ಪ್ರಶ್ನೆಗೊಳಗಾಗಬೇಕಾದದ್ದು ಯಾರು- ಪರವಾನಿಗೆ ಕೊಟ್ಟ ಸರಕಾರವೋ ಅಲ್ಲ, ಮಾಂಸವೃತ್ತಿಯಲ್ಲಿರುವ ಬಡಪಾಯಿಗಳೋ?

0
682

ಸನ್ಮಾರ್ಗ ವಾರ್ತೆ

ಸನ್ಮಾರ್ಗ ಸಂಪಾದಕೀಯ

ಒಂದೇ ವಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹಿಂಸಾತ್ಮಕ ಘಟನೆಗಳು ನಡೆದಿವೆ. ಈ ಮೂರೂ ಘಟನೆಗಳು ಜಾನುವಾರು ಸಾಗಾಟ ಮತ್ತು ಮಾಂಸ ಸಾಗಾಟಕ್ಕೆ ಸಂಬಂಧಿಸಿದವು. ಹಾವೇರಿಯ ರಾಣೆಬೆನ್ನೂರಿನಿಂದ ನಾಲ್ಕು ಎಮ್ಮೆಗಳನ್ನು ಮಂಗಳೂರಿಗೆ ಕಾನೂನುಬದ್ಧವಾಗಿಯೇ ಸಾಗಿಸುತ್ತಿದ್ದ ಮುಹಮ್ಮದ್ ಹನೀಫ್ ಎಂಬವರನ್ನು ಅವರದೇ ವಾಹನಕ್ಕೆ ಕಟ್ಟಿ ಹಾಕಿ ಥಳಿಸಲಾದ ಘಟನೆ ನಡೆದ ಬಳಿಕ ಇನ್ನೆರಡು ಇಂಥದ್ದೇ ಘಟನೆಗಳು ನಡೆದುವು. ಇದರಲ್ಲಿ ಒಂದು ಸುಳ್ಯದಲ್ಲಿ ನಡೆದರೆ, ಇನ್ನೊಂದು ಮಂಗಳೂರಿನಲ್ಲಿ. ಮಂಗಳೂರಿನ ಪ್ರಾಣಿ ವಧಾಗೃಹದಿಂದ ಪಕ್ಕದ ಕಂಕನಾಡಿ ಮತ್ತು ಜೆಪ್ಪು ಮಾರುಕಟ್ಟೆಗೆ ಪರವಾನಿಗೆ ಸಹಿತ ಮಾಂಸ ಸಾಗಾಟ ಮಾಡುತ್ತಿದ್ದ ಅಬ್ದುಲ್ ರಶೀದ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಅವರ ರಿಕ್ಷಾ ಟೆಂಪೋಗೆ ಹಾನಿ ಮಾಡಲಾಗಿದೆ.

ಇದೊಂದು ಬಗೆಯ ಕ್ರೌರ್ಯ. ವ್ಯವಸ್ಥೆಗೆ ಒಡ್ಡುವ ಸವಾಲು. ಕಾನೂನುಬದ್ಧ ವೃತ್ತಿಯನ್ನು ಅಪರಾಧಿ ಕೃತ್ಯದಂತೆ ಮತ್ತು ಆ ವೃತ್ತಿಯಲ್ಲಿ ತೊಡಗುವವರನ್ನು ಭೀತಿಗೆ ತಳ್ಳುವುದಕ್ಕೆ ಮಾಡುವ ಹುನ್ನಾರ. ಮಂಗಳೂರಿನಲ್ಲಿರುವ ವಧಾಗೃಹಕ್ಕೆ ಪರವಾನಿಗೆ ಕೊಟ್ಟಿರುವುದು ನಿರ್ದಿಷ್ಟ ಧರ್ಮವೊಂದರ ಧರ್ಮಗುರುಗಳಲ್ಲ, ಸರಕಾರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಸಂಸದರಿದ್ದಾರೆ. 8 ಮಂದಿ ಶಾಸಕರ ಪೈಕಿ 7 ಮಂದಿಯೂ ಬಿಜೆಪಿಯವರೇ. ರಾಜ್ಯದಲ್ಲಿ ಬಿಜೆಪಿಯದ್ದೇ ಆಡಳಿತವಿದೆ. ಮಂಗಳೂರು ನಗರದ ಸ್ಥಳೀಯಾಡಳಿತವೂ ಬಿಜೆಪಿಯ ಕೈಯಲ್ಲಿದೆ. ಇಷ್ಟಿದ್ದೂ ಜಾನುವಾರು ಮತ್ತು ಮಾಂಸ ಸಾಗಾಟಗಾರರ ಮೇಲೆ ಹಲ್ಲೆ ನಡೆಯುವುದೆಂದರೆ ಏನರ್ಥ? ಯಾಕೆ ಸಂಸದರು ಮತ್ತು ಶಾಸಕರು ಈ ಬೆಳವಣಿಗೆಯನ್ನು ಪ್ರಶ್ನಿಸುತ್ತಿಲ್ಲ? ಒಂದುಕಡೆ ವಧಾಗೃಹ, ಜಾನುವಾರು ಸಾಗಾಟ ಮತ್ತು ಮಾಂಸ ಸಾಗಾಣಿಕೆಗೆ ಪರವಾನಿಗೆಯನ್ನು ಕೊಡುವುದು ಮತ್ತು ಇನ್ನೊಂದು ಕಡೆ ಈ ಪ್ರಕ್ರಿಯೆಯನ್ನೇ ಅವಮಾನಿಸುವ ರೀತಿಯಲ್ಲಿ ನಡೆಯುವ ದುಷ್ಕೃತ್ಯಗಳ ಬಗ್ಗೆ ಮೌನವಾಗುವುದು- ಈ ದ್ವಂದ್ವವೇಕೆ?

