ಅಮಿತ್ ಷಾ ತರ್ಕ ಮಕ್ಕಳಾಟಿಕೆಯದು, ಪೌರತ್ವ ಮಸೂದೆ ಸಂವಿಧಾನಕ್ಕೆ ಮಸಿ – ಚಿಂತಕ ಜಿ. ರಾಜ್ ಶೇಖರ್

0
1006

ಸನ್ಮಾರ್ಗ ವಾರ್ತೆ-

ಉಡುಪಿ: ಕೇಂದ್ರ ಸರಕಾರ ಮಂಡಿಸಿರುವ ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಎಸ್.ಐ.ಓ ಉಡುಪಿ, ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ, ವೆಲ್ಪೇರ್ ಪಾರ್ಟಿ ಉಡುಪಿ, ದಲಿತ ದಮನಿತ ಹೋರಾಟ ಸಮಿತಿ ಉಡುಪಿ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್.ಐ.ಓ ರಾಜ್ಯ ಕಾರ್ಯದರ್ಶಿ ಯಾಸೀನ್ ಕೋಡಿಬೆಂಗ್ರೆ, ಈ ಮಸೂದೆಯನ್ನು ಮಂಡಿಸಿ ಕೇಂದ್ರ ಸರಕಾರ ದೇಶದ ಸಂವಿಧಾನದ ಆತ್ಮದ ಮೇಲೆ ದಾಳಿ ಮಾಡಿದೆ. ಪೌರತ್ವ ತಿದ್ದುಪಡಿ ಮಸೂದೆಯು ಸಂವಿಧಾನದ ಮೂಲ ಆಶಯಗಳನ್ನು ನಿರಾಕರಿಸಿ ಜಾರಿಗೆ ತರುವ ಪ್ರಯತ್ನ ಸಾಗುತ್ತಿದೆ. ಇದು ಕೇವಲ ಮುಸ್ಲಿಮರ ವಿರುದ್ಧ ಅಲ್ಲ ಬದಲಾಗಿ ಈ ದೇಶದ ಪ್ರತಿಯೊಬ್ಬ ನಾಗರಿಕನ ವಿರುದ್ದ ಎಂದು ಅಭಿಪ್ರಾಯ ಪಟ್ಟರು. ಇಂತಹ ಸಂವಿಧಾನ ಬಾಹಿರ ಕಾನೂನನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಮಸೂದೆಯು ದೇಶದ ಜನತೆಯನ್ನು ಧರ್ಮಾಧಾರಿತವಾಗಿ ವಿಭಜಿಸುವ ಷಡ್ಯಂತ್ರದ ಭಾಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಂತಕ ಜಿ.ರಾಜ್ ಶೇಖರ್ ಮಾತನಾಡಿ, ಈ ಮಸೂದೆಯಲ್ಲಿ ಮುಸ್ಲಿಮ್ ಸಮುದಾಯವನ್ನು ಹೊರಗಿಟ್ಟು ಜಾರಿಗೆ ತರುವ ಪ್ರಯತ್ನ ಸಾಗಿದೆ. ಅಮಿತ್ ಶಾ ರವರ ಮಕ್ಕಳಾಟಿಕೆಯ ತರ್ಕದ ಪ್ರಕಾರ ಈ ದೇಶಗಳು ಮುಸ್ಲಿಮ್ ರಾಷ್ಟ್ರಗಳಾಗಿರುವುದರಿಂದ ಮುಸ್ಲಿಮರು ದೌರ್ಜನ್ಯಕ್ಕೆ ಒಳಗಾಗುವುದಿಲ್ಲವೆಂವ ವಾದ ಮಂಡಿಸುತ್ತಾರೆ. ಆದರೆ ವಾಸ್ತವದಲ್ಲಿ ಕಡು ಬಡತನದ ಕಾರಣ ಮುಸ್ಲಿಮರು ಭಾರತಕ್ಕೆ ಉದ್ಯೋಗ ಅರಸಿ ಬರುತ್ತಾರೆ. ಭಾರತ ಅವರಿಗೆಲ್ಲ ನೆಲೆ ನೀಡಬೇಕು. ಮಯನ್ಮಾರ್ ದೇಶದಲ್ಲಿ ರೋಹಿಂಗ್ಯಾ ಮುಸ್ಲಿಮರು ದೌರ್ಜನ್ಯ ಅನುಭವಿಸುತ್ತಿದ್ದಾರೆ. ಅವರ ಬಗ್ಗೆ ಇವರ ಅಭಿಪ್ರಾಯವೇನು ಎಂದು ಪ್ರಶ್ನಿಸಿದರು. ಶ್ರೀಲಂಕಾದ ತಮಿಳು ಹಿಂದುಗಳ ಬಗ್ಗೆ ಈ ಮಸೂದೆಯಲ್ಲಿ ಎಲ್ಲಿಯೂ ಪ್ರಸ್ತಾಪವಿಲ್ಲವೆಂದು ಹೇಳಿದ್ದಾರೆ. ಈ ಮಸೂದೆ ಭಾರತದ ಸಂವಿಧಾನಕ್ಕೆ, ಧರ್ಮನಿರಪೇಕ್ಷತೆಗೆ ಮಸಿ ಬಳಿಯುವ ಹುನ್ನಾರವಾಗಿದೆ. ಪೌರತ್ವ ತಿದ್ದುಪಡಿ ಮಸೂದೆಯ ಉದ್ದೇಶ ಮುಸ್ಲಿಮರು ಈ ದೇಶದ ಪ್ರಜೆಗಳಲ್ಲ, ಮನುಷ್ಯರು ಅಲ್ಲ ಎಂಬ ನಿಲುವುವಾಗಿದೆ. ಅಮಿತ್ ಶಾ ಮತ್ತು ಮೋದಿಯ ಕರಾಳ ಹಿನ್ನಲೆಯಲ್ಲಿ ಮಂಡಿಸಿರುವ ಈ ಮಸೂದೆಯನ್ನು ನಾವು ಒಗ್ಗಟ್ಟಾಗಿ ಬಹಿಷ್ಕರಿಸಬೇಕೆಂದು ಕರೆ ನೀಡಿದರು.

