ಉಡುಪಿ: ಅರ್ನಬ್ ಗೋಸ್ವಾಮಿ ಬಂಧನಕ್ಕೆ ಆಗ್ರಹಿಸಿ SDPI ವತಿಯಿಂದ ಪ್ರತಿಭಟನೆ

0
856

ಸನ್ಮಾರ್ಗ ವಾರ್ತೆ

ಉಡುಪಿ: ದೇಶಕ್ಕೆ ವಿಶ್ವಾಸಘಾತ ಮಾಡಿದ ಆರೋಪದಲ್ಲಿ ರಿಪಬ್ಲಿಕ್ ಟಿ.ವಿಯ ಅರ್ನಬ್ ಗೋಸ್ವಾಮಿ ವಿರುದ್ಧ ಸರಕಾರ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ವತಿಯಿಂದ ಅಜ್ಜರಕಾಡುವಿನ ಹುತಾತ್ಮರ ಸ್ಮಾರಕ ಭವನದ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

ಪ್ರಸ್ತಾವಿಕ ಭಾಷಣ ಮಾಡಿದ ಎಸ್‌ಡಿಪಿಐ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಉಚ್ಚಿಲ ಇಂತಹ ನಕಲಿ ಪತ್ರಕರ್ತರು ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ. ನಕಲಿ ರಾಷ್ಟ್ರಿಯವಾದಿ ಪತ್ರಕರ್ತ ಅರ್ನಬ್‍ನನ್ನು ತಕ್ಷಣವೇ ಬಂಧಿಸಿ, ಈತನ ವಿರುದ್ದ ಮಹಾರಾಷ್ಟ್ರ ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು.

ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷರಾದ ಇಲ್ಯಾಸ್ ಸಾಸ್ತಾನ ತಮ್ಮ ದಿ‌ಕ್ಸೂಚಿ ಭಾಷಣದಲ್ಲಿ 2019 ಫೆಬ್ರುವರಿ 26ರಂದು ನಡೆದ ಬಾಲಾಕೋಟ್ ದಾಳಿಗೆ ಮೊದಲೇ ಪತ್ರಕರ್ತ ಅರ್ನಬ್ ರಹಸ್ಯ ಮೂಲದಿಂದ ಮಾಹಿತಿ ಬಂದಿದೆ. ತಮ್ಮ ಟಿ.ವಿ ಚಾನಲ್‍ನ ಟಿಆರ್‍ಪಿಗಾಗಿ ರಾಷ್ಟ್ರದೊಂದಿಗೆ ಅರ್ನಬ್ ಆಟ ಆಡಿ, ಸರ್ಕಾರದ ರಹಸ್ಯ ಬಿಟ್ಟುಕೊಟ್ಟಿದ್ದಾರೆ. ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿಯಾಗಿರುವ ನಕಲಿ ರಾಷ್ಟ್ರಿಯವಾದಿ ಪತ್ರಕರ್ತ ಅರ್ನಬ್‍ನನ್ನು ತಕ್ಷಣವೇ ಬಂಧಿಸಿ,ಈತನ ವಿರುದ್ದ ಮಹಾರಾಷ್ಟ್ರ ಸರಕಾರ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ವಹಾಬ್ ಮೂಳೂರು, ರಫೀಕ್ ಪೊಲಿಪು, ಶಂಶುದ್ದಿನ್ ಎಸ್.ಕೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಶ್ರಫ್ ನಿರೂಪಿಸಿ ವಂದಿಸಿದರು ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.