ಸುಳ್ಳು ಸುದ್ದಿಗಳ ಉತ್ಪಾದನೆಗೆ ಬೀಗ ಬೀಳಲಿ…

0
139

ಸನ್ಮಾರ್ಗ ಸಂಪಾದಕೀಯ

ಕರ್ನಾಟಕ ಹೈಕೋರ್ಟ್ ನ  ನ್ಯಾಯಾಧೀಶ ವೇದವ್ಯಾಸಾಚಾರ್ ಮತ್ತು ಅಲಹಾಬಾದ್ ಹೈಕೋರ್ಟ್ ನ  ನ್ಯಾಯಾಧೀಶ  ರೋಹಿತ್ ರಂಜನ್ ಅಗರ್ವಾಲ್ ಅವರ ಅಭಿಪ್ರಾಯಗಳಿಗೆ ಸುಪ್ರೀಮ್ ಕೋರ್ಟ್ ಅಸಂತೋಷ ವ್ಯಕ್ತಪಡಿಸಿದೆ. ಮಾತ್ರವಲ್ಲ,  ಅವರ ಹೇಳಿಕೆಗಳನ್ನು ಅಳಿಸಿ ಹಾಕಿದೆ. ಬೆಂಗಳೂರಿನ ಮುಸ್ಲಿಮ್ ಬಾಹುಳ್ಯ ಪ್ರದೇಶವನ್ನು ಈ ವೇದವ್ಯಾಸಾಚಾರ್  ಪಾಕಿಸ್ತಾನಕ್ಕೆ ಹೋಲಿಸಿದ್ದರು. ಹಾಗೆಯೇ, ಧಾರ್ಮಿಕ ಮತಾಂತರವನ್ನು ನಿಲ್ಲಿಸದಿದ್ದರೆ ಮುಂದೊಂದು  ದಿನ  ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ ಎಂದು ರೋಹಿತ್ ರಂಜನ್ ಅಗರ್ವಾಲ್ ಹೇಳಿದ್ದರು. ಅಷ್ಟಕ್ಕೂ,

ಸುಪ್ರೀಮ್ ಕೋರ್ಟ್ ಏನೋ ಇವರಿಗೆ ಬುದ್ಧಿ ಹೇಳಿದೆ. ಆದರೆ, ಬುದ್ಧಿ ಹೇಳಿಸಿಕೊಳ್ಳಬೇಕಾದ ಸ್ಥಾನವೇ ಅದು?  ಹೈಕೋರ್ಟ್ ನ್ಯಾಯಾಧೀಶರೆಂದರೆ ಅವರಲ್ಲಿ ಅಪಾರ ಅನುಭವ ಇರುತ್ತದೆ. ಪ್ರಕರಣವನ್ನು ಮತ್ತು ಸಮಾಜವನ್ನು ಅತ್ಯಂತ  ಸೂಕ್ಷ್ಮವಾಗಿ  ಅವಲೋಕಿಸುವ ಜಾಣ್ಮೆಯೂ ಇರುತ್ತದೆ. ಹೀಗಿದ್ದೂ ಇಷ್ಟೊಂದು ಸಡಿಲ ಹೇಳಿಕೆಯನ್ನು ಇವರು ನೀಡಲು  ಸಾಧ್ಯವಾದದ್ದು ಹೇಗೆ? ಸೋಶಿಯಲ್ ಮೀಡಿಯಾದ ಪ್ರಭಾವಕ್ಕೆ ಅರಿವಿಲ್ಲದೆಯೇ ಇವರು ಒಳಗಾಗುತ್ತಿದ್ದಾರೆಯೇ?  ಮುಸ್ಲಿಮ್ ಸಮುದಾಯದ ಬಗ್ಗೆ ಸುಳ್ಳಿನ ಕಾರ್ಖಾನೆಯಲ್ಲಿ ಪ್ರತಿದಿನ ಉತ್ಪಾದಿಸಿ ಹಂಚಲಾಗುತ್ತಿರುವ ಸುದ್ದಿಗಳು  ನ್ಯಾಯಾಲಯಗಳ ಮೇಲೂ ಪ್ರಭಾವ ಬೀರತೊಡಗಿದೆಯೇ?

ಇತ್ತೀಚೆಗೆ ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಎಂಬವರ ಹತ್ಯೆ ನಡೆಯಿತು. ಆಕೆಯ ದೇಹವನ್ನು 50 ತುಂಡುಗಳನ್ನಾಗಿ ಕತ್ತರಿಸಿ  ಫ್ರಿಡ್ಜ್ನಲ್ಲಿ ಇಡಲಾಗಿತ್ತು. ಈ ಕ್ರೌರ್ಯ ಬೆಳಕಿಗೆ ಬಂದ ತಕ್ಷಣ ಮುಸ್ಲಿಮ್ ದ್ವೇಷಿಗಳು ಚುರುಕಾದರು. ಅಶ್ರಫ್ ಎಂಬವ  ಈಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಪುಕಾರು ಹಬ್ಬಿಸಿದರು. ರಾಜ್ಯ ಬಿಜೆಪಿಯ ಅಧಿಕೃತ ಸೋಶಿಯಲ್ ಮೀಡಿಯಾ  ಖಾತೆಯಲ್ಲೇ  ಈ ಸುಳ್ಳು ಸುದ್ದಿ ಪ್ರಕಟವಾಯಿತು. ‘ಕಾಂಗ್ರೆಸ್ ಸರಕಾರದ ಓಲೈಕೆ ನೀತಿಯಿಂದಾಗಿ ರಾಜ್ಯದಲ್ಲಿ ಕಾನೂನು  ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅಶ್ರಫ್‌ನಿಂದ ನಡೆದಿರುವ ಮಹಾಲಕ್ಷ್ಮಿಯ ಹತ್ಯೆಯು ಕನ್ನಡಿಗರು ಇಲ್ಲಿ ಸುರಕ್ಷಿತರಲ್ಲ ಅನ್ನುವುದನ್ನು ಸಾಬೀತುಪಡಿಸಿದೆ’ ಎಂದು ಬಿಜೆಪಿ ಕರ್ನಾಟಕ ಎಂಬ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆಯಲಾಗಿದೆ. ಪ್ರಮುಖ  ಟಿವಿ ಚಾನೆಲ್ ನ್ಯೂಸ್ 18ನ ನಿರೂಪಕ ಅಮನ್ ಚೋಪ್ರಾ ಅಂತೂ ಅಶ್ರಫ್‌ನಿಂದಲೇ ಮಹಾಲಕ್ಷ್ಮಿಯ ಹತ್ಯೆ ನಡೆದಿದೆ  ಎಂಬುದನ್ನು ಕಣ್ಣಾರೆ ಕಂಡಂತೆ  ವಾದಿಸಿದ್ದೂ ನಡೆಯಿತು. ಈ ಸುದ್ದಿ ಎರಡ್ಮೂರು ದಿನಗಳ ಕಾಲ ಸೋಶಿಯಲ್  ಮೀಡಿಯಾದಲ್ಲಿ ಮತ್ತು ಟಿವಿ ಚಾನೆಲ್‌ಗಳಲ್ಲಿ ಎಗ್ಗಿಲ್ಲದೇ ಹರಿದಾಡಿದ ಬಳಿಕ ಕೊಲೆಗಾರ ಅಶ್ರಫ್ ಅಲ್ಲ ಅನ್ನುವುದು ಬೆಳಕಿಗೆ  ಬಂತು. ಒಡಿಸ್ಸಾದ ಮುಕ್ತಿ ರಂಜನ್ ರಾಯ್  ಎಂಬಾತ ಈ ಹತ್ಯೆ ನಡೆಸಿದ್ದ. ಮಾತ್ರವಲ್ಲ, ಹತ್ಯೆ ನಡೆಸಿದ ಬಳಿಕ ನೇರ  ಒಡಿಸ್ಸಾಕ್ಕೆ ತೆರಳಿದ ಆತ, ಒತ್ತಡ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದ.

ಇಂಥದ್ದು ಪ್ರತಿದಿನವೆಂಬಂತೆ  ಈ ದೇಶದಲ್ಲಿ ನಡೆಯುತ್ತಿದೆ. ಮುಸ್ಲಿಮರನ್ನು ಕಳ್ಳರು, ದೇಶದ್ರೋಹಿಗಳು, ಹಿಂದೂ ವಿರೋ ಧಿಗಳು, ಮತಾಂತರಿಗಳು, ಪಾಕಿಸ್ತಾನಿಗಳು, ಜಿಹಾದಿಗಳು.. ಎಂದು ಮುಂತಾಗಿ ತರತರದ ಪ್ರಚಾರಗಳನ್ನು  ನಡೆಸಲಾಗುತ್ತಿದೆ. ಹೆಚ್ಚಿನ ಎಲ್ಲ ಆರೋಪಗಳು ಸುಳ್ಳೆಂದು ಸಾಬೀತಾದರೂ ಮತ್ತೆ ಮತ್ತೆ ಸುಳ್ಳನ್ನು ಉತ್ಪಾದಿಸಿ  ಹಂಚಲಾಗುತ್ತಿದೆ. ಸತ್ಯಸುದ್ದಿ ಬಹಿರಂಗಕ್ಕೆ ಬರುವಾಗ ದಿನಗಳು ಕಳೆಯುತ್ತವೆ ಮತ್ತು ಅಷ್ಟು ಅವಧಿಯೊಳಗೆ ಸುಳ್ಳು ತಲು ಪಬೇಕಾದವರಿಗೆಲ್ಲ ತಲುಪಿರುತ್ತದೆ ಎಂಬ ಭರವಸೆಯೇ ಈ ಸುಳ್ಳನ್ನು ಉತ್ಪಾದಿಸಿ ಹಂಚುವವರದ್ದಾಗಿದೆ ಎನ್ನುವುದಕ್ಕೆ  ಪುರಾವೆಗಳ ಅಗತ್ಯ ಇಲ್ಲ. 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಅಪರಾಧ ಕೃತ್ಯಗಳು ನಡೆಯುವುದು ಆಶ್ಚರ್ಯದ  ಸಂಗತಿಯಲ್ಲ. ಇದುವೇ ಸುಳ್ಳಿನ ಕಾರ್ಖಾನೆ ನಡೆಸುತ್ತಿರುವವರ ಪಾಲಿನ ಆಮ್ಲಜನಕ. ಇಂಥವುಗಳಲ್ಲಿ ನಿರ್ದಿಷ್ಟ ಘಟನೆಯ ನ್ನು ಎತ್ತಿಕೊಂಡು ಅದಕ್ಕೆ ಮುಸ್ಲಿಮ್ ಬಣ್ಣವನ್ನು ಬಳಿದು ಸೋಶಿಯಲ್ ಮೀಡಿಯಾದಲ್ಲಿ ಹಂಚುವುದು ಇವರ ತಂತ್ರ.  ಆದರೆ,

