ಉನ್ನಾವ ಅಪಘಾತ: ಟ್ರಕ್ ಮಾಲಕ ಬಿಜೆಪಿ ಬ್ಲಾಕ್ ನಾಯಕ; ಎಡ ಭಾಗದ ಬದಲು ಬಲಭಾಗದಲ್ಲಿ ಸಂಚರಿಸಿದ್ದ ಟ್ರಕ್

0
974

ಹೊಸದಿಲ್ಲಿ, ಆ. 1: ಉನ್ನಾವ ಅತ್ಯಾಚಾರ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಅಪಘಾತಕ್ಕೆ ಗುರಿಪಡಿಸಿದ ಟ್ರಕ್ ಮಾಲಕ ಉತ್ತರ ಪ್ರದೇಶ ಕೃಷಿ ಸಹ ಸಚಿವ ರಣ್‍ವೇಂದ್ರ ಪ್ರತಾಪ್ ಸಿಂಗ್‍ರ ಅಳಿಯ ಅರುಣ್ ಸಿಂಗ್ ಎಂದು ಪತ್ತೆಯಾಗಿದೆ. ಏಳನೆ ಆರೋಪಿಯಾಗಿ ಸಿಬಿಐ ಈತ ವಿರುದ್ಧ ಕೇಸು ದಾಖಲಿಸಿದ್ದು, ಈತ ಬಿಜೆಪಿ ಉನ್ನಾವ ಬ್ಲಾಕ್ ಅಧ್ಯಕ್ಷನಾಗಿದ್ದಾನೆ. ಈತನಿಗೆ ಲೋಕ್ ಸಮಾಜ್ ಪಾರ್ಟಿಯೊಂದಿಗೂ ಸಂಬಂಧ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಬಿಜೆಪಿ ಶಾಸಕ ಕುಲ್‍ದೀಪ್ ಸಿಂಗ್ ಸೇಂಗರ್ ವಿರುದ್ಧ ದೂರು ಹಿಂಪಡೆಯಲು ಅರುಣ್ ಸಿಂಗ್ ಬಾಲಕಿಯ ಹೆತ್ತವರಿಗೆ ಒತ್ತಡ ಹಾಕಿದ್ದನು. ಈ ವಿಷಯವನ್ನು ಬೆಟ್ಟು ಮಾಡಿ ಬಾಲಕಿಯ ಮಾವ ದೂರು ನೀಡಿದ್ದರು. ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಅರುಣ್ ಸಿಂಗ್ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಉನ್ನಾವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‍ರ ಜೊತೆ ನಿಂತ ಫೋಟೊ, ವೀಡಿಯೋಗಳು ಬಹಿರಂಗವಾಗಿದ್ದವು.

ಈ ನಡುವೆ ಉನ್ನಾವ ಬಾಲಕಿಯ ಕಾರಿಗೆ ಢಿಕ್ಕಿಯಾದ ಟ್ರಕ್ ರಸ್ತೆಯ ಎಡಭಾಗದ ಬದಲು ಬಲಭಾಗದಲ್ಲಿ ಸಂಚರಿಸಿತ್ತು ಎಂದು ಪ್ರತ್ಯಕ್ಷದರ್ಶಿ ಅರ್ಜುನ್ ಸಿಂಗ್ ಎಂಬವರು ತಿಳಿಸಿದ್ದಾರೆ. ಕಾರು, ಟ್ರಕ್ ಅತಿವೇಗದಲ್ಲಿ ಸಂಚರಿಸುತ್ತಿತ್ತು. ಅಪಘಾತ ನಡೆದ ಬಳಿಕ ಟ್ರಕ್ ಚಾಲಕ, ಕ್ಲೀನರ್ ಓಡಿ ತಪ್ಪಿಸಿಕೊಂಡಿದ್ದರು ಎಂದು ಅರ್ಜುನ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.