ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ದಿಲ್ಲಿ ವಿಧಾನಸಭೆಯಿಂದ ಕೆಂಪುಕೋಟೆಯವರೆಗೆ ಸುರಂಗವೊಂದು ಪತ್ತೆಯಾಗಿದ್ದು ಸುರಂಗದ ಜೊತೆಗೆ ಮರಣದಂಡನೆಗಾಗಿ ಉಪಯೋಗಿಸುವ ಒಂದು ಕೋಣೆಯೂ ಪತ್ತೆಯಾಗಿದೆ. ಸ್ವಾತಂತ್ಯ ಹೋರಟಗಾರರಿಗೆ ಹೆದರಿ ಬ್ರಿಟಿಷರು ಸುರಂಗ ನಿರ್ಮಿಸಿರಬಹುದು ಎಂದು ಶಂಕಿಸಲಾಗಿದೆ. ವಿಧಾನಸಭೆಯಿಂದ ಕೆಂಪು ಕೋಟೆಯವರೆಗೆ ಸುರಂಗವಿದೆ ಎಂದು ತಿಳಿದಿದ್ದರೂ ಅದರ ಪ್ರವೇಶ ದ್ವಾರ ಈಗ ಕಂಡು ಬಂತು.
1912ರಲ್ಲಿ ದೇಶದ ರಾಜಧಾನಿ ಬ್ರಿಟಿಷರು ಕೊಲ್ಕತಾದಿಂದ ದಿಲ್ಲಿಗೆ ಬದಲಾಯಿಸಿದ್ದರು. ಅಂದಿನಿಂದ ವಿಧಾನಸಭೆ ಮತ್ತು ಕೋರ್ಟು ದಿಲ್ಲಿಯಲ್ಲಿತ್ತು. ಸೆರೆಹಿಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಕೆಂಪು ಕೋಟೆಯಿಂದ ಕೋರ್ಟಿಗೆ ತಲುಪಿಸಲು ಸುರಂಗ ನಿರ್ಮಿಸಿದ್ದಾಗಿರಬಹುದು.
1993ರಲ್ಲಿ ಶಾಸಕರಾಗಿದ್ದಾಗ ಕೆಂಪುಕೋಟೆಯವರೆಗೆ ಸುರಂಗ ಇದೆ ಎಂಬ ಮಾತನ್ನು ಕೇಳಿಸಿಕೊಂಡಿದ್ದೆ ಎಂದು ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಹೇಳಿದರು. ಇತಿಹಾಸದಲ್ಲಿ ಸುರಂಗದ ಕುರಿತು ಹುಡುಕಾಡಿದಾಗ ಆ ಬಗ್ಗೆ ವಿವರ ಸಿಗಲಿಲ್ಲ. ಈಗ ಸುರಂಗದ ಪ್ರವೇಶದ್ವಾರ ಪತ್ತೆಯಾಗಿದೆ ಎಂದು ಅವರು ಹೇಳಿದರು.