ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ: ರಾಜ್ಯ ಸರ್ಕಾರದಿಂದ ಮೂರು ತಿಂಗಳ ಗಡುವು ವಿಸ್ತರಣೆ

0
145

ಸನ್ಮಾರ್ಗ ವಾರ್ತೆ

ಕರ್ನಾಟಕದಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಈಗಾಗಲೇ ಎರಡ್ಮೂರು ಬಾರಿ ಅವಧಿ ವಿಸ್ತರಣೆ ಮಾಡಿದ್ದು, ಜೂನ್ 12ಕ್ಕೆ ಕೊನೆಯ ದಿನಾಂಕವಾಗಿತ್ತು. ಆದರೆ, ಕರ್ನಾಟಕ ಹೈಕೋರ್ಟ್​  ಹೆಚ್ಎಸ್‌ಆರ್‌ಪಿ ಅಳವಡಿಸದವರ ವಿರುದ್ಧ ಜುಲೈ 4ರವರೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅಲ್ಲದೆ, ಹೆಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವನ್ನು ವಿಸ್ತರಿಸಲು ಒಪ್ಪಿಗೆ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸೆಪ್ಟೆಂಬರ್ 15ರ ವರೆಗೆ ಕಾಲಾವಕಾಶ ನೀಡಿದೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, “ಸೆಪ್ಟೆಂಬರ್ 15 ವರಿಗೆ ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಡೆಡ್​ಲೈನ್ ನೀಡಲಾಗಿದೆ. ಸೆಪ್ಟೆಂಬರ್ 15ರ ಬಳಿಕ ಅವಧಿ ವಿಸ್ತರಣೆ ಇಲ್ಲ. ಈಗಾಗಲೇ ಹಲವು ಬಾರಿ ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಣೆ ಮಾಡಿದ್ದೇವೆ” ಎಂದು ಸ್ಪಷ್ಟಪಡಿಸಿದರು.

“ಶೀಘ್ರದಲ್ಲೇ ಹೆಚ್ಎಸ್ಆರ್​ಪಿ ಗಡುವು ವಿಸ್ತರಣೆ ಆದೇಶ ಹೊರಡಿಸಲಾಗುತ್ತದೆ. ಮತ್ತೆ ಗಡುವು ವಿಸ್ತರಣೆ ಮಾಡುವುದಿಲ್ಲ. ಸೆಪ್ಟೆಂಬರ್ 15ರೊಳಗೆ ವಾಹನಗಳಿಗೆ ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಆಳವಡಿಸಿಕೊಳ್ಳಿ” ಎಂದು ವಾಹನ ಸವಾರರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.

2019ರ ಏಪ್ರಿಲ್ 1ನೇ ತಾರೀಖಿಗೆ ಮೊದಲು ನೋಂದಾಯಿಸಲಾದ ವಾಹನಗಳಿಗೆ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ(ಹೆಚ್‌ಎಸ್‌ಆರ್‌ಪಿ) ಅಳವಡಿಸಲು ಜೂನ್ 12 ಕೊನೆ ದಿನವಾಗಿತ್ತು. ಆದರೆ, ಹೆಚ್‌ಎಸ್‌ಆರ್‌ಪಿ ಅಳವಡಿಸದ ವಾಹನ ಮಾಲೀಕರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಈ ಮೊದಲು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಜುಲೈ 4ರ ತನಕ ವಿಸ್ತರಣೆ ಮಾಡಿದೆ. ಇದೀಗ ಖುದ್ದು ರಾಜ್ಯ ಸರ್ಕಾರ, ಸೆಪ್ಟೆಂಬರ್ 15ರ ವರೆಗೆ ವಿಸ್ತರಣೆ ಮಾಡಲು ಮುಂದಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಲಿದೆ.