ಬೆಂಗಳೂರು,ಜು. 19: ವಿಶ್ವಾಸ ಮತ ಯಾಚನೆಗೆ ಮಧ್ಯಾಹ್ನ ಒಂದೂವರೆ ಗಂಟೆಗೆ ಅಂತಿಮ ಗಡು ನೀಡಿ ರಾಜ್ಯಪಾಲರು ನೀಡಿದ್ದ ನಿರ್ದೇಶವನ್ನು ತಿರಸ್ಕರಿಸಿರುವುದನ್ನು ಸೂಚಿಸಿ ರಾಜ್ಯಪಾಲರು ಕೇಂದ್ರ ಸರಕಾರಕ್ಕೆ ಮಧ್ಯಾಂತರ ವರದಿ ಕಳುಹಿಸಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇವೇಳೆ ಹದಿನೈದು ಶಾಸಕರ ವಿರುದ್ಧ ವಿಪ್ ಕುರಿತು ದಿನೇಶ್ ಗುಂಡೂರಾವ್ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜು.17ರಂದು ಮಧ್ಯಾಂತರ ತೀರ್ಪಿನಲ್ಲಿ ವಿಪ್ ಕುರಿತು ಸ್ಪಷ್ಟತೆ ಇಲ್ಲ ಎಂದು ಅದರ ಸ್ಪಷ್ಟೀಕರಣ ಬಯಸಿ ಗುಂಡೂರಾವ್ರಿಂದ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಇದೇವೇಳೆ ಸಂಜೆ ಆರು ಗಂಟೆಯೊಳಗೆ ವಿಶ್ವಾಸ ಮತ ಕೇಳಬೇಕೆಂದು ಮುಖ್ಯಮಂತ್ರಿಗೆ ರಾಜ್ಯಪಾಲರು ಮರು ಜ್ಞಾಪನ ಪತ್ರ ಕಳುಹಿಸಿದ್ದಾರೆ. ರಾಜ್ಯಪಾಲರ ಎರಡನೆ ಮರುಜ್ಞಾಪನಾ ಪತ್ರ ತೀವ್ರ ಕುತೂಹಲ ಕೆರಳಿಸಿದೆ. ಇದು ಕೂಡ ಕಡೆಗಣಿಸಲ್ಪಡುವ ಸಾಧ್ಯತೆಯೇ ಹೆಚ್ಚು. ಇದೇ ವೇಳೆ ಜೆಡಿಎಸ್ ಶಾಸಕ ವಿಶ್ವನಾಥ್ ಸದನದಲ್ಲಿ ಸಾರಾ ಮಹೇಶ್ ತನ್ನ ವಿರುದ್ಧ ಮಾಡಿದ ಆರೋಪದ ಕುರಿತು ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.