ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಮದ್ರಸಾ ಪದವೀಧರ ಶಾಹಿದ್ ರಝಾ ಖಾನ್: ಅವರ ಮನದ ಮಾತು

0
694

ತಝೀಮ್ ಹೈದರ್ ಮತ್ತು ಮುಮ್ತಾಜ್ ಅಲಮ್
ಇಂಡಿಯಾ ಟುಮಾರೊ
ಕನ್ನಡಕ್ಕೆ: ಆಯಿಷತುಲ್ ಅಫೀಫಾ


2018 ರ ನಾಗರಿಕ ಸೇವಾ ಪರೀಕ್ಷೆಯ ಸಿವಿಲ್ ವಿಭಾಗದ ಯಶಸ್ವಿ ಅಭ್ಯರ್ಥಿಗಳಲ್ಲಿ ಶಾಹಿದ್ ರಝಾ ಖಾನ್ ಒಬ್ಬರು. ಖಾನ್ ಸರ್ವಶಕ್ತನಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಅವರ ಯಶಸ್ಸಿನ ಹಿಂದಿನ ಅವರ ಕುಟುಂಬದ ಪಾತ್ರವನ್ನು ಶ್ಲಾಘಿಸಿದರು.

ಇಂಡಿಯಾ ಟುಮಾರೊ ಜೊತೆಗಿನ ವಿಶೇಷ ಸಂದರ್ಶನವು ಬಿಹಾರದ ಗಯಾ ಜಿಲ್ಲೆಯ ಖಾನ್ ಅವರ ಶೈಕ್ಷಣಿಕ ವೃತ್ತಿಜೀವನದ ಎರಡು ವಿಭಿನ್ನ ಘಟ್ಟಗಳನ್ನು ವ್ಯಾಖ್ಯಾನಿಸುತ್ತವೆ.

ಗಯಾದಲ್ಲಿ ಶಾಲಾ ಶಿಕ್ಷಣವನ್ನು ಮತ್ತು ದೆಹಲಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪಡೆದಿರುವುದರ ಜೊತೆಗೆ ಶಾಹಿದ್ ರಝಾ ಖಾನ್ ಅವರು ಅಝಮ್ ಗಡದ ಮದ್ರಸಾದಲ್ಲಿ ಅಧ್ಯಯನ ಮಾಡಿದವರು ಮತ್ತು ತಮ್ಮ ಯಶಸ್ಸಿನ ಪಾಲನ್ನು ಮದ್ರಸಾಕ್ಕೆ ನೀಡಲು ಬಯಸುತ್ತಾರೆ. “ಮದ್ರಸಾ ವಿದ್ಯಾರ್ಥಿಯಾಗಿ, ಯುಪಿಎಸ್ಸಿ ತಯಾರಿಯಲ್ಲಿ ನಾನು ಹಲವಾರು ಪ್ರಯೋಜನಗಳನ್ನು ಪಡೆದುಕೊಂಡಿದ್ದೇನೆ. ಮದ್ರಸಾದಲ್ಲಿ ಅಧ್ಯಯನ ಮಾಡಿದ ಕಾರಣ ನನ್ನ ನೆನಪು ಬಹಳ ತೀಕ್ಷ್ಣವಾಗಿತ್ತು. ನಾನು ಖುರಾನ್ ನ ಕೆಲವು ಭಾಗಗಳನ್ನು ಕಲಿತಿದ್ದೇನೆ. ಇದು ನನ್ನ ಸ್ಮರಣ ಶಕ್ತಿಯನ್ನು ತೀಕ್ಷ್ಣಗೊಳಿಸಿತು. ಮದ್ರಸ ನನ್ನಲ್ಲಿ ಬೆಳೆಸಿದ ಆತ್ಮವಿಶ್ವಾಸದ ಮಟ್ಟವು ಯುಪಿಎಸ್ಸಿ ತಯಾರಿಯಲ್ಲಿ ನನ್ನ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಲು ಮತ್ತು ಹೆಚ್ಚಿಸಲು ನನಗೆ ಸಹಾಯ ಮಾಡಿದೆ” ಎಂದು ಅವರು ಹೇಳುತ್ತಾರೆ.

