ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿದ್ದಾರೆ: ಕುಟುಂಬಕ್ಕೆ ಸಂದೇಶ ರವಾನಿಸಿದ ಪಾಕ್ ವಿದೇಶ ಸಚಿವ

0
603

ಇಸ್ಲಾಮಾಬಾದ್: ಜಿನೇವಾ ಒಡಂಬಡಿಕೆಯಂತೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‍ರಿಗೆ ಮಾನವೀಯ ಪರಿಗಣನೆ ನೀಡಲಾಗುತ್ತಿದೆ ಎಂದು ಪಾಕಿಸ್ತಾನದ ವಿದೇಶ ಸಚಿವ ಶಾ ಮಹಮೂದ್ ಕುರೇಶಿ ಪಾಕ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಒಂದು ಜವಾಬ್ದಾರಿಯಿರುವ ದೇಶವಾಗಿದೆ. ಅದರ ಸೇನೆ ಹೆಚ್ಚು ವೃತ್ತಿಪರವಾಗಿದೆ. ಜಿನೇವ ಕನ್ವೆನ್ಶನ್‌ನಂತೆ ಅಭಿನಂದನ್‍ರನ್ನು ಮಾನವೀಯ ನೆಲೆಯಲ್ಲಿ ನೋಡಲಾಗುತ್ತಿದೆ.

ಅವರಿಗೆ ನಾವು ತುಂಬ ಗೌರವ ಹಾಗೂ ಸೌಲಭ್ಯವನ್ನು ನೀಡಿದ್ದೇವೆ ಮತ್ತು ಅದನ್ನು ಇನ್ನು ಕೂಡ ಮುಂದುವರಿಸುತ್ತೇವೆ. ಜೊತೆಗೆ ವರ್ಧಮಾನ್‍ರ ಕುಟುಂಬಕ್ಕೆ ಸಂದೇಶವನ್ನು ನೀಡಿದ್ದು ನೀವು ವರ್ಧಮಾನರ ಕುರಿತು ಆತಂಕಗೊಳ್ಳುವ ಅಗತ್ಯವಿಲ್ಲ. ಅವರು ಸುರಕ್ಷಿತರಾಗಿದ್ದರೆ ಅವರಿಗೆ ಎಲ್ಲ ಸೌಲಭ್ಯಗಳನ್ನು ಕೊಡುತ್ತಿದ್ದೇವೆ. ಅವರು ಆರೋಗ್ಯ ಪೂರ್ಣರಾಗಿದ್ದರೆ ಎಂದು ಪಾಕಿಸ್ತಾನ ವಿದೇಶ ಸಚಿವರು ಹೇಳಿದರು.

ವರ್ಧಮಾನರನ್ನು ಮರಳಿಸುವ ವಿಚಾರ ಪಾಕಿಸ್ತಾನದ ಪ್ರಧಾನಿಯ ಕೈಯಲ್ಲಿದೆ. ಅದು ಅವರ ಹಕ್ಕಾಗಿದ್ದು ಅವರ ಮಾತು, ವರ್ತನೆಗಳು ಒಂದೇ ಆಗಿವೆ. ಸಂಘರ್ಷವನ್ನು ಮಾತುಕತೆಯ ಮೂಲಕ ಬಗೆಹರಿಸಲು ನಾವು ಬಯಸುತ್ತಿದ್ದೇವೆ ಎಂದು ಮಹಮೂದ್ ಕುರೈಶಿ ಹೇಳಿದರು.