ಇಸ್ರೇಲ್, ಹಮಾಸ್ ಮತ್ತು ವಿಮೋಚನಾ ಹೋರಾಟ

0
66

ಸನ್ಮಾರ್ಗ ಸಂಪಾದಕೀಯ

ನಿಯಮಗಳಿರುವುದೇ ಮುರಿಯುವುದಕ್ಕೆ ಎಂಬ ದುರಹಂಕಾರಿ ನೀತಿಯನ್ನು ಇಸ್ರೇಲ್ ಅಳವಡಿಸಿಕೊಂಡು ದಶಕಗಳಾದುವು. 1948ರಲ್ಲಿ ಇಸ್ರೇಲ್ ರಾಷ್ಟ್ರ  ಸ್ಥಾಪನೆಯಾಗುವ ಹಿಂದಿನ ದಿನದಿಂದಲೇ ಈ ನೀತಿಯನ್ನು ಅದು  ಅಳವಡಿಸಿಕೊಂಡೇ ಬಂದಿದೆ. ಇದೀಗ ಈ ದುರಹಂಕಾರ ಎಲ್ಲಿಗೆ ಬಂದು ತಲುಪಿದೆಯೆಂದರೆ, ಲೆಬನಾನ್‌ನಲ್ಲಿ  ವಿಶ್ವಸಂಸ್ಥೆಯೇ ನಿಯೋಜಿಸಿರುವ ಶಾಂತಿ ಪಾಲನಾ ಪಡೆಯ ಮೇಲೆ ದಾಳಿ ನಡೆಸಿದೆ. ಸುಮಾರು 50 ರಾಷ್ಟ್ರಗಳ 10  ಸಾವಿರ ಯೋಧರು ಲೆಬನಾನ್‌ನ ದಕ್ಷಿಣ ಭಾಗದಲ್ಲಿದ್ದಾರೆ. ಇದರಲ್ಲಿ ಇಟಲಿಯ ಸಾವಿರ ಯೋಧರಿದ್ದಾರೆ. ಫ್ರಾನ್ಸ್ನ 700  ಯೋಧರಿದ್ದಾರೆ. 1978ರ ಬಳಿಕದಿಂದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಲೆಬನಾನ್‌ನ ದಕ್ಷಿಣ ಭಾಗದಲ್ಲಿ ಬೀಡುಬಿಟ್ಟಿದೆ.  

1982ರಲ್ಲಿ ಲೆಬನಾನ್‌ನ ಮೇಲೆ ದಾಳಿ ಮಾಡಿದ ಇಸ್ರೇಲ್ ದಕ್ಷಿಣ ಲೆಬನಾನನ್ನು ವಶಪಡಿಸಿಕೊಂಡಿತ್ತು. ಈ ಬಗೆಯ  ದಾಳಿಯನ್ನು ಪ್ರತಿರೋಧಿಸಿಯೇ ಹಿಝ್ಬುಲ್ಲಾ ಹುಟ್ಟಿಕೊಂಡಿತು. ದಕ್ಷಿಣ ಲೆಬನಾನನ್ನು ಮರಳಿ ವಶಪಡಿಸುವುದಕ್ಕಾಗಿ ಅದು  ನಿರಂತರ ಪ್ರತಿರೋಧವನ್ನು ಒಡ್ಡುತ್ತಾ ಬಂತು. 2000ನೇ ಇಸವಿಯಲ್ಲಿ ಇಸ್ರೇಲ್ ಈ ಜಾಗದಿಂದ ಹಿಂದೆ ಸರಿಯಿತು.  