ಮಾಂಸಾಹಾರದ ಬಗ್ಗೆ ಒಂದು ವರ್ಗದ ಜನರಿಗೆ ಭಿನ್ನಾಭಿಪ್ರಾಯವಿದೆ ಎಂಬುದನ್ನು ನಿರಾಕರಿಸಬೇಕಿಲ್ಲ. 6 ಕೋಟಿ ಕನ್ನಡಗಿರುವ ಈ ರಾಜ್ಯದಲ್ಲಿ ಪ್ರತಿಯೊಬ್ಬರ ಆಲೋಚನೆಗಳೂ ಭಿನ್ನ. ಆಹಾರ ಕ್ರಮಗಳೂ ಭಿನ್ನ. ರಾಜಕೀಯ ಒಲವು, ಸಂಸ್ಕೃತಿ, ಧರ್ಮ, ರೂಢಿ-ಸಂಪ್ರದಾಯಗಳೂ ಏಕರೂಪದ್ದಲ್ಲ. ಈ ದೇಶದಲ್ಲಿ ಸಸ್ಯಾಹಾರವನ್ನು ಅಳವಡಿಸಿಕೊಳ್ಳುವ ಮತ್ತು ಅದರ ಪರ ಜನಜಾಗೃತಿಯನ್ನು ಮೂಡಿಸುವ ಸ್ವಾತಂತ್ರ್ಯ ಇರುವಂತೆಯೇ ಮಾಂಸಾಹಾರವನ್ನು ಸೇವಿಸುವ ಮತ್ತು ಆ ಹಕ್ಕನ್ನು ಉಳಿಸಿಕೊಳ್ಳುವುದಕ್ಕೆ ಹೋರಾಡುವ ಸ್ವಾತಂತ್ರ್ಯವೂ ಇದೆ. ಇದು ಪ್ರತಿಯೊಬ್ಬರಿಗೂ ಸಂವಿಧಾನ ಒದಗಿಸಿರುವ ಸ್ವಾತಂತ್ರ್ಯ. ಈ ಸ್ವಾತಂತ್ರ್ಯದಲ್ಲಿ ಬದಲಾವಣೆ ತರುವುದಕ್ಕೆ ಅದರದ್ದೇ ಆದ ದಾರಿಯಿದೆ. ಅದು ಬೀದಿ ದುಷ್ಕರ್ಮದಿಂದ ಆಗಬೇಕಾದುದಲ್ಲ.