ಈ ಅಪರಾಧಕ್ಕೆ ಶಿಕ್ಷೆ ಏನು? ಈ ಕಾರ್ಖಾನೆಗಳಿಗೆ ಬೀಗ ಜಡಿಯುವವರು ಯಾರು? ತಮ್ಮನ್ನು ಕಾನೂನು ಕಟ್ಟಿಹಾಕುವುದಿಲ್ಲ  ಎಂಬ ಭಂಡ ಧೈರ್ಯವೇ ಇಂಥ ಸುಳ್ಳನ್ನು ಹರಡುವವರ ಮೂಲ ಬಂಡವಾಳ. ಸೋಶಿಯಲ್ ಮೀಡಿಯಾದಲ್ಲಿ ಏನು  ಬರೆದು ಹಾಕಿದರೂ ನಡೆಯುತ್ತದೆ ಎಂಬ ಭಾವನೆ ನಿರ್ದಿಷ್ಟ ಗುಂಪಿನಲ್ಲಿದೆ. ಇದನ್ನು ಸುಳ್ಳು ಮಾಡಬೇಕಾದ ವ್ಯವಸ್ಥೆ  ಕೈಕಟ್ಟಿಕೊಂಡಂತಿದೆ. ಈ ಮಹಾಲಕ್ಷ್ಮಿ ಪ್ರಕರಣವನ್ನೇ ಎತ್ತಿಕೊಳ್ಳಿ. 

ಎರಡ್ಮೂರು ದಿನಗಳ ಕಾಲ ಸುಳ್ಳನ್ನು ಹರಡಿದವರ ಮೇಲೆ  ಈವರೆಗೂ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ. ಇದು ಸುಳ್ಳು ಹರಡುವವರಲ್ಲಿ ಧೈರ್ಯವನ್ನು ಮೂಡಿಸುತ್ತದೆ.  ಮತ್ತೊಂದು ಸುಳ್ಳನ್ನು ಉತ್ಪಾದಿಸಿ ಹಂಚುವುದಕ್ಕೂ ಪ್ರೇರಣೆ ನೀಡುತ್ತದೆ. ನಿರಂತರ ಹೀಗೆ ಸುಳ್ಳನ್ನು ಉತ್ಪಾದಿಸಿ  ಹಂಚುವುದರಿಂದ  ಒಟ್ಟು ಸಮಾಜದ ಮೇಲೆ ಪ್ರಭಾವ ಬಿದ್ದೇ  ಬೀಳುತ್ತದೆ. ಮುಸ್ಲಿಮರನ್ನು ಅಪರಾಧಿಗಳಂತೆ ನೋಡುವುದಕ್ಕೆ  ಇಂಥ ಸುಳ್ಳುಗಳು ಸಮಾಜವನ್ನು ಸಜ್ಜುಗೊಳಿಸುತ್ತದೆ. ದೇಶದಲ್ಲಿ ಈಗಾಗಲೇ ಮುಸ್ಲಿಮ್ ವಿರೋಧಿ ಭಾವನೆಗಳು  ದಟ್ಟವಾಗಿರುವುದರ ಹಿಂದೆ ಇಂಥ ಸುಳ್ಳುಗಳ ಪಾತ್ರ ಬಹಳವಿದೆ. ಇದೇ ಮಹಾಲಕ್ಷ್ಮಿ ಹತ್ಯೆಯ ಬಗ್ಗೆ ಪಶ್ಚಿಮ ಬಂಗಾಳದಲ್ಲಿ  ಸುಳ್ಳು ಸುದ್ದಿಯನ್ನು ಹರಡಲಾಗಿತ್ತು ಎಂಬುದೇ ಈ ಸುಳ್ಳಿನ ವ್ಯಾಪ್ತಿಯನ್ನು ಹೇಳುತ್ತದೆ. ಘಟನೆ ಬೆಂಗಳೂರಿನಲ್ಲಿ ನಡೆದಿದೆಯಾದರೂ ಸುಳ್ಳು ಸುದ್ದಿಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬಿಜೆಪಿ ಐಟಿ ಸೆಲ್‌ಗಳು ಈ ಸುಳ್ಳನ್ನು  ದೇಶದಾದ್ಯಂತ ಹರಡುವಂತೆ ನೋಡಿಕೊಳ್ಳುತ್ತಿದೆ. ಆದ್ದರಿಂದ ಈ ಸುಳ್ಳನ್ನು ಕೇವಲವಾಗಿ ಕಾಣುವುದು ದೇಶದ ಆಂತರಿಕ  ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ. ಮುಸ್ಲಿಮರ ವಿರುದ್ಧ ಯಾವ ಸಂದರ್ಭದಲ್ಲೂ ದಂಗೆ ಎಬ್ಬಿಸುವುದಕ್ಕೆ ಪೂರಕ  ವಾತಾವರಣವನ್ನು ನಿರ್ಮಿಸಲು ಒಂದು ನಿರ್ದಿಷ್ಟ ಗುಂಪು ಯತ್ನಿಸುತ್ತಿದೆ. ಇದು ಬರೇ ರಾಜಕೀಯ ಹಿತಾಸಕ್ತಿಯ  ದೃಷ್ಟಿಯಿಂದ ಮಾತ್ರ ನಡೆಯುತ್ತಿರುವ ಸಂಚಲ್ಲ. ರಾಜಕೀಯ ಲಾಭದಾಚೆಗೆ ಒಂದು ಸಮುದಾಯದ ಅಸ್ತಿತ್ವವನ್ನೇ ಅಪಾಯಕ್ಕೆ  ಒಡ್ಡುವ ತಂತ್ರವೂ ಇರುವಂತಿದೆ.