2006ರಲ್ಲಿ ಇಸ್ರೇಲ್ ಮತ್ತು ಹಿಝ್ಬುಲ್ಲಾ ನಡುವೆ 5 ವಾರಗಳ ತನಕ ಸಂಘರ್ಷ ನಡೆಯಿತು ಮತ್ತು ಆ ಸಂದರ್ಭದಲ್ಲಿ  ಮಧ್ಯಸ್ಥಿಕೆ ವಹಿಸಿ ಸಂಘರ್ಷ ಕೊನೆಗೊಳಿಸಿದ್ದೇ  ಈ ಶಾಂತಿ ಪಾಲನಾ ಪಡೆ. ಈ ಭಾಗದಲ್ಲಿ ಇಸ್ರೇಲ್ ಮತ್ತು ಲೆಬನಾನ್  ನಡುವೆ ಘರ್ಷಣೆ ಉಂಟಾಗದಂತೆ  ನೋಡಿಕೊಳ್ಳುವುದೇ ಈ ಪಡೆಯ ಜವಾಬ್ದಾರಿ. ಇದೀಗ ಈ ಪಡೆಯ ಮೇಲೆಯೇ  ಇಸ್ರೇಲ್ ದಾಳಿ ನಡೆಸುವ ಸಾಹಸ ಮಾಡಿದ್ದು, ವಿಶ್ವಸಂಸ್ಥೆ ಖಂಡಿಸಿದೆ. ಇಸ್ರೇಲ್‌ನ ಪ್ರಬಲ ಬೆಂಬಲಿಗ ರಾಷ್ಟçವಾದ ಇಟಲಿ  ಇದೇ ಮೊದಲ ಬಾರಿಯೆಂಬಂತೆ  ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರಿಗೆ ಇಸ್ರೇಲ್  ಪ್ರವೇಶ ನಿರ್ಬಂಧ ಹೇರಿದೆ. ಬಹುಶಃ ವಿಶ್ವಸಂಸ್ಥೆಯ ಇತಿಹಾಸದಲ್ಲೇ  ಮೊದಲ ಬಾರಿ ಇಂಥದ್ದೊಂದು  ಘಟನೆ ನಡೆದಿದೆ  ಎಂದು ಹೇಳಲಾಗುತ್ತಿದೆ. ವಿಶ್ವಸಂಸ್ಥೆಯ ನಿಯಮಗಳನ್ನಷ್ಟೇ ಉಲ್ಲಂಘಿಸುವುದಲ್ಲ, ಜೊತೆಗೇ ವಿಶ್ವಸಂಸ್ಥೆಯ ಪ್ರಧಾನ  ಕಾರ್ಯದರ್ಶಿಯನ್ನೇ ತಿರಸ್ಕರಿಸುವ ದಾರ್ಷ್ಟ್ಯವನ್ನು ಇಸ್ರೇಲ್ ತೋರಿದೆ. ಇನ್ನೊಂದೆಡೆ,

ಜೆರುಸಲೇಮ್‌ನಿಂದ  ಸಿರಿಯಾದ ರಾಜಧಾನಿ ಡಮಾಸ್ಕಸ್ ವರೆಗೆ ವ್ಯಾಪಿಸಿರುವ ವಿಶಾಲ ಯಹೂದಿ ರಾಷ್ಟ್ರ  ಸ್ಥಾಪನೆಯೇ  ನಮ್ಮ ಅಂತಿಮ ಗುರಿ ಎಂದು ಇಸ್ರೇಲ್ ಹಣಕಾಸು ಸಚಿವ ಬೆಝಾಲೆಲ್ ಸ್ಮಾಟ್ರಿಚ್ ಹೇಳಿದ್ದಾರೆ. ಈ ವಿಶಾಲ ಯಹೂದಿ  ರಾಷ್ಟ್ರದಲ್ಲಿ ಫೆಲೆಸ್ತೀನ್ ಸಂಪೂರ್ಣ ಒಳಗೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ. ಹಾಗೆಯೇ, ಲೆಬನಾನ್, ಇರಾನ್, ಈಜಿ ಪ್ಟ್ ಮತ್ತು ಸೌದಿ ಅರೇಬಿ ಯಾದ ವಿವಿಧ ಭಾಗಗಳು ಈ ರಾಷ್ಟ್ರದ ವ್ಯಾಪ್ತಿಯೊಳಗೆ ಬರಲಿದೆ ಎಂದೂ ಅವರು ಹೇಳಿದ್ದಾರೆ.  