ಸನ್ಮಾರ್ಗ ವಾರ್ತೆ
ಲಕ್ನೋ: ಕೊರೋನ ಭೀತಿಯ ನಡುವೆಯೂ ಉತ್ತರಪ್ರದೇಶದ 30 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರು ಕೆಲಸದ ಸ್ಥಳಕ್ಕೆ ಬರುತ್ತಿದ್ದಾರೆ. ಮಹಾರಾಷ್ಟ್ರ, ಗುಜರಾತ್ ಮೊದಲಾದ ವಿವಿಧ ರಾಜ್ಯಗಳಿಗೆ ತೆರಳಲು ಗೊರಕ್ಪುರ ರೈಲ್ವೆ ನಿಲ್ದಾಣವು ಕಾರ್ಮಿಕರಿಂದ ತುಂಬಿಕೊಂಡಿದೆ. ಹಸಿದು ಸಾಯುವುದಕ್ಕಿಂತ ಕೊರೋನ ಒಳ್ಳೆಯದು ಎಂದು ಅವರು ಹೇಳುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ ಕುಟುಂಬ ಸಾಕಲು ಅವಕಾಶ ಇರುತ್ತಿದ್ದರೆ ಮುಂಬೈಗೆ ಮರಳುವ ಅಗತ್ಯವಿರಲಿಲ್ಲ ಎಂದು ವಲಸೆ ಕಾರ್ಮಿಕರೊಬ್ಬರು ಹೇಳಿದರು. ಮುಂಬೈಯಲ್ಲಿ ಇವರಿಗೆ ಟೈಲರಿಂಗ್ ಯನಿಟ್ ಇದೆ. ಅದು ತಿಂಗಳು ಗಟ್ಟಲೆ ಮುಚ್ಚಿಕೊಂಡಿದೆ. ಯಾವಾಗ ತೆರೆಯಬಹುದು ಗೊತ್ತಿಲ್ಲ. ಆದರೂ ಮುಂಬೈ ತಲುಪಿದರೇ ಏನಾದರೂ ಕೆಲಸ ಮಾಡಿ ಬದುಕಬಹುದು ಎಂಬ ಈತನಲ್ಲಿ ವಿಶ್ವಾಸ ಇದೆ.
ಕೊಲ್ಕತಾದ ಕಂಪೆನಿಯಲ್ಲಿ ಟೆಕ್ನಿಶಿಯನ್ ಪ್ರಸಾದ್ ಉತ್ತರ ಪ್ರದೇಶದ ಮನೆಗೆ ಹೋಳಿ ಹಬ್ಬಕ್ಕೆ ಬಂದಿದ್ದರು. ಲಾಕ್ಡೌನಲ್ಲಿ ಸಿಕ್ಕಿಬಿದ್ದು ಕೊಲ್ಕತಾಕ್ಕೆ ಹೋಗಲಾಗಿಲ್ಲ. ಕೊಲ್ಕತದಲ್ಲಿ ಕಂಪೆನಿ ತೆರೆದಿದೆ. ಆದ್ದರಿಂದ ಕೊರೋನಕ್ಕೆ ಹೆದರದೆ ಅಲ್ಲಿಗೆ ಹೊರಟಿದ್ದಾರೆ. ಬೇರೆ ದಾರಿಯಿಲ್ಲ. ಇಲ್ಲಿದ್ದರೆ ಊಟ ಮಾಡಲು ಏನಿದೆ ಎಂದು ಪ್ರಸಾದ್ ಕೇಳುತ್ತಾರೆ.
ಪೂರ್ವ ಉತ್ತರಪ್ರದೇಶದ ಜನರ ಮನೊಸ್ಥಿತಿ ಹೆಚ್ಚಿನವರದ್ದು ಇದು. ಇಲ್ಲಿಯೇ ಕೆಲಸ ಕೊಡುವುದು ಯೋಗಿ ಸರಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಕೆಲಸ ಇಲ್ಲದ್ದರಿಂದ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಲು ಇವರೆಲ್ಲ ಹೊರಟಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.