ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದ ಪ್ರಾಂಶುಪಾಲರ ಹೆಸರನ್ನು ಪಟ್ಟಿಯಿಂದ ಕೈಬಿಡಲು ವೆಲ್ಪೇರ್ ಪಾರ್ಟಿ ಆಗ್ರಹ

0
336

ಸನ್ಮಾಗ ವಾರ್ತೆ

ಬೆಂಗಳೂರು: ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದ ಪ್ರಾಂಶುಪಾಲರಿಗೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿಯನ್ನು ನೀಡಿರುವುದು ಖಂಡನೀಯ.

ಹೆಣ್ಮಕ್ಕಳ ಸಂವಿಧಾನ ಬದ್ದ ಹಕ್ಕನ್ನು ಕಸಿದಂತಹ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರನ್ನು ಶಿಕ್ಷಕರ ದಿನದ ಸಂದರ್ಭದಲ್ಲಿ ಉತ್ತಮ ಪ್ರಾಂಶುಪಾಲರಾಗಿ ಆಯ್ಕೆ ಮಾಡಿರುವುದು ಸರಕಾರ ಜನತೆಗೆ ಬಗೆದ ದ್ರೋಹ. ತಕ್ಷಣ ಈ ಪ್ರಶಸ್ತಿಗೆ ಆಯ್ಕೆಗೊಂಡ ರಾಮಕೃಷ್ಣ. ಬಿ.ಜಿ ಹೆಸರನ್ನು ಕೈಬಿಡಬೇಕೆಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಆಗ್ರಹಿಸಿದ್ದಾರೆ.

ಎರಡು ವರ್ಷಗಳ ಹಿಂದೆ ನಡೆದ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಹಿಜಾಬ್ ಧರಿಸಿ ಬಂದ 160 ಹೆಣ್ಮಕ್ಕಳನ್ನು ಗೇಟ್ ಹೊರಗಡೆ ನಿಲ್ಲಿಸಿ ಸತಾಯಿಸಿದ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ ಯವರಿಗೆ ಯಾವ ಮಾನದಂಡದ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂಬುದನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಹಿರಂಗಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಮಾತ್ರವಲ್ಲ ಕೋಮುವಾದಿ ಶಕ್ತಿಗಳ ಪ್ರಚೋದನೆಗೆ ಒಳಗಾಗಿ ಕೇಸರಿ ಶಾಲು ಧರಿಸಿ ಬಂದ 36 ವಿಧ್ಯಾರ್ಥಿಗಳು ಕೂಡಾ ಅನುತೀರ್ಣರಾಗಿದ್ದಾರೆ. ಇಂತಹದ್ದನ್ನು ಪ್ರೋತ್ಸಾಹಿಸಿದವರನ್ನು ಪ್ರಶಸ್ತಿ ನೀಡಿ ಪುರಸ್ಕರಿಸುವ ಕಾಂಗ್ರೆಸ್ ನ ಜಾತ್ಯತೀತತೆ ಸಂಶಯಾಸ್ಪದವಾಗಿದೆ ಎಂದೂ ಅವರು ಹೇಳಿದ್ದಾರೆ.