“ಮೂಲತಃ ನಾನು ಮೂಲಭೂತ ಶಿಕ್ಷಣ ಪಡೆದ ಸ್ಥಳ ಮದ್ರಸ. ಖಂಡಿತವಾಗಿ, ನಾನು ಬಿಹಾರದಿಂದ 10 ಮತ್ತು 12 ನೇ ತರಗತಿಯನ್ನು ಮುಗಿಸಿರುವೆ. ಆದರೆ ನಾಗರಿಕ ಸೇವೆಗಳಿಗೆ ಹೋಗಬೇಕೆಂಬ ಬಯಕೆ ನನ್ನಲ್ಲಿ ಉಂಟುಮಾಡಿರುವುದು ಮದ್ರಸ. ಆದರೆ ಅದರ ಬಗ್ಗೆ ಸ್ವಲ್ಪವೂ ಜ್ಞಾನವಿರಲಿಲ್ಲ. ನಾನು ಜೆಎನ್ ಯು ಗೆ ಪ್ರವೇಶ ಪಡೆದಾಗ ಅದರ ಬಗ್ಗೆ ನಾನು ಹೆಚ್ಚು ಅರಿತುಕೊಂಡೆ “ಎಂದು ಅವರು ಹೇಳುತ್ತಾರೆ. “ಯುಪಿಎಸ್ಸಿ ಯಲ್ಲಿ ನಾನು ಉರ್ದುವನ್ನು ಐಚ್ಛಿಕ ವಿಷಯವಾಗಿ ಆರಿಸಿದ್ದೇನೆ. ಏಕೆಂದರೆ ನಾನು ಈ ಭಾಷೆಯಲ್ಲಿ ಆಸಕ್ತಿ ಹೊಂದಿದ್ದೇನೆ ಮತ್ತು ಕವನವನ್ನೂ ಸಹ ಬರೆಯುತ್ತೇನೆ . ನಾನು ಉರ್ದು ಓದುವುದನ್ನು ಇಷ್ಟಪಡುತ್ತೇನೆ ಮತ್ತು ಸಾಹಿತ್ಯವು ನನ್ನ ಹಿನ್ನೆಲೆಯಾಗಿದೆ.

ಗಯಾದಿಂದ ದೆಹಲಿಯ ಅಝಮ್ ಗಡ್‌ಗೆ ಖಾನ್‌ರ ಯಾತ್ರೆ

“ನನ್ನ ತವರು ಗಯಾ (ಬಿಹಾರ್) ನಲ್ಲಿ ನನ್ನ ಶಾಲಾ ಶಿಕ್ಷಣ ಪಡೆದೆ. ಅಲ್ಲಿ ನಾನು 12 ರವರೆಗೆ ಅಧ್ಯಯನ ಮಾಡಿದ್ದೇನೆ. ನಂತರ ನಾನು ಉತ್ತರ ಪ್ರದೇಶದ ಅಝಮ್ ಗಡದ ಮದ್ರಸಾ ಜಾಮಿತುಲ್ ಅಶ್ರಫಿಯಾ ಮುಬಾರಕ್ ಪುರದಲ್ಲಿ ಅಧ್ಯಯನ ಮಾಡಿದ್ದೇನೆ. ನಂತರ ನಾನು ದೆಹಲಿಗೆ ತೆರಳಿದೆ ಮತ್ತು 2011 ರಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ (ಜೆಎನ್ಯು) ಬಿಎ ಗೆ ಪ್ರವೇಶ ಪಡೆದೆ ಎಂದು ಖಾನ್ ಹೇಳುತ್ತಾರೆ. ಪದವಿಯ ನಂತರ ಮತ್ತು ಸ್ನಾತಕೋತ್ತರ ಪದವಿ ಪಡೆಯುತ್ತಿರುವಾಗ, ಅವರು 2014 ರಿಂದ ಸಿವಿಲ್ ಸೇವೆಗಳಿಗೆ ತಯಾರಿ ಪ್ರಾರಂಭಿಸಿದರು ಮತ್ತು ಬಹಳ ವರ್ಷ ಪ್ರಯತ್ನಿಸಿದರು. ಆದರೆ ಯಶಸ್ಸನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಕೆಲವು ವರ್ಷ ತಯಾರಿ ನಿಲ್ಲಿಸಿದರು. ಅವರು 2018 ರಲ್ಲಿ ಇದನ್ನು ಪುನರಾರಂಭಿಸಿದರು ಮತ್ತು ಯಶಸ್ಸು ಗಳಿಸಿದರು.

