ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್ ಸೇರ್ಪಡೆ: ಸರಿ- ತಪ್ಪುಗಳ ನಡುವೆ

0
516

ಸನ್ಮಾರ್ಗ ಸಂಪಾದಕೀಯ

ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್‍ರ ಮುಂದೆ ಎರಡು ಆಯ್ಕೆಗಳಿದ್ದುವು.

1. ಆ್ಯಕ್ಟಿವಿಸ್ಟ್ ಆಗಿ ಮುಂದುವರಿಯುವುದು.

2. ರಾಜಕೀಯ ಪಕ್ಷವನ್ನು ಸೇರುವುದು.

ಅವರು ಎರಡನೆಯದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಸಸಿಕಾಂತ್ ಸೆಂಥಿಲ್‍ರಂಥ ತಣ್ಣನೆಯ, ಮೃದು ಮಾತಿನ ಮತ್ತು ಆಕರ್ಷಕ ವಾಕ್ಚಾತುರ್ಯವಿಲ್ಲದ ವ್ಯಕ್ತಿಗೆ ಆ್ಯಕ್ಟಿವಿಸಂ ರಂಗದಲ್ಲಿ ಏನು ಭವಿಷ್ಯವಿದೆ ಎಂಬುದು ಎರಡನೆಯ ಪ್ರಶ್ನೆ. ಮೊದಲನೆಯ ಪ್ರಶ್ನೆ ಏನೆಂದರೆ, ಭಾರತದ ಸದ್ಯದ ಪರಿಸ್ಥಿತಿಯಲ್ಲಿ ಆ್ಯಕ್ಟಿವಿಸಂಗೆ ಯಾವ ಮನ್ನಣೆ ದೊರಕುತ್ತಿದೆ ಎಂಬುದು. ಸಾಮಾಜಿಕ ಹೋರಾಟವನ್ನು ಮತ್ತು ಹೋರಾಟಗಾರರನ್ನು ಸಾರಾಸಗಟು ದೇಶದ್ರೋಹಿ ಪಟ್ಟದಲ್ಲಿ ಕೂರಿಸುವುದಕ್ಕೆ ಮತ್ತು ಸಾಮಾಜಿಕ ಒಂಟಿತನಕ್ಕೆ ದೂಡುವುದಕ್ಕೆ ಹಿಂದೆಂದಿಗಿಂತಲೂ ಇವತ್ತು ಅತ್ಯಂತ ಸುಲಭ. ಕೇಂದ್ರ ಸರಕಾರದ ಪಾಲಿಗೆ ಇದನ್ನು ಅತ್ಯಂತ ಸುಲಭಗೊಳಿಸಿರುವುದು ಸಾಮಾಜಿಕ ಜಾಲತಾಣಗಳು. ಸಾಮಾಜಿಕ ಹೋರಾಟವನ್ನು ದ್ವೇಷಿಸುವ ಮತ್ತು ಬಲಪಂಥವನ್ನು ಅಥವಾ ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ಕೋಮು ಆಧಾರದಲ್ಲಿ ಧಾರ್ಮಿಕ ಧ್ರುವೀಕರಣವನ್ನು ನಡೆಸುವ ಬಿಜೆಪಿ ಆಡಳಿತಕ್ಕೆ ಬಲ ನೀಡಿರುವುದೇ ಸಾಮಾಜಿಕ ಜಾಲತಾಣಗಳು.

