ಸನ್ಮಾರ್ಗ ವಾರ್ತೆ
ಮಂಗಳೂರು: ಮಂಗಳೂರು ಗ್ರಾಮಾಂತರ ವಲಯದ ಆಟೋರಿಕ್ಷಾಗಳು ತುರ್ತು ಸಂದರ್ಭದಲ್ಲಿ ನಗರ ವಲಯಕ್ಕೆ ಪ್ರವೇಶಿಸಿದರೆ ದಂಡ ವಿಧಿಸಬಾರದು ಎಂದು ಆರ್ಟಿಒ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿರುವುದನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸ್ವಾಗತಿಸಿದೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ವಲಯಾಧ್ಯಕ್ಷರಾದ ಎಸ್ಎಮ್ ಮುತ್ತಲಿಬ್ ಮಾತನಾಡುತ್ತಾ, ಹೆರಿಗೆ ಮತ್ತು ಮಾರಣಾಂತಿಕವಾಗಿ ಗಾಯಗೊಂಡ ಅಥವಾ ಇನ್ನಿತರ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮಾಂತರ ಪ್ರದೇಶದ ಆಟೋ ರಿಕ್ಷಾಗಳು ನಗರ ಪ್ರದೇಶಗಳಿಗೆ ಪ್ರವೇಶಿಸಲು ಅನುಮತಿಸಿರುವುದು ಆಶಾದಾಯಕ ಬೆಳವಣಿಗೆ. ಇದು ಸಾರ್ವಜನಿಕರಿಗೂ ಆಟೋ ಚಾಲಕರಿಗೂ ನೆಮ್ಮದಿ ತಂದಿರುವ ನ್ಯಾಯಾಲಯದ ಈ ತೀರ್ಪು ಮಾನವೀಯತೆಯಿಂದ ಕೂಡಿದೆ ಎಂದರು.