ಕೇರಳ: ನನ್ನ ಮಗನನ್ನು ಯಾಕೆ ಕೊಲೆ ಮಾಡಿರುವಿರಿ ಪೊಲೀಸರೇ? ಸಿ.ಪಿ. ಜಲೀಲ್‍ನ ತಾಯಿ ಹಲೀಮಾ ಪ್ರಶ್ನೆ, ನಾನು ಸಿಪಿಎಂ ಗೆ ಓಟು ಹಾಕಿದವಳು

0
564

ತನ್ನ ಮಗನನ್ನು ಪೊಲೀಸರು ಉದ್ದೇಶಪೂರ್ವಕ ಕೊಲೆ ಮಾಡಿದ್ದಾರೆ. ಇದಕ್ಕೆ ಕಾರಣವಾದವರು ಶಿಕ್ಷಿಸಲ್ಪಡಬೇಕೆಂದು ಕೇರಳದ ವೈತ್ತಿರಿಯಲ್ಲಿ ಪೊಲೀಸರಿಂದ ಹತ್ಯೆಯಾದ ಮಾವೋವಾದಿ ನಾಯಕ ಸಿ.ಪಿ. ಜಲೀಲ್‍ರ ತಾಯಿ ಹಲೀಮಾ ಹೇಳಿದರು. ಸೋಮವಾರ ವಿಪಣ ಎಂಬಲ್ಲಿ ಮಾಧ್ಯಮಂ ವಾರಪತ್ರಿಕೆ ನೀಡಿದ ಸಂದರ್ಶನದಲ್ಲಿ ಹಲೀಮಾ ತನ್ನ ನಿಲುವನ್ನು ವ್ಯಕ್ತಪಡಿಸಿದ್ದಾರೆ.

“ನನ್ನ ಮಗನನ್ನು ಅವರು ಕರೆದುಕೊಂಡು ಹೋಗಿ ಕೊಂದರು. ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿ ನಮ್ಮನ್ನು ಅವನು ಸಾಕುತ್ತಿದ್ದ. ನಾಲ್ಕು ವರ್ಷದ ಹಿಂದೆ ಇಲ್ಲಿಂದ ಹೋಗಿದ್ದ. ಅವರು ತಲೆಗೆ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಹೇಳುತ್ತಾರೆ. ಉದ್ದೇಶಪೂರ್ವಕವಾಗಿ ಕೊಂದಿರಬಹುದು. ಹಾಗೆ ಯಾಕೆ ಮಾಡಿದರೆಂದು ಗೊತ್ತಾಗಬೇಕು. ಅವನನ್ನು ನೋಡಿದ ನಾಲ್ಕು ವರ್ಷ ಮೂರು ತಿಂಗಳಾಯಿತು. ಪೊಲೀಸರು ಆಗಾಗ ಬರುತ್ತಿದ್ದರು. ಹಾಗೆ ಹೀಗೆಲ್ಲ ಕೇಳುತ್ತಿದ್ದರು. ಇವರ ತಂದೆ ಸಿಪಿಎಂನ ವ್ಯಕ್ತಿಯಾಗಿದ್ದರು. ನಾನು ಈವರೆಗೆ ಸಿಪಿಎಂಗೆ ಓಟು ಹಾಕಿದವರಳು. ಮಕ್ಕಳು ಸಿಪಿಎಂಗೆ ಓಟು ಹಾಕಬೇಡಿ ಎಂದರೂ ನಾನು ಸಿಪಿಎಂಗೆ ಓಟು ಹಾಕುತ್ತಿದ್ದೆ.

ಮಗನನ್ನು ಯಾಕೆ ಕೊಲ್ಲಲಾಗಿದೆ ಎಂದು ತಿಳಿಯಬೇಕಿದೆ. ಯಾವ ಅಪರಾಧವನ್ನು ಅವನು ಮಾಡಿದ್ದಾನೆ ಎಂದು ಗೊತ್ತಾಗಬೇಕು. ನನ್ನ ಮಕ್ಕಳು ಯಾರಿಗಾದರೂ ತೊಂದರೆ ಕೊಡುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಅವರು ನನ್ನೊಂದಿಗೂ ಏನೂ ಮಾಡಿಲ್ಲ. ಊರಲ್ಲಿಯೂ ಯಾರಿಗೂ ಉಪದ್ರ ಕೊಟ್ಟಿಲ್ಲ. ಹೀಗಿರುವಾಗ ಯಾಕೆ ಗುಂಡು ಹಾರಿಸಿ ಪೊಲೀಸರು ಕೊಂದಿದ್ದಾರೆ ಎನ್ನುವುದು ತಿಳಿಯಬೇಕಿದೆ ಎಂದು ಅವರು ಹೇಳಿದರು.