ಕುಡಿದ ಅಮಲಿನಲ್ಲಿ ಕಾಲೇಜು ಭದ್ರತಾ ಸಿಬ್ಬಂದಿಯನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

0
243

ಸನ್ಮಾರ್ಗ ವಾರ್ತೆ

ಬೆಂಗಳೂರು: ಕುಡಿದ ಅಮಲಿನಲ್ಲಿ ವಿದ್ಯಾರ್ಥಿಯೊಬ್ಬ ಕಾಲೇಜಿನ ಭದ್ರತಾ ಸಿಬ್ಬಂದಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಬೆಂಗಳೂರಿನ ಸಿಂಧಿ ಕಾಲೇಜಿನ ಭದ್ರತಾ ಸಿಬ್ಬಂದಿಯನ್ನು ಬುಧವಾರ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಅವರ ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಕಾಲೇಜಿನ ಮುಖ್ಯ ದ್ವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 52 ವರ್ಷದ ಜೈ ಕಿಶನ್ ರಾಯ್ ಕೊಲೆಯಾದವರು. ಕಳೆದ ದಿನ ನಡೆದ ವಾರ್ಷಿಕೋತ್ಸವದ ವೇಳೆ ವಿದ್ಯಾರ್ಥಿ ಭಾರ್ಗವ್ ಬರ್ಮನ್ ಪಾನಮತ್ತನಾಗಿ ಬಂದಿದ್ದ, ಭದ್ರತಾ ಸಿಬ್ಬಂದಿ ಆತನನ್ನು ಕಾಲೇಜಿಗೆ ಪ್ರವೇಶಿಸಲು ಬಿಡಲಿಲ್ಲ.

ಕುಪಿತಗೊಂಡ ವಿದ್ಯಾರ್ಥಿ ಸಮೀಪದ ಅಂಗಡಿಯಿಂದ ಚಾಕು ಖರೀದಿಸಿ ಭದ್ರತಾ ಸಿಬ್ಬಂದಿಗೆ ಇರಿದಿದ್ದಾನೆ. ಮಾರಣಾಂತಿಕವಾಗಿ ಇರಿತಕ್ಕೊಳಗಾದ ಭದ್ರತಾ ಸಿಬ್ಬಂದಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಲು ಸಾಧ್ಯವಾಗಲಿಲ್ಲ.

ಘಟನೆ ಬಳಿಕ ಪರಾರಿಯಾಗಿದ್ದ ಬರ್ಮನ್ ನನ್ನು ಕಾಲೇಜಿನ ಮತ್ತೋರ್ವ ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.