ಸನ್ಮಾರ್ಗ ಸಂಪಾದಕೀಯ
ಮಾಧ್ಯಮಗಳಿಗೆ ಸಂಬಂಧಿಸಿ ಕಳೆದವಾರ ಎರಡು ಪ್ರಮುಖ ಬೆಳವಣಿಗೆಗಳು ನಡೆದಿವೆ. ಒಂದು- ತಬ್ಲೀಗಿ ಜಮಾಅತ್ಗೆ ಸಂಬಂಧಿಸಿದ್ದರೆ, ಇನ್ನೊಂದು- ಟಿಆರ್ಪಿಗೆ ಸಂಬಂಧಿಸಿದ್ದು. ಈ ಎರಡರ ಕೇಂದ್ರ ಬಿಂದುವೂ ಮಾಧ್ಯಮವೇ.
ದೇಶದಲ್ಲಿ ಮಾರ್ಚ್ 24ರಂದು ಕೇಂದ್ರ ಸರಕಾರ ದಿಢೀರ್ ಲಾಕ್ಡೌನ್ ಘೋಷಿಸಿದ ಬಳಿಕ ಮಾಧ್ಯಮಗಳು ಅದರಲ್ಲೂ ಟಿ.ವಿ. ವಾಹಿನಿಗಳು ಕೊರೋನಾದ ಬದಲು ತಬ್ಲೀಗಿ ಜಮಾಅತ್ನ ಬೆನ್ನು ಬಿದ್ದಿದ್ದುವು. ಈ ಲಾಕ್ಡೌನ್ ಘೋಷಣೆಯ ವೇಳೆ ತಬ್ಲೀಗಿ ಜಮಾಅತ್ನ ಕೇಂದ್ರ ಕಚೇರಿಯಾದ ದೆಹಲಿಯ ನಿಝಾಮುದ್ದೀನ್ ಮರ್ಕಜ್ ನಲ್ಲಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಸೇರಿಕೊಂಡಿದ್ದರು. ಪ್ರತಿ ತಿಂಗಳೂ ಇಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಮತ್ತು ದೇಶ-ವಿದೇಶಗಳಿಂದ ದೊಡ್ಡಮಟ್ಟದಲ್ಲಿ ಪ್ರತಿ ನಿಧಿಗಳು ಭಾಗವಹಿಸುತ್ತಾರೆ. ಈ ದಿಢೀರ್ ಲಾಕ್ಡೌನ್ನಿಂದ ಈ ಸಾವಿರಾರು ಮಂದಿ ಬಂಧನಕ್ಕೊಳಗಾದ ಸ್ಥಿತಿಗೆ ತಲುಪಿದರು. ರೈಲು, ವಿಮಾನ ಸೇವೆಗಳು ಸ್ಥಗಿತಗೊಂಡುದು ಮಾತ್ರವಲ್ಲ, ರಸ್ತೆಗಳೂ ಮೌನವಾದುವು. ಈ ಮರ್ಕಝïಗಿಂತ ಕೇವಲ 50 ಮೀಟರ್ ದೂರದಲ್ಲೇ ಪೊಲೀಸ್ ಠಾಣೆಯೂ ಇದೆ. ಅಲ್ಲಿಗೆ ಸ್ಥಿತಿಗತಿಯ ವಿವರಗಳನ್ನೂ ನೀಡಲಾಯಿತು. ಮರ್ಕಜ್ ನಲ್ಲಿ ಸಿಲುಕಿಕೊಂಡವರ ಆರೋಗ್ಯ ತಪಾಸಣೆಗಾಗಿ ಸರಕಾರದ ವತಿಯಿಂದ ವ್ಯವಸ್ಥೆಯೂ ನಡೆಯಿತು. ಆದರೆ,