ಈ ದೇಶದಲ್ಲಿ ಮದ್ಯಪಾನದ ವಿರುದ್ಧ ಹಲವು ಚಳವಳಿಗಳಾಗಿವೆ. ಪಾನ ನಿಷೇಧವನ್ನು ಒತ್ತಾಯಿಸಿ ಚಿತ್ರದುರ್ಗದಿಂದ ಸಾವಿರಾರು ಮಹಿಳೆಯರು ವರ್ಷದ ಹಿಂದೆ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದರು. ವೀಣಾ ಭಟ್ ಅವರು ಮುಂಚೂಣಿಯಲ್ಲಿ ನಿಂತು ಈ ಹೋರಾಟಕ್ಕೆ ಜೀವ ತುಂಬಿದ್ದರು. ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ತಮ್ಮ ಅಹವಾಲನ್ನು ಮಂಡಿಸಿದ್ದರು. ಆ ಬಳಿಕವೂ ಈ ಹೋರಾಟ ಮುಂದುವರಿದಿದೆ. ಆದರೆ,

ಸರಕಾರ ತಮ್ಮ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಕಾರಣವನ್ನೊಡ್ಡಿ ಈ ಹೋರಾಟದಲ್ಲಿದ್ದ ಯಾರೂ ಮದ್ಯಸಾಗಾಟ ವಾಹನಗಳನ್ನು ಹಾನಿಗೈದ ಘಟನೆ ನಡೆದಿಲ್ಲ. ಚಾಲಕರ ಮೇಲೆ ದೌರ್ಜನ್ಯ ಎಸಗಿದ್ದೂ ಇಲ್ಲ. ಹಾಗಂತ, ಸಂಪೂರ್ಣ ಪಾನ ನಿಷೇಧ ಜಾರಿಯಾಗಬೇಕೆಂಬುದು ಚಿತ್ರದುರ್ಗದಿಂದ ಬೆಂಗಳೂರಿಗೆ ಹೊರಟ ಮಹಿಳೆಯರ ಮಾತ್ರ ಬೇಡಿಕೆಯಾಗಿರಲಿಲ್ಲ. ಈ ರಾಜ್ಯದ ಎಲ್ಲ ಧರ್ಮದ ಧರ್ಮಗುರುಗಳು ಕೂಡ ಈ ಬೇಡಿಕೆಯ ಪರವಾಗಿ ಮಾತಾಡಿದ್ದರು. ಈ ಹೋರಾಟಕ್ಕೆ ಸ್ವಾಮೀಜಿಯವರೇ ಚಾಲನೆ ನೀಡಿದ್ದೂ ಇದೆ. ಮದ್ಯಪಾನದಿಂದಾಗಿ ಕುಟುಂಬಗಳು ಬೀದಿಗೆ ಬಿದ್ದಿವೆ. ಮದ್ಯಪಾವನವು ಆತ್ಮಹತ್ಯೆ, ಹಲ್ಲೆ ಮತ್ತು ಹತ್ಯಾ ಪ್ರಕರಣಗಳಿಗೆ ಪ್ರಚೋದನೆ ನೀಡುತ್ತಿವೆ ಎಂಬುದಾಗಿ ಈ ಕ್ಷೇತ್ರದಲ್ಲಿ ಅಧ್ಯಯನ ನಡೆಸಿದ ತಜ್ಞರೇ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಈ ಬೇಡಿಕೆಯನ್ನು ಬೆಂಬಲಿಸುವ ದೊಡ್ಡದೊಂದು ಜನಸಮುದಾಯವೇ ಇದೆ. ಆದರೂ ಈ ಗುಂಪು ಹಿಂಸೆಗೆ ಇಳಿದಿಲ್ಲ. ಮದ್ಯ ಮಾರಾಟಗಾರರನ್ನು ಅಪರಾಧಿಗಳಂತೆ ಕಂಡಿಲ್ಲ. ಯಾಕೆಂದರೆ,

ಅವರು ಆ ವೃತ್ತಿಯಲ್ಲಿರುವುದಕ್ಕೆ ಇಲ್ಲಿನ ಆಡಳಿತವೇ ಕಾರಣ. ಸರಕಾರ ಪರವಾನಿಗೆ ಕೊಡದೇ ಇರುತ್ತಿದ್ದರೆ, ಮದ್ಯ ಮಾರಾಟಗಾರರನ್ನು ಅಪರಾಧಿಗಳಂತೆ ನೋಡಬಹುದಿತ್ತು. ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡಬಹುದಿತ್ತು. ಅಷ್ಟಕ್ಕೂ,