ಹೋರಾಟಗಾರರನ್ನು ಅತ್ಯಂತ ಹೀನಾಯ ಭಾಷೆಯಲ್ಲಿ ನಿಂದಿಸುವುದರಿಂದ ತೊಡಗಿ ಅವರ ವರ್ಚಸ್ಸಿಗೆ ಹಾನಿ ತಟ್ಟಬಲ್ಲಂಥ ಅಪ್ಪಟ ಸುಳ್ಳು ಸುದ್ದಿಗಳನ್ನು ತೇಲಿ ಬಿಡುವುದಕ್ಕೆ ದೊಡ್ಡ ಪಡೆಯನ್ನೇ ಇವತ್ತು ಆಡಳಿತದ ಮಂದಿ ಕಟ್ಟಿಕೊಂಡಿದ್ದಾರೆ. ಬಲಪಂಥೀಯ ವಿಚಾರಧಾರೆಗೆ ಎದುರಾಗಿ ಮಾತಾಡುವ ಯಾರೂ ಆ ಪಡೆಯ ನಿಂದನೆಗೆ ಈಡಾಗದೇ ಹೋಗಿದ್ದಿಲ್ಲ. ಬಲಪಂಥ ವಿರೋಧಿ ಸರ್ವ ಹೋರಾಟವನ್ನು ಮತ್ತು ಸಾಮಾಜಿಕ ನ್ಯಾಯದ, ಸಂವಿಧಾನ ಪರವಾದ ಸಕಲ ವಾದಗಳನ್ನೂ ವಿರೋಧಿಸುವುದು ಮತ್ತು ಉಸಿರುಗಟ್ಟಿಸುವುದನ್ನು ವ್ಯವಸ್ಥೆ ಮಾಡುತ್ತಾ ಬರುತ್ತಿದೆ. ಎನ್‍ಆರ್ ಸಿ ವಿರೋಧಿ ಹೋರಾಟವನ್ನು ಪ್ರಭುತ್ವ ಹೇಗೆ ದೇಶವಿರೋಧಿಯಾಗಿ ಮತ್ತು ಬಹುಸಂಖ್ಯಾತ ವಿರೋಧಿಯಾಗಿ ಪರಿವರ್ತಿಸಲು ಯತ್ನಿಸಿತು ಎಂಬುದು ಎಲ್ಲರಿಗೂ ಗೊತ್ತು. ಹಲವು ಜೀವಗಳು ಅದಕ್ಕೆ ಬಲಿಯಾದುವು. ಬಿಜೆಪಿ ನೇತೃತ್ವ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೋರಾಟವನ್ನು ದಮನಿಸುವುದಕ್ಕೆ ಪ್ರಯತ್ನಪಟ್ಟವು. ಎನ್‍ಆರ್‍ಸಿಯ ವಿರುದ್ಧ ನಿಂತ ವಿವಿಗಳ ಮೇಲೆ ವ್ಯವಸ್ಥೆಯೇ ಮುಗಿಬಿತ್ತು. ದೆಹಲಿಯ ಜಾಮಿಯಾ ವಿವಿ, ಅಲಿಘರ್ ವಿವಿಗಳ ಮೇಲೆ ಲಾಠಿ ಮತ್ತು ಗುಂಡಿನ ದಾಳಿಗಳು ನಡೆದುವು. ದೆಹಲಿಯಲ್ಲಿ ಗಲಭೆಯೂ ನಡೆಯಿತು. ಎನ್‍ಆರ್‍ ಸಿಯನ್ನು ಹಿಂದೂ ಮತ್ತು ಮುಸ್ಲಿಮ್ ಇಶ್ಶೂಗಳಂತೆ ವಿಭಜಿಸುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯನಿರತವಾದ ಪಡೆ ಗರಿಷ್ಠ ಶ್ರಮಿಸಿತು. ಹೋರಾಟದಲ್ಲಿ ಭಾಗಿಯಾದ ಉಮರ್ ಖಾಲಿದ್, ಡಾ| ಕಫೀಲ್ ಖಾನ್‍ರಂಥ ಅನೇಕರನ್ನು ಬೇರೆ ಬೇರೆ ನೆಪಗಳ ಮೂಲಕ ಜೈಲಿಗಟ್ಟಿತು. ಕೆಲವರ ಮೇಲೆ ಯುಎಪಿಎಯಂಥ ಕರಾಳ ಕಾನೂನಿನಡಿ ಕೇಸು ದಾಖಲಿಸಿಕೊಂಡಿತು. ಇದು ಪುಟ್ಟ ಉಲ್ಲೇಖ ಮಾತ್ರ.