ಮಾರ್ಚ್ 28-29ರ ಬಳಿಕ ಒಟ್ಟು ಚಿತ್ರಣವೇ ಬದಲಾಯಿತು. ಕೊರೋನಾ ಹಾಟ್ಸ್ಪಾಟ್ ಕೇಂದ್ರವಾಗಿ ಮರ್ಕಝï ಬಿಂಬಿತವಾಯಿತು. ಟಿ.ವಿ. ವಾಹಿನಿಗಳ ಕ್ಯಾಮರಾಗಳು ಅಲ್ಲೇ ಠಿಕಾಣಿ ಹೂಡಿದುವು. ಪತ್ರಿಕೆಗಳಲ್ಲೂ ಅಸಹನೀಯ ಮತ್ತು ಸತ್ಯಕ್ಕೆ ದೂರವಾದ ವರದಿಗಳು ಪುಂಖಾನುಪುಂಖ ಬರತೊಡಗಿದುವು. ಕೊರೋನಾ ಜಿಹಾದ್, ತಬ್ಲೀಗಿ ವೈರಸ್, ಕೊರೋನಾ ಟೆರರಿಸಂ ಎಂಬಿತ್ಯಾದಿ ಕಡು ಕೆಟ್ಟ ಪದಪ್ರಯೋಗಳೊಂದಿಗೆ ಟಿ.ವಿ. ಮತ್ತು ಪತ್ರಿಕಾ ಮಾಧ್ಯಮಗಳು ಸುದ್ದಿಗಳನ್ನು ಕೊಡತೊಡಗಿದುವು. ತಬ್ಲೀಗಿ ಜಮಾಅತ್ನ ಮುಖ್ಯಸ್ಥ ಮೌಲಾನಾ ಸಾದ್ರನ್ನು ಸಾವಿನ ಮೌಲಾನಾ ಎಂದೂ ಹೇಳಲಾಯಿತು. ಮರ್ಕಜ್ ಗಾಗಲಿ, ತಬ್ಲೀಗಿಗಳಿಗಾಗಲಿ ಯಾವ ಸಂಬಂಧವೂ ಇಲ್ಲದ ಮತ್ತು ಹಳೆಯದಾದ ವೀಡಿಯೋಗಳನ್ನು ಯುಟ್ಯೂಬ್ನಿಂದ ಹೆಕ್ಕಿ ತೆಗೆದು ಅದನ್ನು ತಬ್ಲೀಗಿಗಳ ವೀಡಿಯೋ ಎಂದು ಪ್ರಚಾರ ಮಾಡಲಾಯಿತು. ಮೌಲಾನಾ ಸಾದ್ರದ್ದೆಂದು ಮುದ್ರೆಯೊತ್ತಲಾದ ಹಳೆಯ ವೀಡಿಯೋವನ್ನು ತಿರುಚಿ ಕೊರೋನಾ ಕಾಲದ ವೀಡಿಯೋವೆಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ ಹರಿಯಬಿಡಲಾಯಿತು. ಜಗತ್ತಿನಲ್ಲಿರುವ ಎಲ್ಲ ಕೆಟ್ಟ ವೀಡಿಯೋಗಳನ್ನು, ಸುದ್ದಿಗಳನ್ನು ಹೆಕ್ಕಿಕೊಂಡು ಅದನ್ನು ತಬ್ಲೀಗಿಗಳ ತಲೆಗೆ ಕಟ್ಟುವ ಅತ್ಯಂತ ಹೀನಾಯ ಕೃತ್ಯದಲ್ಲಿ ಮಾಧ್ಯಮದ ಮಂದಿಯೇ ತೊಡಗಿಸಿಕೊಂಡರು…
ಈ ಸಂದರ್ಭದಲ್ಲಿ ಮಾಧ್ಯಮಗಳ ಈ ಬೇಜವಾಬ್ದಾರಿಯುತ ಪ್ರವೃತ್ತಿಗೆ ಆಕ್ಷೇಪ ವ್ಯಕ್ತಪಡಿಸಿದ ಜಮೀಯತೆ ಉಲೆಮಾಯೆ ಹಿಂದ್, ಎಪ್ರಿಲ್ 6ರಂದು ಸುಪ್ರೀಮ್ ಕೋರ್ಟಿನ ಬಾಗಿಲು ಬಡಿಯಿತು. ಮಾಧ್ಯಮಗಳು ಕೊರೋನಾವನ್ನು ಕೋಮುವಾದೀಕರಣಗೊಳಿಸಿದೆ ಮತ್ತು ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅದು ದೂರಿನಲ್ಲಿ ಮನವಿ ಮಾಡಿಕೊಂಡಿತು. ಕಳೆದವಾರ ಈ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಸುಪ್ರೀಮ್ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ಪೀಠವು ಕೇಂದ್ರ ಸರಕಾರವನ್ನು ತರಾಟೆಗೆ ಎತ್ತಿಕೊಂಡಿದೆ. ಕೋರ್ಟನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಎಚ್ಚರಿಸಿದೆ. ಇದೇ ಸಂದರ್ಭದಲ್ಲಿ
ಮಹಾರಾಷ್ಟ್ರ ಹೈಕೋರ್ಟೂ ಮಾಧ್ಯಮಗಳ ಮೇಲೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಮಾಧ್ಯಮಗಳ ವರ್ತನೆ ಸರಿಯಾಗಿರಲಿಲ್ಲ ಎಂದೂ ಹೇಳಿದೆ. ಹೇಗೆ ತನಿಖೆ ಮಾಡಬೇಕು ಎಂಬುದನ್ನು ನಿರ್ಧರಿಸಬೇಕಾದವರು ಯಾರು- ತ ನಿಖಾಧಿಕಾರಿಯೋ ಅಥವಾ ಮಾಧ್ಯಮವೋ ಎಂದು ಖಾರವಾಗಿ ಪ್ರಶ್ನಿಸಿದೆ. ವಿಶೇಷ ಏನೆಂದರೆ,
ಇದೇ ಸಂದರ್ಭದಲ್ಲಿ ಆಜ್ತಕ್, ಝೀನ್ಯೂಸ್, ನ್ಯೂಸ್ 24 ಮತ್ತು ಇಂಡಿಯಾ ಟಿ.ವಿ.ಗಳು ಕ್ಷಮೆ ಯಾಚಿಸಬೇಕೆಂದು ಸುದ್ದಿ ಪ್ರಸಾರ ಮಾನದಂಡಗಳ ಪ್ರಾಧಿಕಾರ (NBSA) ಸೂಚಿಸಿರುವುದು. ಅಲ್ಲದೇ, ನಕಲಿ ಟ್ವೀಟ್ ಮಾಡಿರುವುದಕ್ಕಾಗಿ ಆಜ್ತಕ್ ಟಿ.ವಿ.ಗೆ 1 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ಸುಶಾಂತ್ ಪ್ರಕರಣವನ್ನು ಸಂವೇದನಾರಹಿತವಾಗಿ ಈ ಎಲ್ಲ ಟಿ.ವಿ. ಚಾನೆಲ್ಗಳು ಪ್ರಸಾರ ಮಾಡಿವೆ ಎಂದು NBSA ದೂಷಿಸಿದೆ. ಇದರ ಜೊತೆಗೇ ಇನ್ನೊಂದು ಪ್ರಮುಖ ಬೆಳವಣಿಗೆಯೂ ನಡೆದಿದೆ. ಅದೇನೆಂದರೆ, ಮುಂಬೈ ಪೊಲೀಸ್ ಆಯುಕ್ತ ಪರಮ್ವೀರ್ ಸಿಂಗ್ ನಡೆಸಿದ ಪತ್ರಿಕಾಗೋಷ್ಠಿ. ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್ ಪಿ)ಗಾಗಿ ರಿಪಬ್ಲಿಕ್ ಟಿ.ವಿ. ಸಹಿತ ಮೂರು ಚಾನೆಲ್ಗಳು ವಂಚನೆಯ ದಾರಿಯನ್ನು ಹಿಡಿದಿವೆ ಎಂಬುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.