ಸದ್ಯ ಪಶ್ಚಿಮೇಶ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ನೋಡಿದರೆ, ಇಸ್ರೇಲ್ ತನ್ನ ಈ ವಿಶಾಲ ರಾಷ್ಟçದ ಗುರಿಯೆಡೆಗೆ  ದೃಷ್ಟಿ ನೆಟ್ಟಿದೆ ಎಂಬುದನ್ನೇ ಹೇಳುತ್ತದೆ. ಅದು ಒಂದುಕಡೆ ಅತಿಥಿಯಾಗಿ ಇರಾನ್‌ಗೆ ಆಗಮಿಸಿದ್ದ ಹಮಾಸ್ ನಾಯಕ  ಇಸ್ಮಾಈಲ್ ಹನಿಯ್ಯರನ್ನು ಮೋಸದಿಂದ ಹತ್ಯೆ ಮಾಡಿದೆ. ಇರಾನಿನ ಉನ್ನತ ಕಮಾಂಡರ್‌ಗಳನ್ನು ಲೆಬನಾನ್ ಮತ್ತು  ಸಿರಿಯಾದಲ್ಲಿ ಹತ್ಯೆ ಮಾಡಿದೆ. ಅಝರ್ ಬೈಜಾನ್‌ನಿಂದ ಹಿಂತಿರುಗುತ್ತಿದ್ದ ವೇಳೆ ಇರಾನ್‌ನ ಅಧ್ಯಕ್ಷ ಇಬ್ರಾಹೀಮ್  ರಈಸಿಯು ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿರುವುದು ತೋರಿಕೆಯ  ಕಾರಣವಾಗಿದ್ದರೂ ಆಂತರಿಕವಾಗಿ ಈ ಪತನದ ಹಿಂದೆ ಇಸ್ರೇಲ್‌ನ ಸಂಚು ಇದೆ ಎಂಬ ಅಭಿಪ್ರಾಯ ಇದೆ. ಇರಾನ್  ಅಧ್ಯಕ್ಷರು ಪೇಜರ್ ಬಳಸುತ್ತಿದ್ದರು ಮತ್ತು ಅದನ್ನು ಇಸ್ರೇಲ್ ಸ್ಫೋಟಿಸಿರುವುದೇ ಹೆಲಿಕಾಪ್ಟರ್ ಪತನಕ್ಕೆ ಕಾರಣ  ಎಂಬುದಾಗಿ ಇರಾನ್‌ನ ಪ್ರಮುಖ ನಾಯಕರೇ ಶಂಕಿಸಿದ್ದಾರೆ. ಇದಕ್ಕೆ ಆಧಾರವಾಗಿ, ಲೆಬನಾನ್‌ನಲ್ಲಿ ಸಾವಿರಾರು  ಪೇಜರ್‌ಗಳು ಸ್ಫೋಟಗೊಂಡದ್ದು ಮತ್ತು ಹಿಝ್ಬುಲ್ಲಾಯೋಧರಿಗೆ ಭಾರೀ ಪ್ರಮಾಣದಲ್ಲಿ ಹಾನಿ ತಟ್ಟಿದ್ದನ್ನು  ಉದಾಹರಣೆಯಾಗಿ ನೀಡಲಾಗುತ್ತಿದೆ. ಈ ಪೇಜರ್ ಸ್ಫೋಟದಲ್ಲಿ ಲೆಬನಾನ್‌ನಲ್ಲಿರುವ ಇರಾನಿನ ರಾಯಭಾರಿಗೂ  ಗಾಯವಾಗಿತ್ತು. ಇದರ ಜೊತೆಜೊತೆಗೇ ಸಿರಿಯಾದ ಮೇಲೆ ಇಸ್ರೇಲ್ ಆಗಾಗ ವೈಮಾನಿಕ ದಾಳಿ ನಡೆಸುತ್ತಲೇ ಬಂದಿದೆ.  