ನಾನು ಹತ್ಯೆಗೀಡಾದರೆ ದಯವಿಟ್ಟು ಅಳಬೇಡಿ: ಗಾಝಾದ ಹತ್ತು ವರ್ಷದ ಬಾಲೆಯ ಉಯಿಲು ಪತ್ರಕ್ಕೆ ಜಗತ್ತೇ ಕಣ್ಣೀರು

0
387

ಸನ್ಮಾರ್ಗ ವಾರ್ತೆ

ಒಂದು ವರ್ಷದಿಂದ ನಡೆಯುತ್ತಿರುವ ಗಾಝಾದ ಮೇಲಿನ ಇಸ್ರೇಲಿ ದಾಳಿಯಲ್ಲಿ ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗಿದ್ದಾರೆ. ಅಲ್ಲಿಂದ ಬರುವ ಪ್ರತಿ ಸುದ್ದಿಯೂ ಕರುಣಾಜನಕವಾಗಿದೆ. ಹತ್ತು ವಯಸ್ಸಿನ ರಷಾ ಅಲ್ ಅರೀರಿ ಎಂಬ ಬಾಲಕಿ ಬರೆದಿಟ್ಟಿರುವ ಪತ್ರವಂತೂ ಕಣ್ಣೀರು ತರಿಸುವಂತಿದೆ. ಇಸ್ರೇಲಿ ಆಕ್ರಮಣದಲ್ಲಿ ನಾನೇನಾದರೂ ಸಾವಿಗೀಡಾದರೆ ನೀವ್ಯಾರು ಅಳಬಾರದು ಎಂದು ಆ ಮಗು ಬರೆದಿಟ್ಟಿದೆ. ದುರಂತ ಏನೆಂದರೆ ಈ ಮಗು ಇಸ್ರೇಲ್ ದಾಳಿಯಲ್ಲಿ ಹತ್ಯೆಗೀಡಾಗಿದೆ.

ನೀವು ಅತ್ತರೆ ನನ್ನ ಆತ್ಮಕ್ಕೆ ನೋವಾಗುತ್ತದೆ. ಸಹೋದರ ಅಹಮದ್ ಮತ್ತು ನನ್ನ ಹತ್ತಿರದ ಗೆಳೆಯ ರಹಾಫ್ ರಲ್ಲಿ ಹಂಚಬೇಕು. ನನ್ನ ಆಟಿಕೆ ವಸ್ತುಗಳನ್ನು ನನ್ನ ಇನ್ನೊರ್ವ ಗೆಳೆಯರಾದ ಬತ್ತೂಲ್ ಗೆ ಕೊಡಬೇಕು. ಕೊನೆಯದಾಗಿ ಇನ್ನೊಂದು ಹೇಳುತ್ತೇನೆ. ಸಹೋದರ ಅಹಮದ್ ನಿಗೆ ಏನೂ ನೋವು ಕೊಡಬೇಡಿ. ನನ್ನ ಈ ಕೋರಿಕೆಯನ್ನು ನೀವು ನೆರವೇರಿಸಬೇಕು ಎಂದು ಈ ಹತ್ತು ವರ್ಷದ ಬಾಲೆ ಬರೆದಿಟ್ಟಿದ್ದಾಳೆ.

ಆದರೆ ಈ ರಶ ನಿರೀಕ್ಷಿಸಿದಂತೆಯೇ ನಡೆದಿದೆ. ಸೆಪ್ಟೆಂಬರ್ 30ರಂದು ಇಸ್ರೇಲ್ ನಡೆಸಿದ ಬಾಂಬ್ ಆಕ್ರಮಣದಲ್ಲಿ ಈ ರಶ ಮತ್ತು ಸಹೋದರ ಅಹಮದ್ ಹತ್ಯೆಗೀಡಾಗಿದ್ದಾರೆ. ಬಾಂಬ್ ಆಕ್ರಮಣದ ಬಳಿಕ ನಡೆಸಲಾದ ಹುಡುಕಾಟದಲ್ಲಿ ಈ ಪತ್ರ ಸಿಕ್ಕಿದೆ.

ತಿಂಗಳ ಹಿಂದೆ ಇಸ್ರೇಲ್ ನಡೆಸಿದ ಬಾಂಬ್ ಅಕ್ರಮಣದಲ್ಲಿ ಪವಾಡ ಸದೃಶವಾಗಿ ಈ ರಶ ಮತ್ತು ಆಕೆಯ ಸಹೋದರ ಬಚಾವಾಗಿದ್ದರು. ಆ ಬಾಂಬ್ ಅಕ್ರಮಣದಲ್ಲಿ ಇವರಿದ್ದ ಮನೆ ಉರುಳಿತ್ತು. ಅವಶೇಷಗಳ ನಡುವಿನಿಂದ ಇಬ್ಬರನ್ನೂ ರಕ್ಷಿಸಲಾಗಿತ್ತು. ಆದರೆ ಈ ಬಾರಿ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ.

2023 ಅಕ್ಟೋಬರ್ ನಲ್ಲಿ ಇಸ್ರೇಲ್ ಆರಂಭಿಸಿದ ಬಾಂಬ್ ಆಕ್ರಮಣದಲ್ಲಿ ಈವರೆಗೆ 17000 ದಷ್ಟು ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. 26 ಸಾವಿರದಷ್ಟು ಮಕ್ಕಳು ಅನಾಥರಾಗಿದ್ದಾರೆ. ಒಂದೋ ಇವರು ತಾಯಿಯನ್ನು ಕಳಕೊಂಡಿದ್ದಾರೆ ಅಥವಾ ತಂದೆಯನ್ನು ಕಳಕೊಂಡಿದ್ದಾರೆ ಅಥವಾ ಅವರಿಬ್ಬರನ್ನೂ ಕಳೆದುಕೊಂಡಿದ್ದಾರೆ. ಸಾವಿರಾರು ಮಕ್ಕಳು ಗಾಯಗೊಂಡಿದ್ದಾರೆ.