ಟಿಆರ್ ಪಿ ಎಂಬುದು ಟಿ.ವಿ.ಗಳ ಜಾಹೀರಾತು ದರವನ್ನು ನಿರ್ಧರಿಸುವ ಮಾನದಂಡ. ನಿಗದಿತ ಅವಧಿಯಲ್ಲಿ ಎಷ್ಟು ಮಂದಿ ಯಾವ ಟಿ.ವಿ. ಚಾನೆಲ್ನ ಯಾವ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ ಆ ಮತ್ತು ಆ ಕಾರ್ಯಕ್ರಮವನ್ನು ಎಷ್ಟು ಸಮಯ ನೋಡುತ್ತಾರೆ ಎಂಬುದನ್ನು ಆಧರಿಸಿ ಟಿಆರ್ಪಿ ನಿಗದಿಯಾಗುತ್ತದೆ. ಟಿಆರ್ಪಿಯು ಜಾಹೀರಾತು ದರವನ್ನು ನಿಗದಿ ಮಾಡುವ ಸಂಗತಿಯಾಗಿರುವುದರಿಂದ ಭಾರತೀಯ ಬ್ರಾಡ್ಕಾಸ್ಟಿಂಗ್ ಫೌಂಡೇಶನ್ ಜೊತೆ ವಿವಿಧ ಭಾರತೀಯ ಜಾಹೀರಾತು ಏಜೆನ್ಸಿಗಳು ಸೇರಿಕೊಂಡು ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC)ನ್ನು ಸ್ಥಾಪಿಸಿವೆ. ದೇಶದೆಲ್ಲೆಡೆ ಆಯ್ದ 44 ಸಾವಿರ ಮನೆಗಳ ಟಿವಿ ಸೆಟ್ ಬಾಕ್ಸ್ಗಳ ಜೊತೆ ಬಾರೋಮೀಟರ್ ಎಂಬ ವಿಶೇಷ ಸಾಧನವನ್ನು ಈ ಃಂಖಅ ಸಂಸ್ಥೆ ಅಳವಡಿಸುತ್ತದೆ. ಮತ್ತು ಈ ಮನೆಗಳಿಂದ ಪಡೆಯಲಾಗುವ ದತ್ತಾಂಶವನ್ನು ಇಡೀ ದೇಶಕ್ಕೆ ಅನ್ವಯಿಸಲಾಗುತ್ತದೆ. ಆದ್ದರಿಂದಲೇ ಒಂದು ವಾಹಿನಿಯು ತಮ್ಮ ಕಾರ್ಯಕ್ರಮ ವೀಕ್ಷಿಸುವಂತೆ ಒಂದೆರಡು ಮನೆಗಳನ್ನು ಪುಸಲಾಯಿಸಿದರೂ ಸಾಕು, ಲಕ್ಷಾಂತರ ಮಂದಿ ವೀಕ್ಷಿಸಿದ ದತ್ತಾಂಶ ಲಭ್ಯವಾಗುವುದಲ್ಲದೇ, ಭಾರೀ ಮಟ್ಟದಲ್ಲಿ ಟಿಆರ್ಪಿ ಏರಿಕೆ ಆಗುತ್ತದೆ. ಹಾಗಂತ,
ಬಾರೋಮೀಟರ್ ಅಳವಡಿಸಲಾಗಿರುವ ಮ ನೆಗಳೂ ನಿಗೂಢವಾಗಿರುವುದಿಲ್ಲ. ಯಾವ ಮನೆಯಲ್ಲಿ ಬಾರೋಮೀಟರ್ ಅಳವಡಿಸಲಾಗಿದೆಯೋ ಅವರಿಗೆ ಪ್ರತ್ಯೇಕ ಗುರುತಿನ ಬಟನ್ ನೀಡಲಾಗುತ್ತದೆ. ಅವರು ಟಿ.ವಿ. ನೋಡುವ ಸಮಯದಲ್ಲಿ ತಮ್ಮ ಗುರುತಿನ ಬಟನ್ ಒತ್ತಬೇಕು. ಆಗ ಆ ವ್ಯಕ್ತಿ ಯಾವ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ ಎಂಬುದು ಬಾರೋ ಮೀಟರ್ನಲ್ಲಿ ದಾಖಲಾಗುತ್ತದೆ. ಈಗಿರುವ ಆರೋಪ ಏನೆಂದರೆ, ಇಂಥ ಮ ನೆಗಳನ್ನು ರಿಪಬ್ಲಿಕ್ ಸಹಿತ ಮೂರು ಚಾನೆಲ್ಗಳು ಸಂಪರ್ಕಿಸಿವೆ. ತಮ್ಮ ಚಾನೆಲ್ನ ಕಾರ್ಯಕ್ರಮಗಳನ್ನೇ ವೀಕ್ಷಿಸುವಂತೆ ಅವರಿಗೆ ಹಣ ನೀಡಿವೆ. ಆ ಮೂಲಕ ಕಳ್ಳದಾರಿಯಲ್ಲಿ ಟಿಆರ್ಪಿ ಹೆಚ್ಚಿಸಿಕೊಂಡಿವೆ.
