‘ನಮ್ಮನ್ನು ವಂಚಿಸಿದ ಬಿಜೆಪಿಯನ್ನು ಸೋಲಿಸುತ್ತೇವೆ’: ಮಮತಾ ಬ್ಯಾನರ್ಜಿಗೆ ಬೆಂಬಲ ಸೂಚಿಸಿದ ಗೂರ್ಖ ಜನ್‍ಮುಕ್ತಿ ಮೋರ್ಚಾ

0
414

ಸನ್ಮಾರ್ಗ ವಾರ್ತೆ

ಸಿಲಿಗುರಿ,ನ.30: ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‍ಗೆ ಗೂರ್ಖ ಜನಮುಕ್ತಿ ಮೋರ್ಚಾ(ಬಿಮರ್ ಗುರುಂಗ್ ವಿಭಾಗ) ಬೆಂಬಲ ಸೂಚಿಸಿದ್ದು ತಮ್ಮನ್ನು ವಂಚಿಸಿದ ಬಿಜೆಪಿಯನ್ನು ಸೋಲಿಸುವ ತೀರ್ಮಾನ ತಳೆದಿದ್ದೇವೆ ಎಂದು ಘೋಷಿಸಿದೆ.

2009 ರಿಂದ 2020ರವರೆಗೆ ನಮಗೆ ಕೊಟ್ಟ ಒಂದು ಮಾತನ್ನು ಅವರು ಪಾಲಿಸಿಲ್ಲ. ಅವರು ಸುಳ್ಳು ವಾಗ್ದಾನ ನೀಡುತ್ತಾರೆ. ಉತ್ತರ ಬಂಗಾಳದ ಜನರು ಮಮತಾರನ್ನು ಬೆಂಬಲಿಸುತ್ತಾರೆ. ವಾಗ್ದಾನ ಪಾಲಿಸುವವರಾದ್ದರಿಂದ ಮಮತಾರನ್ನು ಮೂರನೇ ಬಾರಿಯೂ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತೇವೆ ಎಂದು ಗೂರ್ಖಾ ಜನ್ ಮುಕ್ತಿ ಮೋರ್ಚ ನಾಯಕ ರೋಹನ್ ಗಿರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಗೂರ್ಖಲ್ಯಾಂಡ್ ಸಮಸ್ಯೆಗೆ ಪರಿಹಾರ ಭರವಸೆ ನೀಡುವ ಪಾರ್ಟಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡಲಿದ್ದೇವೆ. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ರಾಜ್ಯದಲ್ಲಿ ಬಿಜೆಪಿ ತೃಣ ಮೂಲಕ ಕಾಂಗ್ರೆಸ್‍ನ ನಡುವೆ ಈ ಸಲ ಕಠಿಣ ಸ್ಪರ್ಧೆ ಕಾಣಿಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಸಖ್ಯದೊಂದಿಗೆ ಚುನಾವಣೆ ಎದುರಿಸಲಿದೆ ಎಂಬ ಸೂಚನೆಯೂ ಇದೆ.