ವಯನಾಡ್ ದುರಂತಕ್ಕೆ ಪರಿಹಾರ ವಿಳಂಬ; ಕೇಂದ್ರದ ವಿರುದ್ಧ ಕೇರಳ ವಿಧಾನಸಭೆ ನಿರ್ಣಯ

0
64

ಸನ್ಮಾರ್ಗ ವಾರ್ತೆ

ತಿರುವನಂತಪುರ: ವಯನಾಡ್ ಭೂಕುಸಿತ ದುರಂತ ಪರಿಹಾರ ಸಂಬಂಧಿಸಿ ಕೇಂದ್ರ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಕೇರಳ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ.

ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ.ರಾಜೇಶ್ ಅವರು ನಿರ್ಣಯವನ್ನು ಸೋಮವಾರ ಸದನದ ಮುಂದೆ ಮಂಡಿಸಿದ್ದು, ವಯನಾಡಿನ ಪ್ರದೇಶಗಳಲ್ಲಿ ಭೂಕುಸಿತದಿಂದ ಆಗಿರುವ ನಾಶ ನಷ್ಟದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ವಿಸ್ತ್ರತ ವರದಿ ಸಲ್ಲಿಸಲಾಗಿದೆ. ಆದರೆ ತಕ್ಷಣದ ನೆರವು ಬಿಡುಗಡೆಯಾಗಿಲ್ಲ. ಕೇಂದ್ರದಿಂದ ನೆರವು ವಿಳಂಬವಾಗುತ್ತಾ ಸಾಗಿದರೆ, ದುರಂತದ ವೇಳೆ ಬದುಕುಳಿದವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಹೇಳಿದ್ದಾರೆ.

ದುರಂತ ವೇಳೆ ಪ್ರಧಾನಿ ಮೋದಿ ಅವರು ವಯನಾಡ್‌ಗೆ ಭೇಟಿ ನೀಡಿದ್ದಾಗ ಅವರ ಮುಂದೆ ಪರಿಹಾರ ಬೇಡಿಕೆ ಇಟ್ಟಿದ್ದೆವು.
ಇಂತಹ ಪ್ರಾಕೃತಿಕ ವಿಪತ್ತಿನ ಪರಿಸ್ತಿತಿಯನ್ನು ಎದುರಿಸಿದ ಹಲವು ರಾಜ್ಯಗಳು ಮನವಿ ಸಲ್ಲಿಸುವ ಮುನ್ನವೇ ಪರಿಹಾರ ಪಡೆದುಕೊಂಡಿವೆ. ಆದರೆ, ಕೇರಳದ ಮನವಿಯನ್ನು ಕೇಂದ್ರ ಪರಿಗಣಿಸದಿರುವುದು ವಿಷಾದನೀಯ ಎಂದು ಸಚಿವರು ಹೇಳಿದ್ದಾರೆ.

ಬಳಿಕ ಸ್ಪೀಕ‌ರ್ ಎ.ಎನ್.ಶಮೀರ್ ಅವರು, ಸದನವು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ಘೋಷಿಸಿದರು.