ಮಾಧ್ಯಮಗಳು ಪ್ರಾಮಾಣಿಕವಾಗಿಲ್ಲ ಎಂಬುದು ಈ ಟಿಆರ್ಪಿ ವಿವಾದಕ್ಕಿಂತ ಮೊದಲೇ ಈ ದೇಶದ ಜನರಿಗೆ ಗೊತ್ತಿತ್ತು. ನಿರ್ದಿಷ್ಟ ವಿಚಾರಧಾರೆಯ ಮತ್ತು ಪಕ್ಷದ ಪರ ಹಾಗೂ ನಿರ್ದಿಷ್ಟ ಸಮುದಾಯದ ವಿರುದ್ಧ ದೇಶದ ಪ್ರಮುಖ ಹಿಂದಿ ಮತ್ತು ಇಂಗ್ಲಿಷ್ ಚಾನೆಲ್ಗಳು ಅಸಂಖ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬಂದಿರುವುದು ಮತ್ತು ಬರುತ್ತಿರುವುದೂ ಎಲ್ಲರಿಗೂ ಗೊತ್ತು. ಮುಂಬೈ ಪೊಲೀಸ್ ಆಯುಕ್ತರು ಈ ಅಭಿಪ್ರಾಯಕ್ಕೆ ಪುಷ್ಠಿಯನ್ನಷ್ಟೇ ನೀಡಿದ್ದಾರೆ. ಮಾಧ್ಯಮಗಳು ಸಾರ್ವಜನಿಕರನ್ನು ವಂಚಿಸುತ್ತಿವೆ ಎಂಬುದಕ್ಕೆ ಅವರು ಸಾಕ್ಷ್ಯ ಸಮೇತ ಆಧಾರವನ್ನು ಕೊಟ್ಟಿದ್ದಾರೆ. ಇದೇವೇಳೆ, ಸುಪ್ರೀಮ್ ಕೋರ್ಟು ಮತ್ತು ಮುಂಬೈ ಹೈಕೋರ್ಟ್ಗಳೂ ಮಾಧ್ಯಮಗಳ ಕಾರ್ಯನಿರ್ವಹಣೆಯ ಮೇಲೆ ಅಸಮಾಧಾನ ಸೂಚಿಸಿವೆ. NBSA ಅಂತೂ ಪ್ರಮುಖ ಟಿ.ವಿ. ಚಾನೆಲ್ನ ಮೇಲೆಯೇ ದಂಡ ಹಾಕಿದೆ. ಕ್ಷಮೆ ಯಾಚಿಸುವಂತೆ ಹಲವು ಚಾನೆಲ್ಗಳಿಗೆ ಆಗ್ರಹಿಸಿದೆ. ಇವೆಲ್ಲ ಈ ದೇಶದ ಮಾಧ್ಯಮಗಳ ಹೀನಾಯ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಪ್ರಜಾತಂತ್ರದ ಕಾವಲುನಾಯಿ ಎಂಬ ಗೌರವದಿಂದ ಆಡಳಿತಗಾರರ ಸಾಕು ನಾಯಿ ಎಂಬ ಅವಮಾನದೆಡೆಗೆ ಭಾರತೀಯ ಮಾಧ್ಯಮಗಳು ಸಾಗಿರುವುದು ಅತ್ಯಂತ ವಿಷಾದಕರ, ಆಘಾತಕಾರಿ ಮತ್ತು ದುಃಖಕರ ಸಂಗತಿ. ಜನಾಕ್ರೋಶವೇ ಇದನ್ನು ಬದಲಾಯಿಸುವುದಕ್ಕಿರುವ ಸೂಕ್ತ ದಾರಿ.