ತ್ರಿಪುರದ ಉದಯಪುರ ಸರೋವರದಲ್ಲಿ ನೂರಾರು ವಲಸೆ ಹಕ್ಕಿಗಳ ಸಾವು

0
380

ಸನ್ಮಾರ್ಗ ವಾರ್ತೆ

ಅಗರ್ತಲ: ತ್ರಿಪುರಕ್ಕೆ ಆಗಮಿಸುವ ಅಪೂರ್ವ ಜಾತಿಯ ನೂರಕ್ಕೂ ಹೆಚ್ಚು ದೇಶಾಟನ ಹಕ್ಕಿಗಳು ಸಾಮೂಹಿಕವಾಗಿ ಸತ್ತು ಬಿದ್ದಿವೆ. ಗೋಮತಿ ಜಿಲ್ಲೆಯ ಕಿಲ್‍ಪಾರದ ಸುಖ್ ಸಾಗರ ಸರೋವರ ಪರಿಸರದಲ್ಲಿ ಹಕ್ಕಿಗಳ ಮೃತದೇಹ ಕಂಡು ಬಂದಿದ್ದು ಡಿಎಫ್‍ಓ ಮಹೇಂದ್ರ ಸಿಂಗ್ ನೇತೃತ್ವದಲ್ಲಿ ಅರಣ್ಯ ಇಲಾಖೆ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಕ್ಕಿಗಳ ಸಾವಿನ ಕುರಿತು ತನಿಖೆ ನಡೆಯುತ್ತಿದೆ ಎಂದು ಡಿವಿಷನಲ್ ಫಾರೆಸ್ಟ್ ಆಫಿಸರ್ ಕಮಾಲ್ ಭೌಮಿಕ್ ತಿಳಿಸಿದರು.

ಕಳೆದ ಏಳು ವರ್ಷಗಳಿಂದ ಉದಯಪುರದಲ್ಲಿ ದೇಶಾಟನ ಹಕ್ಕಿಗಳು ಬರುತ್ತಿವೆ. ಕ್ಯಾಲಿಫೋರ್ನಿಯದಿಂದ ಹಕ್ಕಿಗಳು ಉದಯಪುರಕ್ಕೆ ಬರುತ್ತವೆ. ಚಳಿಗಾಲದಲ್ಲಿ ಅವು ತ್ರಿಪುರ ಸಂದರ್ಶಿಸುತ್ತವೆ. ಹಕ್ಕಿಗಳ ಸಾವಿಗೆ ಅಲ್ಲಿನ ಹವಾಮಾನ ಬದಲಾವಣೆ ಕಾರಣ ಎನ್ನಲಾಗುತ್ತಿದೆ. ಸರೋವರದ ಸಮೀಪದಲ್ಲಿ ಕೃಷಿಗೆ ಉಪಯೋಗಿಸುವ ಕೀಟನಾಶಕಗಳಿದ್ದು ಹಕ್ಕಿಗಳು ಸೇವಿಸಿರುವುದು ಕೂಡ ಅವುಗಳ ಸಾವಿಗೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಇಲ್ಲಿ ಕೀಟನಾಶಕವನ್ನು ಸ್ಥಳೀಯರು ಕೃಷಿಗೆ ಬಳಸುತ್ತಾರೆ.