ವಧಾಗೃಹ ನಡೆಸುವ ಪರವಾನಿಗೆಯನ್ನು ಸರಕಾರ ಯಾವುದಾದರೊಂದು ನಿರ್ದಿಷ್ಟ ಧರ್ಮದ ಜನರಿಗೆ ಮೀಸಲಾಗಿ ಇಟ್ಟಿಲ್ಲ. ಅದು ಏಲಂನಲ್ಲಿ ವಿತರಣೆಯಾಗುತ್ತದೆ. ಯಾರು ಹೆಚ್ಚು ಬೆಲೆಗೆ ಕೊಂಡುಕೊಳ್ಳಲು ತಯಾರಾಗುತ್ತಾರೋ ಅವರಿಗೆ ಪರವಾನಿಗೆ ಸಿಗುತ್ತದೆ. ಅದೊಂದು ಮುಕ್ತ ಪರವಾನಿಗೆ. ವಧಾಗೃಹಕ್ಕೆ ಜಾನುವಾರು ಸಾಗಾಟ ಮಾಡುವುದಕ್ಕೂ ಪರವಾನಿಗೆ ಇದೆ. ಅದೂ ಮುಕ್ತವಾಗಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಯಾರಿಗೂ ಅದು ಲಭಿಸುತ್ತದೆ. ವಧಾಗೃಹದಿಂದ ಮಾಂಸ ಸಾಗಾಟ ಮಾಡುವುದಕ್ಕೂ ಪರವಾನಿಗೆ ಇದೆ. ಅದೂ ಕೂಡ ಮುಕ್ತವಾಗಿದೆ. ಆದ್ದರಿಂದ ಯಾರಿಗೆ ವಧಾಗೃಹದ ಮೇಲೆ, ಜಾನುವಾರು ಸಾಗಾಟ ಮತ್ತು ಮಾಂಸ ಸಾಗಾಟದ ಮೇಲೆ ಭಿನ್ನಾಭಿಪ್ರಾಯ ಇದೆಯೋ ಅವರು ವಧಾಗೃಹದ ಮೇಲೆ ಮತ್ತು ಜಾನುವಾರು ಸಾಗಾಟಗಾರರ ಮೇಲೆ ದಾಳಿ ಮಾಡಬೇಕಾದುದಲ್ಲ. ಹೀಗೆ ಮಾಡುವುದು ಪ್ರಭುತ್ವಕ್ಕೆ ಎಸೆಯುವ ಸವಾಲು. ಆದರೂ ಮತ್ತೆ ಮತ್ತೆ ಇಂಥ ದಾಳಿಗಳು ಯಾಕೆ ನಡೆಯುತ್ತವೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ ಮತ್ತು ಈ ದಾಳಿಗಳ ಹಿಂದಿನ ಹುನ್ನಾರ ಬಿಚ್ಚಿಕೊಳ್ಳುವುದೂ ಈ ಪ್ರಶ್ನೆಯಿಂದಲೇ.

ವಧಾಗೃಹ, ಜಾನುವಾರು ಸಾಗಾಟ ಮತ್ತು ಮಾಂಸ ವ್ಯಾಪಾರದಲ್ಲಿ ನಿರ್ದಿಷ್ಟ ಧರ್ಮವೊಂದರ ಸಾಕಷ್ಟು ಅನುಯಾಯಿಗಳು ತೊಡಗಿಸಿಕೊಂಡಿದ್ದಾರೆ. ಕಾನೂನುಬದ್ಧ ವೃತ್ತಿ ಎಂಬ ನೆಲೆಯಲ್ಲಿ ಅದು ಅವಹೇಳನಕ್ಕೋ, ಹಿಂಜರಿಕೆಗೋ, ಕೀಳರಿಮೆಗೋ ಒಳಗಾಗಬೇಕಾದ್ದೂ ಅಲ್ಲ. ಆದರೆ, ದಾಳಿಗಳ ಹಿಂದಿನ ಉದ್ದೇಶವೂ ಇದುವೇ. ಮುಸ್ಲಿಮರನ್ನು ಅಪರಾಧಿಗಳಂತೆ ಬಿಂಬಿಸುವುದು, ಕಾನೂನುಬದ್ಧ ವೃತ್ತಿಯ ಬಗ್ಗೆ ಕೀಳರಿಮೆಗೆ ಗುರಿಪಡಿಸುವುದು ಮತ್ತು ಮುಸ್ಲಿಮರು ಪರವಾನಿಗೆಯಿಲ್ಲದೇ ಮಾಂಸ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಸುಳ್ಳನ್ನು ಸದಾ ಜೀವಂತ ಇಟ್ಟುಕೊಳ್ಳುವುದು- ಇವು ಮತ್ತು ಇಂಥ ಇನ್ನಿತರ ಉದ್ದೇಶಗಳೇ ಈ ದಾಳಿಗಳ ಹಿಂದಿವೆ. ಇಂಥ ದಾಳಿಗಳು ರಾಜಕೀಯವಾಗಿಯೂ ಲಾಭವನ್ನು ತಂದುಕೊಡುತ್ತದೆ.