ಕರ್ನಾಟಕ ರಾಷ್ಟ್ರ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಅಮೃತ್ ಶೆಣೈ ಮಾತನಾಡಿ,ಈ ದೇಶ ಜಾತ್ಯತೀತ ತಳಹಾದಿಯಲ್ಲಿ ನೆಲೆ ನಿಂತ ದೇಶವಾಗಿದೆ. ಇಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆ. ನಿಮ್ಮ ಆರಾಧನೆಯನ್ನು ನಿಮ್ಮ ಮನೆಯಲ್ಲಿಟ್ಟುಕೊಳ್ಳಿ. ಈ ದೇಶದ ದೇವರು ನಮ್ಮ ರಾಷ್ಟ್ರ ಧ್ವಜ ಮತ್ತು ನಮ್ಮ ಗ್ರಂಥ ಸಂವಿಧಾನವಾಗಿದೆಯೆಂದರು.

ಇತ್ತೀಚ್ಚಿಗೆ ಕೋಮುವಾದಿಗಳ ಅಟ್ಟಹಾಸ ಮಿತಿ ಮೀರಿದೆ. ಕೆಲವು ಜನರ ಧ್ವನಿ ದೊಡ್ಡ ಮಟ್ಟದಲ್ಲಿ ರಾರಜಿಸುತ್ತಿದೆ. ಇಂದು ಕೇಂದ್ರ ಸರಕಾರ ದೇವರ, ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದೆ. ವಾಸ್ತವದಲ್ಲಿ ಉದ್ಯೋಗ, ಅಭಿವೃದ್ದಿಯ ಆಧಾರದಲ್ಲಿ ಬರಬೇಕಿತ್ತು. ಆದರೆ ಯುವಕರನ್ನು ಧ್ರುವೀಕರಣದ ಉನ್ಮಾದದಲ್ಲಿ ತೇಲಿಸಿ ವೋಟ್ ಬ್ಯಾಂಕ್ ನ್ನಾಗಿ ಬದಲಾಯಿಸಲಾಗಿದೆ. ಇಂದು ನಾನು ಸಂಪ್ರದಾಯಸ್ಥ ಕುಟುಂಬದಿಂದ ಬಂದಿದ್ದರೂ ನಾನು ಒಬ್ಬ ಭಾರತೀಯ. ಒಂದು ವೇಳೆ ನನಗೆ ಹಿಂದು ಧರ್ಮದಿಂದ ಬಂದ ಕಾರಣಕ್ಕೆ ಪೌರತ್ವ ಕೊಡುತಿದ್ದರೆ ಅದನ್ನು ಬಹಿಷ್ಕರಿಸುತ್ತೇನೆ. ನಾನು ಜಾತ್ಯತೀತ ವಾದದಲ್ಲಿ ನಂಬಿಕೆಯಿಟ್ಟವನು ಎಂದು ಹೇಳಿದರು.