ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಡಿ. 25: ಎನ್ ಆರ್ ಸಿ ಜಾರಿಯ ಮೊದಲ ಹೆಜ್ಜೆಯೇ ಎನ್ ಪಿ ಅರ್ ಎಂದು ಸಿಪಿಎಂ ಪೊಲಿಟ್ ಬ್ಯೂರೊ ಹೇಳಿದೆ. ಎನ್ಪಿಆರ್ ಗೂ ಸಹಕರಿಸುವುದಿಲ್ಲ ಎಂದು ಕೇರಳ, ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ಹೇಳಿದ್ದಾರೆ. ಎನ್ ಪಿ ಆರ್ ನಲ್ಲಿ ತಂದೆ ತಾಯಿಯ ಜನನ ತಾರೀಕು, ಜನ್ಮಸ್ಥಳವನ್ನು ತಿಳಿಸಬೇಕು. ಅದಲ್ಲದೆ ಇನ್ನೂ 21 ವಿವರಗಳನ್ನು ನೀಡಬೇಕಾಗಿದೆ. 2010ರಲ್ಲಿ ಎನ್ಪಿಆರ್ ಪ್ರಕ್ರಿಯೆಯಲ್ಲಿ ಇಲ್ಲದಿದ್ದ ಹಲವು ವಿವರಗಳನ್ನು ಹೊಸ ಪ್ರಕ್ರಿಯೆಯ ಭಾಗವಾಗಿ ಸಂಗ್ರಹಿಸಲಾಗುತ್ತದೆ.
2003ರಲ್ಲಿ ವಾಜಪೇಯಿ ಸರಕಾರದ ಕಾಲದಲ್ಲಿ ಪೌರತ್ವ ಕಾನೂನಿನಲ್ಲಿ ತಂದ ತಿದ್ದುಪಡಿಯಿಂದ ಇವೆಲ್ಲ ಆಗಿದೆ. ಈ ನಿಯಮದಂತೆ ಎನ್ಆರ್ ಸಿಯನ್ನು ತಯಾರಿಸಲಾಗುತ್ತದೆ ಎಂದೂ ಅದಕ್ಕೆ ಈ ಎನ್ ಪಿ ಅರ್ ಅನ್ನು ಆಧಾರವಾಗಿಸಲಾಗುವುದು ಎಂಬುದೂ ದೃಢವಾಗಿದೆ. 2014ರಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆಬಂದ ನಂತರ ರಾಜ್ಯಸಭೆಯ ಪ್ರಶ್ನೆಗೆ ಉತ್ತರವಾಗಿ ಅಂದಿನ ಗೃಹ ಸಹಮಂತ್ರಿ ಈ ವಿಷಯವನ್ನು ತಿಳಿಸಿದ್ದರು. ಎನ್ ಪಿ ಆರ್ ಪ್ರಕ್ರಿಯೆಯ ಮೂಲಕ ಮಾಹಿತಿ ಸಂಗ್ರಹಿಸಿ ದೇಶದ ಎಲ್ಲ ವ್ಯಕ್ತಿಗಳ ಪೌರತ್ವವನ್ನು ಪರಿಶೀಲಿಸಿ ಭಾರತದ ಪ್ರಜೆಗಳ ಒಂದು ರಾಷ್ಟ್ರೀಯ ರಿಜಿಸ್ಟರ್ ರೂಪಿಸಲು ಕೇಂದ್ರ ತೀರ್ಮಾನಿಸಿದೆ ಎಂದು ಅಂದು ಮಂತ್ರಿ ಹೇಳಿದ್ದರು. ಪ್ರಧಾನಿ ಮೋದಿ ಏನೆಲ್ಲ ಸುಳ್ಳು ಹೇಳಿದರೂ ಇದು ಎನ್ಆರ್ ಸಿಗೆ ಹಾಕಿದ ಪಂಚಾಂಗ ಎಂದು ಯಚೂರಿ ಹೇಳಿದರು.