ವಧಾಗೃಹದಿಂದ ಹಿಡಿದು ಮಾಂಸ ಸಾಗಾಟದ ವರೆಗೆ ನಡೆಯುವ ಎಲ್ಲ ಪ್ರಕ್ರಿಯೆಗಳಿಗೆ ಸರಕಾರವೇ ಪರವಾನಿಗೆ ನೀಡಿದ್ದರೂ ಈ ದಾಳಿಗಳ ಸಂದರ್ಭದಲ್ಲಿ ಇವು ಯಾವುವೂ ಚರ್ಚೆಗೆ ಒಳಗಾಗದಂತೆ ಜಾಣತನದಿಂದ ನೋಡಿಕೊಳ್ಳಲಾಗುತ್ತದೆ. ಅಲ್ಲದೇ, ದುಷ್ಕರ್ಮಿಗಳು ಬಂಧ ನಕ್ಕೀಡಾದ ಮರುಕ್ಷಣವೇ ಜಾಮೀನು ಪಡೆದು ಹೊರಬರುತ್ತಾರೆ. ಇದೊಂದು ರೀತಿಯ ಕಣ್ಣಾಮುಚ್ಚಾಲೆ ಆಟ. ಈ ಆಟಕ್ಕೆ ಕೊನೆ ಹಾಡಲೇಬೇಕು. ರಾಜಕೀಯದ ಮಂದಿ ಆಡುತ್ತಿರುವ ಈ ಆಟಕ್ಕೆ ಕಾ ನೂನುಬದ್ಧವಾಗಿ ದುಡಿಯುತ್ತಿರುವ ಮಂದಿ ಪದೇಪದೇ ಬಲಿಯಾಗುವುದನ್ನು ನಾಗರಿಕರು ಸಹಿಸಬಾರದು. ಅಷ್ಟಕ್ಕೂ,

ಬರೇ ದಾಳಿ ನಡೆಸುವುದು ದುಷ್ಕರ್ಮಿಗಳ ಉದ್ದೇಶ ಅಲ್ಲ. ಎರಡೂ ಸಮುದಾಯಗಳ ನಡುವೆ ಸಂಘರ್ಷವನ್ನು ಹುಟ್ಟು ಹಾಕುವುದೂ ಅವರ ಗುರಿಯಾಗಿದೆ. ಇದು ಗಂಭೀರ ಅಪರಾಧ. ಆದ್ದರಿಂದ ದುಷ್ಕರ್ಮಿಗಳ ವಿರುದ್ಧ ಈ ಕಾಯ್ದೆಯಡಿ ಪೊಲೀಸರು ಕೇಸು ದಾಖಲಿಸಬೇಕು. ದುಷ್ಕರ್ಮಿಗಳು ಸುಲಭವಾಗಿ ಜಾಮೀನು ಪಡೆದು ಹೊರಬರದಂತೆ ನೋಡಿಕೊಳ್ಳಬೇಕು. ಅಂದಹಾಗೆ,

ವಧಾಗೃಹ, ಜಾನುವಾರು ಸಾಗಾಟ ಮತ್ತು ಮಾಂಸಾಹಾರದ ಬಗ್ಗೆ ಭಿನ್ನಾಭಿಪ್ರಾಯವನ್ನು ತಾಳುವುದು ಬೇರೆ ಹಾಗೂ ಕಾನೂನುಬದ್ಧ ವೃತ್ತಿಯಲ್ಲಿ ತೊಡಗಿರುವವರ ಮೇಲೆ ಹಲ್ಲೆ ನಡೆಸುವುದು ಬೇರೆ. ಇವೆರಡನ್ನೂ ಸಮಾನವಾಗಿ ಕಾಣಲಾಗದು, ಕಾಣಬಾರದು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.