ಸದ್ಯ ಪ್ರಭುತ್ವ ಎರಡು ಪ್ರಮುಖ ಅಂಶಗಳತ್ತ ಗಮನ ಹರಿಸಬೇಕು. 1. ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವುದು. 2. ಸುಳ್ಳು  ಸುದ್ದಿಯನ್ನು ಉತ್ಪಾದಿಸಿ ಹಂಚುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದು. ಕನಿಷ್ಠ 6 ತಿಂಗಳ ಅವಧಿಗಾದರೂ  ಜಾಮೀನು ದೊರೆಯದಂಥ ಸೆಕ್ಷನ್‌ಗಳಡಿ ಕ್ರಮ ಕೈಗೊಳ್ಳುವ ನಿಷ್ಠುರತೆಯನ್ನು ಸರಕಾರ ಪ್ರದರ್ಶಿಸಬೇಕು. ಒಮ್ಮೆ ಸರಕಾರ  ಇಂಥ ಸಾಹಸಕ್ಕೆ ಕೈ ಹಾಕಿದರೆ, ಸುಳ್ಳಿನ ಕಾರ್ಖಾನೆಗಳು ತನ್ನಿಂತಾನೇ ಬಾಗಿಲು ಹಾಕಲು ಶುರು ಮಾಡುತ್ತದೆ. ಇದು ಸದ್ಯದ  ತುರ್ತು ಅಗತ್ಯವೂ ಹೌದು. ಬಹುಶಃ, ಸುಳ್ಳಿನ ಕುರಿತು ಸರಕಾರಗಳ ಮೃದು ನೀತಿಯೇ ಸುಳ್ಳಿನ ವಿಜೃಂಭಣೆಗೆ ಮೂಲ  ಕಾರಣ ಎನ್ನಬೇಕು. ಮುಖ್ಯವಾಗಿ, ಪ್ರಭುತ್ವದಲ್ಲಿರುವವರಿಗೆ ಮುಸ್ಲಿಮರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು  ಸಾಧ್ಯವಾಗದಿರುವುದು ಈ ಉದಾಸೀನ ನೀತಿಗೆ ಕಾರಣವಾಗಿರಬಹುದು. ಸುಳ್ಳನ್ನು ತಡೆಯುವುದಕ್ಕೆ ಕ್ರಮ ಕೈಗೊಳ್ಳಬೇಕಾದ  ಕೇಂದ್ರ ಸರಕಾರದ ಸಚಿವ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಪ್ರತಿನಿಧಿ ಇಲ್ಲ. ಮುಸ್ಲಿಮರನ್ನು ವೈರಿಗಳಂತೆ  ಬಿಂಬಿಸಿಯೇ ಕೇಂದ್ರದ ಈಗಿನ ಸರಕಾರ ಅಧಿಕಾರ ಪಡೆದಿದೆ. ಆದ್ದರಿಂದ ಸುಳ್ಳು ಸುದ್ದಿಗಳು ಅವರ ಪಾಲಿಗೆ ವರವೇ  ಹೊರತು ಶಾಪವಲ್ಲ. ಆದ್ದರಿಂದ ಕೇಂದ್ರದಿಂದ  ಸಮರ್ಪಕ ನೀತಿ ಪ್ರಕಟವಾದೀತು ಎಂದು ಹೇಳುವಂತಿಲ್ಲ. ಒಂದುವೇಳೆ,  ಸುಳ್ಳು ಸುದ್ದಿಗಳ ಮೇಲೆ ಕ್ರಮ ಕೈಗೊಳ್ಳುವ ನೀತಿ ಜಾರಿಗೊಳಿಸಿದರೂ ಅದು ಎಷ್ಟು ಪಕ್ಷಪಾತಿ ರಹಿತವಾಗಿರಬಹುದು  ಎಂಬ ಬಗ್ಗೆ ಅನುಮಾನವಿದೆ. ಆದರೂ,

