ಬೀದಿ ಬದಿ ವ್ಯಾಪಾರಿಗಳ ಬದುಕು ಬೀದಿಪಾಲು ಮಾಡದಿರಿ: ತೆರವು ಕಾರ್ಯಾಚರಣೆ ಕುರಿತು ಆತಂಕ ವ್ಯಕ್ತಪಡಿಸಿದ FITU

0
473

ಸನ್ಮಾರ್ಗ ವಾರ್ತೆ

ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಕೆಲವೆಡೆಗಳಲ್ಲಿರುವ, ಬೀದಿ ಬದಿ ವ್ಯಾಪಾರಿಗಳ ಮೇಲೆ ಬಲವಂತ ಮಾಡಿ ಕ್ರೌರ್ಯತೆ ಮೆರೆದು ತೆರವು ಕಾರ್ಯಾಚರಣೆ ನಡೆಸುವ ರೀತಿಗೆ, ಫೆಡರೇಷನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (F.I.T U.) ಇದರ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎಂ. ದಿವಾಕರ್ ರಾವ್ ಬೋಳೂರುರವರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

ಇದೀಗ ಮಹಾ ನಗರ ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆಯ ಆಯುಕ್ತರಿಂದ ಮುಂಚಿತವಾಗಿಯೇ ಯಾವುದೇ ನೋಟೀಸು ಜಾರಿಯಾದ ಬಗ್ಗೆ ನಮಗೆ ತಿಳಿದಿಲ್ಲ ಒಂದೊಮ್ಮೆ ತೆರವು ಕಾರ್ಯಾಚರಣೆಯಿಂದ ಸಂತ್ರಸ್ತರಾಗಿರುವ ಬೀದಿ ಬದಿ ವ್ಯಾಪಾರಿಗಳು ಅನಧಿಕೃತವಾಗಿದ್ದರೂ ಅಂತಹವರನ್ನೂ ಪೂರ್ವಸೂಚನೆಯನ್ನೂ ನೀಡದೆ ಒದ್ದೋಡಿಸಿ ದುಡಿಯುವ ಬಡಜನರು ಕಷ್ಟದಿಂದ ಸಂಪಾದಿಸಲು ಸರಕು ಸಾಗಣೆ ಮಾಡುವ ಗಾಡಿಗಳನ್ನಾಗಲೀ, ಮರದ ಅಥವಾ ಕಬ್ಬಿಣದ, ಹರುಕುಮುರುಕು ಮಳಿಗೆಗಳನ್ನಾಗಲೀ ಧ್ವಂಸಗೊಳಿಸುವುದು ಅಕ್ಷಮ್ಯ. ಇನ್ನು ಅವರಲ್ಲಿ ಯಾರಾದರೂ ಅಧಿಕೃತವಾಗಿ ಪಾಲಿಕೆಯಿಂದ ಯಾವುದೇ ರೀತಿಯ ಅನುಮತಿ, ಪರವಾನಿಗೆ ಹೊಂದಿದ್ದಲ್ಲಿ ಅಷ್ಟೊಂದು ವ್ಯಾಪಾರಿ ಕಾರ್ಮಿಕರಿಗೆ ಪಾಲಿಕೆಯ ವತಿಯಿಂದ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂತೆಯೇ, ಮಂಗಳೂರು ನಗರವನ್ನು ಸಂಬಂಧಿಸಿದಂತೆ ಕೇಂದ್ರ ಸರಕಾರದ ಮುಂದಿರುವ ಸ್ಮಾರ್ಟ್ ಸಿಟಿ ಯೋಜನೆ ಇತ್ಯಾದಿ ಅಭಿವೃದ್ಧಿ ಕಾರ್ಯಗಳ ಯಶಸ್ವಿಗೆ ಬೇಕಾಗಿ, ನಮ್ಮ ಬೀದಿ ಬದಿ ವ್ಯಾಪಾರಿಗಳು ಕೂಡಾ, ಪಾಲಿಕೆಯ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸಲು, ತಾವು ಅವರ ಆದೇಶಗಳಿಗೆ ಬೆಲೆ ತೆತ್ತು ಸಾದ್ಯಂತ ಸಹಕರಿಸಿಕೊಳ್ಳುವಂತೆ ಅವರಿಗೂ ಕಿವಿಮಾತು ನೀಡಿದರು. ಅದೇನಿದ್ದರೂ, ಸರಕಾರ ಜನಸಾಮಾನ್ಯರಾಗಿರುವ, ಬಡ ಬೀದಿಬದಿ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ನಡೆಸಿ ಅವರ ಬದುಕನ್ನು ಬೀದಿಪಾಲು ಮಾಡುವಂತಹ ಕ್ರಮವನ್ನು ಖಂಡಿಸುವೆವು ಮತ್ತು ಅವರಿಗೆ ತಕ್ಷಣ ಬೇರೆ ಜಾಗಗಳಲ್ಲಿ ವ್ಯಾಪಾರಕ್ಕೆ ಅವಕಾಶ ಅಥವಾ ನ್ಯಾಯಯುತ ಪರಿಹಾರವನ್ನು ನೀಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಎಫ್.ಐ.ಟಿ.ಯು. ಕಾರ್ಮಿಕ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಶ್ರೀಯುತ ಗೋಪಾಲರವರು ಉಪಸ್ಥಿತರಿದ್ದರು.