ಫೆಲೆಸ್ತೀನಿಯರನ್ನಂತೂ ಕಳೆದ 7 ದಶಕಗಳಿಂದ ಕೈದಿಗಳಂತೆ ನಡೆಸಿಕೊಳ್ಳುತ್ತಿದೆ. ಫೆಲೆಸ್ತೀನಿ ಭೂಭಾಗವನ್ನು ಕಬಳಿಸುತ್ತಾ  ಮತ್ತು ಆ ಕಬಳಿಸಿದ ಜಾಗದಲ್ಲಿ ಯಹೂದಿಯರಿಗೆ ಮನೆ ನಿರ್ಮಿಸಿಕೊಟ್ಟು ವಾಸ ಮಾಡಿಸುತ್ತಾ ದೇಶ ವಿಸ್ತರಣೆಯಲ್ಲಿ  ತೊಡಗಿಸಿಕೊಂಡಿದೆ. ಇದನ್ನು ವಿರೋಧಿಸಿ ವಿಶ್ವಸಂಸ್ಥೆ ಪಾಸು ಮಾಡಿದ ನಿರ್ಣಯಗಳಿಗೆ ಲೆಕ್ಕಮಿತಿಯಿಲ್ಲ. ಆದರೆ, 

ಪ್ರತಿ  ನಿರ್ಣಯವನ್ನು ಇಸ್ರೇಲ್ ಕಾಲ ಕಸದಂತೆ ಪರಿಗಣಿಸುತ್ತಲೇ ಬಂದಿದೆ. ಕಳೆದ ಒಂದು ವರ್ಷದಲ್ಲಂತೂ ಅದು ಫೆಲೆಸ್ತೀನ್  ಮೇಲೆ ಮಾಡಿರುವ ದಾಳಿ ಅತಿಕ್ರೂರ ಮತ್ತು ಹೇಯವಾದುದು ಅನ್ನುವುದಕ್ಕೆ ಪುರಾವೆಗಳ ಅಗತ್ಯವೇ ಇಲ್ಲ. 2023  ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಬಳಿಕದಿಂದ ಇಸ್ರೇಲ್ 42 ಸಾವಿರ ಫೆಲೆಸ್ತೀನಿಯರನ್ನು  ಹತ್ಯೆಗೈದಿದೆ. ಸುಮಾರು ಒಂದು ಲಕ್ಷದಷ್ಟು ಮಂದಿ ಗಾಯಗೊಂಡಿದ್ದಾರೆ. ಲಕ್ಷಾಂತರ ಮಂದಿ ನಿರ್ವಸಿತರಾಗಿದ್ದಾರೆ. ಕೇವಲ  ಒಂದೇ ವರ್ಷದೊಳಗೆ ಇಸ್ರೇಲ್ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಫೆಲೆಸ್ತೀನಿಯರ ಹತ್ಯಾಕಾಂಡ ನಡೆಸಿರಬಹುದಾದರೆ, ಕಳೆದ 7  ದಶಕಗಳಲ್ಲಿ ಅದು ಇನ್ನೆಷ್ಟು ಸಾವು-ನೋವಿಗೆ ಕಾರಣವಾಗಿರಬಹುದು? ಅದು ಫೆಲೆಸ್ತೀನ್ ಎಂಬ ರಾಷ್ಟ್ರ ಸ್ಥಾಪನೆಯನ್ನೇ  ಒಪ್ಪಿಕೊಳ್ಳುತ್ತಿಲ್ಲ. ಈ ದುರಹಂಕಾರವನ್ನು ಪ್ರತಿಭಟಿಸಿಯೇ ಫೆಲೆಸ್ತೀನಿಯರು ವಿವಿಧ ಪ್ರತಿರೋಧ ತಂಡಗಳನ್ನು ಕಟ್ಟಿಕೊಂಡು  ಹೋರಾಡುತ್ತಾ ಬಂದಿದ್ದಾರೆ. ಯಾಸಿರ್ ಅರಫಾತ್ ನೇತೃತ್ವದ ಫೆಲೆಸ್ತೀನ್ ವಿಮೋಚನಾ ಸಂಘಟನೆ ಇದರಲ್ಲಿ ಒಂದಾದರೆ,  ಶೈಕ್ ಯಾಸೀನ್ ನೇತೃತ್ವದ ಹಮಾಸ್ ಇನ್ನೊಂದು. ಫೆಲೆಸ್ತೀನನ್ನು ಇಸ್ರೇಲ್‌ನಿಂದ ವಿಮೋಚನೆಗೊಳಿಸುವುದನ್ನೇ ಈ  ಎರಡೂ ಗುಂಪುಗಳು ತಮ್ಮ ಗುರಿಯಾಗಿಸಿಕೊಂಡಿದೆ. ಆ ಕಾರಣದಿಂದಲೇ,

