ್ಯದ್ ಅಹ್ಮದ್ ಅನೇಕ ರಾಜರಿಗೆ, ಮುಖಂಡರಿಗೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಬೆಂಬಲ ಕೋರುತ್ತಾ ಪತ್ರಗಳನ್ನು ಬರೆದರು. ರಾಜಾ ಹಿಂದೂರಾವ್ಗೆ ಪತ್ರ ಬರೆಯುತ್ತಾರೆ. ಗ್ವಾಲಿಯರ್ನ ಅಧಿಕಾರಿ ಗುಲಾಮ್ ಹೈದರ್ ಖಾನ್ರಿಗೆ ಈ ರೀತಿ ಪತ್ರ ಬರೆಯು ತ್ತಾರೆ, “ಭಾರತೀಯ ರಾಜರ ಆಳ್ವಿಕೆ ಕೊನೆಗೊಂಡಿದೆ. ಬ್ರಿಟಿಷರನ್ನು ಎದುರಿಸುವ ಎದೆಗಾರಿಕೆಯನ್ನು ಯಾರೂ ತೋರಿಸುತ್ತಿಲ್ಲ. ಪೇಶಾವರದ ಯಾರ್ ಮುಹಮ್ಮದ್ ಖಾನ್ರಿಗೆ ಬರೆದ ಪತ್ರದಲ್ಲಿ “ನನಗೆ ಅಧಿಕಾರವನ್ನು ಪಡೆಯುವ ಆಸೆಯಾಗಲಿ, ಸ್ಥಾನಮಾನಗಳ ಆಸೆಯಾಗಲಿ ಇಲ್ಲ, ಹಣಗ ಳಿಸುವ ಆಸೆ ನನಗೆ ಎಂದೂ ಬಂದಿಲ್ಲ.” ಸಯ್ಯದ್ ಅಹ್ಮದ್ ಶಹೀದ್ ಸರಹದ್ದು ಪ್ರದೇಶದ ರಾಜಕುಮಾರಿಗೆ, ಜಾಗೀರುದಾರರಿಗೆ, ಹೈದರಾ ಬಾದಿನ ನಿಜಾಮನಿಗೆ, ಹೀರಟನ ರಾಜ ಕುಮಾರ ಕಾಮ್ರಾನ್, ಬುಖಾರಾದ ಅಮಿರ್ ನಸ್ರುಲ್ಲಾ ಹೂಜ, ಗಡಿನಾಡಿನ ಬುಡಕಟ್ಟು ಜನಾಂಗಗಳಿಗೂ ಪತ್ರ ಬರೆದಿದ್ದಾರೆ…
ಅಮೀರ್ ಅಲಿ ಖಾನ್ ಸಹ ಬ್ರಿಟಿಷರನ್ನು ಹೊಡೆದೋಡಿಸಲು ಪಣತೊಟ್ಟಿದ್ದರು. ಸಯ್ಯದ್ ಅಹ್ಮದ್ ಏಳು ವರ್ಷಗಳ ವರೆಗೆ ಅಮೀರ್ ಅಲಿ ಖಾನ್ರ ಸೇನೆಯಲ್ಲಿದ್ದರು. ಸಯ್ಯದ್ ಅಹ್ಮದ್ ಸೇನೆಗೆ ತರಬೇತಿ ನೀಡಿದರು. 1831ರಲ್ಲಿ ಸಯ್ಯದ್ ಅಹ್ಮದ್ ಮತ್ತು ಶಾಹ್ ಇಸ್ಮಾಈಲರ ವೀರ ಮರಣದ ನಂತರ ಇಸ್ಲಾಮೀ ಪುನರುತ್ಥಾನ ಚಳುವಳಿಗೆ ಹಿನ್ನಡೆ ಉಂಟಾಯಿತು. ಅನೇಕ ಇಸ್ಲಾಮೀ ಸ್ವಾತಂತ್ರ್ಯ ಹೋರಾಟಗಾರರ ಮೇಲೆ
ಕೇಸು ಹಾಕಲಾಗಿತ್ತು. 1864 ಮತ್ತು 1865ರಲ್ಲಿ ಪಾಟ್ನಾದಲ್ಲಿ ಅವರ ವಿಚಾರಣೆ ನಡೆಸಲಾಗಿತ್ತು. ಮೌಲವಿ ಯಹ್ಯಾ ಅಲಿ, ಮೌಲವಿ ಮುಹಮ್ಮದ್ ಜಾಫರ್, ಮೌಲವಿ ಅಬ್ದುಲ್ ರಹೀಮ್, ಮೌಲವಿ ಮುಹಮ್ಮದ್ ಶಫಿ, ಮೌಲವಿ ಅಬ್ದುಲ್ ಕರೀಮ್, ಮೌಲವಿ ಅಮೀರುದ್ದೀನ್, ಮೌಲವಿ ಅಬ್ದುಲ್ ಗಫ್ಫಾರ್, ಕಾಝಿ ಮಿಯಾಜಾನ್, ಮೌಲವಿ ಅಹ್ಮದುಲ್ಲಾ ಮತ್ತು ಇಲಾಹಿ ಬಕ್ಷ್ನ್ನು ಮರಣ ದಂಡನೆಗೆ ಅಥವಾ ಅಂಡಮಾನ್ಗೆ ಕಳುಹಿಸಲಾಗಿತ್ತು. ಅಂಡಮಾನ್ ಶಿಕ್ಷೆಗೆ ಪ್ರಥಮವಾಗಿ ಗುರಿಯಾದವರು ಮುಸ್ಲಿಮ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ.
