ಪೌರತ್ವ ತಿದ್ದುಪಡಿ ಮಸೂದೆ: ಜಪಾನ್ ಪ್ರಧಾನಿ ಭಾರತ ಸಂದರ್ಶನ ರದ್ದಾಗುವ ಸಾಧ್ಯತೆ

0
555

ಸನ್ಮಾರ್ಗ ವಾರ್ತೆ

ಟೋಕಿಯೊ, ಡಿ. 13: ಪೌರತ್ವ ತಿದ್ದು ಪಡಿ ಮಸೂದೆಯ ವಿರುದ್ಧ ಪ್ರತಿಭಟನೆ ಬಲಗೊಂಡ ಪರಿಸ್ಥಿತಿಯಲ್ಲಿ ಜಪಾನ್ ಪ್ರಧಾನಿ ಶಿಂಟೊ ಅಬೆ ಭಾರತ ಸಂದರ್ಶನ ರದ್ದುಪಡಿಸಲಿದ್ದಾರೆ ಎಂದು ವರದಿಯಾಗಿದೆ. ಭಾರತ ಸಂದರ್ಶನಕ್ಕೆ ಬರಲಿದ್ದ ಅಬೆ ಪ್ರಧಾನಿ ನರೇಂದ್ರ ಮೋದಿಯವರೊಡನೆ ಸಮಾಲೋಚಿಸುವುದಾಗಿ ತಿಳಿಸಿದ್ದರು. ನರೇಂದ್ರ ಮೋದಿ -ಶಿಂಟೊ ಅಬೆ ಭೇಟಿ ಗುವಾಹಟಿಯಲ್ಲಿ ನಡೆಯಲಿತ್ತು. ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಹಿಂಸಾಚಾರ ಮುಂದುವರಿದಿರುವ ಹಿನ್ನೆಲೆಯಲ್ಲಿ ಭಾರತ-ಜಪಾನ್ ಶೃಂಗದ ವೇದಿಕೆ ಬದಲಾಯಿಸಲಾಗುವುದು ಎಂದು ವರದಿಯಾಗಿತ್ತು. ಈ ನಡುವೆ ಉದ್ವಿಗ್ನ ಪರಿಸ್ಥಿತಿಯನ್ನು ಪರಿಗಣಿಸಿ ಶಿಂಟೊ ಅಬೆ ಭಾರತ ಸಂದರ್ಶನವನ್ನು ರದ್ದುಪಡಿಸಲಿದ್ದಾರೆ ಎಂದು ಜಪಾನ್‍ನ ಸುದ್ದಿ ಸಂಸ್ಥೆ ಜಿಜಿ ವರದಿ ಮಾಡಿದೆ.

ರಕ್ಷಣಾ ಕ್ಷೇತ್ರದಲ್ಲಿ ಎರಡು ರಾಷ್ಟ್ರಗಳ ಪರಸ್ಪರ ಸಹಕಾರದ ಕುರಿತು ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಚರ್ಚಿಸಲು ಶಿಂಟೊ ಅಬೆ ಭಾರತ ಸಂದರ್ಶನಕ್ಕೆ ನಿರ್ಧರಿಸಿದ್ದರು. ಜಪಾನ್ ಪ್ರಧಾನಿ ಸಂದರ್ಶನ ರದ್ದುಪಡಿಸಿದ ಕುರಿತು ಅಧಿಕೃತ ದೃಢೀಕರಣ ಸಿಕ್ಕಿಲ್ಲ ಎಂದು ವಿದೇಶ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ. ಭಾರತ ಸಂದರ್ಶನಕ್ಕೆ ಬರಲಿದ್ದ ಅಬೆ ಜಪಾನ್ ಮಿತ್ರ ಪಡೆಗಳು ಭಾಗವಹಿಸಿದ್ದ ಎರಡನೆ ಜಾಗತಿಕ ಯುದ್ಧ ಸಮಯದ ಯುದ್ಧಭೂಮಿಯಾದ ಮಣಿಪುರದ ಇಂಫಾಲದಲ್ಲಿ ತಂಗಲಿರುವರು ಎಂದು ತಿಳಿಸಲಾಗಿತ್ತು.