ಇದಕ್ಕಿಂತ ಮೊದಲೇ ಕೇಂದ್ರ ಸರಕಾರ ಹೋರಾಟಗಾರರನ್ನು ಹತ್ತಿಕ್ಕುವ ಅಭಿಯಾನವನ್ನು ಸದ್ದಿಲ್ಲದೇ ಪ್ರಾರಂಭಿಸಿತ್ತು. ಭೀಮಾ ಕೋರೆಗಾಂವ್ ಪ್ರಕರಣದ ನೆಪದಲ್ಲಿ ಪ್ರಮುಖ 16 ಹೋರಾಟಗಾರರನ್ನು ಯುಎಪಿಎ ಕಾಯ್ದೆಯಡಿ ಈಗಾಗಲೇ ಜೈಲಿಗಟ್ಟಿದೆ. 1818 ಜನವರಿ ಒಂದರಂದು ಮರಾಠ ಪೇಶ್ವೆಯ ವಿರುದ್ಧ ದಲಿತರು ಕೋರೆಗಾಂವ್‍ನಲ್ಲಿ ಪಡೆದ ಐತಿಹಾಸಿಕ ಗೆಲುವಿನ ಸ್ಮರಣಾರ್ಥ 2018ರಲ್ಲಿ ಆಯೋಜಿಸಲಾಗಿದ್ದ ಸಭೆ ಇದಕ್ಕೊಂದು ನೆಪ. ಈ ಸಭೆಯ ಒಂದು ದಿನ ಮೊದಲು ಎಲ್ಗಾರ್ ಪರಿಷತ್ ಆಯೋಜಿಸಿದ್ದ ಸಭೆಯಲ್ಲಿ ಭಾಗಿಯಾದವರನ್ನು ಮತ್ತು ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನು ಜೈಲಿಗಟ್ಟಲಾಗಿದೆ. 2018 ಜನವರಿ ಒಂದರಂದು ಕೋರೆಗಾಂವ್‍ನಲ್ಲಿ ನಡೆದ ಸಭೆಯು ಹಿಂಸಾತ್ಮಕವಾಗಿ ಕೊನೆಗೊಂಡಿತ್ತು. ಖ್ಯಾತ ನ್ಯಾಯವಾದಿ ಸುಧಾ ಭಾರದ್ವಾಜ್, ಗೌತಮ್ ನವ್ಲಾಖಾ, ಫಾದರ್ ಸ್ಟ್ಯಾನಿ ಸ್ವಾಮಿ, ವರವರ ರಾವ್‍ರಂಥ ಹಲವು ಹಿರಿಯರು ಇವತ್ತು ಜೈಲಲ್ಲಿದ್ದಾರೆ. ಹರ್ಷಮಂದರ್ ಅವರನ್ನು ಸುಪ್ರೀಮ್ ಕೋರ್ಟ್‍ಗೆ ಎಳೆಯಲಾಗಿದೆ. ಅನುಭವಿ ಹೋರಾಟಗಾರರನ್ನು ಜೈಲಿಗಟ್ಟಿ ಮತ್ತು ಪ್ರಬಲ ಕಾಯ್ದೆಗಳನ್ನು ಅವರ ಮೇಲೆ ಹೇರುವ ಮೂಲಕ ಕಿರಿಯರನ್ನು ಬೆದರಿಸುವುದು ಇದರ ಉದ್ದೇಶ. ಹೋರಾಟಗಾರರ ಅಕ್ಕಪಕ್ಕದಿಂದ ಜನರನ್ನು ಚದುರಿಸಿ ಬಲಿಷ್ಠ ಹೋರಾಟ ರೂಪುಗೊಳ್ಳದಂತೆ ತಡೆಯುವ ಹುನ್ನಾರ ಇದು. ಇಂಥ ಸಂದರ್ಭದಲ್ಲಿ ಪ್ರಭುತ್ವವನ್ನು ಎದುರು ಹಾಕಿಕೊಳ್ಳುವುದಕ್ಕೆ ಎರಡು ದಾರಿಗಳಿವೆ.

1. ವಿರೋಧ ಪಕ್ಷವನ್ನು ಬಲಿಷ್ಠಗೊಳಿಸುವುದು.

2. ಹೋರಾಟದಲ್ಲೇ ಸ್ಥಿರವಾಗಿ ನಿಲ್ಲುವುದು.

