ಅಬುಧಾಬಿ: ನಮ್ಮದು ಭಯೋತ್ಪಾದನೆಯ ವಿರುದ್ಧದ ಹೋರಾಟವೇ ಹೊರತು ಯಾವುದೇ ಧರ್ಮದ ವಿರುದ್ಧ ಹೋರಾಟವಲ್ಲ ಎಂದು ಭಾರತದ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಎಲ್ಲ ಧರ್ಮಗಳು ಶಾಂತಿಯ ಕುರಿತು ಮಾತಾಡುತ್ತವೆ ಎಂದು ಸುಷ್ಮಾ ಹೇಳಿದರು. ಧರ್ಮ ಒಂದೇ. ಮನುಷ್ಯರು ವಿವಿಧ ರೀತಿಯಲ್ಲಿ ಆರಾಧಿಸುತ್ತಾರೆ ಎಂದು ಋಗ್ವೇದವನ್ನು ಉಲ್ಲೇಖಿಸುತ್ತಾ ಓ ಐ ಸಿ ವಿದೇಶ ಸಚಿವರ ಸಮ್ಮೇಳನದಲ್ಲಿ ಸುಷ್ಮಾ ಸ್ವರಾಜ್ ಹೇಳಿದರು.
ಮನುಷ್ಯತ್ವವನ್ನು ಸಂರಕ್ಷಿಸಬೇಕಾದರೆ ಭಯೋತ್ಪಾದನೆಗೆ ಹಣ ನೀಡುವುದನ್ನು ದೇಶಗಳು ನಿಲ್ಲಿಸಬೇಕು. ಪಾಕಿಸ್ತಾನ ಭಯೋತ್ಪಾದನೆಯನ್ನು ಕೊನೆಗೊಳಿಸದೆ ವಲಯದಲ್ಲಿ ಶಾಂತಿ ಅರಳದು ಎಂದು ಸುಷ್ಮಾ ಹೇಳಿದರು.
ಇಸ್ಲಾಮ್ ಎಂದರೆ ಶಾಂತಿ. ಅಲ್ಲಾಹನ 99 ನಾಮಗಳಲ್ಲಿ ಯಾವ ನಾಮವೂ ಹಿಂಸೆಯನ್ನು ಬೋಧಿಸುವುದಿಲ್ಲ ಎಂದರು.
ಮಹಾತ್ಮಾ ಗಾಂಧಿಯ ನಾಡಿನಿಂದ ನಾನು ಬಂದಿದ್ದೇನೆ. ಎಲ್ಲರಿಗೂ ಶಾಂತಿಯನ್ನು ಗಾಂಧಿ ಬಯಸುತ್ತಿದ್ದರು. ಅದಕ್ಕಾಗಿ ಪ್ರಾರ್ಥಿಸುತ್ತಿದ್ದರು. ಇಸ್ಲಾಮಿ ದೇಶಗಳು ಭಾರತಕ್ಕೆ ನೀಡಿದ ಬೆಂಬಲಕ್ಕೆ ಸುಷ್ಮಾ ಕೃತಜ್ಞತೆ ಸಲ್ಲಿಸಿದರು. ಅವರು ವಿವಿಧ ದೇಶಗಳ ನಾಯಕರನ್ನು ಭೇಟಿಯಾದರು.