 ಈ ಎರಡೂ ಗುಂಪುಗಳು ಇಸ್ರೇಲ್‌ನ  ಜೊತೆಗಲ್ಲದೇ ಜಗತ್ತಿನ ಇನ್ನಾವ ರಾಷ್ಟ್ರದ ವಿರುದ್ಧವೂ ಹೋರಾಡಿಲ್ಲ. ಇಸ್ರೇಲ್‌ನ ಹಿಡಿತದಿಂದ ಫೆಲೆಸ್ತೀನನ್ನು ವಿಮೋಚ ನೆಗೊಳಿಸುವುದಕ್ಕಾಗಿ ಇವು ಸಂದರ್ಭಾನುಸಾರ ಶಸ್ತ್ರಾಸ್ತ್ರವನ್ನೂ ಬಳಸಿವೆ, ಸತ್ಯಾಗ್ರಹವನ್ನೂ ನಡೆಸಿವೆ. ಆದರೆ, ಇಸ್ರೇಲ್  ಬರೇ ಶಸ್ತ್ರಾಸ್ತ್ರದ ಮೂಲಕವೇ ಉತ್ತರಿಸುತ್ತಾ ಬಂದಿದೆ. ತಮ್ಮ ತಾಯ್ನಾಡಿನ ವಿಮೋಚನೆಗಾಗಿ ಹೋರಾಡಿದವರನ್ನೇ  ಭಯೋತ್ಪಾದಕರು ಎಂದು ಮುದ್ರೆಯೊತ್ತುತ್ತಾ ಮತ್ತು ಜಗತ್ತನ್ನು ಹಾಗೆಯೇ ನಂಬಿಸುತ್ತಲೂ ಇದೆ. ಫೆಲೆಸ್ತೀನ್ ಭೂಭಾಗದಲ್ಲಿ  1948ರಲ್ಲಿ ದಿಢೀರ್ ಆಗಿ ಉದ್ಭವವಾದ ಇಸ್ರೇಲ್ ಆ ಬಳಿಕ ಫೆಲೆಸ್ತೀನಿಯರನ್ನು ಹೊರದಬ್ಬುವುದನ್ನೇ ಘೋಷಿತ  ನೀತಿಯಾಗಿ ಸ್ವೀಕರಿಸಿರುವಾಗ, ಅದನ್ನು ಪ್ರತಿಭಟಿಸಿ ನಡೆಯುವ ಹೋರಾಟಗಳಲ್ಲಿ ವೈವಿಧ್ಯತೆ ಇರಬಾರದು ಎಂದು  ನಿರೀಕ್ಷಿಸುವುದಕ್ಕೆ ಅರ್ಥವೂ ಇಲ್ಲ. ಬ್ರಿಟಿಷರ ವಿರುದ್ಧ ನಮ್ಮದೇ ನೆಲದಲ್ಲಿ ಹುಟ್ಟಿಕೊಂಡ ವಿಮೋಚನಾ ಹೋರಾಟದಲ್ಲೂ ಈ  ವೈವಿಧ್ಯತೆಗಳಿದ್ದುವು. ಗಾಂಧೀಜಿ ಆ ಹೋರಾಟದ ಒಂದು ಮುಖವಾದರೆ, ಬೋಸ್, ಭಗತ್‌ಸಿಂಗ್ ಅದರ ಇನ್ನೊಂದು  ಮುಖ. ಇವರಾರೂ ಭಾರತೀಯರ ಪಾಲಿಗೆ ಭಯೋತ್ಪಾದಕರಲ್ಲ. ಹೆಮ್ಮೆಯ ಸ್ವಾತಂತ್ರ‍್ಯ ಯೋಧರು. ಆದರೆ ಬ್ರಿಟಿಷರು  ಇದೇ ಭಗತ್ ಸಿಂಗ್, ರಾಮ್ ಪ್ರಸಾದ್ ಬಿಸ್ಮಿಲ್ ಮುಂತಾದ ಅನೇಕರನ್ನು ಭಯೋತ್ಪಾದಕರೆಂದು ಕರೆದು ನೇಣಿಗೆ  