ಬಿಹಾರದಲ್ಲಿ ಸಿಡಿಲು ಬಡಿದು 11 ಮಂದಿ ಸಾವು: ಸಂತ್ರಸ್ತರ ಕುಟುಂಬಕ್ಕೆ ತಲಾ 4ಲಕ್ಷ ರೂ. ಪರಿಹಾರ ಘೋಷಣೆ

0
216

ಸನ್ಮಾರ್ಗ ವಾರ್ತೆ

ಪಾಟ್ನಾ: ಬಿಹಾರದ ವಿವಿಧೆಡೆ ಸಿಡಿಲು, ಗುಡುಗು ಸಹಿತ ಮಳೆಗೆ 11 ಮಂದಿ ಸಾವನ್ನಪ್ಪಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಂತ್ರಸ್ತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಸೋಮವಾರ ಸರ್ಕಾರ ಹೊರಡಿಸಿದ ಹೇಳಿಕೆಯಲ್ಲಿ, ಗುಡುಗು ಮತ್ತು ಸಿಡಿಲುಗಳಿಂದಾಗಿ ಪುರ್ನಿಯಾ ಮತ್ತು ಅರಾರಿಯಾದಲ್ಲಿ ತಲಾ ನಾಲ್ಕು ಜನರು ಮತ್ತು ಸುಪೌಲ್‌ನಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. “ಸಂತ್ರಸ್ತ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು, ಮೃತರ ಅವಲಂಬಿತರಿಗೆ ತಕ್ಷಣವೇ 4 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು” ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.

ಪ್ರತಿಕೂಲ ವಾತಾವರಣದಲ್ಲಿ ಜನರು ಜಾಗರೂಕರಾಗಿರಬೇಕು ಮತ್ತು ಅವಘಡಗಳನ್ನು ತಪ್ಪಿಸಲು ವಿಪತ್ತು ನಿರ್ವಹಣಾ ಇಲಾಖೆ ನೀಡಿರುವ ಸಲಹೆಗಳನ್ನು ಪಾಲಿಸುವಂತೆ ಸಿಎಂ ನಿತೀಶ್ ಕುಮಾರ್ ಮನವಿ ಮಾಡಿದರು. “ಮನೆಯಲ್ಲಿಯೇ ಇರಿ ಮತ್ತು ಕೆಟ್ಟ ಹವಾಮಾನದಲ್ಲಿ ಸುರಕ್ಷಿತವಾಗಿರಿ” ಎಂದು ಅವರು ಹೇಳಿದರು.