“ನಾನು 2014-15ರಲ್ಲಿ ಪ್ರಯತ್ನ ಮಾಡಿದ್ದೇನೆ. ಆದರೆ ಪರ್ಸನಾಲಿಟಿ ಟೆಸ್ಟ್ (ಇಂಟರ್ವ್ಯೂ) ತೇರ್ಗಡೆಗೊಳಿಸಲು ಸಾಧ್ಯವಾಗಲಿಲ್ಲ. ನನ್ನ ಇತರ ಶೈಕ್ಷಣಿಕ ಕೋರ್ಸ್ಗಳನ್ನು ಪೂರ್ಣಗೊಳಿಸಲು ಮತ್ತು ನಾನು ಮಾಡಿದ JRF ಮತ್ತು MPhil ಪರೀಕ್ಷೆಯನ್ನು ತೇರ್ಗಡೆಗೊಳಿಸಲು ಸ್ವಲ್ಪ ಸಮಯದವರೆಗೆ ನಾಗರಿಕ ಸೇವೆಗಳ ತಯಾರಿಕೆಯನ್ನು ನಿಲ್ಲಿಸಿದೆ. ನಾನು 2018 ರಲ್ಲಿ ನಾಗರಿಕ ಸೇವೆಗಳ ಅಧ್ಯಯನವನ್ನು ಪುನರಾರಂಭಿಸಿ 751 ಸ್ಥಾನದೊಂದಿಗೆ ಯಶಸ್ಸು ಗಳಿಸಿದೆ. ಇದಕ್ಕಾಗಿ ನಾನು ಅಲ್ಲಾಹನಿಗೆ ಸರ್ವಸ್ತುತಿಗಳನ್ನು ಅರ್ಪಿಸುತ್ತೇನೆ “ಎಂದು ಶಾಹಿದ್ ಖಾನ್ ಹೇಳುತ್ತಾರೆ.

ಮದ್ರಸಾದ ಮಿತಿಗಳು

ಅವರಲ್ಲಿ ವಿಶ್ವಾಸವನ್ನು ಹುಟ್ಟುಹಾಕಿದ್ದಕ್ಕಾಗಿ ಮದ್ರಸವನ್ನು ಶ್ಲಾಘಿಸುತ್ತಾ, ಮದ್ರಸಾದ ಅಧ್ಯಯನ ಹಲವಾರು ಮಿತಿಗಳನ್ನೊಳಗೊಂಡಿದೆಯೆಂದು ಒಪ್ಪಿಕೊಳ್ಳುತ್ತಾರೆ. “ಅದೇ ಸಮಯದಲ್ಲಿ ಇತರರಿಗೆ ಹೋಲಿಸಿದರೆ ನನ್ನಲ್ಲಿ ಹಲವಾರು ಮಿತಿಗಳಿದ್ದವು. ಭಾಷೆ ತೊಡಕಾಗಿತ್ತು. ನಾನು ಆಧುನಿಕ ವಿಷಯಗಳ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಯುಪಿಎಸ್ಸಿಗಾಗಿ, ನಾನು ತಳಮಟ್ಟದ ಅಧ್ಯಯನದಿಂದ ಪ್ರಾರಂಭಿಸಬೇಕು – ಶಾಲೆಯ ಮಟ್ಟದಿಂದ. ಹಾಗೆ ಅದನ್ನು ಯುಪಿಎಸ್ಸಿ ಯ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾಗಿತ್ತು . ಮದ್ರಸಾದ ಪಠ್ಯಕ್ರಮದ ಕಾರಣದಿಂದಾಗಿ ಈ ಮಿತಿ ತಲೆದೋರಿದ್ದವು” ಎಂದು ನಿವೃತ್ತ ಸರ್ಕಾರಿ ಎಲೆಕ್ಟ್ರಿಷಿಯನ್ ಮಗ ಖಾನ್ ಹೇಳುತ್ತಾರೆ.

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ

ಶಹೀದ್ ರಝಾ ಖಾನ್ ಅವರು ಸಿವಿಲ್ ಸೇವೆದಾರರಿಗೆ ಉಚಿತ ತರಬೇತಿಯನ್ನು ನೀಡುವ ಜಾಮೀಯಾ ಮಿಲ್ಲಿಯಾ ಇಸ್ಲಾಮಿಯಾ ಕೋಚಿಂಗ್ ಮತ್ತು ವೃತ್ತಿಜೀವನ ಯೋಜನೆಗಳ ಕೇಂದ್ರ ಕಚೇರಿಯಲ್ಲಿ ಇಂಡಿಯಾ ಟುಡೆಗೆ ಅವರು ಈ ಸಂದರ್ಶನ ನೀಡಿದರು. ಕೇಂದ್ರದಿಂದ ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ ಖಾನ್ ಒಬ್ಬರು. ಉತ್ತಮ ತರಬೇತಿ ಮತ್ತು ವಸತಿ ಸೌಕರ್ಯಗಳಿಗಾಗಿ ಅವರು ಜಾಮಿಯ ಕೇಂದ್ರವನ್ನು ಶ್ಲಾಘಿಸಿದರು.