ಸುಳ್ಳುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲೇಬೇಕು. ನಿರಂತರ ಒಂದು ನಿರ್ದಿಷ್ಟ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುತ್ತಾ ಇರುವುದರಿಂದ ಸಮಾಜವೇ ಅದನ್ನು ನಂಬಿಬಿಡುತ್ತದೆ. ಸರಕಾರಿ ಅಧಿಕಾರಿಗಳಾಗಲಿ, ಪೊಲೀಸ್ ಇಲಾಖೆಯಾಗಲಿ  ಎಲ್ಲರೂ ಈ ಸಮಾಜದ ಭಾಗವೇ ಆಗಿರುವುದರಿಂದ ಅವರನ್ನು ಈ ಸುಳ್ಳುಗಳು ಪ್ರಭಾವಿಸದೆ ಇರಲು ಸಾಧ್ಯವೇ ಇಲ್ಲ.  ಮುಸ್ಲಿಮರ ಬಗ್ಗೆ ನ್ಯಾಯಾಧೀಶರೇ ಆಕ್ಷೇಪಾರ್ಹ ರೀತಿಯಲ್ಲಿ ಹೇಳಿಕೆ ನೀಡುತ್ತಾರೆಂದ ಮೇಲೆ ಉಳಿದವರ ಬಗ್ಗೆ  ಹೇಳುವುದಕ್ಕೇನಿದೆ? ಆದ್ದರಿಂದ, ಸುಳ್ಳು ಸುದ್ದಿಗಳ ವಿರುದ್ಧ ಧರ್ಮ ನೋಡದೇ ಕ್ರಮ ಕೈಗೊಳ್ಳುವ ಬಗ್ಗೆ ವ್ಯವಸ್ಥೆ ಗಂಭೀರ  ಚಿಂತನೆ ನಡೆಸಲಿ.

ಈ ಸುಳ್ಳುಗಳೆಲ್ಲ ಉದ್ದೇಶರಹಿತ ಮತ್ತು ಅಚಾನಕ್ ಬೆಳವಣಿಗೆಗಲ್ಲ. ಅದರ ಹಿಂದೆ ವ್ಯವಸ್ಥಿತ ತಂತ್ರವಿದೆ. ಅದನ್ನು ಬಯಲಿಗೆಳೆದು ಸಮಾಜದ ಆರೋಗ್ಯವನ್ನು ಕಾಪಾಡಬೇಕಾದ ಹೊಣೆಗಾರಿಕೆ ಸರಕಾರದ ಮೇಲಿದೆ.