ಕೋಲಾರದಲ್ಲಿ ಪರಸ್ಪರ ಹೃದಯ ಬೆಸೆದ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮ

0
273

ಸನ್ಮಾರ್ಗ ವಾರ್ತೆ

ಅಲ್ಲಿ ಸಂಭ್ರಮವೇ ಮೇಲೈಸಿತ್ತು. ಜಾತಿ-ಧರ್ಮ- ಪಂಥ -ವರ್ಗ- ವರ್ಣ ಭೇದವಿಲ್ಲದೆ ಅಲ್ಲಿ ಪುರುಷರು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಮಸೀದಿಯ ಒಳಗೊಂದು ಸುತ್ತು ಹಾಕಿದರು. ಮಸೀದಿಯ ಆವರಣದಲ್ಲಿ ನಡೆಯುವ ಚಟುವಟಿಕೆಗಳನ್ನು ನೋಡಿ ಕಣ್ತುಂಬಿದರು. ಕೆಲವರು ಭಾವುಕರಾದರು. ಇನ್ನೂ ಕೆಲವರು ತಮ್ಮ ಬಹುದಿನಗಳ ಕನಸು ನೆರವೇರಿತು ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು. ಕೆಲವರು ಕೆಲ ಹೊತ್ತು ಮೌನವಾಗಿ ಧ್ಯಾನಾಸಕ್ತರಾದರು.

ಹೌದು. ಇದು ನಡೆದದ್ದು ಕೋಲಾರ ನಗರದ ಗೌರಿಪೇಟೆಯಲ್ಲಿರುವ ಐತಿಹಾಸಿಕ ಹಜರತ್‌ ಲತೀಫ ಬಾನು ಮಸೀದಿಯಲ್ಲಿ. ಕೋಲಾರದ ಬಲು ಪುರಾತನ ಮಸೀದಿಯಿದು. ಸುಮಾರು ಮೂರು ಶತಮಾನಗಳ ಹಿಂದೆ ಲತೀಫ ಬಾನು ಎಂಬ ಮಹಿಳೆ ತನ್ನ ಜಮೀನನ್ನು ಈ ಮಸೀದಿಗಾಗಿ ದಾನ ಮಾಡಿದ್ದರು. ಅವರ ಹೆಸರನ್ನೇ ಈ ಮಸೀದಿಗೆ ಇಡಲಾಗಿದೆ. ಮಸೀದಿಯ ಪಕ್ಕದಲ್ಲೇ ಆ ಸಾತ್ವಿಕ ಮಹಿಳೆಯ ಸಮಾಧಿಯೂ ಇದೆ.