ಕುಟುಂಬ

“ನಾನು ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದೇನೆ. ನನ್ನ ತಂದೆ ನಿವೃತ್ತ ಸರ್ಕಾರಿ ಸೇವಕ. ಅವರು ಬೋಕಾರೋದಲ್ಲಿ ಸೆಂಟ್ರಲ್ ಕೋಲ್ ಲಿಮಿಟೆಡ್ನಲ್ಲಿ (CCL) ಎಲೆಕ್ಟ್ರಿಷಿಯನ್ ಆಗಿದ್ದರು” ಎಂದು ಅವರು ಹೇಳಿದರು,. ತಮ್ಮ ಯಶಸ್ಸಿನ ಹಿಂದಿನ ಅವರ ಕುಟುಂಬದ ಪಾತ್ರವನ್ನು ಶ್ಲಾಘಿಸಿದರು. “ಈ ಯಶಸ್ಸಿನಲ್ಲಿ, ನನ್ನ ಪೋಷಕರು ಮತ್ತು ನನ್ನ ಹಿರಿಯ ಸಹೋದರನ ಪಾತ್ರ ಅತೀ ಹಿರಿದು. ನನ್ನದು ಒಂದು ಒಳ್ಳೆಯ ಕುಟುಂಬ, ಅವರು ಎಲ್ಲಾ ರೀತಿಯಲ್ಲಿ ನನ್ನನ್ನು ಬೆಂಬಲಿಸಿದರು – ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ. ನನಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಿದ ಅನೇಕ ಉತ್ತಮ ಸ್ನೇಹಿತರಿದ್ದಾರೆ.

ಖಾನ್‌ರ ಸಂದೇಶ- ಯಾವುದು ಅಸಾಧ್ಯವಲ್ಲ

“ನಾನು ನಾಗರಿಕ ಸೇವಾದಾರರಿಗೆ ನೀಡಲು ಬಯಸುವ ಸಂದೇಶವೇನೆಂದರೆ, ಅಭ್ಯರ್ಥಿ ನಾನು ಅದನ್ನು ಮಾಡುತ್ತೇನೆಂಬ ವಿಶ್ವಾಸ ಹೊಂದಬೇಕು. ಇದು ಕಠಿಣವಲ್ಲ. ಇದು ನಿಮ್ಮ ಆತ್ಮವಿಶ್ವಾಸವನ್ನು ಅವಲಂಬಿಸಿರುತ್ತದೆ. ನೀವು ಬಯಸಿದರೆ, ನೀವು ಬಯಸುವ ಯಾವುದೇ ಕೆಲಸವನ್ನು ಮಾಡಬಹುದು. ಅಧ್ಯಯನಕ್ಕೆ ಸ್ಥಿರತೆ ಮತ್ತು ಗಂಭೀರತೆ ಬೇಕು. ನಾವು ಸಿದ್ಧತೆ ಮಾಡಬೇಕು, ನಾವು ಮಾಡುವೆವು ಮತ್ತು ನಾವು ಯಶಸ್ವಿಯಾಗುವವರೆಗೆ ಮಾಡಬೇಕು ಅಥವಾ ನಮ್ಮ ಪ್ರಯತ್ನದ ಮಿತಿಗಳು ದಣಿಯುವವರೆಗೆ. ಒಬ್ಬರಿಗೆ ಒಂದು ಅಧ್ಯಯನಕ್ಕೆ ನಿರಂತರತೆ ಜೊತೆಗೆ ನಿರ್ಣಯ ಮತ್ತು ವಿಶ್ವಾಸದ ಅಗತ್ಯವಿದೆ, ಯಾವುದೂ ಅಸಾಧ್ಯವಲ್ಲ. ನಾವು ನಿಜವಾಗಿಯೂ ಅದನ್ನು ಬಯಸಿದರೆ ನಾವು ಏನನ್ನಾದರೂ ಸಾಧಿಸಬಹುದು” ಎಂದು ಖಾನ್ ಹೇಳುತ್ತಾರೆ.