ಆಲೀಗಢ ಆಂದೋಲನ:
ಆಲೀಗಢ ಆಂದೋಲನವು ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ತರ ಕೊಡುಗೆ ನೀಡಿದೆ.
ಭಾರತೀಯ ಮುಸ್ಲಿಮರು ದುರವಸ್ಥೆಯಲ್ಲಿದ್ದಾಗ ಸರ್ ಸಯ್ಯದ್ ಅಹ್ಮದ್ ಖಾನ್ ಮುಸ್ಲಿಮರಿಗೆ ಹೊಸ ರಾಜಕೀಯ ನೆಲೆ, ಹೊಸ ಶೈಕ್ಷಣಿಕ ಕಾರ್ಯಕ್ರಮ, ವೈಯಕ್ತಿಕ ಹಾಗೂ ರಾಷ್ಟ್ರೀಯ ಸಮಸ್ಯೆಗಳಿಗೆ ನೂತನ ಪರಿಹಾರ ಮಾರ್ಗ ನೀಡಿದ್ದರು. ಮುಸ್ಲಿಮರನ್ನು ಸಂಘಟಿಸಿ ಅವರಿಗೆ ನಾಯಕತ್ವ ಕೊಟ್ಟಿದ್ದರು. ಸಾಮಾಜಿಕ ಮತ್ತು ಶೈಕ್ಷಣಿಕ ಸುಧಾರಣೆಗಳಿಗೆ ಚಾಲನೆಯನ್ನು ನೀಡಿದ್ದರು. ಆಲೀಗಢ ಚಳುವಳಿಗೆ `ಭಾರತದಲ್ಲಿ ಮುಸ್ಲಿಮರ ಉತ್ಥಾನದ ಪ್ರಮುಖ ಅಂಶ’ ಎಂದು ಹೇಳಬಹುದು. ಆಲೀಗಢ್ ಕಾಲೇಜು ಮುಸ್ಲಿಮರಿಗೆ ಬೌದ್ಧಿಕ ನೆಲೆಗಟ್ಟನ್ನು ಒದಗಿಸಿತು. ಆಲೀಗಢ ಕಾಲೇಜಿನ `ಹಳೆಯ ವಿದ್ಯಾರ್ಥಿಗಳ ಸಂಘ’ ಶಕ್ತಿಯುತವಾಗಿ ಬೆಳೆದಿತ್ತು. ಆಲೀಗಢ್ ಕಾಲೇಜಿನಲ್ಲಿ ಐರೋಪ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಸಂಘ ಅವರಿಗೆ ಸವಾಲು ಹಾಕುತ್ತಿತ್ತು. ಈ ಗುಂಪಿನಲ್ಲಿ ಒಂದು ಗುಂಪು ಸಂವಿಧಾನವಾದಿಗಳಾಗಿ ದ್ದರು, ಮತ್ತೊಂದು ಗುಂಪು ಪ್ರಗತಿಪರವಾಗಿತ್ತು. ಝಿಯಾವುದ್ದೀನ್ ಅಹ್ಮದ್, ಅಫ್ತಾಬ್ ಅಹ್ಮದ್ ಮೊದಲ ಗುಂಪಿಗೆ ಸೇರಿದ್ದರೆ ಮುಹಮ್ಮದ್ ಅಲಿ, ಶೌಕತ್ ಅಲಿ, ಜಾಫರ್ ಅಲಿ, ಅಝೀಝ್ ಮಿರ್ಜಾ ಎರಡನೆಯ ಗುಂಪಿಗೆ ಸೇರಿದವರಾಗಿದ್ದರು. ರಾಷ್ಟ್ರಮಟ್ಟದ ಪ್ರಗತಿಪರ ವ್ಯಕ್ತಿಗಳಾದ ಅಮೀರ್ ಅಲಿ, ಆಘಾ ಖಾನ್, ಮೊಹ್ಸಿನುಲ್ ಮುಲ್ಕ್ ಮೊದಲಾದವರು ಸಂವಿಧಾನವಾದಿಗಳಿಗೆ ಬೆಂಬಲ ನೀಡಿದರೆ ಮೌಲಾನಾ ಶಿಬ್ಲಿ ನೋಮಾನಿ, ಜಾಫರಲಿ, ಮೂಸಾ ಖಾನ್ ಮೊದಲಾದವರು ಎರಡನೇ ಗುಂಪನ್ನು ಬೆಂಬಲಿಸಿದ್ದರು. 