ಸೆ.29ರ ಭಾನುವಾರ ಕೋಲಾರದ ಗೌರೀಪೇಟೆಯ ಜನರಿಗೆ ಸಂಭ್ರಮ, ಸಡಗರದ ದಿನವಾಗಿತ್ತು. ಸ್ಥಳೀಯ ಜಮಾಅತೆ ಇಸ್ಲಾಮೀ ಹಿಂದ್ ಮತ್ತು ಹಜರತ್ ಲತೀಫ ಬಾನು ಮಸೀದಿಯ ಆಡಳಿತ ಸಮಿತಿಯ ವತಿಯಿಂದ ‘ನಮ್ಮೂರ ಮಸೀದಿ ನೋಡ ಬನ್ನಿ …’ಎಂಬ ಹೆಸರಿನಲ್ಲಿ ಸಾರ್ವಜನಿಕ ಮಸೀದಿ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಆಯೋಜಕರ ಕರೆಗೆ ಓಗೊಟ್ಟ ಸಾರ್ವಜನಿಕರು ಮಸೀದಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಬೆಳಗ್ಗೆ 10 ಗಂಟೆಗೆ ಆರಂಭವಾದ ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಮೊದಲಿಗೆ ಮಸೀದಿಯ ಇತಿಹಾಸ, ಅಝಾನ್, ವುಜೂ (ಅಂಗಸ್ನಾನ), ಮಸೀದಿಯ ಒಳಗೆ ನಡೆಯುವ ಕಾರ್ಯ ಚಟುವಟಿಕೆಗಳು, ನಮಾಝ್ ನ ಸ್ವರೂಪ, ಮಿಂಬರ್‌, ಮಿಹ್ರಾಬ್ ಇತ್ಯಾದಿ ವಿಷಯಗಳನ್ನು ಸಾರ್ವಜನಿಕರು ಬಹಳ ಆಸಕ್ತಿಯಿಂದ ವೀಕ್ಷಿಸಿದರು. ಕುರಾನ್ ಪಠಣವನ್ನು ಆಲಿಸುವ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ನೂರಾರು ಸ್ತ್ರೀ-ಪುರುಷರು ಇದರ ಪ್ರಯೋಜನವನ್ನು ಪಡೆದರು. ಮುಸ್ಲಿಮರ ಅಂತಿಮ ಸಂಸ್ಕಾರದ ಪ್ರಾತ್ಯಕ್ಷಿಕೆಯನ್ನು ಕೂಡ ತೋರಿಸಿ ಕೊಡಲಾಯಿತು. ಸಾರ್ವಜನಿಕರಿಗಾಗಿ ಪುಸ್ತಕ ಮೇಳ ಮತ್ತು ಲಘು ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ಸಾರ್ವಜನಿಕ ಸಂಪರ್ಕಾಧಿಕಾರಿ ಮುಹಮ್ಮದ್ ನವಾಜ್, ಮುಬಾರಕ್ ಬಾಗಬಾನ್ ಬಂಗಾರಪೇಟೆ, ಮುರ್ತುಜಾ, ಮೊಯಿನುದ್ದೀನ್ ಕಮರ್‌, ಜಮಾಅತೆ ಇಸ್ಲಾಮೀ ಹಿಂದ್ ಕೋಲಾರ ಜಿಲ್ಲಾ ಮಹಿಳಾ ಸಂಚಾಲಕಿಯಾದ ಫೌಜಿಯಾ ಸುಲ್ತಾನ, ರಾಹಿಲಾ ಸುಲ್ತಾನ, ರೂಹಿ ಮಸೀದಿ ದರ್ಶನದ ವಿವರಣೆಯನ್ನು ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಮಾಅತೆ ಇಸ್ಲಾಮೀ ಹಿಂದ್ ಕೋಲಾರ ವಲಯ ಸಂಚಾಲಕರಾದ ಸಯ್ಯದ್ ರೂಹುಲ್ಲಾರವರು ಮಾತನಾಡಿ, “ಮಸೀದಿ ದರ್ಶನವು ಸಂಪೂರ್ಣವಾಗಿ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವ ಕಾರ್ಯಕ್ರಮವಾಗಿದೆ. ಇದರ ಮೂಲಕ ಪರಸ್ಪರರನ್ನು ಅರಿಯುವ, ಹೃದಯಗಳನ್ನು ಬೆಸೆಯುವ ಕಾರ್ಯವನ್ನು ಮಾಡಲಾಗುತ್ತದೆ. ಮಸೀದಿಯ ಒಳಗೆ ನಡೆಯುವ ಚಟುವಟಿಕೆಗಳ ಕುರಿತು ಕೆಲವರಲ್ಲಿ ಪೂರ್ವಾಗ್ರಹಗಳಿದ್ದು, ಅದನ್ನು ದೂರ ಮಾಡುವ ಕೆಲಸ ಇದರ ಮೂಲಕ ಮಾಡಲಾಗುತ್ತದೆ. ಸಂವಹನ ವ್ಯವಸ್ಥೆಯು ಆಗಾಧವಾಗಿ ಬೆಳೆದಿರುವ ಈ ಕಾಲಘಟ್ಟದಲ್ಲಿ ಜನರು ಪರಸ್ಪರ ಹತ್ತಿರವಾಗಬೇಕಿತ್ತು. ಆದರೆ, ದುರದೃಷ್ಟವಶಾತ್ ಜನರು ಇನ್ನಷ್ಟು ದೂರವಾಗುತ್ತಿದ್ದಾರೆ. ಮಸೀದಿ ದರ್ಶನದ ಮೂಲಕ ಶಾಂತಿಯುತ ಸಮಾಜದ ನಿರ್ಮಾಣ ಮಾಡುವ ಹೆಬ್ಬಯಕೆ ನಮ್ಮದಾಗಿದೆ” ಎಂದರು.