ಇವರೆಡರಲ್ಲಿ ಒಂದು ಸರಿ, ಇನ್ನೊಂದು ತಪ್ಪು ಎಂದು ಹೇಳುವ ಹಾಗಿಲ್ಲ. ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಆಯ್ಕೆಗಳು ನಡೆಯುತ್ತವೆ. ಸಸಿಕಾಂತ್ ಸೆಂಥಿಲ್ ಇಲ್ಲಿ ಮೊದಲನೆಯದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರು ನಂಬಿರುವ ಮೌಲ್ಯವನ್ನು ಕಾಂಗ್ರೆಸ್ ಪಕ್ಷದ ಮೂಲಕ ಸಾಧ್ಯವಾಗಿಸಿಕೊಳ್ಳಬಹುದು ಎಂದು ಭಾವಿಸಿದ್ದಾರೆ. ಆದರೆ ಹೋರಾಟಗಾರ ನೋರ್ವ ರಾಜಕೀಯ ಪಕ್ಷವನ್ನು ಸೇರುವುದೆಂದರೆ, ಅವರ ಹಿಂದೆ ನಡೆದವರು ಮತ್ತು ಬೆಂಬಲಿಸಿದವರನ್ನು ವಂಚಿಸಿದಂತಲ್ಲವೇ ಎಂಬ ಪ್ರಶ್ನೆ ತಿರಸ್ಕರಿಸುವಂಥದ್ದಲ್ಲ. ಓರ್ವ ಪಕ್ಷಾತೀತ ವ್ಯಕ್ತಿಯಾಗಿ ಸೆಂಥಿಲ್ ಯಾವುದೇ ಹೋರಾಟದಲ್ಲಿ ಭಾಗಿಯಾಗುವುದಕ್ಕೂ ಕಾಂಗ್ರೆಸ್ ಪಕ್ಷದ ವ್ಯಕ್ತಿಯಾಗಿ ಭಾಗವಹಿಸುವುದಕ್ಕೂ ವ್ಯತ್ಯಾಸ ಇದೆ. ಕಾಂಗ್ರೆಸ್ ಪಕ್ಷದ ವ್ಯಕ್ತಿಯಾಗಿ ಅವರು ಎನ್‍ಆರ್ ಸಿ ಹೋರಾಟದಲ್ಲಿ ಭಾಗವಹಿಸುತ್ತಿದ್ದರೆ ಅವರಿಗೆ ಆ ಮಟ್ಟಿನ ಬೆಂಬಲ ಸಿಗುತ್ತಿತ್ತೇ? ಎನ್‍ಆರ್ ಸಿ ಹೋರಾಟವನ್ನು ಜನರು ಪಕ್ಷಾತೀತವಾಗಿ ಸಂಘಟಿಸಿದ್ದರು. ಆದ್ದರಿಂದ,

ಸೆಂಥಿಲ್ ಅವರ ಈ ನಿರ್ಧಾರ ಪ್ರಶ್ನಾರ್ಹಗೊಳ್ಳುವುದು ಸಹಜ. ಆದರೆ ಸೆಂಥಿಲ್ ತನ್ನ ಐಎಎಸ್ ಹುದ್ದೆಯನ್ನು ತೊರೆದಿರುವುದು ಎನ್‍ಆರ್ ಸಿಯನ್ನು ಬೊಟ್ಟು ಮಾಡಿಕೊಂಡು ಅಲ್ಲ. ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ. ವಿಶೇಷವಾಗಿ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದೂ ಇದರಲ್ಲಿ ಒಂದು. ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನದಲ್ಲಿ ಕೇಂದ್ರ ಸರಕಾರ ತೊಡಗಿರುವುದು ಅವರ ರಾಜಿನಾಮೆಗೆ ಮುಖ್ಯ ಕಾರಣಗಳಲ್ಲಿ ಒಂದು. ಎ ನ್‍ಆರ್ ಸಿಯು ಸಂವಿಧಾನದ ಆಶಯಗಳಿಗೆ ವಿರೋಧ ಎಂಬ ಕಾರಣಕ್ಕಾಗಿಯೇ ಅವರು ಆ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ನೋಡಿದರೆ ಅವರ ರಾಜಕೀಯ ಪ್ರವೇಶ ಅಚ್ಚರಿಯದ್ದೇನೂ ಆಗಬೇಕಿಲ್ಲ. ಅವರ ಗುರಿಯಿದ್ದುದು ಸಂವಿಧಾನದ ಮೂಲ ಆಶಯಗಳನ್ನು ಉಳಿಸುವುದು. ಒಂದು ಹಂತದವರೆಗೆ ಜನಜಾಗೃತಿಯಲ್ಲಿ ತೊಡಗಿಸಿಕೊಂಡ ಅವರು ಇದೀಗ ರಾಜಕೀಯ ಪ್ರವೇಶಿಸಿದ್ದಾರೆ. ಮಾತ್ರವಲ್ಲ, ಹೋರಾಟಗಾರರಾಗಿ ಮುನ್ನೆಲೆಗೆ ಬಂದು ಬಳಿಕ ರಾಜಕೀಯ ಪ್ರವೇಶಿಸಿದವರ ದೊಡ್ಡ ಪಟ್ಟಿಯೇ ಈ ದೇಶದ ಶಾಸಕಾಂಗ ಸಭೆಯಲ್ಲಿ ಇದೆ. ಆದರೆ, ಇಲ್ಲಿರುವ ಮುಖ್ಯ ಪ್ರಶ್ನೆ ಏನೆಂದರೆ,