1910ರ ನಂತರ ಮುಹಮ್ಮದ್ ಅಲಿ ನೇತೃತ್ವದಲ್ಲಿ ಪ್ರಗತಿಪರ ಗುಂಪು ಪ್ರಬಲತೆಯನ್ನು ಪಡೆಯಿತು. `ಕಾಮ್ರೇಡ್’ `ಹಮ್ದರ್ದ್; `ಜಮೀನ್ದಾರ್’ ಪತ್ರಿಕೆಗಳು ತ್ಯಾಗ ಬಲಿದಾನಗಳನ್ನು ಮಾಡಲು ಜನರನ್ನು ಪ್ರೇರೇಪಿಸಿತು. ಆಲೀಗಢ್ ಕಾಲೇಜಿನ ರಾಜಕೀಯ ಹೋರಾಟದ ವಿಚಾರಗಳನ್ನು ತಿಳಿದುಕೊಂಡು ಬ್ರಿಟಿಷ್ ಲೆಫ್ಟಿನೆಂಟ್ ಗವರ್ನರ್ ಸರ್ ಜೇಮ್ಸ್ ವೈಸ್ರಾಯ್ ಲಾರ್ಡ್ ಹಾರ್ವೆಂಜ್ಗೆ ವಿದ್ಯಾರ್ಥಿಗಳು ತಪ್ಪು ದಾರಿ ಹಿಡಿಯುತ್ತಿದ್ದಾರೆ! ಕಾಲೇಜನ್ನು ಮುಚ್ಚಲು ಮತ್ತು ವಿದ್ಯಾರ್ಥಿಗಳಲ್ಲಿರುವ ರಾಷ್ಟ್ರೀಯ ಭಾವನೆಗಳನ್ನು ಹತ್ತಿಕ್ಕಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಿದ್ದರು. ಅನೇಕ ಮುಸ್ಲಿಮ್ ಕವಿಗಳು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಾಥ್ ನೀಡಿದ್ದಾರೆ. ಡಾ| ಅಲ್ಲಾಮಾ ಇಕ್ಬಾಲ್, ಶೌಜಿ ಗುಲಾಮ್ ಅಹ್ಮದ್, ಮಿರ್ಜಾ ಜಾಫರ್ ಅಲಿ ಮೊದಲಾದವರು ಉದಾಹರಣೆಯಾಗಿದ್ದಾರೆ. ಖ್ಯಾತಕವಿ ಡಾ| ಅಲ್ಲಾಮಾ ಇಕ್ಬಾಲ್ ರಚಿಸಿದ `ತರಾನ-ಎ-ಹಿಂದ್’ ಸಾರಾ ಜಹಾಂಸೆ ಅಚ್ಛಾ – ಗೀತೆ ಈಗಲೂ ದೇಶದ ಚರಿತ್ರೆಯನ್ನು ಹೇಳುತ್ತಿದೆ.
ಸ್ವಾತಂತ್ರ್ಯ ಸೇನಾನಿ ಮುಸ್ಲಿಮ್ ಹೋರಾಟಗಾರ್ತಿಯರು ಉದಾ: 1) ಬೇಗಮ್ ಹಜರತ್ ಮಹಲ್. 2) ಬೀ ಅಮ್ಮ ಆಬಾದಿ ಬೇಗಮ್. 3) ನಿಶಾತುನ್ನಿಸಾ ಬೇಗಮ್. ಮೊದಲಾದವರು ತ್ಯಾಗಬಲಿದಾನ ನೀಡಿದ್ದಾರೆ.