ಕೋಲಾರದ ಶಾಸಕರಾದ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್‌ ಸದಸ್ಯರಾದ ಅನಿಲ್ ಕುಮಾರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್‌, ನಗರಸಭೆಯ ಅಧ್ಯಕ್ಷರಾದ ಲಕ್ಷ್ಮಮ್ಮ, ಉಪಾಧ್ಯಕ್ಷರಾದ ಸಂಗೀತ, ಸ್ಥಳೀಯ ಜನಪ್ರತಿನಿಧಿಗಳು, ಧಾರ್ಮಿಕ, ಸಾಮಾಜಿಕ ನೇತಾರರು ಹಾಜರಿದ್ದರು. ಈ ಸಂದರ್ಭದಲ್ಲಿ ಶಾಂತಿ ಪ್ರಕಾಶನದ ನೂತನ ಕೃತಿ ‘ಪ್ರವಾದಿ ಮುಹಮ್ಮದ್ (ಸ) ಲೇಖನಗಳ ಸಂಕಲನ’ ವನ್ನು ಶಾಸಕರಾದ ಕೊತ್ತೂರು ಮಂಜುನಾಥ್ ಲೋಕಾರ್ಪಣೆ ಮಾಡಿದರು.

ಹಜರತ್‌ ಲತೀಫಾ ಬಾನು ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಅಯ್ಯಾಜ್, ಕಾರ್ಯದರ್ಶಿ ನಸೀ‌ರ್ ಅಹಮದ್‌, ಖಜಾಂಜಿ ರಫೀಕ್ ಅಹಮದ್‌ ಅಲ್ಲದೆ ನಗರದ ಧಾರ್ಮಿಕ, ಸಾಮಾಜಿಕ ಮುಂದಾಳುಗಳು ಕಾರ್ಯಕ್ರಮದಲ್ಲಿ ಸಂಪೂರ್ಣ ಸಹಕಾರ ನೀಡಿದ್ದರು.

ಮಸೀದಿಗೆ ಮೊದಲ ಬಾರಿಗೆ ಭೇಟಿ ನೀಡಿದ ರವಿಕುಮಾ‌ರ್ ಕೋಲಾರ ಎಂಬುವವರು ಈ ವೇಳೆ ಮಾತನಾಡುತ್ತಾ, “ಹಲವಾರು ವರ್ಷಗಳಿಂದ ನನಗೆ ಮಸೀದಿಯನ್ನು ನೋಡಬೇಕು ಎಂಬ ಹಂಬಲವಿತ್ತು. ಈ ಹಂಬಲವನ್ನು ನನ್ನ ಮುಸ್ಲಿಂ ಸ್ನೇಹಿತನೋರ್ವನೊಂದಿಗೂ ಹಂಚಿಕೊಂಡಿದ್ದೆ. ಆದರೆ, ಆತ ನಕಾರಾತ್ಮಕ ಉತ್ತರ ನೀಡಿದ್ದ. ಕೆಲವೊಮ್ಮೆ ಮಸೀದಿ ಹತ್ತಿರ ಬಂದು ನೋಡಬೇಕು ಎಂದು ಅಂತ ಅನಿಸಿದಾಗ, ಹೆದರಿ ಹಿಂದೆ ಹೋಗುತ್ತಿದ್ದೆ. ಇಂದು ಆ ಅವಕಾಶ ನನಗೆ ಸಿಕ್ಕಿದ್ದು ಬಹಳ ಸಂತಸವಾಯಿತು. ಮಸೀದಿಯ ಒಳಗಡೆಯ ಹಲವು ವಿಚಾರಗಳನ್ನು ಮಸೀದಿ ದರ್ಶನದ ಮೂಲಕ ತಿಳಿಯಲು ನನಗೆ ಸಾಧ್ಯವಾಯಿತು. ಅದಕ್ಕಾಗಿ ಆಯೋಜಕರಿಗೆ ಧನ್ಯವಾದ ಸಲ್ಲಿಸುವೆ” ಎಂದು ತಿಳಿಸಿದರು.

ಮಸೀದಿ ಸಂದರ್ಶನ ಕಾರ್ಯಕ್ರಮವು ಸಾಯಂಕಾಲ 5 ಗಂಟೆಯವರೆಗೆ ನಡೆಯಿತು. ಮಸೀದಿಗೆ ಆಗಮಿಸಿದ ಸಾರ್ವಜನಿಕರು ‘ಪರಸ್ಪರರನ್ನು ಅರಿಯುವ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕೆಂದು’ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.