ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.4: ದ್ವೇಷದಿಂದ ಕೊಲೆಗೊಳಗಾದ ತಮ್ಮ ಆತ್ಮೀಯರಿಗೆ ನ್ಯಾಯ ಕೇಳಿ ಮೂವರು ಮಹಿಳೆಯರು ಗೃಹ ಸಚಿವ ಅಮಿತ್ ಶಾ ಮನೆ ಬಾಗಿಲಿಗೆ ಜಾಥಾ ನಡೆಸಲಿದ್ದಾರೆ.
ಬುಲಂದ್ ಶಹರ್ ಹಿಂದುತ್ವವಾದಿ ಗಲಭೆಕೋರರು ಕೊಲೆ ಮಾಡಿದ ಪೊಲೀಸ್ ಇನ್ಸ್ಪೆಕ್ಟರ್ ಸುಭೋದ್ ಸಿಂಗ್ರ ಪತ್ನಿ ರಜನಿ ಸಿಂಗ್, ಎಬಿವಿಪಿ ದಾಳಿಯ ನಂತರ ಕಾಣೆಯಾದ ಜೆಎನ್ಯು ವಿದ್ಯಾರ್ಥಿ ನಜೀಬ್ ತಾಯಿ ಫಾತಿಮಾ ನಫೀಸ್, ದಿಲ್ಲಿಯಲ್ಲಿ ಮುಸ್ಲಿಂ ಎಂದು ತಪ್ಪು ಗ್ರಹಿಕೆಯಿಂದ ಕೊಲೆಗೀಡಾದ ಸಾಹಿಲ್ನ ತಾಯಿ ಸಂಗೀತಾ ಸಿಂಗ್ ನ್ಯಾಯಕ್ಕಾಗಿ ಅಕ್ಟೋಬರ್ ಹದಿನೈದರಂದು ಗೃಹ ಸಚಿವರ ಮನೆಗೆ ಜಾಥಾ ತೆರಳುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ಅಮಿತ್ ಶಾ ಉತ್ತರಿಸಿ” ಎಂಬ ಹೆಸರಿನಲ್ಲಿ ಯುನೈಟೆಡ್ ಎಗೈನ್ಸ್ಟ್ ಹೇಟ್ ಮಾರ್ಚ್ ಸಂಘಟಿಸುತ್ತಿದೆ. ಪತಿಯನ್ನು ಕೊಂದ ಕ್ರಿಮಿನಲ್ಗಳನ್ನು ನಾಯಕರಾಗಿ ಬೆಳೆಸುವ ಬಿಜೆಪಿ ಯತ್ನ ಜೀವವಿರುವವರೆಗೆ ಸಹಿಸಲಾರೆ ಎಂದು ಬುಲಂದ್ಶಹರಿನ ಗಲಭೆ ನಿಯಂತ್ರಿಸಲು ಹೋಗಿ ಕೊಲೆಯಾದ ಸುಬೋಧ್ ಸಿಂಗ್ರ ಪತ್ನಿ ರಜನಿ ಸಿಂಗ್ ಹೇಳಿದರು. ಸಿಂಗ್ರನ್ನು ಕೊಲೆ ಮಾಡಿದ ಪ್ರಧಾನ ಆರೋಪಿ ಜಾಮೀನನಲ್ಲಿ ಹೊರಗೆ ಬಂದು ಬಿಜೆಪಿ ಶಾಸಕರ ಜೊತೆ ಓಡಾಡುತ್ತಿರುವ ಚಿತ್ರವನ್ನು ರಜನಿ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತೋರಿಸಿದರು.
ಬೈಕ್ ಪಾರ್ಕ್ ಮಾಡುವ ವಿಷಯದಲ್ಲಿ ಮಾತಿನ ಚಕಮಕಿ ನಡೆದು ತನ್ನ ಮಗನ ಹೆಸರು ಸಾಹಿಲ್ ಎಂದು ತಿಳಿದಾಗ ‘ಮುಸ್ಲಿಂ’ ಎಂದು ಭಾವಿಸಿ ಗುಂಪು ಹೊಡೆದು ಕೊಂದಿತ್ತು ಎಂದು ದಿಲ್ಲಿಯ ಸಾಹಿಲ್ ಸಿಂಗ್ರ ತಾಯಿ ಸಂಗೀತಾ ಸಿಂಗ್ ಹೇಳಿದರು. ಹನ್ನೆರಡು ಮಂದಿ ತನ್ನ ಮಗನನ್ನು ಕ್ರೂರವಾಗಿ ಹೊಡೆದು ಸಾಯಿಸಿದ್ದಾರೆ. ಅವರ ಹೆಸರನ್ನಝ ಹೇಳಿದ್ದೇನೆ ಆದರೆ, ಇಬ್ಬರನ್ನು ಮಾತ್ರ ಬಂಧಿಸಲಾಗಿದೆ. ಗೃಹಸಚಿವ ಅಮಿತ್ಶಾರ ಅಧೀನದ ದಿಲ್ಲಿ ಪೊಲೀಸರು ಈವರೆಗೆ ತನ್ನ ಮನೆಗೆ ಬಂದು ನೋಡಿಯೂ ಇಲ್ಲ ಎಂದು ಸಂಗೀತಾ ಸಿಂಗ್ ಹೇಳಿದರು.
ನಜೀಬ್ ಕಾಣೆಯಾಗಿ ಮೂರು ವರ್ಷ ಸಂದಿವೆ.ಆದ್ದರಿಂದ ಗೃಹ ಸಚಿವರ ಮನೆಯ ಮುಂದೆ ಹೋಗುತ್ತಿದ್ದೇನೆ ಎಂದು ತಾಯಿ ಫಾತಿಮಾ ನಫೀಸ್ ಹೇಳಿದರು.
“ಎಲ್ಲರೂ ಸೇರಿ ಹೊಡೆದರು. ಕೊಲ್ಲುತ್ತೇವೆ ಎಂದು ನಜೀಬ್ಗೆ ಬೆದರಿಕೆ ಹಾಕಿದ್ದರು. ಮರು ದಿವಸ ನಜೀಬ್ ಕಾಣೆಯಾಗಿದ್ದ ಆದರೆ ಹೊಡೆದವರನ್ನು ವಿಚಾರಣೆ ಮಾಡಲು ಪೊಲೀಸರು ಈವರೆಗೂ ಸಿದ್ಧವಾಗಿಲ್ಲ” ಎಂದು ಎಸ್ಐಒ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫವಾಝ್ ಶಹೀರ್ ಆರೋಪಿಸಿದರು.
ಐಎಸ್ನೊಂದಿಗೆ ನಂಟಿದೆ ಎಂದು ಮಾಧ್ಯಮಗಳು ಸುಳ್ಳು ಪ್ರಚಾರ ಮಾಡಿವೆ. ಅವುಗಳನ್ನು ಕೋರ್ಟಿಗೆಳೆದು ಕ್ಷಮೆ ಕೋರುವಂತೆ ಮಾಡಲಾಗಿದೆ. ನಂತರ ಅದೇ ಮಾತನ್ನಾಡಿದ ಕಪಿಲ್ ಮಿಶ್ರಾರ ವಿರುದ್ಧ ಕೋರ್ಟಿಗೆ ಹೋಗಲಾಗುವುದು ಎಂದು ಯುನೈಟೆಡ್ ಎಗೃನ್ಸ್ಟ್ ಹೇಟ್ ನಾಯಕ ನದೀಂ ಖಾನ್ ಹೇಳಿದರು.