ಅವರ ಆಶಯ ಈಡೇರುವಂಥ ವಾತಾವರಣ ಕಾಂಗ್ರೆಸ್ ಪಕ್ಷದಲ್ಲಿ ಇದೆಯೇ ಎಂಬುದು. ದೇಶದ ಸಂವಿಧಾನ ಮತ್ತು ಜಾತ್ಯತೀತ ಪರಿಕಲ್ಪನೆಗೆ ಕಾಂಗ್ರೆಸ್ ಎಷ್ಟು ಬದ್ಧವಾಗಿದೆ ಎಂಬ ಪ್ರಶ್ನೆ ಎನ್‍ಆರ್‍ಸಿ ಚಳವಳಿಯಲ್ಲಿ ಜೈಕಾರ ಹಾಕಿದ ದೊಡ್ಡ ಜನಸಮೂಹದಲ್ಲೂ ಇತ್ತು ಎಂಬುದು ಸೆಂಥಿಲ್‍ರಿಗೆ ಗೊತ್ತಿಲ್ಲದ್ದೇನಲ್ಲ. ಆದರೆ ರಾಜಕೀಯವಾಗಿ ಸೆಂಥಿಲ್‍ರ ಮುಂದೆ ಕಾಂಗ್ರೆಸ್ ಬಿಟ್ಟರೆ ಬೇರೆ ಆಯ್ಕೆಗಳಿರಲಿಲ್ಲ ಎಂಬುದೂ ನಿಜ. ಅಂದಹಾಗೆ,

ಸೆಂಥಿಲ್ ಕಾಂಗ್ರೆಸ್ ಸೇರುವುದು ಮತ್ತು ಅಣ್ಣಾಮಲೈ ಬಿಜೆಪಿ ಸೇರುವುದು ಎರಡೂ ಒಂದೇ ಅಲ್ಲ. ಸೈದ್ಧಾಂತಿಕವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮೂಲಭೂತ ವ್ಯತ್ಯಾಸ ಇದೆ. ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಎಡವಿರಬಹುದು. ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿರಬಹುದು. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಜನಧ್ವನಿಗೆ, ಹೋರಾಟಗಳಿಗೆ ಮತ್ತು ಪ್ರಭುತ್ವ ವಿರೋಧಿ ಮಾತುಗಳಿಗೆ ಅವಕಾಶ ಇತ್ತು. ಆದರೆ ಬಿಜೆಪಿ ದಮನಿಸಿರುವುದೇ ಈ ಸ್ವಾತಂತ್ರ್ಯವನ್ನು. 2014ರ ಬಳಿಕದ ಈ ವರೆಗಿನ ಬೆಳವಣಿಗೆಯನ್ನು ಪೂರ್ವಾಗ್ರಹವಿಲ್ಲದೇ ಅವಲೋಕಿಸಿದರೆ ಸೆಂಥಿಲ್ ಮತ್ತು ಅಣ್ಣಾಮಲೈ ಅವರ ಆಯ್ಕೆಯನ್ನು ಯಾಕೆ ಸಮಾ ನವಾಗಿ ತೂಗಬಾರದು ಎಂಬುದು ಸ್ಪಷ್ಟವಾಗುತ್ತದೆ.

ಸೆಂಥಿಲ್ ಅವರೊಳಗಿನ ಸಂವಿಧಾನ ಗೆಲ್ಲಲಿ ಎಂಬ ಹಾರೈಕೆಯಷ್ಟೇ ಈಗಿನದು.