ಒಂದು ವರ್ಗದ ಜನ ಕೋವಿಡ್ ಮೊದಲ ಡೋಸ್ ಹಾಕಿಸಲು ಮುಂದೆ ಬರುತ್ತಿಲ್ಲ: ದ.ಕ.ಜಿಲ್ಲಾಧಿಕಾರಿ

0
277

ಸನ್ಮಾರ್ಗ ವಾರ್ತೆ

ಮಂಗಳೂರು: ಕೋವಿಡ್ ಸೋಂಕಿತರ ಸಂಖ್ಯೆ, ಪಾಸಿಟಿವಿಟಿ ದರವೇನೋ ಇಳಿಯುತ್ತಿದೆ. ಆದರೆ ಒಮೈಕ್ರಾನ್‌ನಂತಹ ಸೂಕ್ಷ್ಮ ಸಂದರ್ಭದಲ್ಲಿ ನಮಗೆ ಲಸಿಕೆ ಗುರಿ ಪೂರೈಸುವುದು ಈಗಿನ ಸಂದರ್ಭದಲ್ಲಿ ಅತ್ಯಗತ್ಯ. ಆದರೆ ಇನ್ನೂ ಯುವಜನತೆ ಹಾಗೂ ಒಂದು ವರ್ಗದ ಜನ ಕೋವಿಡ್ ಮೊದಲ ಡೋಸ್ ಹಾಕಿಸಲು ಮುಂದೆ ಬರುತ್ತಿಲ್ಲ ಎಂದು ಎಂದು ದ.ಕ. ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ಸೂಚಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೋವಿಡ್ ಪಾಸಿಟಿವಿಟಿ ದರ ಕಡಿಮೆಯಾಗಿದ್ದರೂ, ಜನರು ಹಬ್ಬ, ಧಾರ್ಮಿಕ ಚಟುವಟಿಕೆ ಸೇರಿದಂತೆ ಜನ ಸೇರುವ ಕಾರ್ಯಕ್ರಮಗಳಲ್ಲಿ ಸ್ವಯಂ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸದ್ಯಕ್ಕೆ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ 0.26ರಷ್ಟಿದೆ, ಕೋವಿಡ್ ಪ್ರಕರಣ ಇಳಿಕೆಯಾಗಿದೆ. 35 ಮಂದಿ ಮಾತ್ರವೇ ಆಸ್ಪತ್ರೆಯಲ್ಲಿದ್ದಾರೆ. ಒಟ್ಟು ಸಕ್ರಿಯ ಪ್ರಕರಣ 164 ಇದೆ, ಹಾಗಿದ್ದರೂ ಒಮೈಕ್ರಾನ್ ಪ್ರಭೇದದ ವೈರಸ್ ತೀರಾ ವೇಗವಾಗಿ ಪ್ರಸರಿಸುವ ಕಾರಣದಿಂದ ಜನರು ಮೈಮರೆಯದೆ ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸುವುದು, ಕಾರ್ಯಕ್ರಮ ಆಯೋಜಿಸುವಲ್ಲಿ ಸ್ವಯಂ ನಿಯಂತ್ರಣ ಹೇರಿಕೊಳ್ಳುವ ಅತೀ ಅಗತ್ಯ ಎಂದರು.

ಹಬ್ಬ, ಬ್ರಹ್ಮ ರಥೋತ್ಸವ, ಲಕ್ಷ ದೀಪೋತ್ಸವ, ಧಾರ್ಮಿಕ ಚಟುವಟಿಕೆಗಳು, ಕ್ರಿಸ್‌ಮಸ್ ಆಚರಣೆ, ಉರೂಸ್ ಸಂಭ್ರಮಾಚರಣೆ ನಡೆಯುತ್ತಿದ್ದು, ಸರಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಹೊರಡಿಸಿರುವ ನಿರ್ದೇಶಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸಹಕರಿಸಬೇಕು ಎಂದರು.