ಮೂಡಿಗೆರೆ; ಹಿಂದೂ ಸಂಸ್ಕಾರದಂತೆ ಯುವಕನ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಯುವಕರು

0
195

ಸನ್ಮಾರ್ಗ ವಾರ್ತೆ

ಕೊಟ್ಟಿಗೆಹಾರ: ಹಿಂದೂ ಯುವಕನ ಶವ ಸಂಸ್ಕಾರಕ್ಕೆ ಮುಸ್ಲಿಂ ಯುವಕರು ನೇತೃತ್ವ ವಹಿಸಿದ ಘಟನೆ ಮೂಡಿಗೆರೆಯಲ್ಲಿ ನಡೆದಿದೆ. ಯುವಕ ಹೃದಯಾಘಾತದಿಂದ ಸಾವಿಗೀಡಾಗಿದ್ದು ಮೂಡಿಗೆರೆಯ ರುದ್ರ ಭೂಮಿಯಲ್ಲಿ ಶವ ಸಂಸ್ಕಾರ ಮಾಡಲಾಗಿದೆ.

ರಾಹುಲ್ ಎಸ್.ನಂದಕುಮಾರ್ ಎಂಬ ಯುವಕ ಮೃತ ದುರ್ದೈವಿ. ಯುವಕ 20 ವರ್ಷಗಳ ಹಿಂದೆ ಮನೆಬಿಟ್ಟು ಬಂದು ಚಕ್ಕಮಕ್ಕಿಯ ಇಮ್ಮಿಯಾಜ್ ಎಂಬವರ ಹೋಟೆಲ್‌ನಲ್ಲಿ ಕೆಲಸಕ್ಕಿದ್ದರು. ಹೃದಯಘಾತದಿಂದ ಶನಿವಾರ ಮೃತಪಟ್ಟಿದ್ದು, ಫೋನ್ ಮೂಲಕ ಅವರ ಸಂಬಂಧಿಕರಿಗೆ ವಿಷಯ ತಿಳಿಸಿದಾಗ ಅವರಿಗೆ ಇಬ್ಬರು ಪತ್ನಿಯರು ಇದ್ದರೆಂದೂ ಮೊದಲ ಪತ್ನಿ ಮೃತಪಟ್ಟಿರುತ್ತಾರೆಂದೂ ತಿಳಿದುಬಂದಿದೆ.

ಎರಡನೇ ಪತ್ನಿ ಅಂತ್ಯಸಂಸ್ಕಾರಕ್ಕೆ ಬರಲು ತಯಾರಿರಲಿಲ್ಲ. ಮೊದಲ ಪತ್ನಿಯಲ್ಲಿ ಜನಿಸಿದ ಮಗ ದಕ್ಷಿಣ ಕನ್ನಡದಲ್ಲಿ ಓದುತ್ತಿರುವುದರಿಂದ ಆತನನ್ನು ಕರೆಸಿ ಯುವಕರು ಅವನ ಕೈಯಿಂದಲೇ ತಂದೆಯ ಅಂತ್ಯಸಂಸ್ಕಾರ ಮಾಡಿಸಲಾಯಿತು. ಹಿಂದೂ ಸಂಪ್ರದಾಯದ ವಿಧಿವಿಧಾನಗಳಂತೆ ಅಂತ್ಯ ಸಂಸ್ಕಾರ ಮಾಡಲಾಯಿತು. ಶವವನ್ನು ಮೂಡಿಗೆರೆಯ ರುದ್ರಭೂಮಿಗೆ ತೆಗೆದುಕೊಂಡು ಹೋಗುವಾಗ ಮುಸ್ಲಿಂ ಯುವಕರೇ ಶವಕ್ಕೆ ಹೆಗಲು ಕೊಟ್ಟಿದ್ದು, ಸಮಾಜ ಸೇವಕ ಮುಹಮ್ಮದ್ ಆರೀಫ್‌ ನೇತೃತ್ವ ವಹಿಸಿದ್ದರು.