ಹಾಕಿದರು. ಇದೇ ಬ್ರಿಟಿಷರ ವಿರುದ್ಧ ಹೋರಾಡುವುದಕ್ಕೆ ಸುಭಾಷ್ ಚಂದ್ರ ಬೋಸ್‌ರು ಸೇನೆಯನ್ನೇ ಕಟ್ಟಿದರು. ಫೆಲೆಸ್ತೀನ್  ವಿಮೋಚನೆಗಾಗಿ ಹೋರಾಡುತ್ತಿರುವ ವಿವಿಧ ಗುಂಪುಗಳು ತಮ್ಮ ಗುರಿ ಸಾಧನೆಗಾಗಿ ಭಿನ್ನ ಭಿನ್ನ ದಾರಿಗಳನ್ನು  ಅವಲಂಬಿಸಿದೆ. ಈ ದಾರಿಗಳ ಬಗ್ಗೆ ಭಿನ್ನಾಭಿಪ್ರಾಯ ತಾಳುವುದು ತಪ್ಪಲ್ಲದಿದ್ದರೂ ಆ ವಿಮೋಚನಾ ಹೋರಾಟವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಮತ್ತು ಇಸ್ರೇಲನ್ನು ಬೆಂಬಲಿಸುವುದು ಪರೋಕ್ಷವಾಗಿ ಭಾರತೀಯ ಸ್ವಾತಂತ್ರ‍್ಯ  ಹೋರಾಟವನ್ನೇ ಕಟಕಟೆಯಲ್ಲಿ ನಿಲ್ಲಿಸಿದಂತೆ. ಹಮಾಸನ್ನು ತೋರಿಸಿ ಇಸ್ರೇಲ್ ತನ್ನ ಕ್ರೌರ್ಯವನ್ನು ಸಮರ್ಥಿಸುತ್ತಿದೆ. ಆದರೆ,

  1948ರಲ್ಲಿ ಇಸ್ರೇಲ್ ರಾಷ್ಟ್ರ  ಸ್ಥಾಪನೆಯಾಗುವಾಗ ಹಮಾಸ್ ಹುಟ್ಟಿಕೊಂಡೇ ಇರಲಿಲ್ಲ. ಇಸ್ರೇಲ್‌ನ ಅನ್ಯಾಯವನ್ನು ಮತ್ತು  ಫೆಲೆಸ್ತೀನಿಯರ ಅಸಹಾಯಕತೆಯನ್ನು ಕಂಡೂ ಕಂಡೂ ರೋಸಿ ಹೋಗಿ ಸುಮಾರು 4 ದಶಕಗಳ ಬಳಿಕ 1987ರ  ಹೊತ್ತಿಗೆ ಸ್ಥಾಪನೆಯಾದ ಗುಂಪು ಇದು. ಫೆಲೆಸ್ತೀನಿಯರ ಸ್ವತಂತ್ರ ರಾಷ್ಟ್ರದ ಹಕ್ಕನ್ನು ಇಸ್ರೇಲ್ ಮಾನ್ಯ ಮಾಡಿರುತ್ತಿದ್ದರೆ ಈ  ಹಮಾಸ್‌ನ ಸೃಷ್ಟಿ ಆಗುತ್ತಲೇ ಇರಲಿಲ್ಲ. ಆದರೆ, ಇಸ್ರೇಲ್ ತನ್ನ ಪ್ರಚಾರ ಬಲದಿಂದ ಫೆಲೆಸ್ತೀನ್ ವಿಮೋಚನಾ  ಹೋರಾಟವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ತಂತ್ರ ಹೆಣೆದಿದೆ. ಆದರೆ, ಇಸ್ರೇಲ್ ಮಾಡುತ್ತಿರುವುದು ಪರಮ ಅನ್ಯಾಯ  ಅನ್ನುವುದನ್ನು ವಿಶ್ವಸಂಸ್ಥೆಯ ನೂರಾರು ಠರಾವುಗಳೇ ಹೇಳುತ್ತಿವೆ.